ನೂತನ ಲೋಕಾಯುಕ್ತರ ಮುಂದಿರುವ ಸವಾಲು
ಎಲ್ಲ ಅಡೆತಡೆಗಳನ್ನು ಮೀರಿ, ಕೊನೆಗೂ ಲೋಕಾಯುಕ್ತರಾಗಿ ನ್ಯಾ. ವಿಶ್ವನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಸಂತೋಷ ಹೆಗ್ಡೆಯವರಿಂದ ತೆರವಾಗಿದ್ದ ಸ್ಥಾನವನ್ನು ಮತ್ತೆ ಇನ್ನೋರ್ವ ಕರಾವಳಿಗನೇ ತುಂಬಿರುವುದು. ಸದ್ಯದ ಸ್ಥಿತಿಯಲ್ಲಿ ಲೋಕಾಯುಕ್ತ ಸ್ಥಾನವೆಂದರೆ ಮುಳ್ಳಿನ ಕುರ್ಚಿಯಂತೆ. ಇತ್ತೀಚೆಗೆ ಈ ಕುರ್ಚಿಯಲ್ಲಿ ಕೂರಲು ನ್ಯಾಯಮೂರ್ತಿಗಳು ಅಂಜುವಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಈ ಸ್ಥಾನಕ್ಕೆ ಯಾರ ಹೆಸರು ಸೂಚಿಸಿದರೂ, ಅವರನ್ನು ಕಳಂಕಗಳು ಬೆಂಬತ್ತಿ ಬರುತ್ತಿದ್ದವು. ಯಾವತ್ತೋ ಮಾಡಿದ ಯಾವುದೋ ಪ್ರಕರಣಗಳು ಮೇಲೆ ಬಂದು, ತನ್ನ ಹೆಸರು ಯಾಕಾಗಿ ಈ ಸ್ಥಾನಕ್ಕೆ ಪ್ರಸ್ತಾಪವಾಯಿತೋ ಎಂದು ಬೆರಳು ಕಚ್ಚುವಂತಾಗುತ್ತಿತ್ತು. ಸಾಧಾರಣವಾಗಿ ನ್ಯಾಯಾಧೀಶರು ತಮ್ಮ ವೃತ್ತಿಯ ಅವಧಿಯಲ್ಲಿ ಅಕ್ರಮಗಳನ್ನು ಮಾಡಿರಬಾರದು ಎಂದಿಲ್ಲ. ಸಣ್ಣ ಅಕ್ರಮವೂ ಮಾಡದೇ ಶುಭ್ರನಾಗಿರುವ ನ್ಯಾಯಾಧೀಶರನ್ನು ಹುಡುಕುವುದು ಸದ್ಯದ ಸ್ಥಿತಿಯಲ್ಲಿ ಕಷ್ಟ.
ಎಲ್ಲರೂ ಯಾವುದೋ ಒಂದು ಸಂದರ್ಭದಲ್ಲಿ ತಮ್ಮ ವೃತ್ತಿಯನ್ನು ದುರುಪಯೋಗಪಡಿಸಿಯೇ ಇರುತ್ತಾರೆ. ಇದನ್ನೇ ಮುಂದಿಟ್ಟುಕೊಂಡು ಪ್ರತೀ ನ್ಯಾಯಾಧೀಶರ ಒಂದೊಂದು ಅಕ್ರಮಗಳನ್ನು ಗುರುತಿಸುತ್ತಾ ಹೋದರೆ, ಲೋಕಾಯುಕ್ತ ಸ್ಥಾನವನ್ನು ತುಂಬುವುದು ಈ ಶತಮಾನದಲ್ಲಂತೂ ಸಾಧ್ಯವಿಲ್ಲ. ನಮ್ಮ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಬೇಕಾಗಿರುವುದೂ ಅದೇ ಆಗಿದೆ. ಆದರೆ ಸಾರ್ವಜನಿಕವಾಗಿ ತೀವ್ರ ಒತ್ತಡಗಳು ಬಂದ ಪರಿಣಾಮವಾಗಿ ಸರಕಾರಕ್ಕೆ ಆ ಸ್ಥಾನವನ್ನು ತುಂಬುವುದು ಅನಿವಾರ್ಯವಾಯಿತು. ಪರಿಣಾಮವಾಗಿ ಎಲ್ಲ ಅಡೆತಡೆಗಳನ್ನು ದಾಟಿ ವಿಶ್ವನಾಥ ಶೆಟ್ಟಿ ಅವರು ಲೋಕಾಯುಕ್ತದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ.
ಲೋಕಾಯುಕ್ತರಾಗಿ ಸಂತೋಷ್ ಹೆಗ್ಡೆ ಅಧಿಕಾರ ಸ್ವೀಕರಿಸಿದಾಗ ಇಲ್ಲಿನ ಪರಿಸ್ಥಿತಿಯೇ ಬೇರೆಯಿತ್ತು. ಮುಖ್ಯವಾಗಿ, ಸಂತೋಷ್ ಹೆಗ್ಡೆ ಬಲಪಂಥೀಯ ಒಲವುಳ್ಳವರು ಎಂಬ ಆರೋಪ ಇದ್ದುದರಿಂದ ಅವರ ಕಾರ್ಯವೈಖರಿಯ ಕುರಿತಂತೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಭ್ರಷ್ಟಾಚಾರ ತನ್ನ ಪರಾಕಾಷ್ಠೆಯನ್ನು ತಲುಪಿದ್ದ ಸಮಯ. ಗಣಿ ದೊರೆಗಳು ಎಂದು ಕುಖ್ಯಾತಿ ಪಡೆದಿದ್ದ ರೆಡ್ಡಿ ಸಹೋದರರು, ಕತ್ತೆಗಳನ್ನು ಖರೀದಿಸುವಷ್ಟು ಸುಲಭದಲ್ಲಿ ಶಾಸಕರನ್ನು ನೋಟಿನ ಕಂತೆ ಬಿಸಾಕಿ ಖರೀದಿಸುತ್ತಿದ್ದ ಕಾಲ ಅದು. ‘ಆಪರೇಷನ್ ಕಮಲ’ದ ಹೆಸರಿನಲ್ಲಿ ಪ್ರಜಾಸತ್ತೆಯನ್ನೇ ಹಣಕೊಟ್ಟು ಕೊಂಡುಕೊಳ್ಳುತ್ತಿದ್ದ ಸಮಯ. ಇಂತಹ ಹೊತ್ತಿನಲ್ಲಿ, ತನ್ನ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡ ಸಂತೋಷ್ಹೆಗ್ಡೆ, ರಾಜಕಾರಣಿಗಳ ವಿರುದ್ಧವೂ ಲೋಕಾಯುಕ್ತದ ಶಕ್ತಿಯನ್ನು ಪ್ರದರ್ಶಿಸಿದರು. ಶಾಸಕರು, ಸಚಿವರು ಎಲ್ಲರೂ ಲೋಕಾಯುಕ್ತಕ್ಕೆ ಅಂಜುವಂತಹ ಸನ್ನಿವೇಶ ನಿರ್ಮಾಣವಾಯಿತು. ಅಂತಿಮವಾಗಿ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಕುರ್ಚಿಯನ್ನೇ ಲೋಕಾಯುಕ್ತ ಬಲಿ ತೆಗೆದುಕೊಂಡಿತು. ರಾಜ್ಯದೊಳಗೆ ಬಿಜೆಪಿಯನ್ನು ಹದ್ದುಬಸ್ತಿನಲ್ಲಿಡಲು ಅಡ್ವಾಣಿಯವರು ಸಂತೋಷ್ ಹೆಗ್ಡೆಯನ್ನು ಬಳಸಿಕೊಂಡರು ಎಂಬ ಆರೋಪವೂ ಇದೆ. ಅದೇನೇ ಆಗಲಿ, ಅದರಿಂದ ರಾಜ್ಯಕ್ಕೆ ಬಹಳಷ್ಟು ಒಲಿತಾಯಿತು.
ಲೋಕಾಯುಕ್ತದ ಪ್ರತಿಷ್ಠೆಯನ್ನು ಸಂತೋಷ್ ಹೆಗ್ಡೆ ಇನ್ನಷ್ಟೂ ಹೆಚ್ಚಿಸಿದರು. ಬಹುಶಃ ಇನ್ನೊಬ್ಬ ಸಮರ್ಥ ಲೋಕಾಯುಕ್ತರನ್ನು ಆ ಸ್ಥಾನಕ್ಕೆ ತರಲು ರಾಜಕಾರಣಿಗಳು ಹಿಂದುಮುಂದು ಯೋಚಿಸುವುದೂ ಇದೇ ಕಾರಣಕ್ಕೆ. ನ್ಯಾ. ವಿಶ್ವನಾಥ ಶೆಟ್ಟಿಯ ಮುಂದಿರುವ ಅತೀ ದೊಡ್ಡ ಸವಾಲು ಏನು ಎಂದರೆ, ಸಂತೋಷ್ ಹೆಗ್ಡೆಯವರು ಲೋಕಾಯುಕ್ತದ ಕುರಿತಂತೆ ನಿರ್ಮಿಸಿರುವ ಪ್ರಭಾವಳಿಯನ್ನು ಕಾಯ್ದುಕೊಳ್ಳುವುದು. ಸಂತೋಷ್ ಹೆಗ್ಡೆಯವರ ಕಾರ್ಯವೈಖರಿಯ ಜೊತೆಗೆ ಶೆಟ್ಟಿಯವರ ಕಾರ್ಯವೈಖರಿಯನ್ನು ಜನರು ತಾಳೆ ಹಾಕುವುದರಿಂದ, ಪ್ರತೀ ಹೆಜ್ಜೆಯೂ ಒಂದು ಸವಾಲಾಗಿದೆ. ಮೊತ್ತ ಮೊದಲು ಶೆಟ್ಟಿಯವರು ತನ್ನ ವರ್ಚಸ್ಸನ್ನು ಕಾಯ್ದುಕೊಳ್ಳಬೇಕಾಗಿದೆ. ಅಂದರೆ, ಯಾವ ಕಳಂಕವನ್ನು ಹೊತ್ತುಕೊಳ್ಳದೆ ತನ್ನನ್ನು ತಾನು ಶುದ್ಧಿಯಾಗಿಟ್ಟುಕೊಳ್ಳುವುದೇ, ಲೋಕಾಯುಕ್ತವನ್ನು ಬಲಿಷ್ಠಗೊಳಿಸಲು ಅವರು ತೆಗೆದುಕೊಳ್ಳಬೇಕಾದ ಮೊದಲ ಕ್ರಮ. ಈ ಹಿಂದಿನ ಇಬ್ಬರು ಲೋಕಾಯುಕ್ತರು ಹೇಗೆ ಅಧಿಕಾರವನ್ನು ಕಳೆದುಕೊಂಡರು ಎನ್ನುವುದರ ಉದಾಹರಣೆ ಅವರ ಮುಂದೆ ಇದ್ದೇ ಇದೆ. ಅದರಿಂದ ಅವರು ಕಲಿಯಬೇಕಾದುದು ತುಂಬಾ ಇದೆ. ತನ್ನನ್ನು ಪಾರದರ್ಶಕವಾಗಿ ಉಳಿಸಿಕೊಂಡರೆ ಮಾತ್ರ ಅವರು ಆತ್ಮವಿಶ್ವಾಸದಿಂದ ಇತರ ಭ್ರಷ್ಟಾಚಾರಿಗಳ ವಿರುದ್ಧ ಮುನ್ನುಗ್ಗುವುದಕ್ಕೆ ಸಾಧ್ಯ. ಆದುದರಿಂದ ಲೋಕಾಯುಕ್ತ ಕಚೇರಿಯೊಳಗಿರುವ ಇಲಿ ಹೆಗ್ಗಣಗಳನ್ನು ಹಿಡಿದು, ಬಿಲಗಳನ್ನು ಮುಚ್ಚುವ ಕೆಲಸವನ್ನು ಅವರು ಮೊದಲು ಮಾಡಬೇಕು. ಬಳಿಕ ಹೊರಗಿನ ಹೆಗ್ಗಣಗಳನ್ನು ಹಿಡಿಯಲು ಮುಂದಾಗಬೇಕಾಗಿದೆ.
ವಿಶ್ವನಾಥ್ ಶೆಟ್ಟಿಯವರನ್ನು ನೇಮಕ ಮಾಡಿರುವುದು ಕಾಂಗ್ರೆಸ್ ಸರಕಾರ. ಆದುದರಿಂದ, ಸರಕಾರದ ಜೊತೆಗೆ ಕೆಲವು ಋಣಗಳಿರುವುದು ಸಹಜವಾಗಿದೆ. ಈ ಸಂದರ್ಭದಲ್ಲ್ಲೂ ಅವರಿಗೆ ಸಂತೋಷ್ ಹೆಗ್ಡೆಯವರ ಕಾರ್ಯವೈಖರಿಯೇ ಮಾದರಿಯಾಗಬೇಕಾಗಿದೆ. ಅಡ್ವಾಣಿಯನ್ನು ಮಾನಸಿಕವಾಗಿ ‘ತಂದೆ’ ಎಂದು ಸ್ವೀಕರಿಸಿದ ಹೆಗ್ಡೆಯವರಿಗೆ, ಬಿಜೆಪಿ, ಆರೆಸ್ಸೆಸ್ನೊಳಗೆ ಬೇರೆ ಬೇರೆ ಋಣಗಳಿದ್ದರೂ, ಅಂತಿಮವಾಗಿ ಬಿಜೆಪಿ ಸರಕಾರದೊಳಗಿರುವ ಭಾರೀ ಭ್ರಷ್ಟರ ವಿರುದ್ಧ ಕಾರ್ಯಾಚರಣೆ ಮಾಡಲು ಅವರು ಹಿಂಜರಿಯಲೇ ಇಲ್ಲ. ಈ ಕಾರಣಕ್ಕಾಗಿಯೇ ಅವರು ಲೋಕಾಯುಕ್ತದ ಇತಿಹಾಸದಲ್ಲಿ ಶಾಶ್ವತವಾಗಿ ತಮ್ಮ ಹೆಸರನ್ನು ಉಳಿಸಿ ಹೋದರು. ಅಂತಹ ಎದೆಗಾರಿಕೆಯನ್ನು ನಾಡು, ವಿಶ್ವನಾಥ ಶೆಟ್ಟಿಯವರಿಂದಲೂ ನಿರೀಕ್ಷಿಸುತ್ತಿದೆ.
ನೋಟು ನಿಷೇಧದ ಬಳಿಕ ಅಕ್ರಮ ಹಣದ ಹರಿಯುವಿಕೆಯ ದಿಕ್ಕು ಬದಲಾಗಿದೆ. ಲೋಕಾಯುಕ್ತ ಅಧಿಕಾರಿಗಳ ಜವಾಬ್ದಾರಿಗಳೂ ಇದರಿಂದ ಹೆಚ್ಚಿದೆ. ರಾಜ್ಯದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಅಕ್ರಮ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಇವುಗಳನ್ನು ಮುರಿದು ಹೇಗೆ, ಭಾರೀ ಹೆಗ್ಗಣಗಳನ್ನು ಹಿಡಿಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಕಳೆದ ಕೆಲವು ವರ್ಷಗಳಿಂದ ಲೋಕಾಯುಕ್ತ ಸ್ಥಾನ ಅನಾಥವಾಗಿದ್ದುದರಿಂದ, ನೂರಾರು ಪ್ರಕರಣಗಳು ನನೆಗುದಿಯಲ್ಲಿವೆ. ಅವುಗಳನ್ನು ಇತ್ಯರ್ಥಗೊಳಿಸುವುದಲ್ಲದೆ, ಲೋಕಾಯುಕ್ತದ ಅನುಪಸ್ಥಿತಿಯಲ್ಲಿ ಕೊಬ್ಬಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳಲ್ಲಿ ಮತ್ತೆ ನಡುಕ ಹುಟ್ಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶೆಟ್ಟಿಯವರು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೆ ಎನ್ನುವುದರಲ್ಲಿ ರಾಜ್ಯದಲ್ಲಿ ಲೋಕಾಯುಕ್ತದ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ.