ಸಂಘ ಪರಿವಾರವನ್ನು ನಾವೇಕೆ ವಿರೋಧಿಸುತ್ತೇವೆ?

Update: 2017-02-19 18:28 GMT

ಸಂಘ ಪರಿವಾರವನ್ನು ನೀವೇಕೆ ವಿರೋಧಿಸುತ್ತೀರಿ ಎಂಬ ಪ್ರಶ್ನೆಯನ್ನು ಅನೇಕರು ಆಗಾಗ್ಗೆ ನನಗೆ ಮತ್ತು ನನ್ನಂತೆಯೇ ಯೋಚಿಸುವವರಿಗೆ ಕೇಳುತ್ತಾರೆ. ಹೀಗೆ ಯೋಚಿಸುವವರಿಗೆ ತಾವೇಕೆ ಆರೆಸ್ಸೆಸ್ ಪರವಾಗಿ ಇದ್ದಾರೆಂಬ ಸ್ಪಷ್ಟ ಕಲ್ಪನೆಯಿಲ್ಲ. ನೀವೇಕೆ ಅಲ್ಲಿದ್ದೀರಿಯೆಂದು ಕೇಳಿದರೆ, ಗೊಡ್ಡು ಪುರಾಣ ಆರಂಭಿಸುತ್ತಾರೆ. ಮುಸಲ್ಮಾನರು, ಕ್ರೈಸ್ತರ ಸಂಖ್ಯೆ ಹೆಚ್ಚುತ್ತಿದೆ. ಅವರು ಐವರು ಪತ್ನಿಯರನ್ನು ಕಟ್ಟಿಕೊಂಡು 50 ಮಕ್ಕಳನ್ನು ಹಡೆಯುತ್ತಾರೆ. ಇನ್ನು ಐದು ವರ್ಷಗಳಲ್ಲಿ 50 ಸಾವಿರ ಜನರು ಕ್ರೈಸ್ತ ಮತಕ್ಕೆ ಮತಾಂತರ ಆಗುತ್ತಾರೆಂದು ರೈಲು ಬಿಡುತ್ತಾರೆ. ಇದಕ್ಕೆ ಪೂರಕವಾಗಿ ಹಿಂದೂ ಹೆಣ್ಣುಮಕ್ಕಳು ತಲಾ ಐವರು ಮಕ್ಕಳನ್ನು ಹಡೆಯಬೇಕೆಂದು ಮೋಹನ್ ಭಾಗವತ್‌ರಿಂದ ಹಿಡಿದು ಸಂಘ ಪರಿವಾರದ ಪುಡಿ ನಾಯಕರವರೆಗೆ ಎಲ್ಲರೂ ಹೇಳುತ್ತಾರೆ. ಸಂಘ ಪರಿವಾರವನ್ನು ಸಮರ್ಥಿಸುವವರು ತಾವು ರಾಷ್ಟ್ರೀಯವಾದಿಗಳು ಎಂದು ಹೇಳಿಕೊಳ್ಳುತ್ತಾರೆ. ಯಾವ ರಾಷ್ಟ್ರವೆಂದು ಕೇಳಿದರೆ, ಹಿಂದೂ ರಾಷ್ಟ್ರ ಎನ್ನುತ್ತಾರೆ. ಹಿಂದೂ ರಾಷ್ಟ್ರದಲ್ಲಿ ದಲಿತರಿಗೆ ಮೀಸಲಾತಿ ಇರಬಾರದೆಂದು ಹೇಳುತ್ತಾರೆ. ಹೀಗೆ ತರಹೇವರಿ ವಾದಗಳ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ.

ಸಂಘ ಪರಿವಾರವನ್ನು ನಾವೇಕೆ ವಿರೋಧಿಸುತ್ತೇವೆ ಎಂಬುದಕ್ಕೆ ನಮಗೆ ಸ್ಪಷ್ಟ ಕಾರಣಗಳಿವೆ. ರಾಷ್ಟ್ರೀಯತೆ ಪಾಠ ಮಾಡುತ್ತಲೇ ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಮಾಹಿತಿ ರವಾನೆ ಮಾಡುತ್ತಿದ್ದ ಸಂಘ ಪರಿವಾರದ ಕಾರ್ಯಕರ್ತರ ಬಂಧನ ಮತ್ತು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಚಿಕ್ಕಮಗಳೂರಿನಲ್ಲಿ ಸಿಕ್ಕಿಬಿದ್ದ ಬಿಜೆಪಿ ಯುವಮೋರ್ಚಾ ನಾಯಕರ ಮೇಲಿರುವ ಆರೋಪಗಳನ್ನೆಲ್ಲ ಪ್ರಶ್ನಿಸಿದರೆ ನಮಗೆ ಉತ್ತರ ಸಿಗುವುದಿಲ್ಲ. ನಮ್ಮ ಪ್ರಶ್ನೆಗಳಿಗೆ ಅವಾಚ್ಯಪದಗಳ ಬೈಗುಳ ಉತ್ತರವಾಗುತ್ತದೆ. ಈ ಅಸಹನೆ ಮಾತಿಗೆ ಮಾತ್ರವೇ ಸೀಮಿತವಾಗಿ ಉಳಿದಿಲ್ಲ ಎಂಬುದು ದಾಭೋಳ್ಕರ್, ಪನ್ಸಾರೆ ಮತ್ತು ಕಲಬುರ್ಗಿಯವರ ಹತ್ಯೆಯಿಂದ ಸಾಬೀತಾಗಿದೆ. ಈ ಚಿಂತಕರ ಹತ್ಯೆಯನ್ನು ಅಂತರಂಗದಲ್ಲಿ ಸಮರ್ಥಿಸಿಕೊಳ್ಳುತ್ತ ಬಹಿರಂಗದಲ್ಲಿ ಮೈಗೆ ಅಂಟಿಕೊಂಡ ಕಲೆಯನ್ನು ಒರೆಸಿಕೊಳ್ಳುತ್ತ ಇರುತ್ತಾರೆ.

ಆರೆಸ್ಸೆಸ್ ಜೊತೆಗಿನ ನಮ್ಮ ವಿರೋಧ ವೈಯಕ್ತಿಕವಲ್ಲ. ಅವರೊಂದಿಗೆ ವೈಯಕ್ತಿಕ ದ್ವೇಷವೂ ಇಲ್ಲ. ವ್ಯಕ್ತಿಗತವಾಗಿ ನಮ್ಮ ಕೆಲ ಸ್ನೇಹಿತರು ಅಲ್ಲಿದ್ದಾರೆ. ಆದರೆ ಸಂಘದ ಮೊದಲ ಸರಸಂಘ ಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ನಮ್ಮನ್ನು ಅಂದ್ರೆ ಕಮ್ಯುನಿಸ್ಟರನ್ನು, ಸಮಾಜವಾದಿಗಳನ್ನು ತಮ್ಮ ಶತ್ರುಗಳ ಸಾಲಿಗೆ ಸೇರಿಸಿದ್ದರಿಂದ ನಾವು ಅನಿವಾರ್ಯವಾಗಿ ಸಂಘರ್ಷಕ್ಕೆ ಇಳಿಯಬೇಕಾಗಿದೆ. ಕಮ್ಯುನಿಸ್ಟರು, ಮುಸಲ್ಮಾನರು ಮತ್ತು ಕ್ರೈಸ್ತರು ನಮ್ಮ ಮೊದಲ ಶತ್ರುಗಳೆಂದು 70 ವರ್ಷಗಳ ಹಿಂದೆಯೇ ಹೇಳಿದರು. ಹಿಂದೂ ರಾಷ್ಟ್ರ ನಿರ್ಮಾಣದ ಗುರಿ ಸಾಧನೆಗಾಗಿ ಈ ಶತ್ರುಗಳ ನಾಶ ಅಗತ್ಯವೆಂದು ಪ್ರತಿಪಾದಿಸಿದರು. ಆಗ ಯಾವುದೋ ಗುಂಗಿನಲ್ಲಿ ಈ ಮಾತನ್ನು ಹೇಳಿದ್ದಾರೆಂದು ತಳ್ಳಿ ಹಾಕಲು ಬರುವುದಿಲ್ಲ. ಗೋಳ್ವಾಲ್ಕರ್ ಬರೆದ ‘ಚಿಂತನಗಂಗಾ’ ಎಂಬ ಪುಸ್ತಕವನ್ನೇ ಇಂದಿಗೂ ಪ್ರಮಾಣ ಗ್ರಂಥವೆಂದು ಇಟ್ಟುಕೊಂಡಿರುವ ಆರೆಸ್ಸೆಸ್ ಸಂಘಟನೆಗೆ ಈ ದೇಶದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಜನತಂತ್ರದಲ್ಲಿ ನಂಬಿಕೆ ಇಲ್ಲದವರನ್ನು ನಾವು ವಿರೋಧಿಸಲೇಬೇಕಾಗುತ್ತದೆ. ಸ್ವಾತಂತ್ರ್ಯದ ಏಳು ದಶಕಗಳ ನಂತರವೂ ಆರೆಸ್ಸೆಸ್ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿಲ್ಲ. ನಮಗೆಲ್ಲ ಅಂದ್ರೆ ಈ ದೇಶದ ಕೋಟ್ಯಂತರ ಜನರಿಗೆ ಅಂಬೇಡ್ಕರ್ ರೂಪಿಸಿದ ಸಂವಿಧಾನ ದಾರಿದೀಪವಾಗಿದೆ. ಆದರೆ ಸಂಘ ಪರಿವಾರಕ್ಕೆ ಗೋಳ್ವಾಲ್ಕರ್ ಬರೆದ ‘ಚಿಂತನ ಗಂಗಾ’ ಪುಸ್ತಕ ಪ್ರಮಾಣ ಗ್ರಂಥವಾಗಿದೆ.

ದಲಿತರನ್ನು ತಮ್ಮ ಬಲೆಗೆ ಹಾಕಿಕೊಳ್ಳಲು ತೋರಿಕೆಗೆ ಅಂಬೇಡ್ಕರ್ ಫೋಟೊ ಹಾಕಿಕೊಳ್ಳುವ ಸಂಘ ಪರಿವಾರ ಅಂತರಂಗದಲ್ಲಿ ಅವರನ್ನು ತುಂಬಾ ದ್ವೇಷಿಸುತ್ತದೆ. ಗಾಂಧಿ, ನೆಹರೂ ಅವರನ್ನು ತೇಜೋವಧೆ ಮಾಡಿದಂತೆ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಲು ಹೊರಟರೆ, ಏಟು ತಿನ್ನಬೇಕಾಗುತ್ತದೆ ಎಂದು ಹೆದರಿ ಹೆಡಗೆವಾರ್ ಪಕ್ಕ ಅಂಬೇಡ್ಕರ್ ಅವರ ಫೋಟೊ ಇಟ್ಟು ಮೆರವಣಿಗೆ ಮಾಡುತ್ತದೆ. ಆದರೆ ಅದರ ಬದ್ಧತೆ ಇಂದಿಗೂ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣಕ್ಕಿದೆ. ಇದು ಬರೀ ಬದ್ಧತೆಯಾಗಿ ಉಳಿದಿಲ್ಲ. ಈ ಗುರಿ ಸಾಧನೆಗಾಗಿ ಮಹಾತ್ಮಗಾಂಧೀಜಿಯವರ ಹತ್ಯೆ ನಡೆಯಿತು. ಅಯೋಧ್ಯೆ ಬಾಬರಿ ಮಸೀದಿ ನೆಲಸಮಗೊಂಡಿತು. ಗುಜರಾತ್ ಹತ್ಯಾಕಾಂಡದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಬಲಿಯಾದರು. ಇವೆಲ್ಲ ಘಟನೆಗಳು ನಡೆಯದಿದ್ದರೆ, ಸಂಘ ಪರಿವಾರವನ್ನು ನಾವು ಈ ಪರಿ ವಿರೋಧಿಸುವ ಪ್ರಸಂಗ ಬರುತ್ತಿರಲಿಲ್ಲ. ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಸರಿದಾರಿಗೆ ಬರಲು ಈ ಪರಿವಾರ ಇಂದಿಗೂ ಸಿದ್ಧವಿಲ್ಲ. ಅಂತಲೇ ಮನೆಯಲ್ಲಿ ಗೋಮಾಂಸ ಇದೆಯೆಂಬ ನೆಪದಲ್ಲಿ ಅಖ್ಲಾಕ್ ಅಂತಹವರ ಹತ್ಯೆ ನಡೆಯುತ್ತಲೇ ಇದೆ.

ಆರೆಸ್ಸೆಸ್‌ಗೆ ಅಂತರಂಗ ಮತ್ತು ಬಹಿರಂಗವಾಗಿ ಎರಡು ಕಾರ್ಯಸೂಚಿಗಳಿವೆ. ಅಂತರಂಗದಲ್ಲಿ ಶ್ರೇಣೀಕೃತ ಹಿಂದೂ ರಾಷ್ಟ್ರ ಕನಸು ಕಾಣುತ್ತ ಬಹಿರಂಗವಾಗಿ ಕಾಂಗ್ರೆಸ್ ವಿರೋಧಿ ರಾಜಕಾರಣದ ಮಾತುಗಳನ್ನಾಡಿ ಪ್ರತಿಪಕ್ಷಗಳನ್ನು ಬಲೆಗೆ ಹಾಕಿಕೊಳ್ಳಲು ಯತ್ನಿಸುತ್ತದೆ. ಈ ಮಾತನ್ನು ನಂಬಿ ಜಯಪ್ರಕಾಶ್ ನಾರಾಯಣ ಅಂತಹವರು 70ರ ದಶಕದಲ್ಲಿ ಕಾಂಗ್ರೆಸ್ ವಿರೋಧಿ ರಂಗದಲ್ಲಿ ಜನಸಂಘವನ್ನು ಸೇರಿಸಿಕೊಂಡರು. ಆಗ ಅಸ್ತಿತ್ವದಲ್ಲಿದ್ದ ಲೋಹಿಯಾ ಅವರ ಸಮಾಜವಾದಿ ಪಕ್ಷ ಸಂಸ್ಥಾ ಕಾಂಗ್ರೆಸ್ ಮತ್ತು ಸ್ವತಂತ್ರ ಪಕ್ಷಗಳ ಜೊತೆ ಜನಸಂಘವು ಸೇರಿ ಜನತಾ ಪಕ್ಷ ಅಸ್ತಿತ್ವಕ್ಕೆ ಬಂತು. ಕಾಂಗ್ರೆಸ್ ವಿರುದ್ಧ ಒಂದೇ ಪಕ್ಷ ಅಸ್ತಿತ್ವಕ್ಕೆ ಬಂದಿದ್ದರಿಂದ 1977ರಲ್ಲಿ ಪ್ರಥಮ ಬಾರಿ ಕೇಂದ್ರದಲ್ಲಿ ಕಾಂಗ್ರೆಸೇತರ ಸರಕಾರ ಅಸ್ತಿತ್ವಕ್ಕೆ ಬಂತು. ಅಂದಿನ ಮೊರಾರ್ಜಿ ಸಂಪುಟದಲ್ಲಿ ವಾಜಪೇಯಿ, ಅಡ್ವಾಣಿ ಮತ್ತು ಜೋಶಿ ಮಂತ್ರಿಗಳಾದರು. ಆರೆಸ್ಸೆಸ್‌ನ ರಾಜಕೀಯ ವೇದಿಕೆ ಜನಸಂಘ ಜನತಾ ಪಕ್ಷದಲ್ಲಿ ವಿಲೀನಗೊಂಡರೂ ಆರೆಸ್ಸೆಸ್ ಪ್ರತ್ಯೇಕವಾಗಿ ಉಳಿಯಿತು. ಆಗ ಸಂವಿಧಾನೇತರ ಅಧಿಕಾರ ಕೇಂದ್ರವಾಗಿ ತನ್ನ ಅಜೆಂಡಾ ಜಾರಿಗೆ ತರಲು ಯತ್ನಿಸಿತು. ಇದನ್ನು ಮಧು ಲಿಮಯೆ ಮುಂತಾದ ಸಮಾಜವಾದಿ ನಾಯಕರು ಪ್ರತಿಭಟಿಸಿದಾಗ ದೇಶದ ಪ್ರಥಮ ಕಾಂಗ್ರೆಸೇತರ ಸರಕಾರ ಪತನಗೊಂಡಿತು. ತಮ್ಮ ಅಸ್ತಿತ್ವ ಕಳೆದುಕೊಂಡು ಜನತಾ ಪಕ್ಷದಲ್ಲಿ ವಿಲೀನಗೊಂಡಿದ್ದ ಸಮಾಜವಾದಿ ಪಕ್ಷ ಸಂಸ್ಥಾ ಕಾಂಗ್ರೆಸ್ ಮುಂತಾದ ಪಕ್ಷಗಳು ಮತ್ತೆ ಚೇತರಿಸಲೇ ಇಲ್ಲ. ಆದರೆ ಜನ ಸಂಘ ಭಾರತೀಯ ಜನತಾ ಪಕ್ಷವಾಗಿ ಮರುಹುಟ್ಟು ಪಡೆಯಿತು.

ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಗೂ ಮತ್ತು ತಮಗೂ ಸಂಬಂಧವಿಲ್ಲವೆಂದು ಬಹಿರಂಗವಾಗಿ ಹೇಳುತ್ತ ಅಂತರಂಗದಲ್ಲಿ ಗೋಡ್ಸೆ ಆರಾಧನೆ ಮಾಡುತ್ತ ಬಂದ ಆರೆಸ್ಸೆಸ್ 90ರ ದಶಕದಲ್ಲಿ ಮತ್ತೆ ಮುಂಚೂಣಿಗೆ ಬಂತು. ದೇಶದಲ್ಲಿ ಜಾಗತೀಕರಣ ಪ್ರವೇಶವಾಗುವ ಕಾಲಘಟ್ಟದಲ್ಲೇ ಅಯೋಧ್ಯೆಗೆ ರಥಯಾತ್ರೆ ಆರಂಭಿಸಿದ ಅಡ್ವಾಣಿಯವರು ಹಿಂದೂ ಮುಸಲ್ಮಾನರಲ್ಲಿ ಅಪನಂಬಿಕೆಯ ಅಡ್ಡಗೋಡೆ ಕಟ್ಟುವಲ್ಲಿ ಯಶಸ್ವಿಯಾದರು. ಇದರ ಪರಿಣಾಮವಾಗಿ ಲೋಕಸಭೆಯಲ್ಲಿ ಕೇವಲ ಇಬ್ಬರು ಸದಸ್ಯರನ್ನು ಹೊಂದಿದ್ದ ಬಿಜೆಪಿ 80 ಸ್ಥಾನಗಳನ್ನು ಹೆಚ್ಚಿಸಿಕೊಂಡಿತು. ಈ ರಾಜಕಾರಣದಿಂದ ಅಧಿಕಾರ ಸುಲಭವಾಗಿ ದಕ್ಕುವುದೆಂದು ಗೊತ್ತಾದಾಗ ಬಾಬರಿ ಮಸೀದಿ ನಾಶ, ಗುಜರಾತ್ ಹತ್ಯಾಕಾಂಡ ಮುಂತಾದ ಘಟನೆಗಳು ನಡೆಯುತ್ತ ಬಂದವು. ಬಾಬರಿ ಮಸೀದಿ ನಾಶವಾದಾಗ, ಹೀಗಾಗಬಾರದಿತ್ತು ಎಂದು ವಾಜಪೇಯಿ ಮತ್ತು ಅಡ್ವಾಣಿ ಗೊಣಗಾಡಿದರೂ ಅಶೋಕ್ ಸಿಂಘಾಲ್ ಮತ್ತು ಪ್ರವೀಣ್ ತೊಗಾಡಿಯಾ ಇದನ್ನು ಬಲವಾಗಿ ಸಮರ್ಥಿಸಿಕೊಂಡರು. ಬಾಬರಿ ಮಸೀದಿ ನೆಲಸಮಗೊಂಡ ಡಿಸೆಂಬರ್ 6ರ ದಿನವನ್ನು ಶೌರ್ಯ ದಿನವೆಂದು ಸಂಘ ಪರಿವಾರ ಈಗಲೂ ಆಚರಿಸುತ್ತಿದೆ.

ಗುಜರಾತ್ ಹತ್ಯಾಕಾಂಡದ ನಂತರವೂ ಅದನ್ನು ದಕ್ಕಿಸಿಕೊಂಡ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಸಂಘ ಪರಿವಾರಕ್ಕೆ ಹೊಸ ಉತ್ಸಾಹ ಬಂತು. 800 ವರ್ಷಗಳ ನಂತರ ದಿಲ್ಲಿಯ ಅಧಿಕಾರ ಹಿಂದೂಗಳಿಗೆ ಸಿಕ್ಕಿದೆಯೆಂದು ಅಶೋಕ್ ಸಿಂಘಾಲ್ ಹೇಳಿದರು. 1947ರಲ್ಲಿ ಬ್ರಿಟಿಷರನ್ನು ತೊಲಗಿಸಿ ದೇಶ ಸ್ವಾತಂತ್ರ್ಯ ಪಡೆದುದನ್ನು ಕೂಡ ಸಿಂಘಾಲ್ ಒಪ್ಪಿಕೊಂಡಿಲ್ಲ. ನೆಹರೂ, ಪಟೇಲ್ ಕೂಡ ಅವರ ಕಣ್ಣಲ್ಲಿ ಹಿಂದೂಗಳಲ್ಲ. ಸಿಂಘಾಲ್ ಮಾತ್ರವಲ್ಲ, ಮೋಹನ್ ಭಾಗವತ್‌ರು ಕೂಡ ರೋಮಾಂಚಿತರಾಗಿ ಆರ್ಯ ಸಂಸ್ಕೃತಿ ಪ್ರಧಾನ ಹಿಂದೂ ರಾಷ್ಟ್ರದ ಮಾತುಗಳನ್ನಾಡಿದರು.

ಗೋಳ್ವಾಲ್ಕರ್ ಶತ್ರುಗಳೆಂದು ಕಮ್ಯುನಿಸ್ಟರು, ಮುಸಲ್ಮಾನರು ಮತ್ತು ಕ್ರೈಸ್ತರ ಮೇಲೆ ಮಾತ್ರವಲ್ಲ ಪುಣೆಯ ಪೇಶ್ವೆ ಸಾಮ್ರಾಜ್ಯವನ್ನು ಧ್ವಂಸಗೊಳಿಸಿದ ದಲಿತರ ಮೇಲೆಯೂ ಸಂಘ ಪರಿವಾರ ಇಂದಿಗೂ ಕತ್ತಿ ಮಸೆಯುತ್ತಿದೆ. ತನ್ನ ಅಂತಿಮ ಗುರಿಯಾದ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಮುಖ್ಯ ಅಡ್ಡಿಯಾಗಿರುವ ಸಂವಿಧಾನವನ್ನು ಬದಲಿಸಲು ಅದು ಕಾರ್ಯೋನ್ಮುಖವಾಗಿದೆ. ದಲಿತರಿಗೆ ನೀಡಿರುವ ಮೀಸಲಾತಿಯನ್ನು ರದ್ದುಗೊಳಿಸಲು ಮತ್ತೆ ಮತ್ತೆ ಪ್ರತಿಪಾದಿಸುತ್ತಿದ್ದಾರೆ. ಬರೀ ಇದಷ್ಟೇ ಕಾರಣವಲ್ಲ, ಬಸವ, ಬುದ್ಧ, ಫುಲೆ, ಅಂಬೇಡ್ಕರ್, ಗಾಂಧೀಜಿ ಕಟ್ಟಿದ ಭಾರತವನ್ನು ಅಪಹರಿಸಿ ಮನು, ಗೋಳ್ವಾಲ್ಕರ್, ಗೋಡ್ಸೆ, ಸಾವರ್ಕರ್ ಭಾರತವನ್ನಾಗಿ ಮಾಡುವ ಯತ್ನವನ್ನು ಸಂಘ ಪರಿವಾರವು ಈಗಲೂ ತೀವ್ರವಾಗಿ ನಡೆಸಿರುವುದನ್ನು ನಾವು ವಿರೋಧಿಸಬೇಕಾಗಿದೆ. ಬಸವಣ್ಣ, ಗಾಂಧಿಯನ್ನು ಕೊಂದವರು ದಾಭೋಳ್ಕರ್, ಪನ್ಸಾರೆ ಮತ್ತು ಕಲಬುರ್ಗಿಯವರನ್ನು ಕೊಂದರು. ಇತಿಹಾಸದಲ್ಲಿ ಸಮಾನತೆಯ ಆಶಯಗಳಿಗಾಗಿ ಸಂತ ತುಕಾರಾಂ, ಚೋಕಾಮೇಳ, ಚಕ್ರತೀರ್ಥ ಹೀಗೆ ನೂರಾರು ಚೇತನಗಳು ತಮ್ಮನ್ನು ಸುಟ್ಟುಕೊಂಡು ಬೆಳಕನ್ನು ನೀಡಿವೆ. ಈ ಹೋರಾಟ ಇಂದಿಗೂ ನಡೆದಿದೆ. ಕೇರಳದಲ್ಲಿ ನಿತ್ಯವೂ ಕಮ್ಯುನಿಸ್ಟರ ಮೇಲೆ ದಾಳಿ ನಡೆಯುತ್ತಿದೆ.

ಆರೆಸ್ಸೆಸ್ ತನ್ನ ಜೀವವಿರೋಧಿ ಕಾರ್ಯಾಚರಣೆ ನಿಲ್ಲಿಸುವವರೆಗೆ ನಾವು ಅದನ್ನು ವಿರೋಧಿಸಲೇಬೇಕಾಗುತ್ತದೆ. ಅಮಾಯಕ ಯುವಕರ ಮೆದುಳಲ್ಲಿ ಹಿಂದೂತ್ವದ ವಿಷವನ್ನು ತುಂಬಿ ಸರ್ವಜನಾಂಗದ ಶಾಂತಿಯ ತೋಟವಾದ ಭಾರತವನ್ನು ನಾಶ ಮಾಡಲು ಬಿಡುವುದಿಲ್ಲ. ಬಸವಣ್ಣ, ತುಕಾರಾಂರನ್ನು ನೀವು ಹೇಗೆ ಕೊಂದಿರಿಯೆಂದು ಗೊತ್ತಿದೆ. ಆ ಎಚ್ಚರ ಇಟ್ಟುಕೊಂಡೇ ನಿಮ್ಮಿಂದಿಗೆ ರಾಜಿರಹಿತ ಹೋರಾಟ ಮುಂದುವರಿಸುತ್ತೇವೆ. 

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News