ಆರೆಸ್ಸೆಸ್ ಅಥವಾ ದೇಶ; ನಮ್ಮ ಮುಂದಿರುವ ಆಯ್ಕೆ

Update: 2017-03-26 18:47 GMT

ಎರಡು ದಶಕಗಳ ಹಿಂದೆ, ಮಂಗಳೂರು, ಬೆಂಗಳೂರಿನಂತಹ ನಗರಗಳು ಕುಖ್ಯಾತ ರೌಡಿಗಳ ಗ್ಯಾಂಗ್‌ವಾರ್‌ಗಳಿಗೆ ಕುಖ್ಯಾತವಾಗಿದ್ದವು. ಮುಂಬಯಿಯ ಪಾತಕ ಲೋಕದ ಬೇರುಗಳು ಈ ನಗರಗಳನ್ನೂ ಬೆಸೆದುಕೊಂಡಿದ್ದವು. ಕೊಲೆಗೆ ಪ್ರತಿ ಕೊಲೆಗಳು ಸಾಮಾನ್ಯವಾಗಿದ್ದವು. ನಿಧಾನಕ್ಕೆ ಕಾನೂನು ಬಿಗಿಯಾಗುತ್ತಾ ಹೋದಂತೆಯೇ ಈ ರೌಡಿಗಳೆಲ್ಲ ತೆರೆಮರೆಗೆ ಸರಿಯತೊಡಗಿದರು. ಹಾಗೆಂದು ಇವರು ಮಂಗಳೂರಿನಂತಹ ನಗರಗಳಲ್ಲಿ ಸಂಪೂರ್ಣವಾಗಿ ನಿರ್ನಾಮವಾಗಿ ಹೋದರು ಎಂದು ಅರ್ಥವಲ್ಲ.

ರೌಡಿಗಳಾಗಿದ್ದುಕೊಂಡೇ ಕಾನೂನಿನ ಕಣ್ಣಿನಿಂದ ರಕ್ಷಣೆ ಪಡೆಯುವುದಕ್ಕೆ ಕರಾವಳಿಯಂತಹ ಪ್ರದೇಶಗಳಲ್ಲಿ ಇನ್ನೊಂದು ಮಾರ್ಗವನ್ನು ಆರಿಸಿಕೊಂಡರು. ಒಂದು ಕಾಲದಲ್ಲಿ ಕ್ರಿಮಿನಲ್‌ಗಳಾಗಿ ಬೀದಿ ಬೀದಿಗಳಲ್ಲಿ ರಕ್ತ ದಓಕುಳಿಗಳನ್ನು ಹರಿಸಿದವರು, ಹಫ್ತಾಕ್ಕಾಗಿ ಬಾರ್‌ಗಳು, ಹೊಟೇಲ್‌ಗಳಿಗೆ ಬೆದರಿಕೆ ಹಾಕುತ್ತಿದ್ದ ಪುಡಿ ರೌಡಿಗಳೆಲ್ಲ ಸಂಸ್ಕೃತಿ ರಕ್ಷಣೆಯ ಮುಖವಾಡಗಳನ್ನು ಧರಿಸಿ ಕೆಲವು ಸಂಘಟನೆಗಳ ಆಶ್ರಯ ಪಡೆದರು. ‘ಅನ್ನ ಹಳಸಿತ್ತು, ನಾಯಿ ಹಸಿದಿತ್ತು’ ಎನ್ನುವ ಗಾದೆ ಇಲ್ಲಿ ಪೂರ್ಣವಾಗಿ ಅನ್ವಯವಾಗುತ್ತದೆ.

ಕರಾವಳಿಯಲ್ಲಿ ಕೋಮುವಾದಿ ಮನಸ್ಥಿತಿಗಳು ಅದಾಗಲೇ ತಮ್ಮ ದ್ವೇಷ ಭಾಷಣಗಳಿಂದ ಜನರ ಎದೆಯೊಳಗೆ ವಿಷ ಬೀಜಗಳನ್ನು ಬಿತ್ತಲಾರಂಭಿಸಿದ್ದವು. ಆದರೆ ಅವರ ದ್ವೇಷವನ್ನು ಕಾರ್ಯರೂಪಕ್ಕೆ ಇಳಿಸುವುದಕ್ಕೆ ವೃತ್ತಿಪರರ ಅಗತ್ಯವಿತ್ತು. ಇದೇ ಸಂದರ್ಭದಲ್ಲಿ ಕಾನೂನಿನ ಭಯದಿಂದ ಮರೆಗೆ ಸರಿದಿದ್ದ ರೌಡಿಗಳನ್ನು ಕೋಮುವಾದಿ ಸಂಘಟನೆಗಳು ಬಳಸಿಕೊಳ್ಳಲಾರಂಭಿಸಿದವು. ಇದೇ ಸಂದರ್ಭದಲ್ಲಿ ಬೀದಿ ರೌಡಿಗಳು, ಕ್ರಿಮಿನಲ್‌ಗಳಿಗೂ ಒಂದು ಆಶ್ರಯ, ವೇದಿಕೆ ಬೇಕಾಗಿತ್ತು. ತಮ್ಮ ವೃತ್ತಿಗೆ ಧಾರ್ಮಿಕ, ಕೋಮು ವೇಷವನ್ನು ತೊಡಿಸಿ ಇದೀಗ ಹಿಂದಿನ ಅದೇ ಕೃತ್ಯಗಳನ್ನೇ ಇನ್ನೊಂದು ಮಾರ್ಗದಲ್ಲಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.

 ಸದ್ಯದ ಕರಾವಳಿಯ ಪರಿಸ್ಥಿತಿಗೆ ಹೋಲಿಸಿದರೆ, ಈ ಹಿಂದಿನ ರೌಡಿ ಕಾಳಗಗಳೇ ವಾಸಿ ಅನ್ನಿಸುತ್ತದೆ. ಹಿಂದಿನ ಗ್ಯಾಂಗ್‌ವಾರ್‌ಗಳಲ್ಲಿ ರೌಡಿಗಳು ಪರಸ್ಪರರನ್ನು ಪ್ರತೀಕಾರಕ್ಕಾಗಿ ಕೊಲ್ಲುತ್ತಿದ್ದರೇ ಹೊರತು, ತಮ್ಮ ಪಾತಕ ಲೋಕದ ಹೊರಗಿರುವ ಶ್ರೀಸಾಮಾನ್ಯನ ತಂಟೆಗೆ ಹೋಗುತ್ತಿರಲಿಲ್ಲ. ಹಣಕ್ಕಾಗಿ ಬೃಹತ್ ಬಿಲ್ಡರ್‌ಗಳನ್ನು ಬ್ಲಾಕ್‌ಮೇಲ್ ಮಾಡುವ, ಹಣ ನೀಡದೇ ಇದ್ದರೆ ಅವರನ್ನು ಕೊಂದ ಉದಾಹರಣೆಗಳೂ ಸಾಕಷ್ಟಿದ್ದವು. ಆದರೆ ಆ ಕೊಲೆಯ ಹಿಂದೆ ‘ಹಣ’ಕ್ಕಾಗಿ ಎಂಬ ಕಾರಣವಾದರೂ ಇರುತ್ತಿತ್ತು. ಆದರೆ ಇಂದು ಕರಾವಳಿಯ ಸ್ಥಿತಿ ಅದೆಷ್ಟು ಕರಾಳವಾಗಿದೆಯೆಂದರೆ, ಒಬ್ಬ ಧರ್ಮರಕ್ಷಕನ ವೇಷದಲ್ಲಿರುವ ರೌಡಿಗೆ ಒಬ್ಬನನ್ನು ಕೊಂದು ಹಾಕಲು ಕಾರಣವೇ ಬೇಕಾಗಿಲ್ಲ. ಸಮಾಜದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಬೇಕು, ಧರ್ಮದ ಹೆಸರಲ್ಲಿ ಪರಸ್ಪರ ಕಚ್ಚಾಡುತ್ತಿರಬೇಕು ಎನ್ನುವ ಒಂದೇ ಕಾರಣಕ್ಕಾಗಿ ಯಾರೋ ಗುರುತು ಪರಿಚಯವಿಲ್ಲದ ಅಮಾಯಕನಿಗೆ ಸಂಘಪರಿವಾರದ ಕಾರ್ಯಕರ್ತನೊಬ್ಬ ಚೂರಿ ಹಾಕಬಲ್ಲ. ದಿನನಿತ್ಯದ ದುಡಿಮೆ ಮುಗಿಸಿ ಮನೆಗೆ ತೆರಳುವ ರಿಕ್ಷಾ ಚಾಲಕನನ್ನು ಕೊಂದು ಹಾಕಬಲ್ಲ. ಯಾವುದೋ ಪ್ರಚೋದನಾಕಾರಿ ಭಾಷಣವನ್ನು ಕೇಳಿ, ಅಮಲೇರಿಸಿಕೊಂಡು ಮಸೀದಿಯೊಂದಕ್ಕೆ ಅಕ್ರಮವಾಗಿ ನುಗ್ಗಿ ಅಲ್ಲಿನ ಅಮಾಯಕ ಶಿಕ್ಷಕನನ್ನು ಕೊಂದು ತಾನು ಸಂಸ್ಕೃತಿ ರಕ್ಷಕ ಎಂದು ಘೋಷಿಸಬಲ್ಲ. ಈ ಹಿಂದೆ ಪಾತಕ ಜಗತ್ತಿನಲ್ಲಿ ವಿಜೃಂಭಿಸಿದ್ದ ರೌಡಿಗಳಿಂತಲೂ ಕ್ರೂರ ಮತ್ತು ಅಮಾನವೀಯ ರೇಬಿಸ್ ಅಂಟಿಕೊಂಡ ತೋಳಗಳ ಪಡೆಯೊಂದು ಕರಾವಳಿಯಾದ್ಯಂತ ಜೀವಪಡೆಯುತ್ತಿರುವುದನ್ನು ನಾಗರಿಕರೆನಿಸಿಕೊಂಡವರು ಅಸಹಾಯಕರಾಗಿ ನೋಡುತ್ತಿದ್ದಾರೆ.

ಹಿಂದಿನ ಪಾತಕ ಲೋಕದ ಹಿಂಸೆಗಿಂತಲೂ ಸದ್ಯದ ಹಿಂಸೆಯೇ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅತೀ ದೊಡ್ಡ ಸವಾಲು ಎನ್ನುವುದಕ್ಕೆ ಇನ್ನೊಂದು ಕಾರಣವೂ ಇದೆ. ಹಿಂದೆ ಪಾತಕ ಲೋಕದ ಜನರ ಜೊತೆಗೆ ಪೊಲೀಸ್ ಅಧಿಕಾರಿಗಳು ಒಂದು ಅಂತರವನ್ನು ಇಟ್ಟುಕೊಂಡೇ ವ್ಯವಹರಿಸುತ್ತಿದ್ದರು. ಅವರಿಬ್ಬರ ನಡುವೆ ಅನೈತಿಕ ಸಂಬಂಧವೇನಾದರೂ ಬೆಸೆದಿದ್ದರೆ ಅದಕ್ಕೆ ಹಣ ಮಾತ್ರ ಕಾರಣವಾಗಿರುತ್ತಿತ್ತು. ಉಳಿದಂತೆ ರೌಡಿಗಳು ಪೊಲೀಸರ ಪಾಲಿಗೆ ಅಸ್ಪಶ್ಯರೇ ಆಗಿರುತ್ತಿದ್ದರು. ಆದರೆ ಇಂದು ಹಾಗಲ್ಲ. ಸಂಘಪರಿವಾರದ ದುಷ್ಕರ್ಮಿಗಳ ಜೊತೆಗೆ ಪೊಲೀಸ್ ಇಲಾಖೆಯ ಜನರೇ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಅವರೊಂದಿಗೆ ಗುರುತಿಸಿಕೊಳ್ಳಲು ಹೆಮ್ಮೆ ಪಡುವ ಪೊಲೀಸ್ ಸಿಬ್ಬಂದಿಯನ್ನೂ ಕರಾವಳಿ ನೋಡುತ್ತಿದೆ. ಕೋಮುವಾದಿ ಶಕ್ತಿಗಳು ಮತ್ತು ಪೊಲೀಸರ ನಡುವಿನ ಪರದೆ ತುಂಬಾ ತೆಳುವಾಗುತ್ತಿದೆ. ಈ ಹಿಂದೆ ಪಾತಕಿಗಳನ್ನು ಸಮಾಜ ಅಸ್ಪಶ್ಯವಾಗಿ ನೋಡುತ್ತಿದ್ದರೆ ಅವರಿಂದು, ಮಾಧ್ಯಮ ಪುಟಗಳಲ್ಲಿ ಸಂಸ್ಕೃತಿ ರಕ್ಷಕರಾಗಿ, ಧರ್ಮರಕ್ಷಕರಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ.

ಕೋಮುಹಿಂಸಾಚಾರ ನಡೆಸಿ ಜೈಲು ಸೇರಿದ ರೌಡಿಗಳೂ ಹುತಾತ್ಮರಾಗಿ ಬಿಂಬಿತರಾಗುತ್ತಾರೆ. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ಭವಿಷ್ಯದ ಎಳೆ ಹುಡುಗರಿಗೆ ಈ ಹುತಾತ್ಮ ರೌಡಿಗಳೇ ಆದರ್ಶವಾಗುತ್ತಿದ್ದಾರೆ. ಕೊಲೆ, ಹಿಂಸೆ, ರಕ್ತ, ಗಲಭೆ ಅವರ ವ್ಯಕ್ತಿತ್ವವನ್ನು ರೂಪಿಸುವ ಸಂಗತಿಗಳಾಗಿ ಮಾರ್ಪಾಡಾಗುತ್ತಿದೆ. ಈ ಹಿಂದೆ ಮದ್ರಸ, ಮಸೀದಿಗಳಿಗೆ ನುಗ್ಗಿ ಹಂದಿಮಾಂಸ ಎಸೆದು, ಕಲ್ಲು ತೂರಾಟ ನಡೆಸಿ ಓಡುತ್ತಿದ್ದ ಸಂಘಪರಿವಾರದ ದುಷ್ಕರ್ಮಿಗಳು ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕಾಸರಗೋಡಿನಲ್ಲಿ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರು ಮದ್ರಸದೊಳಗೆ ನುಗ್ಗಿ, ತಮಗೆ ಯಾವ ರೀತಿಯಲ್ಲೂ ವೈಯಕ್ತಿಕವಾಗಿ ಸಂಬಂಧವಿಲ್ಲದ ಅಮಾಯಕ ಮದ್ರಸ ಶಿಕ್ಷಕರೊಬ್ಬರನ್ನು ಬರ್ಬರವಾಗಿ ಇರಿದುಕೊಂದಿದ್ದಾರೆ.

ಇಬ್ಬರೂ ಗಾಂಜಾ ಸೇವಿಸಿದ್ದರು, ಮದ್ಯ ಸೇವಿಸಿದ್ದರು ಎಂದು ಪೊಲೀಸರು ನೆಪ ಹೇಳುತ್ತಾರೆ. ಗಾಂಜಾ ಸೇವಿಸಿದವನು, ಮದ್ಯ ಸೇವಿಸಿದವನು ದಾರಿಗೆದುರಾದವನ ಜೊತೆಗೆ ಜಗಳ ತೆಗೆದು ಆತನನ್ನು ಇರಿಯಬಹುದು. ಆದರೆ ಒಂದು ನಿರ್ದಿಷ್ಟ ಧರ್ಮದ ಪ್ರಾರ್ಥನಾ ಮಂದಿರದೊಳಗೆ ನುಗ್ಗಿ, ಅಲ್ಲಿನ ಧರ್ಮಗುರುವನ್ನು ಕೊಂದು ಹಾಕಬೇಕಾದರೆ ಆತ ಸೇವಿಸಿರುವುದು ಗಾಂಜಾ ಮಾತ್ರ. ಸ್ಥಳೀಯ ಆರೆಸ್ಸೆಸ್ ಸಂಘಟನೆ ಹಮ್ಮಿಕೊಂಡ ಕಾರ್ಯಕ್ರಮವೊಂದರಲ್ಲಿ ಗಾಂಜಾಕ್ಕಿಂತಲೂ ವಿಷಕಾರಿಯಾದ ದ್ವೇಷಭಾಷಣವನ್ನು ಸೇವಿಸಿದ್ದರು. ಅಂದರೆ ಅದು ವೈಯಕ್ತಿಕ ದ್ವೇಷದ ಕೊಲೆಯೇ ಆಗಿರಲಿಲ್ಲ. ಅದರ ಹಿಂದೆ ಇಡೀ ಕೇರಳಕ್ಕೆ ಕೋಮು ಬೆಂಕಿ ಹಚ್ಚುವ ಉದ್ದೇಶವಿತ್ತು. ಇಂತಹ ಕಾರಣಗಳೇ ಇಲ್ಲದ ಕೊಲೆಗಳು ಅವಿಭಜಿತ ದಕ್ಷಿಣ ಜಿಲ್ಲೆಗಳಲ್ಲಿ ಪದೇ ಪದೇ ಸಂಭವಿಸುತ್ತಾ ಬರುತ್ತಿವೆ.

ಗುರುತು ಪರಿಚಯವೇ ಇಲ್ಲದ ರಿಕ್ಷಾ ಚಾಲಕನನ್ನು ಸಂಘಪರಿವಾರದ ಯುವಕನೊಬ್ಬ ಇತ್ತೀಚೆಗೆ ಉಡುಪಿಯಲ್ಲಿ ಕೊಂದು ಹಾಕಿದ. ಈ ಹಿಂದೆ ಬಂಟ್ವಾಳದಲ್ಲಿ ಮುಸ್ಲಿಮ್ ಧರ್ಮೀಯನೆಂದು ಭಾವಿಸಿ ಹಿಂದೂ ಯುವಕನನ್ನೇ ಕೊಂದು ಹಾಕಿದ ಘಟನೆ ಇಡೀ ರಾಜ್ಯವನ್ನು ತಲೆತಗ್ಗಿಸುವಂತೆ ಮಾಡಿತ್ತು. ಈ ಕೊಲೆಗಳಿಗೆ ಸಂಬಂಧಿಸಿ ಕೇವಲ ನಿರ್ದಿಷ್ಟ ಆರೋಪಿಗಳನ್ನು ಬಂಧಿಸುವುದು ಖಂಡಿತಾ ಇದಕ್ಕೆ ಪರಿಹಾರವಲ್ಲ. ಅವರನ್ನು ಅಂತಹ ಮನಸ್ಥಿತಿಗೆ ತಳ್ಳಿದ ಸಂಘಟನೆಗಳು ಮತ್ತು ಅದರ ನಾಯಕರ ಮೇಲೆ ಕ್ರಮ ತೆಗೆದುಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಕೊಲೆಗಳಿಗೆ ಕಾರಣಗಳು ಬೇಕಾಗಿಯೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಬಹುದು.

ಕಸಾಯಿಖಾನೆಗಳನ್ನು ನಿಷೇಧಿಸಲು ಹೊರಟವರು, ಇಡೀ ದೇಶವನ್ನು ಮನುಷ್ಯರ ಕಸಾಯಿಖಾನೆಯಾಗಿ ಬದಲಿಸುವ ಮೊದಲು ನಮ್ಮ ನ್ಯಾಯವ್ಯವಸ್ಥೆ ಎಚ್ಚರಗೊಳ್ಳಬೇಕಾಗಿದೆ. ಈಗಾಗಲೇ ಬಾಂಬ್ ಸ್ಫೋಟಗಳಲ್ಲಿ ಗುರುತಿಸಿಕೊಂಡಿರುವ ಆರೆಸ್ಸೆಸ್‌ನಂತಹ ಸಂಘಟನೆಗಳನ್ನು ನಿಷೇಧಿಸುವುದನ್ನು ಹೊರತು ಪಡಿಸಿದ ಇನ್ನೊಂದು ಪರಿಹಾರವೇ ಇದಕ್ಕಿಲ್ಲ. ಆರೆಸ್ಸೆಸ್‌ನ್ನು ನಿಷೇಧಿಸುವ ಮೂಲಕ ಹಿಂದೂಧರ್ಮ, ಹಿಂದೂ ಸಂಸ್ಕೃತಿಯನ್ನು ಜೊತೆಗೆ ಭಾರತ ದೇಶವನ್ನು ರಕ್ಷಿಸಿಕೊಳ್ಳಬೇಕಾಗಿದೆ. ಆದರೆ, ಆರೆಸ್ಸೆಸ್ ನಿಯಂತ್ರಿಸುತ್ತಿರುವ ಸರಕಾರದ ಬಳಿಯೇ ಆರೆಸ್ಸೆಸ್‌ನ್ನು ನಿಷೇಧಿಸಲು ಆಗ್ರಹಿಸಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿರುವುದು ವರ್ತಮಾನದ ಬಹುದೊಡ್ಡ ವ್ಯಂಗ್ಯವಾಗಿದೆ. ನಮ್ಮ ಮುಂದಿರುವ ಸವಾಲು ಎಷ್ಟು ಕಠಿಣತಮವಾದುದು ಎನ್ನುವುದನ್ನು ಇದು ಹೇಳುತ್ತದೆ. ಆದರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆ ನಂಬಿಕೆ ಇರುವ ಎಲ್ಲರೂ ಒಂದಾಗಿ ಆ ಸವಾಲನ್ನು ಸ್ವೀಕರಿಸದೆ ಬೇರೆ ಆಯ್ಕೆಯೇ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News