ದಿಲ್ಲಿಗೆ ಕಾರಿನಲ್ಲಿ ತೆರಳಿದ ಶಿವಸೇನಾ ಸಂಸದ

Update: 2017-03-29 11:38 GMT

ಒಸ್ಮಾನಾಬಾದ್,ಮಾ.29: ಏರ್ ಇಂಡಿಯಾದ ಕರ್ತವ್ಯನಿರತ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಎಲ್ಲ ಪ್ರಮುಖ ದೇಶಿಯ ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೊಳಗಾಗಿರುವ ಶಿವಸೇನೆಯ ಸಂಸದ ರವೀಂದ್ರ ಗಾಯಕವಾಡ್ ಅವರು ಹಾಲಿ ಪ್ರಗತಿಯಲ್ಲಿರುವ ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ರಸ್ತೆ ಮೂಲಕ ದಿಲ್ಲಿಗೆ ಪ್ರಯಾಣಿಸಿದ್ದಾರೆ.

ಗಾಯಕವಾಡ್ ದಿಲ್ಲಿಯನ್ನು ತಲುಪಿದ್ದಾರೆ. ಆದರೆ ಲೋಕಸಭಾ ಕಲಾಪದಲ್ಲಿ ಭಾಗವಹಿಸಲಿಲ್ಲ. ಪಕ್ಷದ ನಾಯಕತ್ವವು ಅನುಮತಿಸಿದರೆ ಗುರುವಾರ ಅವರು ಲೋಕಸಭಾ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸದರಿಗೆ ನಿಕಟವಾಗಿರುವ ಮೂಲಗಳು ತಿಳಿಸಿವೆ.

ಬುಧವಾರ ದಿಲ್ಲಿಗೆ ಪ್ರಯಾಣಿಸಲೆಂದು ಗಾಯಕವಾಡ್ ಏರ್ ಇಂಡಿಯಾ ವಿಮಾನದಲ್ಲಿ ಸೀಟ್ ಬುಕ್ ಮಾಡಿದ್ದರಾದರೂ ಸಂಸ್ಥೆಯು ಅದನ್ನು ರದ್ದುಗೊಳಿಸಿದ ಬಳಿಕ ರಸ್ತೆ ಮೂಲಕ ಪ್ರಯಾಣಿಸಲು ನಿರ್ಧರಿಸಿದರು. ಮಂಗಳವಾರ ಬೆಳಿಗ್ಗೆ ಎಂಟು ಗಂಟೆಯ ಯಾನಕ್ಕೂ ಅವರು ಸೀಟ್ ಬುಕ್ ಮಾಡಿದ್ದರಾದರೂ ಏರ್ ಇಂಡಿಯಾ ಅದನ್ನೂ ರದ್ದುಗೊಳಿಸಿತ್ತು.

ಕಳೆದ ಗುರುವಾರ ಏರ್‌ಇಂಡಿಯಾದ ಹಿರಿಯ ಅಧಿಕಾರಿಯೋರ್ವರನ್ನು ಚಪ್ಪಲಿಯಿಂದ ಥಳಿಸಿದ ಆರೋಪವನ್ನು ಗಾಯಕವಾಡ್ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News