ಸಿಪಿಎಂ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ವಿಎಚ್ ಪಿ ಕಾರ್ಯಕರ್ತನ ಬಂಧನ
Update: 2017-07-05 20:25 IST
ಕೊಯಮತ್ತೂರು, ಜು.5: ಇಲ್ಲಿನ ಸಿಪಿಎಂ ಪ್ರಧಾನ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ, ಯೋಗ ಶಿಕ್ಷಕನನ್ನು ಬಂಧಿಸಲಾಗಿದೆ.
ಮೆಟ್ಟುಪಾಲಯಂನ ನಿವಾಸಿಯಾಗಿರುವ ಇಂಜಿನಿಯರಿಂಗ್ ಪದವೀಧರ ಸರವಣ ಕುಮಾರ್ ಜೂನ್ 17ರಂದು ಇಲ್ಲಿನ ಗಾಂಧಿಪುರಂನ ಸಿಪಿಎಂ ಕಚೇರಿಗೆ ಪೆಟ್ರೋಲ್ ಬಾಂಬ್ ಗಳನ್ನು ಎಸೆದಿದ್ದ. ಸಹಚರನೊಂದಿಗೆ ಬೈಕ್ ನಲ್ಲಿ ಆಗಮಿಸಿದ ಈತ ಬಾಂಬ್ ಎಸೆದು ಮೆಟ್ಟುಪಾಲಯಂಗೆ ಪರಾರಿಯಾಗಿದ್ದ. ಘಟನೆಯಿಂದ ಕಚೇರಿಯ ಹೊರಗಡೆ ನಿಲ್ಲಿಸಿದ್ದ ಕಾರೊಂದಕ್ಕೆ ಹಾನಿಯಾಗಿತ್ತು.
“ಈತ ವಿಎಚ್ ಪಿ ಕಾರ್ಯಕರ್ತನಾಗಿದ್ದು, ಸಮಾಜದಲ್ಲಿ ಅಶಾಂತಿ ಹಬ್ಬಿಸಲು ಪ್ರಯತ್ನಿಸಿದ್ದ. ಘಟನೆಯ ಹಿಂದೆ ಯಾರಿದ್ದಾರೆ ಎನ್ನುವುದನ್ನು ಆತ ಇನ್ನೂ ಬಾಯ್ಬಿಟ್ಟಿಲ್ಲ ಎಂದು ಡಿಎಸ್ ಪಿ ಎಸ್. ಲಕ್ಷ್ಮೀ ಮಾಹಿತಿ ನೀಡಿದ್ದಾರೆ.