ಮುಸ್ಲಿಮರ ತುಷ್ಟೀಕರಣ ಎಂಬ ಸುಳ್ಳು

Update: 2017-07-27 18:05 GMT

ಕಳೆದ ವರ್ಷ (2016) ಬುರ್ಹಾನ್ ವಾನಿಯ ಎನ್‌ಕೌಂಟರ್ ಬಳಿಕ ಕಾಶ್ಮೀರದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಕೊನೆಯಿಲ್ಲದ ಪ್ರತಿಭಟನೆಗಳು, ಆ ಪ್ರತಿಭಟನೆಗಳನ್ನು ನಿಭಾಯಿಸಿದ ರೀತಿ, ಆ ರೀತಿಯಿಂದಾಗಿ ಸಂಭವಿಸಿದ ಸಾವುಗಳು ಮತ್ತು ಹಲವರ ಕಣ್ಣು ಕಿತ್ತದ್ದು ಇವೆಲ್ಲ ತುಂಬ ಕಳವಳಕಾರಿ ಘಟನೆಗಳು. ಈ ನೇತ್ಯಾತ್ಮಕ ಬೆಳವಣಿಗೆ ಸಾಲದೋ ಎಂಬಂತೆ ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿ ರಾಷ್ಟ್ರದ ಗಾಯಕ್ಕೆ ಉಪ್ಪು ಸುರಿದಂತಾಗಿದೆ.

ಯಾತ್ರಿಕರ ಒಂದು ಬಸ್ಸಿನ ಮೇಲೆ ದಾಳಿ ನಡೆದಾಗ ಘೋರ ದುರಂತವೇ ನಡೆದು ಹೋಯಿತು. ದಾಳಿಯಲ್ಲಿ ಗಾಯಹೊಂದಿದ್ದರೂ ಬಸ್ಸಿನ ಚಾಲಕ ಸಲೀಂ, ಧೈರ್ಯವಹಿಸಿ ಬಸ್ಸನ್ನು ನಿಲ್ಲಿಸದೆ ಓಡಿಸಿದ ಪರಿಣಾಮವಾಗಿ ಸಾರಾಸಗಟಾಗಿ, ದೊಡ್ಡ ಸಂಖ್ಯೆಯಲ್ಲಿ ನಡೆಯಬಹುದಾಗಿದ್ದ ಭಾರೀ ನರಮೇಧವನ್ನು ಆತ ತಡೆದರು.

ಕಾಶ್ಮೀರ ಕಣಿವೆಯಲ್ಲಿ ಇರುವ ಹಿಮ ಶಿವಲಿಂಗವನ್ನು 1850ರ ದಶಕದಲ್ಲಿ ಓರ್ವ ಮುಸ್ಲಿಂ ಕುರಿಕಾಯುವವ ಕಂಡುಹಿಡಿದಿದ್ದ. ಅಂದಿನಿಂದ ಇಂದಿನವರೆಗೂ ಅಮರನಾಥವು ಭಕ್ತರ ಪಾಲಿಗೆ ಪವಿತ್ರ ತೀರ್ಥ ಕ್ಷೇತ್ರವಾಗಿದೆ.

ಅಮರನಾಥ ತೀರ್ಥಯಾತ್ರೆ ಕಾಶ್ಮೀರಿಯತ್‌ನ, ಅಂದರೆ ಕಾಶ್ಮೀರದ ಸಂಸ್ಕೃತಿಯ ಒಂದು ಅಭಿವ್ಯಕ್ತಿ ಕೂಡ ಆಗಿದೆ. ಕಾಶ್ಮೀರಿಯತ್ ಎನ್ನುವುದು ಬೌದ್ಧಧರ್ಮ, ವೇದಾಂತ ಮತ್ತು ಸೂಫಿ ಪರಂಪರೆಯ ಒಂದು ಸಮ್ಮಿಶ್ರಣ, ತಿರುಳು. ಉಗ್ರಗಾಮಿ ಚಟುವಟಿಕೆಗಳ ಹೊರತಾಗಿಯೂ, ಬಿಗಿ ಭದ್ರತೆಯಲ್ಲಿ ಯಾತ್ರೆ ನಡೆಯುತ್ತಲೇ ಬಂದಿದೆ.

ಈ ಹಿಂದೆ ಕೂಡ 2001, 2002 ಮತ್ತು 2003ರಲ್ಲಿ ಅಲ್ಲಿ ಉಗ್ರರ ದಾಳಿಗಳು ನಡೆದಿದ್ದವು. ಪ್ರಾಸಂಗಿಕವಾಗಿ, ಅವು ಎನ್‌ಡಿಎ ಸರಕಾರ ಆಳುತ್ತಿದ್ದ ವರ್ಷಗಳು.

ಕಾಶ್ಮೀರ ಪ್ರೇರಿತ ಉಗ್ರಗಾಮಿಗಳು ಮತ್ತು ಅಲ್‌ಖಾಯಿದಾ ರೀತಿಯ ಶಕ್ತಿಗಳು ಕಾಶ್ಮೀರ ಪ್ರಶ್ನೆಯನ್ನು ಕೋಮುಗೊಳಿಸಿವೆ(ಕಮ್ಯೂನಲೈಸ್)ಯಾದರೂ, ಆ ಪ್ರದೇಶದಲ್ಲಿ ವಿವಿಧ ಧರ್ಮ ಹಾಗೂ ಸಂಸ್ಕೃತಿಗಳ ಬಹುಮುಖತೆ ಉಳಿದುಕೊಂಡು ಬಂದಿದೆ. ಯಾತ್ರಿಗಳು ಬಿಕ್ಕಟ್ಟಿನಲ್ಲಿ, ದುರಂತ ಸ್ಥಿತಿಯಲ್ಲಿ ಸಿಲುಕಿದಾಗ ಸ್ಥಳೀಯ ಮುಸ್ಲಿಮರು ಅವರಿಗೆ ತುಂಬ ನೆರವಾಗಿದ್ದಾರೆ. ಪ್ರಾಕೃತಿಕ ವಿಕೋಪಗಳಿಂದಾಗಿ ಯಾತ್ರಿಕರು ಮಾರ್ಗಮಧ್ಯೆ ಸಿಕ್ಕಿ ಹಾಕಿಕೊಂಡಾಗ ಅಲ್ಲಿನ ಮುಸ್ಲಿಮರು ಅವರಿಗೆ ಆಹಾರ ಒದಗಿಸಿದ್ದಾರೆ. ಯಾತ್ರಿಕರ ಮೇಲೆ ನಡೆದ ದಾಳಿಯನ್ನು ಕಾಶ್ಮೀರ ಮತ್ತು ಇಡೀ ರಾಷ್ಟ್ರ ಏಕಧ್ವನಿಯಲ್ಲಿ ಖಂಡಿಸಿದೆ. ಒಬ್ಬ ಪೆಹ್ಲೂಖಾನ್ ಅಥವಾ ಒಬ್ಬ ಜುನೈದ್ ಮೇಲೆ ಗುಂಪು ಹಲ್ಲೆ ನಡೆದಾಗ ವೌನ ಮುರಿಯಲು ಅಥವಾ ಟ್ವೀಟ್ ಮಾಡಲು ದೀರ್ಘಕಾಲ ತೆಗೆದುಕೊಳ್ಳುವ ಪ್ರಧಾನಿಯವರು ಕೂಡ ಅಮರನಾಥ ಘಟನೆಯನ್ನು, ಸರಿಯಾಗಿಯೇ, ಹಲವು ಟ್ವೀಟ್‌ಗಳಲ್ಲಿ ತಡ ಮಾಡದೆ ಖಂಡಿಸಿದ್ದಾರೆ.

ಅಮರನಾಥ ದುರಂತದ ಇನ್ನೊಂದು ಮುಖವೆಂದರೆ ಹಿಂದೂ ರಾಷ್ಟ್ರೀಯ ವಾದಿಗಳು ದೇಶದ ಉದಾರವಾದಿ ಹಾಗೂ ಪ್ರಜಾಸತ್ತಾತ್ಮಕ ಧ್ವನಿಗಳನ್ನು ಖಂಡಿಸಲು ಅವಮಾನಿಸಲು ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ.

ಬಿಜೆಪಿ ವಕ್ತಾರ, ಜೆ.ವಿ.ಎಲ್. ನರಸಿಂಹರಾವ್, ಎಂದಿನಂತೆ ಪ್ರಜಾಸತ್ತಾತ್ಮಕ ಉದಾರವಾದಿಗಳನ್ನು ಅಣಕಿಸುತ್ತ ಹೀಗೆ ಟ್ವೀಟ್ ಮಾಡಿದರು: ‘‘ನಾಟ್ ಇನ್ ಮೈ ನೇಮ್’’ ಅಮರನಾಥ ಹತ್ಯೆಗಳ ಬಗ್ಗೆ ಪ್ರತಿಭಟಿಸುವುದಿಲ್ಲವೇ? ಅಥವಾ ಅವರ ಪ್ರತಿಭಟನೆಗಳು ಅಖ್ಲಾಕ್, ಜುನೈದ್, ಪೆಹ್ಲೂ ಖಾನ್‌ಗಳಿಗೆ ಮಾತ್ರವೇ? ಶಿವನ ಭಕ್ತರಿಗೆ ಅವರ ಪ್ರತಿಭಟನೆ ಇಲ್ಲವೇ?’’

ರೈಲಿನಲ್ಲಿ ಜುನೈದ್‌ನ ಹತ್ಯೆಯಾದ ಬಳಿಕ ಜಂತರ್ ಮಂತರ್‌ನಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದ ಜನರು ಹತ್ಯೆಯನ್ನು ಖಂಡಿಸಲು ಸೇರಿ ಪ್ರತಿಭಟನೆ ನಡೆಸಿದರು. ಉದಾರವಾದಿ ಕಾರ್ಯಕರ್ತರು, ಚಿಂತಕರು ಮುಸ್ಲಿಮರ ವಿರುದ್ಧ ದೌರ್ಜನ್ಯ ನಡೆದಾಗ ಮಾತ್ರ ಪ್ರತಿಭಟಿಸುತ್ತಾರೆ ಎಂಬ ಅಭಿಪ್ರಾಯವನ್ನು ಈಗ ತಪ್ಪಾಗಿ ಹರಡಲಾಗುತ್ತಿದೆ. ಮುಹಮ್ಮದ್ ಅಖ್ಲಾಕ್‌ರ ಮೇಲೆ ಗುಂಪು ಹಲ್ಲೆ ನಡೆದು ಬಳಿಕ ‘‘ಅವಾರ್ಡ್ ವಾಪಸಿ’’(ಪ್ರಶಸ್ತಿ ಮರಳಿಸುವಿಕೆ) ಅಭಿಯಾನ ನಡೆದ ಬಳಿಕ, ಇಂತಹ ತಪ್ಪು ಅಭಿಪ್ರಾಯ ಹರಡುವ, ಪ್ರಚಾರ ಮಾಡುವ ಪರಿಪಾಠ ಇನ್ನಷ್ಟು ಹೆಚ್ಚಿತು. ಅಖ್ಲಾಕ್‌ರ ಮೇಲೆ ನಡೆದ ಗುಂಪುಹಲ್ಲೆ ಮತ್ತು ರೈಲೊಂದರಲ್ಲಿ ನಡೆದ ಜುನೈದ್‌ನ ಕೊಲೆ ಇವುಗಳು ಪ್ರಜಾಸತ್ತಾತ್ಮಕ ಸ್ವಾತಂತ್ರಗಳ ಅಡಿಪಾಯಗಳನ್ನೇ ಅಲ್ಲಾಡಿಸಿದ ಘಟನೆಗಳು.

ಜುನೈದ್‌ನ ಹತ್ಯೆಯ ಬಳಿಕ ದೇಶದ ವಿವಿಧ ನಗರಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ಸ್ವಯಂ ಸ್ಫೂರ್ತಿಯಿಂದ ಸೇರಿ ಪ್ರತಿಭಟಿಸಿದರು. ಪರಿಣಾಮವಾಗಿ ‘‘ನಾಟ್ ಇನ್ ಮೈ ನೇಮ್’’ ಪ್ರತಿಭಟನೆ ಕಾವು ಪಡೆಯಿತು ಮತ್ತು ಅದೇ ರೀತಿಯಾಗಿ, ಅಮರನಾಥ ಯಾತ್ರಿಕರ ಹತ್ಯೆಯನ್ನು ಖಂಡಿಸಿ ಸಂತಾಪ ಸೂಚಿಸಲು ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹಾಗಾದರೆ ಬಿಜೆಪಿ ವಕ್ತಾರರು ತಮ್ಮ ಪ್ರಚಾರದ ಮೂಲಕ ಸಾಧಿಸಲು ಹೊರಟಿರುವುದಾದರೂ ಏನನ್ನು?

ಸದ್ಯಕ್ಕೆ ಇಂತಹ ವಕ್ತಾರರ ಪಡೆ, ಬಹುಸಂಖ್ಯಾತ ಹಿಂದೂಗಳು ಸಂಕಷ್ಟದಲ್ಲಿದ್ದಾರೆ; ಅವರು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ; ಮುಸ್ಲಿಮರನ್ನು ತುಷ್ಟೀಕರಿಸಲಾಗುತ್ತಿದೆ, ಅತೀ ಮುದ್ದು ಮಾಡಲಾಗುತ್ತಿದೆ ಎಂಬ ಭಾವನೆಯನ್ನು ಹರಡಲು ಬಯಸುತ್ತದೆ. ಹಿಂದೂ ರಾಷ್ಟ್ರೀಯವಾದಿ ರಾಜಕಾರಣವು ಅಲ್ಪ ಸಂಖ್ಯಾತ ಮಾನವ ಹಕ್ಕುಗಳ ಪರವಾಗಿ ವಾದಿಸುವ ಎಲ್ಲರನ್ನೂ ಖಂಡಿಸಲು, ಅವಮಾನಿಸಲು ಬಯಸುತ್ತದೆ.

ಉದಾರವಾದಿ ಪ್ರಜಾಸತ್ತಾತ್ಮಕ ಶಕ್ತಿಗಳ ಪ್ರತಿಭಟನೆಗಳ ಧ್ವನಿಗಳನ್ನು ಅಡಗಿಸುವುದೇ ಬಲಪಂಥೀಯರು ಮಾಡುವ ಇಂತಹ ಟೀಕೆಗಳ ಉದ್ದೇಶ. ಆ ಮೂಲಕ ಲಿಬರಲ್ ವೌಲ್ಯ ಹಾಗೂ ಅಲ್ಪ ಸಂಖ್ಯಾತರ ಹಕ್ಕುಗಳ ಕುರಿತ ಅಸಹನೆಗಳನ್ನು ಆಧರಿಸಿದ ಬಿಜೆಪಿ ಮಾದರಿಯ ರಾಜಕಾರಣಕ್ಕೆ ಸಮಾಜದಲ್ಲಿ ಹಾದಿ ಮಾಡಿಕೊಡುವುದು ಅದನ್ನು ಸುಲಭವಾಗಿ ಪ್ರಚುರಪಡಿಸುವುದು ಬಲಪಂಥೀಯರ ಕಾರ್ಯಕ್ರಮವಾಗಿದೆ. ಈ ರಾಜಕಾರಣ ಇಷ್ಟರವರೆಗೆ ಅಲ್ಪಸಂಖ್ಯಾತರ ತುಷ್ಟೀಕರಣ ಎನ್ನುವುದನ್ನು ತನ್ನ ಮುಖ್ಯ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಮುಂದಿನ ಹಂತವಾಗಿ ಅದೀಗ ಹಿಂದೂಗಳು ತಾರತಮ್ಯಕ್ಕೊಳಗಾಗುತ್ತಿದ್ದಾರೆ ಎಂದು ವಾದಿಸಲಾರಂಭಿಸಿದೆ. ಸತ್ಯಸಂಗತಿ ಏನೆಂದರೆ, ಸಾಚಾರ್ ಸಮಿತಿಯ ವರದಿ ಹೇಳುವಂತೆ, ಕಳೆದ ಏಳು ದಶಕಗಳ ಅವಧಿಯಲ್ಲಿ ಮುಸ್ಲಿಮರ ಸ್ಥಿತಿ ಕೆಳಕ್ಕೆ ಸಾಗುತ್ತಾ ಪಾತಾಳಕ್ಕಿಳಿದಿದೆ. ಭದ್ರತೆಯ ಮತ್ತು ಹಿಂಸೆಯ ಬಲಿಪಶುಗಳ ಬಗ್ಗೆ ಹೇಳುವುದಾದರೆ ಹಿಂಸೆಯ ಬಲಿಪಶುಗಳಲ್ಲಿ ಶೇ. 80 ಮಂದಿ ಮುಸ್ಲಿಮರೇ, ಭಯೋತ್ಪಾದಕ ಹಿಂಸೆಯಲ್ಲಿ ಕೂಡ ಹೆಚ್ಚಿನ ಪ್ರಕರಣಗಳಲ್ಲಿ ಬಂಧಿತರಾಗುವವರು ಕೂಡ ಮುಸ್ಲಿಂ ಯುವಕರೇ. ಬಳಿಕ ಯಾವುದೇ ಸಾಕ್ಷಾಧಾರಗಳಿಲ್ಲದ ನೆಲೆಯಲ್ಲಿ ಇವರಲ್ಲಿ ಹೆಚ್ಚಿನವರು ಬಿಡುಗಡೆಯಾಗುತ್ತಾರೆ. ಮುಸ್ಲಿಂ ಲೋಕಸಭಾ ಸದಸ್ಯರ ಸಂಖ್ಯೆಯನ್ನು ಗಮನಿಸಿದರೆ ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ ಕೂಡ ಸತತವಾಗಿ ಕಡಿಮೆಯಾಗುತ್ತಿರುವುದು ಸ್ಪಷ್ಟವಾಗುತ್ತದೆ.

ಬಹುಸಂಖ್ಯಾತ ಹಿಂದೂ ಸಮುದಾಯಕ್ಕೆ ಬೆದರಿಕೆ ಇದೆ ಎನ್ನುವುದು ಕೋಮು ರಾಜಕಾರಣದ ಬುನಾದಿ ಮತ್ತು ಧ್ರುವೀಕರಣಗೊಳ್ಳುತ್ತಿರುವ ರಾಜಕಾರಣವನ್ನು ಇನ್ನಷ್ಟು ಬಲಪಡಿಸುವ ಒಂದು ಜಾಣ ರಾಜಕೀಯ ನಡೆ.

ಜುನೈದ್‌ನ ಹತ್ಯೆಯ ಬಳಿಕ ದೇಶದ ವಿವಿಧ ನಗರಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ಸ್ವಯಂ ಸ್ಫೂರ್ತಿಯಿಂದ ಸೇರಿ ಪ್ರತಿಭಟಿಸಿದರು. ಪರಿಣಾಮವಾಗಿ ‘‘ನಾಟ್ ಇನ್ ಮೈ ನೇಮ್’’ ಪ್ರತಿಭಟನೆ ಕಾವು ಪಡೆಯಿತು ಮತ್ತು ಅದೇ ರೀತಿಯಾಗಿ, ಅಮರನಾಥ ಯಾತ್ರಿಕರ ಹತ್ಯೆಯನ್ನು ಖಂಡಿಸಿ ಸಂತಾಪ ಸೂಚಿಸಲು ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹಾಗಾದರೆ ಬಿಜೆಪಿ ವಕ್ತಾರರು ತಮ್ಮ ಪ್ರಚಾರದ ಮೂಲಕ ಸಾಧಿಸಲು ಹೊರಟಿರುವುದಾದರೂ ಏನನ್ನು?

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News

ಜಗದಗಲ
ಜಗ ದಗಲ