ಮನೆಗೆಲಸದವರ ವಿರುದ್ಧದ ಪಕ್ಷಪಾತಿ ಧೋರಣೆಗಳು

Update: 2017-07-28 17:57 GMT

ದಿಲ್ಲಿಯ ಸಮೀಪದ ನೊಯಿಡಾದ ಶ್ರೀಮಂತರ ಹೌಸಿಂಗ್ ಸೊಸೈಟಿಯೊಂದರಲ್ಲಿ ಜುಲೈ 12ರಂದು ಮೆನೆಗೆಲಸದವರು ಮತ್ತವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಮನೆ ಮಾಲಕರ ವಿರುದ್ಧ ನಡೆದ ಘರ್ಷಣೆಯು ಇದೀಗ ಪೂರ್ಣ ಪ್ರಮಾಣದ ವರ್ಗ ಸಂಘರ್ಷವಾಗಿಯೇ ಬೆಳೆದು ನಿಂತಿದೆ. ಅದರಲ್ಲೀಗ ಮುಸ್ಲಿಂ ವಿರೋಧಿ ಆಯಾಮವೂ ಸೇರಿಕೊಂಡುಬಿಟ್ಟಿದೆ. ಆ ದಿನದಂದು ರೊಹರಾ ಬೀಬಿ ಎಂಬ 27 ವರ್ಷದ ಮನೆಗೆಲಸ ಮಾಡುವ ಮಹಿಳೆ ಅವರು ವಾಸ ಮಾಡುವ ಸ್ಲಮ್ಮಿನ ಸಮೀಪವಿರುವ ಮಹಾಗುನ್ ಮಾಡರ್ನ್ ಸೊಸೈಟಿಗೆ ಎಂದಿನಂತೆ ಮನೆಗೆಲಸಕ್ಕೆ ಹೋದವರು ವಾಪಸ್ ಮನೆಗೆ ಮರಳಲಿಲ್ಲ. ಇದರಿಂದ ಮೊದಲುಗೊಂಡ ಸರಣಿ ಘಟನೆಗಳುದ್ದಕ್ಕೂ ಸರಕಾರ ಹಾಗೂ ಪೊಲೀಸರು ಮನೆಗೆಲಸದವರ ವಿರುದ್ಧ ಸುಸ್ಪಷ್ಟವಾದ ಪಕ್ಷಪಾತಿ ಧೋರಣೆಯನ್ನೇ ಪ್ರದರ್ಶಿಸಿದ್ದಾರೆ. ರೊಹರಾ ಬೀಬಿಯ ಗಂಡ ತನ್ನ ಹೆಂಡತಿ ಮನೆಗೆ ಮರಳಿಲ್ಲ ವೆಂದು ಆ ರಾತ್ರಿ ದೂರು ನೀಡಿದಾಗ ಪೊಲೀಸರು 2,000 ಫ್ಲಾಟುಗಳಿರುವ ಆ ಹೌಸಿಂಗ್ ಸೊಸೈಟಿಯಲ್ಲಿ ಹುಡುಕಾಡುವ ನಾಟಕವನ್ನಷ್ಟೇ ಮಾಡಿದ್ದಾರೆ. ಮರುದಿನ ಬೆಳಿಗ್ಗೆ ಆಕೆ ವಾಸಿಸುತ್ತಿದ್ದ ಕೊಳೆಗೇರಿಯ ನಿವಾಸಿಗಳು ರೊಹರಾ ಬೀಬಿಯ ಬಗ್ಗೆ ಆತಂಕಗೊಂಡು ಹೌಸಿಂಗ್ ಸೊಸೈಟಿಯ ಗೇಟಿನ ಮುಂದೆ ಜಮಾಯಿಸಿದಾಗಲೂ ಸಂದರ್ಭವನ್ನು ಸರಿಯಾಗಿ ನಿಭಾಯಿಸದ ಪೊಲೀಸರು ಗಲಭೆಯಂಥ ಸನ್ನಿವೇಶ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಘಟನೆಯ ಪ್ರಾರಂಭದಲ್ಲೇ ಪೊಲೀಸರು ನಿಯತ್ತಿನಿಂದ ಹೌಸಿಂಗ್ ಸೊಸೈಟಿಯ ಆವರಣದಲ್ಲಿ ಹುಡುಕಾಟ ನಡೆಸಿದ್ದರೆ ಪರಿಸ್ಥಿತಿ ಕೈಮೀರುತ್ತಲೇ ಇರಲಿಲ್ಲ. ಅದೇ ಒಬ್ಬ ಶ್ರೀಮಂತ ಹಿನ್ನೆಲೆಯುಳ್ಳವರು ತಮ್ಮ ಮನೆಮಂದಿಯೊಬ್ಬರು ಕಾಣೆಯಾಗಿದ್ದಾರೆಂದು ದೂರುಕೊಟ್ಟಿದ್ದರೂ ಪೊಲೀಸರು ಇಷೆ್ಟೀ ನಿರ್ಲಕ್ಷ್ಯತನ ತೋರುತ್ತಿದ್ದರೇ?

 
ಹೌಸಿಂಗ್ ಸೊಸೈಟಿಯವರು ಮತ್ತು ರೊಹರಾ ಬೀಬಿ ಕೆಲಸ ಮಾಡುತ್ತಿದ್ದ ಮನೆಮಾಲಕರು ದಾಖಲಿಸಿದ ಮೂರು ಪ್ರಥಮ ವರ್ತಮಾನ ವರದಿಯನ್ನು ಕೂಡಲೇ ದಾಖಲಿಸಿಕೊಂಡ ಪೊಲೀಸರು ತ್ವರಿತವಾಗಿ 13 ಜನರನ್ನು ಬಂಧಿಸಿದ್ದಾರೆ. ಆದರೆ ಪತ್ತೆಯಾದ ರೊಹರಾ ಬೀಬಿ ತನ್ನನ್ನು ಮನೆ ಮಾಲಕರು ಕೂಡಿಹಾಕಿ ಥಳಿಸಿದರು ಎಂದು ನೀಡಿದ ದೂರಿನ ಬಗ್ಗೆ ಪೊಲೀಸರು ಈವರೆಗೆ ಯಾವ ಕ್ರಮವನ್ನೂ ಜರುಗಿಸಿಲ್ಲ. ಇಷ್ಟು ಮಾತ್ರವಲ್ಲ, ಆ ಪ್ರದೇಶದ ಸ್ಥಳೀಯ ಸಂಸದ ಮತ್ತು ಕೇಂದ್ರದ ಸಂಸ್ಕೃತಿ ಮಂತ್ರಿ ಮಹೇಶ್ ಶರ್ಮಾ ಅವರಂತೂ ಈ ಪ್ರಕರಣದಲ್ಲಿ ಮನೆ ಮಾಲಕರು ಯಾವ ರೀತಿಯಲ್ಲೂ ತಪ್ಪಿತಸ್ಥರಲ್ಲವೆಂದೂ ಬಹಿರಂಗ ಹೇಳಿಕೆಯನ್ನು ನೀಡಿ ಕಾನೂನು ಪ್ರಕ್ರಿಯೆಯನ್ನೇ ದಾರಿತಪ್ಪಿಸಿದ್ದಾರೆ. ಜೊತೆಗೆ, ಬಂಧನದಲ್ಲಿರುವ 13 ಸ್ಲಂ ನಿವಾಸಿಗಳಿಗೆ ವರ್ಷಗಳ ಕಾಲ ಜಾಮೀನು ಸಿಗದಂತೆ ನೋಡಿಕೊಳ್ಳುತ್ತೇನೆಂದು ಹೇಳಿಕೆ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಈ ಸಚಿವರು ಸ್ಲಂ ನಿವಾಸಿಗಳತ್ತ ತಿರುಗಿಯೂ ನೋಡದೆ ಕೇವಲ ಸೊಸೈಟಿಯ ನಿವಾಸಿಗಳನ್ನು ಮಾತ್ರ ಭೇಟಿ ಮಾಡಿದರು. ಹಾಗೂ ‘‘ಈ ದೇಶದಲ್ಲಿ ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ’’ ಎಂಬ ವಿಪರ್ಯಾಸದ ಹೇಳಿಕೆಯನ್ನೂ ನೀಡಿದರು. (ಏಕೆಂದರೆ ಮೂರು ವರ್ಷದ ಹಿಂದೆ ಅವರ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಕಾನೂನು ಕೈಗೆತ್ತಿಕೊಂಡು ದೇಶಾದ್ಯಂತ ದಾಂಧಲೆ ನಡೆಸುತ್ತಿರುವವರು ಹಿಂದೂತ್ವವಾದಿ ಗುಂಪುಗಳೇ ಆಗಿದ್ದು ಸರಕಾರ ಅವರ ಮೇಲೆ ಯಾವ ಕ್ರಮಗಳನ್ನೂ ತೆಗೆದುಕೊಂಡಿಲ್ಲ) ಆ ಶ್ರೀಮಂತ ಸೊಸೈಟಿಯ ಬಹುಪಾಲು ನಿವಾಸಿಗಳು, ಪೊಲೀಸರು ಹಾಗೂ ಸರಕಾರವು ಒಟ್ಟಾಗಿ ಸೇರಿಕೊಂಡು ತಮ್ಮ ವರ್ಗಶಕ್ತಿಯನ್ನು ಪ್ರದರ್ಶಿಸುತ್ತಾ ಮನೆಗೆಲಸದವರನ್ನು ಇನ್ನಷ್ಟು ಭಯಭೀತಗೊಳಿಸಿದ್ದಾರೆ. ಈ ಘಟನೆಯಾದ ಸ್ವಲ್ಪಸಮಯದಲ್ಲೇ, ಸರಕಾರಿ ಜಾಗದ ಅನಧಿಕೃತ ಒತ್ತುವರಿಯಾಗಿದೆಯೆಂಬ ನೆಪದಲ್ಲಿ, ಸ್ಲಮ್ಮಿಗೆ ಆತುಕೊಂಡಿದ್ದ ಜಾಗದಲ್ಲಿ ಆ ಸ್ಲಮ್ಮಿನ ನಿವಾಸಿಗಳೇ ನಡೆಸುತ್ತಿದ್ದ ಹಲವಾರು ಅಂಗಡಿಗಳನ್ನು, ನೊಯಿಡಾದ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ನೆಲಸಮಗೊಳಿಸಿದರು. ಅಷ್ಟುಮಾತ್ರವಲ್ಲ. ಮುಸ್ಲಿಮನಾಗಿದ್ದರೂ ಅಥವಾ ಮುಸ್ಲಿಮನಂತೆ ಕಂಡಬಂದರೂ ಜನಸಮೂಹವನ್ನು ಕೆರಳಿಸುವಂತಿರುವ ದೇಶದ ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯನ್ನು ಸಹ ಈ ಶ್ರೀಮಂತ ಸೊಸೈಟಿ ಜನರ-ಪೊಲೀಸರ ಮೈತ್ರಿಕೂಟ ದುರ್ಬಳಕೆ ಮಾಡಿಕೊಂಡಿತು. ಈ ಹೌಸಿಂಗ್ ಸೊಸೈಟಿಯಲ್ಲಿ ಮನೆಗೆಲಸ ಮಾಡುವ 600 ಜನ ಮನೆಗೆಲಸದವರಲ್ಲಿ ಬಹುಪಾಲು ಜನ ಪೂರ್ವ ಬಂಗಾಳದಿಂದ ಬಂದವರಾಗಿದ್ದಾರೆ. ಹೀಗಾಗಿ ಅಕ್ರಮ ಬಾಂಗ್ಲಾದೇಶಿ ವಲಸಿಗರೆಂಬ ಹೆಸರಿನಲ್ಲಿ ಯಾವಾಗ ಬೇಕಿದ್ದರೂ ಬಂಧನಕ್ಕೊಳಗಾಗಬಹುದಾದ ಆತಂಕದ ಕತ್ತಿ ಸದಾ ಅವರ ನೆತ್ತಿಯ ಮೇಲೆ ತೂಗುತ್ತಲೇ ಇರುತ್ತದೆ. ಈ ಪ್ರಕರಣದಲ್ಲೂ ಹಾಗೆಯೇ ಆಯಿತು. ಪೊಲೀಸರು ಅವರ ಸ್ಲಮ್ಮಿನ ಮೇಲೆ ದಾಳಿ ನಡೆಸಿ ಅವರೆಲ್ಲರೂ ಭಾರತೀಯರೆಂಬುದಕ್ಕೆ ಪುರಾವೆಯನ್ನು ಒದಗಿಸಬೇಕೆಂದು ಜಬರ್‌ದಸ್ತಿ ಮಾಡಿದರು. ಮನೆಮಾಲಕರ ಜೊತೆಗೆ ನಡೆದ ಘರ್ಷಣೆಗೆ ಮುಂಚೆ ಈ ವಿಷುವೇ ಯಾರಿಗೂ ಪ್ರಸ್ತುತವೆನಿಸಿರಲಿಲ್ಲ.

 ಈ ಪ್ರಕರಣವು ದೇಶದಲ್ಲಿರುವ ಅಂದಾಜು 2 ಕೋಟಿಗೂ ಹೆಚ್ಚು ಮನೆಗೆಲಸದವರ ಹಕ್ಕುಗಳನ್ನು ರಕ್ಷಿಸಲು ಸಂಸತ್ತು ಒಂದು ಕಾಯ್ದೆಯನ್ನು ತುರ್ತಾಗಿ ಜಾರಿಗೆ ತರಬೇಕಿರುವ ಅಗತ್ಯವನ್ನು ಒತ್ತಿಹೇಳುತ್ತದೆ. ಈ ವಲಯದ ಕಾರ್ಮಿಕರು ಸಾಮಾನ್ಯವಾಗಿ ವಲಸಿಗರು ಮತ್ತು ಮಹಿಳೆಯರೂ ಆಗಿರುತ್ತಾರೆ. ಆದ್ದರಿಂದಲೇ ಮನೆಗೆಲಸದವರು ಅಸಂಘಟಿತ ಕಾರ್ಮಿಕ ವಲಯದಲ್ಲೇ ಅತ್ಯಂತ ಅಭದ್ರತೆಯಲ್ಲಿರುವ ಕಾರ್ಮಿಕವರ್ಗವಾಗಿದೆ. ಅಂತಹ ಒಂದು ಕಾನೂನು ಅತ್ಯಂತ ಮುಖ್ಯವಾಗಿ ಮನೆಗೆಲಸವನ್ನು ಒಂದು ಕೆಲಸ ಎಂದು ಪರಿಗಣಿಸಬೇಕಿದೆ ಮತ್ತು ಆ ಮೂಲಕ ಸಮಾಜವೂ ಸಹ ಮನೆಗೆಲಸವನ್ನು ಒಂದು ಕೆಲಸವೆಂದು ಮೌಲ್ಯೀಕರಿಸುವಂತೆ ಮಾಡಬೇಕಿದೆ. ಈ ಹಿಂದಿನ ಸರಕಾರಗಳು ಇದರ ಬಗ್ಗೆ ಹಲವಾರು ಮಸೂದೆಗಳನ್ನೂ ರೂಪಿಸಿದ್ದರೂ ಅವ್ಯಾವುದೂ ಕಾಯ್ದೆಯಾಗಲೇ ಇಲ್ಲ. ಮನೆಗೆಲಸದವರು ಕಡಿಮೆ ವೇತನ, ಅಪಾರ ಕೆಲಸದ ಹೊರೆ, ಸುದೀರ್ಘ ಕೆಲಸದ ಅವಧಿಯಂಥ ಅನುದಿನದ ಸಮಸ್ಯೆಗಳನ್ನು ಎದುರಿಸುವುದರ ಜೊತೆಗೆ ಮನೆಮಾಲಕರಿಂದ ಬಂಧನಕ್ಕೊಳಗಾಗುವ ಮತ್ತು ಹೊಡೆತ-ಬಡಿತಗಳನ್ನು ಎದುರಿಸುತ್ತಾರೆ. ಅಂಥಾ ಪ್ರಕರಣಗಳು ಗಾಬರಿಗೊಳಿಸುವಷ್ಟು ಸಂಖ್ಯೆಯಲ್ಲಿ ಹೊರಬರುತ್ತಲೇ ಇವೆ. ಮನೆಗೆಲಸವನ್ನು ಮುಚ್ಚಿದ ಬಾಗಿಲಿನ ಹಿಂದೆ, ಮನೆಯೊಳಗೆ ಮಾಡಬೇಕಾದ ಸಂದರ್ಭವೂ ಸಹ ಈ ಕೆಲಸಗಾರರ ಅದ್ರತೆಯನ್ನೂ ಹೆಚ್ಚುಮಾಡುತ್ತದೆ.

ದೇಶದ ಅರ್ಧದಷ್ಟು ರಾಜ್ಯಗಳು ಮನೆಗೆಲಸದವರನ್ನು ಕನಿಷ್ಠ ವೇತನ ಕಾಯ್ದೆಯಡಿ ಕೆಲಸಗಾರರೆಂದೇ ವರ್ಗೀಕರಿಸಿವೆ. ಇದರಿಂದಾಗಿ ಈ ಕೆಲಸಗಾರರಿಗೂ ವೇತನ, ಕೆಲಸದ ಅವಧಿ ಮತ್ತು ರಜೆಯಂಥ ಸೌಲಭ್ಯಗಳು ಅನ್ವಯವಾಗುತ್ತವೆ. ಆದರೆ ರೊಹರಾ ಬೀಬಿ ಪ್ರಕರಣ ನಡೆದ ನೋಯಿಡಾ ಇರುವ ಉತ್ತರ ಪ್ರದೇಶ, ದಿಲ್ಲಿ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಈ ಬಗೆಯ ಕಾನೂನುಗಳಿಲ್ಲ. ಹಾಗೇ ನೋಡಿದರೆ ಈ ಕಾನೂನು ಸಹ ಸಾಕಾಗುವುದಿಲ್ಲ. ಏಕೆಂದರೆ ಈ ಕಾನೂನು ಕೆಲಸಗಾರರಾಗಲೀ, ಅವರನು ನೇಮಿಸಿಕೊಳ್ಳುವ ಮನೆ ಮಾಲಕರಾಗಲೀ ಯಾವುದಾದರೂ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡುವುದಿಲ್ಲ. ಹಾಗೆ ನೋಂದಣಿಯೇ ಆಗದಿದ್ದರೆ ಸರಕಾರವು ಕೆಲಸಗಾರ ಮತ್ತು ಮಾಲಕರಿಬ್ಬರೂ ತಮ್ಮ ತಮ್ಮ ಒಪ್ಪಂದದ ಕರಾರಿನಂತೆ ನಡೆದುಕೊಳ್ಳುತ್ತಿದ್ದಾರೋ ಇಲ್ಲವೋ ಎಂಬುದನ್ನು ಉಸ್ತುವಾರಿ ಮಾಡಿ ತಗಾದೆಗಳನ್ನು ಬಗೆಹರಿಸಲೂ ಆಗುವುದಿಲ್ಲ. ಆ ಕಾನೂನು ಕೆಲಸಗಾರರ ಸುರಕ್ಷೆ, ಆರೋಗ್ಯ ಮತ್ತು ಮಕ್ಕಳ ಶಿಕ್ಷಣದ ಅಂಶಗಳನ್ನೂ ಪರಿಗಣಿಸಬೇಕಾಗುತದೆ. ಕೇರಳ ಮತ್ತು ತಮಿಳುನಾಡುವಿನಂಥ ರಾಜ್ಯಗಳಲ್ಲಿ ಮನೆಗೆಲಸದವರ ಕಲ್ಯಾಣವನ್ನು ಗಮನಿಸುವುದಕ್ಕಾಗಿಯೇ ಒಂದು ನಿಗಮವನ್ನು ರಚಿಸಲಾಗಿದ್ದರೂ ಅದಕ್ಕೆ ಒದಗಿಸಲಾಗಿರುವ ಹಣ ತೀರಾ ಕಡಿಮೆ. ಅಂಥಾ ಒಂದು ರಾಷ್ಟ್ರೀಯ ಕಾನೂನು ಲಾಭದ ಉದ್ದೇಶಕ್ಕಾಗಿಯೇ ತಲೆ ಎತ್ತಿರುವ ಮತ್ತು ಮಕ್ಕಳನ್ನು ಕೆಲಸಕ್ಕೆ ದೂಡುವ ಅಸಂಖ್ಯಾತ ಕಾರ್ಮಿಕ ಸರಬರಾಜು ಏಜೆನಿ್ಸಗಳನ್ನೂ ನಿಯಂತ್ರಿಸಬೇಕಿರುತ್ತದೆ.

ನೊಯಿಡಾದಲ್ಲಿ ನಡೆಯುತ್ತಿರುವ ಸಂಘರ್ಷವು, ಅತ್ಯಂತ ಹೀನಾಯವಾದ ವಾತಾವರಣದಲ್ಲಿ ಕೆಲಸ ಮಾಡುತ್ತಿರುವ ಈ ಕಾರ್ಮಿಕರ ಪರಿಸ್ಥಿತಿಯನ್ನು ಸುಧಾರಿಸಲು ಒಂದು ಕಾನೂನಿನ ಚೌಕಟ್ಟಿನ ಅಗತ್ಯವನ್ನು ಎತ್ತಿಹಿಡಿದಿದೆಯಾದರೂ ಅದಷ್ಟೆ ಸಾಲುವು ದಿಲ್ಲ. ನೊಯಿಡಾ ಪ್ರಕರಣವೂ ಸಾಬೀತುಪಡಿಸುವಂತೆ ಮನೆ ಮಾಲಕರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಉನ್ನತ ಸ್ಥಾನದಲ್ಲಿರುತ್ತಾರೆ. ಆದ್ದರಿಂದ, ಮನೆಗೆಲಸದವರು ತಮ್ಮ ಪರವಾಗಿರುವ ಕಾನೂನನ್ನು ಬಳಸಿಕೊಳ್ಳಬೇಕೆಂದರೂ ಸಂಘಟಿತ ರಾಗಬೇಕಿರುವುದು ಅತ್ಯಗತ್ಯ. ಕಳೆದ ಕೆಲವು ದಶಕಗಳಲ್ಲಿ ಭಾರತ ದಲ್ಲಿ ಮನೆಗೆಲಸದವರು ಸಂಘಟಿತರಾಗುತ್ತಿದ್ದು ದೊಡ್ಡ ದೊಡ್ಡ ನಗರಗಳಲ್ಲಿ ಅವರ ಸಂಘಟನೆಗಳು ರೂಪುಗೊಳ್ಳುತ್ತಿವೆ. ಆದರೆ ಇದೂ ಕೂಡಾ ಸಾಲುತ್ತಿಲ್ಲ. ಏಕೆಂದರೆ ಬಹಳಷ್ಟು ಮನೆ ಮಾಲಕರು ತಮ್ಮ ಕೆಲಸದವರನ್ನು ಜೀತಗಾರರೆಂಬಂತೆ ಕಾಣುವ ಊಳಿಗಮಾನ್ಯ ಧೋರಣೆಯನ್ನು ಹೊಂದಿದ್ದು ಅವರ ಮತ್ತು ಅವರ ಕೆಲಸಗಾರರ ನಡುವಿನ ಸಂಬಂಧವು ಕಾನೂನಿಗಿಂತ ಹೆಚ್ಚಾಗಿ ಸಾಮಾಜಿಕ ವ್ಯವಸ್ಥೆಯ ಸ್ಥಾನಮಾನಗಳು ನಿರ್ಧರಿಸುತ್ತವೆ; ಅಂಥಾ ಸಾಮಾಜಿಕ ವ್ಯವಸ್ಥೆಯು ಕೆಲವರು ತಮ್ಮ ಹುಟ್ಟಿನ ಕಾರಣದಿಂದಾಗಿಯೇ ಬೇರೆಯವರ ಸೇವೆಯನ್ನೂ ಮಾಡದೇ ಗತ್ಯಂತರವಿಲ್ಲ ಎಂದು ಪರಿಗಣಿಸುತ್ತದೆ. ಇದು ಬದಲಾಗಲೇಬೇಕು.


ಈ ವಲಯದ ಕಾರ್ಮಿಕರು ಸಾಮಾನ್ಯವಾಗಿ ವಲಸಿಗರು ಮತ್ತು ಮಹಿಳೆಯರೂ ಆಗಿರುತ್ತಾರೆ. ಆದ್ದರಿಂದಲೇ ಮನೆಗೆಲಸದವರು ಅಸಂಘಟಿತ ಕಾರ್ಮಿಕ ವಲಯದಲ್ಲೇ ಅತ್ಯಂತ ಅಭದ್ರತೆಯಲ್ಲಿರುವ ಕಾರ್ಮಿಕವರ್ಗವಾಗಿದೆ. ಅಂತಹ ಒಂದು ಕಾನೂನು ಅತ್ಯಂತ ಮುಖ್ಯವಾಗಿ ಮನೆಗೆಲಸವನ್ನು ಒಂದು ಕೆಲಸ ಎಂದು ಪರಿಗಣಿಸಬೇಕಿದೆ ಮತ್ತು ಆ ಮೂಲಕ ಸಮಾಜವೂ ಸಹ ಮನೆಗೆಲಸವನ್ನು ಒಂದು ಕೆಲಸವೆಂದು ಮೌಲ್ಯೀಕರಿಸುವಂತೆ ಮಾಡಬೇಕಿದೆ.


ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ