ನಿಜ ಜೀವನದ ‘3 ಈಡಿಯಟ್ಸ್’ ಅಸ್ಸಾಂ ಪ್ರವಾಹದಲ್ಲಿ ಸಿಲುಕಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದು ಹೇಗೆ ಗೊತ್ತೇ?

Update: 2017-08-07 15:18 GMT

ಅಸ್ಸಾಮ್‌ನಲ್ಲಿ ಇತ್ತೀಚಿಗೆ ಪ್ರವಾಹವು ಉಂಟು ಮಾಡಿರುವ ವಿನಾಶಗಳ ನಡುವೆಯೇ ಕೆಲವು ನಿಜಕ್ಕೂ ಹೃದಯಸ್ಪರ್ಶಿ ಸುದ್ದಿಗಳು ಹೊರಬೀಳುತ್ತಿವೆ. ಅಸ್ಸಾಮ್‌ನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಗೆ ತೆರಳಿದ್ದ ಎನ್‌ಜಿಒ ‘ಸೇವ್ ದಿ ಚಿಲ್ಡ್ರನ್’ನ ಸ್ವಯಂಸೇವಕರ ತಂಡವೊಂದು ತುರ್ತು ವೈದ್ಯಕೀಯ ಸೇವೆಯ ಅನುಪಸ್ಥಿತಿಯಲ್ಲಿ ಗರ್ಭಿಣಿಯೋರ್ವಳ ಹೆರಿಗೆಯನ್ನು ಸುರಕ್ಷಿತವಾಗಿ ಮಾಡಿಸಿ ಪವಾಡವನ್ನೇ ಮೆರೆದಿದೆ.ತಂಡದ ಸದಸ್ಯೆಯರಾದ ಮೇಘನಾ, ಮಿಂಟು ದೇಬನಾಥ್ ಮತ್ತು ಪೂರ್ಣಾ ದೂರವಾಣಿಯಲ್ಲಿ ಮೇಘನಾಳ ವೈದ್ಯ ಸೋದರನ ನೆರವಿನಿಂದ ಸುಖಪ್ರಸವವನ್ನು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೆರಿಗೆ ಬಳಿಕ ತಕ್ಷಣವೇ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಉತ್ತಮವಾಗಿದೆ. ಜು.26ರಂದು ಪ್ರವಾಹ ಪೀಡಿತ ಧೇಮಜಿ ಜಿಲ್ಲೆಯ ಉಲೋನಿ ಗ್ರಾಮದಲ್ಲಿ ಸಂತ್ರಸ್ತ ಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸಿ ಮರಳುತ್ತಿದ್ದ ಪರಿಹಾರ ತಂಡಕ್ಕೆ ಗ್ರಾಮದ ನಿವಾಸಿ, ಎಂಟು ತಿಂಗಳ ಗರ್ಭಿಣಿ ಬಿಲಾಯಿಶ್ರೀ ಹೆರಿಗೆ ನೋವಿನಿಂದ ನರಳುತ್ತಿರುವ ಮಾಹಿತಿ ಲಭಿಸಿತ್ತು. ತಂಡವು ತಕ್ಷಣಕ್ಕೆ ಅಲ್ಲಿಗೆ ತೆರಳಿದಾಗ ಆಕೆಯನ್ನು ತುರ್ತಾಗಿ ಆಸ್ಪತ್ರೆಗೊಯ್ಯಬೇಕಾದ ಅಗತ್ಯವಿತ್ತು. ಆದರೆ ಆಸ್ಪತ್ರೆ ತಲುಪಲು ಬಿಲಾಯಿಶ್ರೀ ನೆರೆ ನೀರಿನಲ್ಲಿ ನಾಲ್ಕು ಬಿದಿರಿನ ಸೇತುವೆಗಳನ್ನು ದಾಟಿ ಕನಿಷ್ಠ ಎರಡೂವರೆ ಕಿ.ಮೀ.ನಡೆಯಬೇಕಾಗಿತ್ತು, ಏಕೆಂದರೆ ಅಲ್ಲಿ ಯಾವುದೇ ರಸ್ತೆ ಸೌಲಭ್ಯವಿರಲಿಲ್ಲ. ಎರಡೂವರೆ ಕಿ.ಮೀ.ಬಳಿಕ ಟೆಂಪೋವನ್ನು ಹತ್ತಿ 15 ಕಿ.ಮೀ.ದೂರದ ಸಾರ್ವಜನಿಕ ಆರೋಗ್ಯ ಕೇಂದ್ರವನ್ನು ತಲುಪಬೇಕಾಗಿತ್ತು.

 ಪರಿಹಾರ ತಂಡವು ತಕ್ಷಣವೇ ಮುಂದಿನ ಕಾರ್ಯಾಚರಣೆಗೆ ಧುಮುಕಿತ್ತು. ತಂಡದ ವಾಹನವನ್ನು ನಿಲ್ಲಿಸಿದ್ದ ಸ್ಥಳದವರೆಗೆ ಬಿಲಾಯಿಶ್ರೀಯನ್ನು ಕರೆದೊಯ್ಯಲು ಬಿದಿರು ಕೋಲುಗಳನ್ನು ಬಳಸಿ ಸ್ಟ್ರೆಚರ್ ಸಿದ್ಧಗೊಂಡಿತ್ತು. ಸ್ಟ್ರೆಚರ್ ಹೊತ್ತುಕೊಂಡು ಕೇವಲ 300 ಮೀ.ದೂರಕ್ಕೆ ಸಾಗಿದ್ದಷ್ಟೇ...ಬಿಲಾಯಿಶ್ರೀಗೆ ಹೆರಿಗೆ ನೋವು ತೀವ್ರವಾಗಿ ಉಲ್ಬಣಿಸಿತ್ತು. ಶಿಶುವಿನ ತಲೆ ಹೊರಗೆ ಬರಲಾರಂಭಿಸಿತ್ತು. ತಂಡದವರು ತಕ್ಷಣವೇ ಆಕೆಯನ್ನು ಸ್ಟ್ರೆಚರ್ ನಿಂದ ಕೆಳಕ್ಕೆ ಇಳಿಸಿ ಮಲಗಿಸಿದ್ದರು. ಗ್ರಾಮದ ಮಹಿಳೆಯರು ಸುತ್ತಲೂ ನೆರೆದಿದ್ದರಾದರೂ ಹೆರಿಗೆ ಹೇಗೆ ಮಾಡಿಸುವುದು ಎನ್ನುವುದು ಅವರಿಗೂ ತಿಳಿದಿರಲಿಲ್ಲ. ಗ್ರಾಮದಲ್ಲಿ ಯಾವುದೇ ದಾದಿಯೂ ಇರಲಿಲ್ಲ.

 ಈ ಸ್ಥಿತಿಯಲ್ಲಿ ನೇತೃತ್ವವನ್ನು ವಹಿಸಿಕೊಂಡ ಮೇಘನಾಗೆ ಆಮಿರ್ ಖಾನ್‌ರ ‘3 ಈಡಿಯಟ್ಸ್ ’ಚಿತ್ರದಲ್ಲಿಯ ಇಂತಹುದೇ ದೃಶ್ಯ ನೆನಪಿಗೆ ಬಂದಿತ್ತು. ದಿಲ್ಲಿಯಲ್ಲಿ ವೈದ್ಯನಾಗಿರುವ ಅಣ್ಣ ಸುಷ್ರಿತ್‌ನನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಹೆರಿಗೆ ಮಾಡಿಸುವ ಬಗ್ಗೆ ಆತನಿಂದ ನಿರ್ದೇಶಗಳನ್ನು ಪಡೆಯಲಾರಂಭಿಸಿದ್ದಳು. ತನ್ಮಧ್ಯೆ ಪೂರ್ಣಾ ಮತ್ತು ಮಿಂಟು ಹೆರಿಗೆ ಮಾಡಿಸಲು ಅಗತ್ಯ ಸಾಮಗ್ರಿಗಳನ್ನು ಸಜ್ಜುಗೊಳಿಸಿದ್ದರು. ತನ್ನ ಅಣ್ಣನಿಂದ ನಿರ್ದೇಶಗಳನು ಸ್ವೀಕರಿಸುತ್ತಲೇ ಮೇಘನಾ ಬಿಲಾಯಿಶ್ರೀಯ ಹೆರಿಗೆಯನ್ನು ಮಾಡಿಸಿ ದ್ದಳು. ಬಳಿಕ ರಕ್ತವನ್ನು ಒರೆಸಿ, ಹೊಕ್ಕಳು ಬಳ್ಳಿಯನ್ನೂ ಸ್ಟರೈಲ್ ಬ್ಲೇಡ್‌ನಿಂದ ಯಶಸ್ವಿಯಾಗಿ ಕತ್ತರಿಸಿದ್ದಳು.

ಸ್ವಚ್ಛವಾದ ಬಟ್ಟೆಯಲ್ಲಿ ಮುದ್ದಾದ ಗಂಡುಮಗುವನ್ನು ಸುತ್ತಿ ತಾಯಿಗೆ ತೋರಿಸಿದಾಗ ಆ ನೋವಿನಲ್ಲೂ ಆಕೆ ಆನಂದ ಬಾಷ್ಪಗಳನ್ನು ಸುರಿಸಿದ್ದಳು. ಆದರೆ ಬಿಲಾಯಿಶ್ರೀ ಯಾತನೆಯಿಂದ ಮುಲುಗುಡುತ್ತಿದ್ದಳು, ಹೊಕ್ಕಳು ಬಳ್ಳಿ ಸಂಪೂರ್ಣವಾಗಿ ಹೊರಕ್ಕೆ ಬಂದಿರಲಿಲ್ಲ. ತಕ್ಷಣವೇ ಆಕೆಯನ್ನು ಸ್ಟ್ರೆಚರ್‌ನಲ್ಲಿ ಹಾಕಿಕೊಂಡು ತಂಡದ ವಾಹನ ನಿಂತಿದ್ದ ಸ್ಥಳಕ್ಕೆ ಹೊತ್ತೊಯ್ಯಲಾಯಿತು. ಸುಮಾರು 15 ಕಿ.ಮೀ.ದೂರದ ಆಸ್ಪತ್ರೆಯನ್ನು ತಲುಪಿದ ಬಳಿಕ ಎಲ್ಲ ಹೊಣೆಯನ್ನೂ ಅಲ್ಲಿಯ ನರ್ಸ್ ಹೊತ್ತುಕೊಂಡಿದ್ದಳು. ಹೊಕ್ಕಳು ಬಳ್ಳಿಯನ್ನು ತೆಗೆದು, ಮಗುವನ್ನು ಸ್ವಚ್ಛಗೊಳಿಸಿ ಅದಕ್ಕೆ ತಾಯಿಯ ಹಾಲು ಕುಡಿಸಲಾಗಿತ್ತು. ಸುಸ್ತಾಗಿದ್ದ ತಾಯಿಗೆ ಆಮ್ಲಜನಕ ಮತ್ತು ಗ್ಲುಕೋಸ್‌ನ್ನೂ ನೀಡಲಾಗಿತ್ತು. ತಾಯಿ-ಮಗು ಈಗ ಸಂಪೂರ್ಣ ಆರೋಗ್ಯದಿಂದಿದ್ದಾರೆ. ತಾಯಿ ಮತ್ತು ಆಕೆಯ ಸಮುದಾಯ ಮಗುವಿಗೆ ಮೇಘನಾಳ ಅಣ್ಣ ಸುಷ್ರಿತ್ ಹೆಸರಿಡಲು ನಿರ್ಧರಿಸಿದ್ದಾರೆ.

ಕೃಪೆ : savethechildren.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News