‘ಜಿನೇವ ಒಪ್ಪಂದ’ದ ಹಿಂದೆ...

Update: 2017-08-11 18:14 GMT

ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಂಸ್ಥೆಯ ಮೂಲ ತತ್ವಗಳಾದ ಮಾನವೀಯತೆ, ನಿಷ್ಪಕ್ಷಪಾತ, ತಾಟಸ್ಥ್ಯ, ಸ್ವಾತಂತ್ರ್ಯ, ಸ್ವಯಂ ಸೇವೆ, ಐಕ್ಯಮತ್ಯ ಮತ್ತು ವಿಶ್ವ ವ್ಯಾಪಕತೆ ಇವುಗಳಿಗೆ ಧಕ್ಕೆ ಬಾರದಂತೆ ಸರ್ವಜನರನ್ನು ಒಂದೇ ರೀತಿಯಿಂದ ನೋಡುವ ಮತ್ತು ಮಾನವೀಯತೆಯ ಮುಖಾಂತರ ವಿಶ್ವ ಶಾಂತಿಯನ್ನು ಪಡೆಯುವ ದಿಶೆಯಲ್ಲಿ ಜಿನೇವ ಒಪ್ಪಂದ ಮಾನವ ಇತಿಹಾಸದಲ್ಲಿ ಒಂದು ಮಹತ್ತರ ಮೈಲುಗಲ್ಲು ಆಗಿರುತ್ತದೆ.

‘ಜಿನೇವ ಒಪ್ಪಂದ’ದ ಸಾರಾಂಶ ಈ ಕೆಳಗಿನಂತಿೆ

ಮೊದಲ ‘ಜಿನೇವ ಒಪ್ಪಂದ’ಕ್ಕೆ 1864 ಆಗಸ್ಟ್ 12ರಂದು ಸಹಿ ಹಾಕಲಾಯಿತು ಈ ಬಳಿಕ 2ನೆ ಒಪ್ಪಂದ 1906ರ ಜುಲೈ 6ರಂದು, 3ನೆ ಒಪ್ಪಂದ 1929ರ ಜುಲೈ 12ರಂದು ಹಾಗೂ ಅಂತಿಮವಾದ 4ನೆ ಒಪ್ಪಂದ 1946ರ ಆಗಸ್ಟ್ 12ರಂದು ಸಹಿ ಮಾಡಲ್ಪಟ್ಟಿತು ಮೊದಲ 2 ಒಪ್ಪಂದಗಳು ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಸಂಬಂಧಿಸಿದ್ದರೆ, ಮೂರನೆ ಒಪ್ಪಂದ ಯುದ್ಧ ಕೈದಿಗಳಿಗೆ ಸಂಬಂಧಿಸಿದ ಒಪ್ಪಂದವಾಗಿದೆ. 4ನೆ ಒಪ್ಪಂದ ಯುದ್ಧ ಸಂದರ್ಭದಲ್ಲಿ ಯುದ್ಧೇತರ ನಾಗರಿಕ ವ್ಯಕ್ತಿಗಳ ಸಂರಕ್ಷಣೆಗೆ ಸಂಬಂಧಿಸಿದೆ. 4ನೆ ಒಪ್ಪಂದದಲ್ಲಿ ಯುದ್ಧ ಸಮಯದಲ್ಲಿ ಆಗುವ ದಂಗೆಯ ನಿಯಂತ್ರಣದ ಬಗ್ಗೆಯೂ ಒಳಗೊಂಡಿದೆ.

♦ ಯುದ್ಧರಂಗದಲ್ಲಿನ ಕಾಯಿಲೆಯವರು ಹಾಗೂ ಗಾಯಾಳುಗಳನ್ನು ಗುರುತಿಸಬೇಕು, ರಕ್ಷಿಸಬೇಕು ಹಾಗೂ ವೈದ್ಯಕೀಯ ಉಪಚಾರ ಒದಗಿಸಬೇಕು. ಅಂಥವರ ರಾಷ್ಟ್ರೀಯತೆಯಲ್ಲಿ ಭಿನ್ನಭೇದ ತೋರಬಾರದು.

♦ ಯುದ್ಧದಲ್ಲಿ ಮೃತ ಪಟ್ಟವರನ್ನು ಪತ್ತೆಹಚ್ಚಬೇಕು ಹಾಗೂ ಅವರ ಮಾಹಿತಿ ವಿವರಗಳನ್ನು ರೆಡ್‌ಕ್ರಾಸ್ ಸಂಸ್ಥೆಗೆ ಒದಗಿಸಬೇಕು.

♦ ಗಾಯಗೊಂಡ ಸೈನಿಕರ ಹಾಗೂ ಶರಣಾಗತರಾದ ಸೇನಾ ತುಕಡಿಗಳ ಮೇಲೆ ಆಕ್ರಮಣ ಮಾಡಬಾರದು.

♦ ತುರ್ತು ಚಿಕಿತ್ಸಾ ಘಟಕ, ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಇವರ ಮೇಲೆ ದಾಳಿ ಮಾಡುವಂತಿಲ್ಲ. ಇವರನ್ನು ಯುದ್ಧ ತಟಸ್ಥರೆಂದು ಪರಿಗಣಿಸಬೇಕು. ಅವರಿಗೆ ಸುರಕ್ಷತಾ ಭದ್ರತೆಯನ್ನು ಒದಗಿಸಬೇಕು.

♦ ಬಿಳಿ ಹಿನ್ನೆಲೆಯಲ್ಲಿನ ಕೆಂಪು ಕ್ರಾಸ್‌ನ್ನು ಸುರಕ್ಷಾ ಲಾಂಛನವಾಗಿ ಮಾನ್ಯತೆ ನೀಡಬೇಕು.

♦ ಒಪ್ಪಂದದಲ್ಲಿ ನಮೂದಿಸಲ್ಪಟ್ಟ ಆಸ್ಪತ್ರೆ ಹಾಗೂ ಇತರ ಸಂಘಟನೆಗಳನ್ನು ಯುದ್ಧದಲ್ಲಿ ನಿರತರಾದವರು ಯುದ್ಧಕ್ಕೆ ಬೆಂಬಲಿಸುವ ಯಾವುದೇ ಯುದ್ಧ ಕಾರ್ಯಗಳಿಗಾಗಿ ಬಳಸಬಾರದು.

♦ ಸೈನ್ಯಾಧಿಕಾರಿಗಳು, ಗಾಯಗೊಂಡ ಕಾಯಿಲೆಯಿಂದ ಮೃತರಾದ ಸೈನಿಕರ ಮಾಹಿತಿ ವಿವರಗಳನ್ನು ದಾಖಲಿಸಿಡುವ ಅಗತ್ಯವಿದೆ. ಈ ಮಾಹಿತಿಯನ್ನು ಕೇಂದ್ರೀಯ ಯುದ್ಧ ಕೈದಿಗಳ ಏಜೆನ್ಸಿ ಎಂಬ ಮಧ್ಯವರ್ತಿ ಏಜೆನ್ಸಿಯ ಮೂಲಕ ವೈರಿ ಪಡೆಗೆ ತಿಳಿಸಬೇಕು.

♦ ಯುದ್ಧರಂಗದ ವ್ಯಾಪ್ತಿ ಪ್ರದೇಶದಲ್ಲಿರುವ ಇತರ ನಾಗರಿಕ ಜನರನ್ನು ಹಾಗೂ ಪರಿಹಾರಕಾರಕ ಸಂಘಟನೆಗಳನ್ನು ಗಾಯಾಳುಗಳನ್ನು ಪತ್ತೆ ಹಚ್ಚುವಲ್ಲಿ ಹಾಗೂ ಅವರಿಗೆ ಚಿಕಿತ್ಸಾ ಉಪಚಾರವನ್ನು ಒದಗಿಸಲು ಸಹಾಯವನ್ನು ಪಡೆಯಬಹುದು. ಗಾಯಾಳುಗಳನ್ನು ಉಪಚರಿಸುವ ಇಂತ ವ್ಯಕ್ತಿಗಳಿಗೆ ತೊಂದರೆ ನೀಡಬಾರದು.

♦ ಸೈನ್ಯದಲ್ಲಿ ಪಾದ್ರಿಗಳನ್ನು ತಟಸ್ಥರೆಂದು ಗಮನಿಸಿ ರಕ್ಷಣೆಕೊಡಬೇಕು.

♦ ಯುದ್ಧಕೈದಿಗಳನ್ನು ಸುರಕ್ಷಿತ ಸ್ಥಳಗಳಲ್ಲಿಡಬೇಕು. ಅವರಿಗೆ ಉತ್ತಮ ಆಹಾರ, ಬಟ್ಟೆ ಒದಗಿಸಬೇಕು, ಅಗತ್ಯವಾದಾಗ ವೈದ್ಯಕೀಯ ಉಪಚಾರವನ್ನು ನೀಡಬೇಕು. ತಮ್ಮ ಇಷ್ಟದಂತೆ ಪೂಜಿಸುವ ಸ್ವಾತಂತ್ರ್ಯ ಅವರಿಗಿರಬೇಕು.

♦ ನಿಗದಿಯ ಪತ್ರ ವ್ಯವಹಾರದ ಸೌಲಭ್ಯವನ್ನು ಅವರಿಗೆ ಒದಗಿಸಬೇಕು.

♦ ಯುದ್ಧ ಕೈದಿಗಳನ್ನು ಗೌರವಾದರಗಳಿಂದ ನೋಡಿಕೊಳ್ಳಬೇಕು.

♦ ಕೈದಿಗಳು ತಮ್ಮ ಹೆಸರು, ವಿಳಾಸ, ಗುರುತಿನ ಸಂಖ್ಯೆ ಮತ್ತು ಸೇನಾ ಪಡೆಯ ವಿವರ ಇತ್ಯಾದಿಗಳನ್ನು ಕೊಡಬೇಕಾಗುತ್ತದೆ.

♦ ರೆಡ್‌ಕ್ರಾಸ್ ಸಂಸ್ಥೆಯ ಅಂತಾರಾಷ್ಟ್ರೀಯ ಸಮಿತಿಗೆ ಪರಿಹಾರ ಸಾಮಗ್ರಿಯನ್ನು ವಿತರಿಸುವ ಸೌಲಭ್ಯ ಹೊಂದಿರಬೇಕು.

♦ ರೆಡ್ ಕ್ರಾಸ್ ಸಂಸ್ಥೆಯ ಅಂತಾರಾಷ್ಟ್ರೀಯ ಸಮಿತಿಯ ಪ್ರತಿನಿಧಿಗಳಿಗೆ ಯುದ್ಧ ಕೈದಿಗಳನ್ನು ಅವರ ಶಿಬಿರಗಳನ್ನು ಭೇಟಿಯಾಗುವ ಸೌಲಭ್ಯಗಳಿರಬೇಕು. ಅವರ ಜೀವನ ಸ್ಥಿತಿ ಹಾಗೂ ಕುಂದು-ಕೊರತೆಗಳನ್ನು ತಿಳಿದುಕೊಳ್ಳಲು ಅವರೊಂದಿಗೆ ಖಾಸಗಿಯಾಗಿ ಸಮಾಲೋಚನೆ ಮಾಡಲು ಅವಕಾಶಗಳಿರಬೇಕು.

♦ ಯುದ್ಧ ಕೈದಿಗಳನ್ನು ಅಮಾನವೀಯ ಕೃತ್ಯಗಳಿಂದ ರಕ್ಷಿಸಬೇಕು ಅವರನ್ನು ಪ್ರಾಯೋಗಿಕ ಉದ್ದೇಶಗಳಿಗಾಗಿ ಬಳಸಬಾರದು. ಸಮರ್ಪಕ ನ್ಯಾಯ ವಿಚಾರಣೆ ನಡೆಸದೆ, ಅವರನ್ನು ಮರಣ ದಂಡನೆಗೆ ಗುರಿ ಪಡಿಸುವಂತಿಲ್ಲ.

♦ ಯುದ್ಧ ಕೈದಿಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು.

♦ ಯುದ್ಧ ಕೈದಿಗಳನ್ನು ಅವರ ವಯಸ್ಸು, ಲಿಂಗ ಹಾಗೂ ಆರೋಗ್ಯಕ್ಕೆ ಅನುಗುಣವಾಗಿ ಕಾರ್ಮಿಕರಾಗಿ ಉಪಯೋಗಿಸಬಹುದು.

♦ ಅಂಥ ಯುದ್ಧ ಕೈದಿ ಕಾರ್ಮಿಕರಿಗೆ ಅವರ ದರ್ಜೆಗನು ಸಾರವಾಗಿ ಅವರು ಮಾಡಿದ ಕೆಲಸಕ್ಕೆ ಸಂಬಳ ಕೊಡಬೇಕು.

♦ ಯುದ್ಧ ಕೈದಿಗಳು ಗುಪ್ತ ಮತದಾನದ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅನುಮತಿ ಇರಬೇಕು. ಈ ಪ್ರತಿನಿಧಿಗಳು ಸೈನ್ಯದ ಅಧಿಕಾರಿಗಳನ್ನು ಹಾಗೂ ರೆಡ್‌ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಯ ಯುದ್ಧ ಕೈದಿಗಳ ಪರವಾಗಿ ಪ್ರಾತಿನಿಧ್ಯ ವಹಿಸಿ ಸಂಪರ್ಕಿಸುತ್ತಾರೆ.

♦ ಸುರಕ್ಷಿತ ವಲಯಗಳನ್ನು ನಿರ್ಮಿಸಬೇಕು. ಇವುಗಳೆಂದರೆ ಯುದ್ಧ ಗಾಯಾಳು ರಕ್ಷಿಸಲು ವ್ಯವಸ್ಥೆಮಾಡಿದ ಆಸ್ಪತ್ರೆಗಳು ಮತ್ತು ಪ್ರದೇಶಗಳಾಗಿವೆ. ಇಲ್ಲಿ ಗಾಯಾಳು ಸೈನಿಕರನ್ನು, ವೃದ್ಧ ವ್ಯಕ್ತಿಗಳನ್ನು 15 ವರ್ಷಕ್ಕಿಂತ ಕಿರಿಯ ಮಕ್ಕಳ ತಾಯಂದಿರನ್ನು ಯುದ್ಧ ಪರಿಣಾಮಗಳಿಂದ ರಕ್ಷಿಸುವ ಕಾರ್ಯವನ್ನು ಈ ಸುರಕ್ಷಿತ ವಲಯದಲ್ಲಿ ಕೈಗೊಳ್ಳಲಾಗುತ್ತದೆ. ಯುದ್ಧನಿರತ ಪಕ್ಷಗಳು ತಾವು ಆಕ್ರಮಿಸಿಕೊಂಡ ಅಥವಾ ಮುತ್ತಿಗೆ ಹಾಕಿದ ಸೈನ್ಯದಿಂದ ಗಾಯಾಳು ಸೈನಿಕರನ್ನು, ರೋಗಗ್ರಸ್ತರನ್ನು, ವೃದ್ಧರನ್ನು, ಮಕ್ಕಳನ್ನು ಹಾಗೂ ಗರ್ಭಿಣಿಯರನ್ನು ತಮ್ಮ ಆಕ್ರಮಣದಿಂದ ಹೊರತುಪಡಿಸಬೇಕು. ಪಾದ್ರಿಯರು, ವೈದ್ಯರು, ವೈದ್ಯಕೀಯ ಸಾಮಗ್ರಿ ಇತ್ಯಾದಿಗಳನ್ನು ಇಂಥ ಪ್ರದೇಶಗಳಿಗೆ ಮುಕ್ತವಾಗಿ ಚಲಿಸಲು ಅವಕಾಶವಿರಬೇಕು.

♦ ಯುದ್ಧದಲ್ಲಿನ ಗಾಯಾಳುಗಳನ್ನು, ಕಾಯಿಲೆಯಿಂದ ನರಳುತ್ತಿರುವವರನ್ನು, ವೈದ್ಯರನ್ನು ಹಾಗೂ ಆಸ್ಪತ್ರೆಗಳನ್ನು ಯುದ್ಧೇತರ ಆಸ್ಪತ್ರೆಗಳೆಂದು ಪರಿಗಣಿಸಬೇಕು ಅವುಗಳನ್ನು ಆಕ್ರಮಿಸಬಾರದು; ಅವುಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಒದಗಿಸಬೇಕು.

♦ ವೈದ್ಯಕೀಯ ಹಾಗೂ ಆಸ್ಪತ್ರೆ ಸಾಮಗ್ರಿಗಳು ಹಾಗೂ ಧಾರ್ಮಿಕ ಪೂಜಾ ಸಾಮಗ್ರಿಗಳನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸಾಗಿಸಲು ಅನುಮತಿಯಿರಬೇಕು.

♦ ಯುದ್ಧದಿಂದ ಅನಾಥರಾದ ಅಥವಾ ಕುಟುಂಬದಿಂದ ಬೇರ್ಪಟ್ಟ 15 ವಯಸ್ಸಿಗಿಂತ ಕಿರಿಯ ವಯಸ್ಸಿನ ಮಕ್ಕಳನ್ನು ಅವರ ಧಾರ್ಮಿಕ ಪದ್ಧತಿಯಂತೆ ಶಿಕ್ಷಣ ಹಾಗೂ ಇನ್ನಿತರ ವ್ಯವಸ್ಥೆ ಒದಗಿಸಿ ನೊಡಿಕೊಳ್ಳಬೇಕು.

♦ ವೈರಿಪಡೆಯಿಂದ ಎಲ್ಲ ವ್ಯಕ್ತಿಗಳೂ, ದೂರ ಪ್ರದೇಶದಲ್ಲಿರುವ ತಮ್ಮ ಕುಟುಂಬದವರಿಗೆ ಕ್ಷೇಮ ಸಮಾಚಾರವನ್ನು ತಲುಪಿಸುವ, ಅವರಿಂದ ಪಡೆಯುವುದಕ್ಕಾಗಿ ಅನುಮತಿಯಿರಬೇಕು.

♦ ಆಕ್ರಮಿತ ಪ್ರದೇಶದ ಗಡಿಯಿಂದ ಆಕ್ರಮಿಸುವ ಅಧಿಕಾರಿಶಾಹಿಯ ಪ್ರದೇಶಕ್ಕೆ ಆಶ್ರಿತ ವ್ತಕ್ತಿಗಳನ್ನು ಸ್ಥಳಾಂತರಿಸುವುದನ್ನು ನಿಷೇಧಿಸಲಾಗುವುದು.

♦ ಆಕ್ರಮಿಸುವ ಅಧಿಕಾರ ಶಾಹಿಯ ಮಕ್ಕಳ ಪೋಷಣೆ ಮತ್ತು ಶಿಕ್ಷಣಕ್ಕಾಗಿ ನಿಯೋಜಿತವಾಗಿರುವ ಸಂಸ್ಥೆಗಳೊಂದಿಗೆ ಸೌಹಾರ್ದದಿಂದ ವರ್ತಿಸಬೇಕು.

♦ ಆಕ್ರಮಿಸುವ ಅಧಿಕಾರ ಶಾಹಿಯು ಕಾನೂನು ಮತ್ತು ಸುವ್ಯವಸ್ಥೆಗೆ ಹೊಣೆಗಾರನಾಗಿರುತ್ತದೆ.

♦ ಆಕ್ರಮಿಸಿರುವ ಪ್ರದೇಶದ ನಾಗರಿಕರಿಗೆ ಆಹಾರದ ಹಾಗೂ ಇತರ ಸಾಮಗ್ರಿಗಳ ಸಮರ್ಪಕ ಪೂರೈಕೆಗಾಗಿ ಆಕ್ರಮಿಸುವ ಅಧಿಕಾರ ಶಾಹಿಯು ವ್ಯವಸ್ಥೆಮಾಡಬೇಕು.

♦ ಖಾಸಗಿ ಆಸ್ತಿಗಳನ್ನು ಹಾಳುಮಾಡುವುದನ್ನು ನಿಷೇಧಿಸಲಾಗಿದೆ.

♦ ಜನರಿಗೆ ಪರಿಹಾರ ಸಾಮಗ್ರಿ ಒದಗಿಸಲು ಮತ್ತು ತನ್ನ ಮಾನವೀಯ ಕಾರ್ಯಗಳನ್ನು ನಿರ್ವಹಿಸಲು ರಾಷ್ಟ್ರೀಯ ರೆಡ್‌ಕ್ರಾಸ್ ಸೊಸೈಟಿಗೆ ಅನುಮತಿಯಿರಬೇಕು.

♦ ಬಂಧಿತ ನಾಗರಿಕರನ್ನು ಕೆಲಸ ಮಾಡಲಿಕ್ಕೆ ಒತ್ತಾಯ ಪಡಿಸಬಾರದು.

ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಂಸ್ಥೆಯ ಉಗಮ ಮಾನವ ಇತಿಹಾಸದ ಒಂದು ಮಹತ್ತರ ಮೈಲಿಗಲ್ಲು. 1859ರ ಜೂನ್ 24ರಂದು ಸಲ್ಫೆರಿನೋ ಕದನ, ಸತತ 15ಗಂಟೆಗಳವರೆಗೆ ನಡೆಯಿತು. ಒಂದೆಡೆ ಫ್ರಾನ್ಸ್ ಮತ್ತು ಇಟೆಲಿಯ ಸಂಯಕ್ತ ಸೈನ್ಯ ಇನ್ನೊಂದೆಡೆ ಆಸ್ಟ್ರೀಯಾದ ಸೈನ್ಯ ರಣರಂಗದಲ್ಲಿ ಭೀಕರವಾಗಿ ಕಾದಾಡಿದವು. ನೆಪೋಲಿಯನ್ 3 ಇವರ ಸಾರಥ್ಯದಲ್ಲಿ ನಡೆದ ಈ ಕದನದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಸೈನಿಕರು ಕಾದಾಡಿದರು ಮತ್ತು ಲಕ್ಷಾಂತರ ಮಂದಿ ಮೃತ ಪಟ್ಟರು. ಯುದ್ಧ ಮುಗಿದಾಗ ರಣರಂಗದ ತುಂಬೆಲ್ಲಾ ಹೆಣಗಳ ರಾಶಿಯೇ ಬಿದ್ದಿತ್ತು. ಗಾಯಗೊಂಡವರಿಗೆ ಮತ್ತು ನೊಂದವರಿಗೆ ಸಾಂತ್ವನ ಹೇಳಲು, ಉಪಚರಿಸಲು, ಆಸ್ಪತ್ರೆಗಳು ಮತ್ತು ವೈದ್ಯರ ಸಂಖ್ಯೆ ಅತ್ಯಲ್ಪವಾಗಿತ್ತು. ನೊಂದವರ ಮತ್ತು ಗಾಯಾಳುಗಳ ಆಕ್ರಂದನ ಮುಗಿಲು ಮುಟ್ಟತ್ತು. ಹೆೆನ್ರಿ ಡ್ಯೂನಾಂಟ್ ಎಂಬ ಸ್ವಿಸ್ ವ್ಯಾಪಾರಿ, ಈ ದೃಶ್ಯವನ್ನು ಕಂಡು ಮಮ್ಮಲ ಮರುಗಿದ. ಸ್ಥಳೀಯ ಗ್ರಾಮಸ್ಥರ ನೆರವಿನಿಂದ ಗಾಯಾಳುಗಳನ್ನು ಉಪಚರಿಸಿದನು. ಗಾಯಗೊಂಡ ಎಲ್ಲ ಸೈನಿಕರನ್ನು ಯಾವುದೇ ದೇಶ, ಜಾತಿ, ಧರ್ಮಗಳ ಭೇದವಿಲ್ಲದೆ ಚರ್ಚುಗಳಲ್ಲಿ, ಆಶ್ರಮಗಳಲ್ಲಿ, ದೇಗುಲಗಳಲ್ಲಿ ಮತ್ತು ಸೇನಾ ಪಾಳಯಗಳಲ್ಲಿ ಉಪಚರಿಸಿದನು. ದಿನ ಉರುಳಿ ಜನ ಯುದ್ಧವನ್ನು ಮರೆತರೂ ಹೆನ್ರಿ ಡ್ಯೂನಾಂಟ್ ಮರೆಯಲಿಲ್ಲ. ಯುದ್ಧದ ಬಗೆಗಿನ ವಿವರಗಳನ್ನು ‘ದಿ ಮೆಮೋರಿ ಆಪ್ ಸಾಲ್ಫರಿನೋ’ ಎಂಬ ಪುಸ್ತಕದಲ್ಲಿ ವಿವರಸಿ, ಜಗತ್ತಿನೆಲ್ಲೆಡೆ ಹಂಚಿದನು. ಆತನ ಪರಿಶ್ರಮದ ಫಲವಾಗಿಯೇ ರೆಡ್‌ಕ್ರಾಸ್ ಸಂಸ್ಥೆಯ ಉಗಮವಾಯಿತು. ಹೆನ್ರಿ ಡ್ಯೂನಾಂಟ್‌ನ ಇಚ್ಛೆಯಂತೆ ಅಂತಾರಾಷ್ಟ್ರೀಯ ಸ್ವಯಂ ಸೇವಕರ ಸಂಘಟನೆಯನ್ನು ಎಲ್ಲಾ ರಾಷ್ಟ್ರಗಳಲ್ಲಿ ಶಾಂತಿಕಾಲದಲ್ಲಿ ಪ್ರತಿಷ್ಠಾಪಿಸಲಾಯಿತು. ಇದರಲ್ಲಿನ ಸ್ವಯಂಸೇವಕರ ತಂಡವು ಯುದ್ಧ ಮುಗಿದ ಕೂಡಲೇ ಅಲ್ಲಿನ ಗಾಯಾಳುಗಳನ್ನು ಅವರ ರಾಷ್ಟ್ರೀಯತೆಯನ್ನು ಗಮನಿಸದೆ ಉಪಚರಿಸಬೇಕು. ಇದನ್ನು ಸಾಧ್ಯವಾಗಿಸಲು, ರಾಷ್ಟ್ರಗಳು, ಗಾಯಾಳು ಸೈನಿಕರನ್ನು ವೈದ್ಯರನ್ನು ಹಾಗೂ ಇತರ ಸಹಾಯಕರನ್ನು ತಟಸ್ಥರೆಂದು ಘೋಷಿಸಿ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ತೀರ್ಮಾನಿಸಲಾಯಿತು. ರೆಡ್‌ಕ್ರಾಸ್ ಸಂಸ್ಥೆಯ ಮೂಲ ತತ್ವಗಳನ್ನು ಒಳಗೊಂಡ ಪ್ರಥಮ ಜಿನೇವ ಒಪ್ಪಂದವು 1864ರಲ್ಲಿ ಮಾಡಿಕೊಳ್ಳಲಾಗಿದ್ದು, ಅದನ್ನು ಡ್ಯೂನಾಂಟ್ ಅವರು ಸಹಿ ಮಾಡಿದರು. ಈ ಒಪ್ಪಂದಕ್ಕೆ 1864ರ 12ರಂದು 12 ರಾಷ್ಟ್ರಗಳು ಸಹಿ ಮಾಡಿದವು. ಈ ಕಾರಣದಿಂದಲೇ ಆಗಸ್ಟ್ 12ನ್ನು ‘ವಿಶ್ವ ಜಿನೇವ ದಿನ’ ಎಂದು ಆಚರಿಸಲಾಗುತ್ತಿದೆ. ಆನಂತರದ ದಿನಗಳಲ್ಲಿ ಯುದ್ಧ ಜರುಗುತ್ತಲೇ ಇದ್ದವು ಮತ್ತು ಅಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲಾಗುತ್ತಿತ್ತು. ಒಟ್ಟಿನಲ್ಲಿ ಆಗಸ್ಟ್ 12ರ ‘ಜಿನೇವ ಒಪ್ಪಂದ’ ವಿಶ್ವಶಾಂತಿಯನ್ನು ಭ್ರಾತೃತ್ವವನ್ನು ಮತ್ತು ಮಾನವೀಯತೆಯನ್ನು ಎತ್ತಿ ಹಿಡಿಯುವಲ್ಲಿಯ ಪ್ರಕ್ರಿಯೆಗೆ ಮುನ್ನುಡಿ ಬರೆಯಿತು. 1864ರವರೆಗೂ ರಾಷ್ಟ್ರಗಳನ್ನು ಖಾಯಂ ಆಗಿ ಬದ್ಧರಾಗಿಸಲು ಯಾವುದೇ ಒಪ್ಪಂದಗಳಿರಲಿಲ್ಲ. ಆದರೆ ಎರಡು ರಾಷ್ಟ್ರಗಳ ನಡುವೆ ಸೋತ ಸೈನ್ಯವನ್ನು ರಕ್ಷಿಸುವುದಕ್ಕಾಗಿ ಅಥವಾ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ನೀಡಲು ತಾತ್ಕಾಲಿಕ ಒಡಂಬಡಿಕೆಗಳಾಗುತ್ತಿದ್ದವು ಅಂತಹ ಒಡಂಬಡಿಕೆಗಳು ಖಾಯಂ ಒಪ್ಪಂದಗಳಾಗಿರಲಿಲ್ಲ. ಈ ಕಾರಣದಿಂದಲೇ ಜಿನೇವ ಒಪ್ಪಂದ ರೆಡ್‌ಕ್ರಾಸ್ ಮೂಲ ತತ್ವಗಳನ್ನು ಎತ್ತಿ ಹಿಡಿಯುವ ಮತ್ತು ಗೌರವಿಸುವ ದಿಶೆಯಲ್ಲಿ ಒಂದು ಮಹತ್ತರವಾದ ಹೆಜ್ಜೆ ಎಂದರೂ ತಪ್ಪಲ್ಲ.

Writer - ಡಾ.ಮುರಲೀ ಮೋಹನ್, ಚೂಂತಾರು

contributor

Editor - ಡಾ.ಮುರಲೀ ಮೋಹನ್, ಚೂಂತಾರು

contributor

Similar News

ಜಗದಗಲ
ಜಗ ದಗಲ