ಕಂದಮ್ಮಗಳ ಸಾವಿನ ಹೊಣೆ ಹೊರುವವರ್ಯಾರು?

Update: 2017-08-13 04:48 GMT

►ಆಮ್ಲಜನಕ ಪೂರೈಕೆ ಕಂಪೆನಿಗೆ 63.65 ಲಕ್ಷ ರೂ. ಬಾಕಿಯಿರಿಸಿದ್ದ ಆಸ್ಪತ್ರೆ
►ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸುವ ಮುನ್ನೆಚ್ಚರಿಕೆಯನ್ನು ಕಡೆಗಣಿಸಿದ ಆಸ್ಪತ್ರೆ ಅಧಿಕಾರಿಗಳು
►ಅವ್ಯವಸ್ಥೆಗಳ ಆಗರ ಬಿಆರ್‌ಡಿ ಆಸ್ಪತ್ರೆ

ಗೋರಖ್‌ಪುರ ಜಿಲ್ಲೆಯ ಬಿ.ಆರ್.ಡಿ.ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಕಳೆದ 3 ದಿನಗಳಲ್ಲಿ 63 ಮಕ್ಕಳ ಸಾವಿಗೆ ಆಮ್ಲಜನಕದ ಪೂರೈಕೆ ಸ್ಥಗಿತಗೊಳಿಸಿರುವುದೇ ಕಾರಣವೆಂದು ಮೇಲ್ನೋಟದ ತನಿಖಾ ವರದಿಗಳಿಂದ ಬಹಿರಂಗವಾಗಿದೆ. ಆದರೆ ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆಯಲ್ಲಿ ಕಳೆದ ಆಗಸ್ಟ್ ತಿಂಗಳ ಆರಂಭದಿಂದಲೇ ಅಡಚಣೆಯುಂಟಾಗಿದ್ದು, ನೂರಾರು ರೋಗಿಗಳ ಪ್ರಾಣ ಅಪಾಯದಲ್ಲಿ ಸಿಲುಕಿತ್ತೆಂಬ ಅಂಶ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಆಗಸ್ಟ್ 10ರಂದು ಗೋರಖ್‌ಪುರ ನ್ಯೂಸ್‌ಲೈನ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯೊಂದು ಬಿ.ಆರ್.ಡಿ.ಮೆಡಿಕಲ್ ಕಾಲೇಜ್‌ಗೆ ಆಮ್ಲಜನಕದ ಪೂರೈಕೆಯಲ್ಲಿ ಕೊರತೆಯುಂಟಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ. ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದ್ರವರೂಪದ ಆಮ್ಲಜನಕವನ್ನು ಪೂರೈಕೆ ಮಾಡುತ್ತಿರುವ ಪುಷ್ಪಾ ಸೇಲ್ಸ್ ಸಂಸ್ಥೆಯು,ತನಗೆ ಬರಬೇಕಿದ್ದ ಹಿಂದಿನ ಬಾಕಿ ಹಣವನ್ನು ಆಸ್ಪತ್ರೆಯು ಪಾವತಿಸದ ಹಿನ್ನೆಲೆಯಲ್ಲಿ ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿತ್ತು. ಇದರಿಂದ ರೋಗಿಗಳ ಪ್ರಾಣ ಅಪಾಯಕ್ಕೀಡಾಗಿರುವುದಾಗಿ ವರದಿ ಆತಂಕ ವ್ಯಕ್ತಪಡಿಸಿತ್ತು .ಇದೀಗ ಈ ವರದಿಯಲ್ಲಿ ವ್ಯಕ್ತವಾದ ಆತಂಕವು ನಿಜವಾಗಿ ಹೋಗಿದೆ.

ಆಗಸ್ಟ್ ತಿಂಗಳ ಆರಂಭದಿಂದಲೇ ಆಮ್ಲಜನಕದ ಪೂರೈಕೆಯಲ್ಲಿ ಕೊರತೆ ಯುಂಟಾಗುವ ಸಾಧ್ಯತೆಯಿರುವ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿದಿತ್ತು ಎಂಬುದನ್ನು ಗೋರಖ್‌ಪುರ ನ್ಯೂಸ್‌ಲೈನ್‌ನಲ್ಲಿ ಆಗಸ್ಟ್ 11ರಂದು ಪ್ರಕಟವಾದ ಎರಡು ಪತ್ರಗಳು ಸಾಬೀತುಪಡಿಸಿವೆ.

ಆಗಸ್ಟ್ 1ರಂದು ಪುಷ್ಪಾ ಸೇಲ್ಸ್ ಸಂಸ್ಥೆಯು ಬಿಆರ್‌ಡಿ ಮೆಡಿಕಲ್ ಕಾಲೇಜ್‌ನ ಪ್ರಾಂಶುಪಾಲರಿಗೆ ಪತ್ರವೊಂದನ್ನು ಬರೆದು ಮೆಡಿಕಲ್ ಕಾಲೇಜ್ ತನಗೆ 63.65 ಲಕ್ಷ ರೂ. ಬಾಕಿಯಿರಿಸಿರುವುದಾಗಿ ತಿಳಿಸಿತ್ತು. ಕಂಪೆನಿಯು ಈ ಬಗ್ಗೆ ಪದೇ ಪದೇ ಮನವಿ ಮಾಡಿದರೂ ಮೆಡಿಕಲ್‌ಕಾಲೇಜ್ ಹಣವನ್ನು ಪಾವತಿಸಿಲ್ಲವೆಂದು ತಿಳಿಸಿತ್ತು. ಒಂದು ವೇಳೆ ಬಾಕಿ ಹಣವನ್ನು ಪಾವತಿಸದೆ ಇದ್ದಲ್ಲಿ ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಬಹುದಾಗಿದೆಯೆಂದು ಕಂಪೆನಿ ಎಚ್ಚರಿಕೆ ಕೂಡಾ ನೀಡಿತ್ತು. ಈ ಎಲ್ಲಾ ಎಚ್ಚರಿಕೆಯ ಹೊರತಾಗಿಯೂ ಬಿ.ಆರ್.ಡಿ. ಆಸ್ಪತ್ರೆಯು ಪುಷ್ಪಾ ಸೇಲ್ಸ್‌ಗೆ ಯಾವುದೇ ಹಣವನ್ನು ಪಾವತಿಸಿಲ್ಲ.

ಆಗಸ್ಟ್ 10ರಂದು ಬಿಆರ್‌ಡಿ ಮೆಡಿಕಲ್ ಕಾಲೇಜ್‌ನ ಕೇಂದ್ರೀಯ ಆಮ್ಲಜನಕ ಪೈಪ್‌ಲೈನ್‌ನ ನಿರ್ವಾಹಕರು, ಪ್ರಾಂಶುಪಾರಿಗೆ ಹಾಗೂ ಮುಖ್ಯ ವೈದ್ಯಕೀಯ ಅಧೀಕ್ಷಕ ಮತ್ತು ರಾಷ್ಟ್ರೀಯ ಆರೋಗ್ಯ ಮಿಶನ್‌ನ ನೋಡಲ್ ಅಧಿಕಾರಿಯವರಿಗೆ ಪತ್ರ ಬರೆದು ಪಾವತಿ ಬಾಕಿಯ ಹಿನ್ನೆಲೆಯಲ್ಲಿ ಪುಷ್ಪಾ ಸೇಲ್ಸ್ ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದರು. ಆಮ್ಲಜನಕದ ಪೂರೈಕೆಯು ಅಂದು ರಾತ್ರಿಯವರೆಗೆ ಸಾಕಾಗುವಷ್ಟು ಮಾತ್ರ ಇರುವುದಾಗಿ ಪತ್ರದಲ್ಲಿ ಗಮನಸೆಳೆಯಲಾಗಿತ್ತು.ಗೋರಖ್‌ಪುರ ನ್ಯೂಸ್‌ಲೈನ್ ವರದಿಯ ಪ್ರಕಾರ ಪುಷ್ಪಾ ಸೇಲ್ಸ್ ಬಿಆರ್‌ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ದ್ರವ ಆಮ್ಲಜನಕ ಪೂರೈಕೆ ಸ್ಥಾವರವೊಂದನ್ನು ಸ್ಥಾಪಿಸಿತ್ತು. ಅದರ ಮೂಲಕ ಕಾಲೇಜ್ ಆಸ್ಪತ್ರೆಯ ಅಪಘಾತ ಚಿಕಿತ್ಸಾ ಕೇಂದ್ರ ಹಾಗೂ ಇತರ ವಾರ್ಡ್‌ಗಳ ರೋಗಿಗಳಿಗೆ ಆಮ್ಲಜನಕವನ್ನು ಪೂರೈಕೆ ಮಾಡಲಾಗುತ್ತಿತ್ತು. ಆಮ್ಲಜನಕ ಪೂರೈಕೆಯಾಗುತ್ತಿರುವ ಈ ಮೂರು ವಾರ್ಡ್‌ಗಳ ಪೈಕಿ ಮೂರರಲ್ಲಿ ಮೆದುಳುಜ್ವರ ಪೀಡಿತ ರೋಗಿಗಳಿದ್ದರು.

 ಹೀಗೆ ಹಲವಾರು ಸೂಚನೆ ಹಾಗೂ ಮುನ್ನೆಚ್ಚರಿಕೆಗಳ ಹೊರತಾಗಿಯೂ ಆಸ್ಪತ್ರೆಯ ಅಧಿಕಾರಿಗಳು ಆಗಸ್ಟ್ ತಿಂಗಳ ಎರಡನೆ ವಾರದಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸುವುದಕ್ಕೆ ಯಾಕೆ ಅವಕಾಶ ನೀಡಿದರು ಎಂಬ ದೊಡ್ಡ ಪ್ರಶ್ನೆಯೊಂದು ಉದ್ಭವವಾಗಿದೆ.

ಸಾವಿಗೆ ಕಾರಣ?

ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿರುವುದಕ್ಕೆ ಅಷ್ಟೇನೂ ಮಹತ್ವ ನೀಡದಿರಲು ಗೋರಖ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಯತ್ನಿಸಿದ್ದಾರೆ. ಮೃತಪಟ್ಟ 17 ನವಜಾತ ಶಿಶುಗಳು ಮೆದುಳುಜ್ವರದಿಂದ ಸಾವನ್ನಪ್ಪಿವೆಯೇ ಹೊರತು ಆಮ್ಲಜನಕ ಪೂರೈಕೆಯಲ್ಲಾದ ವ್ಯತ್ಯಯದಿಂದಲ್ಲವೆಂದು ಅವರು ಹೇಳಿದ್ದಾರೆ. ಪ್ರತಿದಿನವೂ 10 ಮಂದಿ ಮಕ್ಕಳು ಹಾಗೂ 10 ಮಂದಿ ನವಜಾತಶಿಶುಗಳು ತೀವ್ರವಾದ ಮೆದುಳುಜ್ವರದಿಂದಾಗಿ ಸಾವನ್ನಪ್ಪುತ್ತಿರುತ್ತವೆ ಎಂದವರು ಹೇಳಿದ್ದಾರೆ.

ಆದಾಗ್ಯೂ ಆಸ್ಪತ್ರೆಯು ಬಿಡುಗಡೆಗೊಳಿಸಿದ ದತ್ತಾಂಶಗಳಲ್ಲಿ ಮೆದುಳುಜ್ವರದಿಂದಾಗಿ ಅತೀ ಕಡಿಮೆ ಸಂಖ್ಯೆಯ ಮಕ್ಕಳು ಸಾವನ್ನಪ್ಪಿರುವುದನ್ನು ತೋರಿಸುತ್ತಿದೆ.

ಒಂದು ವೇಳೆ ಆಮ್ಲಜನಕದ ಪೂರೈಕೆಯ ಸ್ಥಗಿತವು ಮಕ್ಕಳ ಸಾವಿಗೆ ಕಾರಣವಲ್ಲವೆಂದು ಆಸ್ಪತ್ರೆ ಹಾಗೂ ಉತ್ತರಪ್ರದೇಶ ಸರಕಾರವು ಹೇಳುವುದನ್ನು ಮುಂದುವರಿಸಿದಲ್ಲಿ, ಅವು ಆಗಸ್ಟ್ 11ಕ್ಕೆ ಮೊದಲಿನ ಐದು ತಿಂಗಳುಗಳಲ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ ಸಾವಿನ ಕುರಿತ ದತ್ತಾಂಶಗಳನ್ನು ಬಿಡುಗಡೆಗೊಳಿಸಬೇಕಿದೆ.

ಆಗಸ್ಟ್ 10ರ ಬಳಿಕ 18 ಮಂದಿ ವಯಸ್ಕರು ಕೂಡಾ ಮೃತಪಟ್ಟಿರುವುದನ್ನು ಆಸ್ಪತ್ರೆಯು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲವೆಂಬುದಾಗಿಯೂ ಗೋರಖ್‌ಪುರ್ ನ್ಯೂಸ್‌ಲೈನ್ ವರದಿ ಮಾಡಿದೆ. ಔಷಧಿ ಇಲಾಖೆಯ ವ್ಯಾಪ್ತಿಗೆ ಬರುವ ವಾರ್ಡ್ ಸಂಖ್ಯೆ 14ರಲ್ಲಿ ಎಂಟು ಮಂದಿ ಆಗಸ್ಟ್ 10ರಂದು ಮೃತಪಟ್ಟರೆ, ಉಳಿದ 10 ಮಂದಿ ಆಗಸ್ಟ್ 10ರಂದು ಸಾವನ್ನಪ್ಪಿದ್ದಾರೆ ಎಂದು ಅದು ತಿಳಿಸಿದೆ.

ಪಾವತಿ ವಿಳಂಬ ಕಾರಣ?

ಆಮ್ಲಜನಕ ಪೂರೈಕೆಯಲ್ಲಿನ ವ್ಯತ್ಯಯಕ್ಕೆ ಪೂರೈಕೆದಾರ ಸಂಸ್ಥೆಯಾದ ಪುಷ್ಪಾ ಸೇಲ್ಸ್‌ಗೆನೀಡಬೇಕಾಗಿದ್ದ 63 ಲಕ್ಷ ಬಾಕಿ ಹಣವನ್ನು ಪಾವತಿಸದಿರುವುದು ಕಾರಣವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಆಮ್ಲಜನಕ ಪೂರೈಕೆಯಲ್ಲಿನ ವ್ಯತ್ಯಾಸದಿಂದ ವೈಫಲ್ಯದಿಂದ ಈ ಸಾವುಗಳು ಸಂಭವಿಸಿಲ್ಲವೆಂದು ಪುಷ್ಪಾ ಸೇಲ್ಸ್ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ. ಆಸ್ಪತ್ರೆಗೆ ಆಮ್ಲಜನಕ ಪೂರೈಕೆಯಲ್ಲಿನ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಕಂಪೆನಿಗೆ ಅರಿವಿದೆಯೆಂದು ಅವರು ಹೇಳಿದ್ದಾರೆ.

ಕೇವಲ ಮೂರು ದಿನಗಳಲ್ಲಿ 62 ಮಕ್ಕಳನ್ನು ಬಲಿತೆಗೆದುಕೊಂಡ ಬಿಆರ್‌ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಅಲ್ಲಿ ಮೆದುಳುಜ್ವರದ ಚಿಕಿತ್ಸೆಯನ್ನು ನಿರ್ವಹಿಸುತ್ತಿರುವ ಕನಿಷ್ಠ 400 ಮಂದಿ ವೈದ್ಯಕೀಯ ಸಿಬ್ಬಂದಿಗೆ ಹಲವಾರು ತಿಂಗಳುಗಳಿಂದ ವೇತನವನ್ನು ಪಾವತಿಸಲಾಗಿಲ್ಲವೆಂದು ಗೋರಖ್‌ಪುರ ನ್ಯೂಸ್‌ಲೈನ್ ವರದಿ ಮಾಡಿದೆ. ಹಲವಾರು ವೈದ್ಯರಿಗೆ ಕಳೆದ 27 ತಿಂಗಳುಗಳಿಂದ ವೇತನವೇ ಪಾವತಿಸಲಾಗಿಲ್ಲ ಹಾಗೂ ನವಜಾತ ಶಿಶುವಿಭಾಗದ ಸಿಬ್ಬಂದಿಗೆ ಕಳೆದ ಆರು ತಿಂಗಳಿಂದ ವೇತನವೇ ದೊರೆತಿಲ್ಲವೆಂದು ವರದಿ ಹೇಳಿದೆ.

ಆದರೆ ಇದಕ್ಕೆ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. 2014ರಲ್ಲಿ ಬಿಆರ್‌ಡಿ ವೈದ್ಯಕೀಯ ಕಾಲೇಜ್ 150 ಕೋಟಿ ರೂ.ಅನುದಾನವನ್ನು ಪಡೆದಿತ್ತು. ಈ ಪೈಕಿ ಕೇಂದ್ರದಿಂದ ಪ್ರಧಾನ ಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆಯಡಿ 120 ಕೋಟಿ ರೂ. ಬಂದಿದ್ದರೆ, 30 ಕೋಟಿ ರೂ. ರಾಜ್ಯ ಸರಕಾರದಿಂದ ಬಂದಿತ್ತು.

ನಿಧಿ ಬಳಕೆಯಲ್ಲಿ ಲೋಪ

ರಾಜ್ಯ ಸರಕಾರದ ಅಸಾಧ್ಯ ರೋಗ್ ಯೋಜನೆಯಡಿ ತಮಗೆ ವಿತರಿಸಲಾದ ನಿಧಿಗಳನ್ನು ಸಂಪೂರ್ಣವಾಗಿ ವಿನಿಯೋಗಿಸದ ಉತ್ತರಪ್ರದೇಶದ ಹಲವಾರು ಆಸ್ಪತ್ರೆಗಳಲ್ಲಿ ಬಿಆರ್‌ಡಿ ಮೆಡಿಕಲ್ ಕಾಲೇಜ್ ಕೂಡಾ ಒಂದಾಗಿದೆ. ಮೂರು ವರ್ಷಗಳ ಹಿಂದೆ ಅಂದರೆ 2013ರ ಆರಂಭದಲ್ಲಿ ಅಸಾಧ್ಯ ರೋಗ್ ಕಾರ್ಯಕ್ರಮದಡಿ ಬಿಆರ್‌ಡಿ ಮೆಡಿಕಲ್ ಕಾಲೇಜ್‌ಗೆ ವಿತರಿಸಲಾದ 4.5 ಕೋಟಿ ರೂ. ಅನುದಾನದಲ್ಲಿ ಅದು ಕೇವಲ 1.65 ಲಕ್ಷ ರೂ.ಯನ್ನು ಮಾತ್ರ ಖರ್ಚು ಮಾಡಿದೆ.

ಸ್ಪಂದಿಸದ ಕೇಂದ್ರ

2017ರ ಮೇನಲ್ಲಿ ಕಾಲೇಜ್ ಆಡಳಿತವು ಆಸ್ಪತ್ರೆಯ ತೀವ್ರ ನಿಗಾ ಘಟಕ ಹಾಗೂ ವಾರ್ಡ್‌ಗಳ ನಿರ್ವಹಣೆ ಸೇರಿದಂತೆ ಸೌಲಭ್ಯಗಳ ಸುಧಾರಣೆಗೆ 37 ಕೋಟಿ ರೂ. ಅನುದಾನ ಕೋರಿತ್ತು. ಈ ಮನವಿಯನ್ನು ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿತ್ತು. ಆದಾಗ್ಯೂ ಇನ್ನೂ ಕೂಡಾ ನಿಧಿ ಬಿಡುಗಡೆಯಾಗಿಲ್ಲವೆಂದು ಆಸ್ಪತ್ರೆ ಅಧಿಕಾರಿ ತಿಳಿಸಿದ್ದಾರೆ.

ಕೃಪೆ: scroll.in

Writer - ನಯನ್‌ತಾರಾ ನಾರಾಯಣನ್

contributor

Editor - ನಯನ್‌ತಾರಾ ನಾರಾಯಣನ್

contributor

Similar News

ಜಗದಗಲ
ಜಗ ದಗಲ