×
Ad

ಮುಂಬೈಯಲ್ಲಿ ಭಾರೀ ಮಳೆ: ನಗರದ ಹಲವು ಪ್ರದೇಶಗಳು ಜಲಾವೃತ

Update: 2017-08-29 18:46 IST

ಮಹಾಮಳೆಗೆ ಮುಂಬೈ ತತ್ತರ

ಮುಂಬೈ, ಆ. 29: ಮುಂಬೈಯಲ್ಲಿ ಸುರಿಯುತ್ತಿರುವ ಭಾರಿ ಮಳೆ ನಾಲ್ಕನೇ ದಿನವಾದ ಮಂಗಳವಾರ ಕೂಡ ಮುಂದುವರಿದಿದೆ. ನಗರದ ಬಹುಭಾಗ ಜಲಾವೃತವಾಗಿದ್ದು, ರಸ್ತೆ, ರೈಲು ಹಾಗೂ ವಿಮಾನ ಸಂಚಾರ ಅಸ್ತವ್ಯಸ್ತವಾಗಿದೆ.

ಮುಂಬೈಯಲ್ಲಿ 2005ರ ಬಳಿಕ ಸುರಿಯುತ್ತಿರುವ ಭಾರೀ ಮಳೆ ಇದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಹವಾಮಾನ ಇಲಾಖೆ ಅಧಿಕೃತ ಹೇಳಿಕೆ ನೀಡಿಲ್ಲ. ರೈಲು ಸಂಚಾರ ಅಸ್ತವ್ಯಸ್ತ

ಪರೇಲ್, ಸಿಯೋನ್ ಹಾಗೂ ಕುರ್ಲಾ ಸೇರಿದಂತೆ ಹಲವು ಸ್ಥಳಗಳಲ್ಲಿ ರೈಲ್ವೇ ಹಳಿಗಳು ನೀರಿನಲ್ಲಿ ಮುಳುಗಿರುವುದರಿಂದ ಸೆಂಟ್ರಲ್, ಹಾರ್ಬರ್ ಹಾಗೂ ಪಶ್ಚಿಮ ರೈಲು ಮಾರ್ಗದ ಎಲ್ಲ 3 ಉಪನಗರದ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಪರೇಲ್ ಹಾಗೂ ಕುರ್ಲಾದ ನಡುವಿನ ಮುಖ್ಯ ರೈಲು ಮಾರ್ಗ ಹಾಗೂ ವಡಾಲಾ ಹಾಗೂ ಕುರ್ಲಾ ನಡುವಿನ ಹಾರ್ಬರ್ ರೈಲು ಮಾರ್ಗಗಳಲ್ಲಿ ರೈಲು ಸಂಚಾರ ನಿಲುಗಡೆಗೊಳಿಸಲಾಗಿದೆ. ಪಶ್ಚಿಮ ರೈಲು ಮಾರ್ಗದಲ್ಲಿ ನಗರಕ್ಕೆ ಹೋಗುವ ರೈಲು ಸಂಚಾರವನ್ನು ಅಂಧೇರಿಯಲ್ಲಿ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈಯತ್ತ ಸಂಚರಿಸುತ್ತಿದ್ದ ಡ್ಯುರೊಂಟೊ ರೈಲು ಥಾನೆ ಜಿಲ್ಲೆಯಲ್ಲಿ ಹಳಿ ತಪ್ಪಿರುವುದು ಕೂಡ ಸ್ಥಳೀಯ ರೈಲುಗಳ ಸಂಚಾರದ ಅಡ್ಡಿಗೆ ಕಾರಣವಾಗಿದೆ.

ರಸ್ತೆ ಸಂಚಾರ ಅಸ್ತವ್ಯಸ್ತ ನಗರದ 25 ಪ್ರದೇಶಗಳಲ್ಲಿ ಸಂಚಾರ ದಿಕ್ಕು ಬದಲಾಯಿಸಲಾಗಿದೆ. ಅಂಧೇರಿ ಸಬ್‌ವೇ, ಮಿಲನ್ ಹಾಗೂ ಸಿಯೋನ್ ಫ್ಲೈಓವರ್ ಸೇರಿದಂತೆ ಹಲವು ಫ್ಲೈಓವರ್ ಹಾಗೂ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಪೂರ್ವ ಎಕ್ಸ್‌ಪ್ರೆಸ್‌ವೇ, ಸಾಂತಾಕ್ರೂಜ್, ಚೆಂಬೂರ್ ಸಂಪರ್ಕ ರಸ್ತೆ, ಪಶ್ಚಿಮ ಎಕ್ಸ್‌ಪ್ರೆಸ್ ವೇ, ಬಾಂದ್ರಾದಿಂದ ಸಂತಾಕ್ರೂಜ್ ನಡುವಿನ ಎಸ್‌ವಿ ರೋಡ್ ಹಾಗೂ ವರ್ಲಿಯಿಂದ ಹಾಜಿ ಆಲಿ ನಡುವಿನ ಡಿ.ಎನ್. ನಗರ್ ಹಾಗೂ ಬಿಎಂಡಬ್ಲು ಜಂಕ್ಷನ್‌ನಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಹಲವು ಪ್ರದೇಶಗಳಲ್ಲಿ ಸಂಚಾರದ ದಿಕ್ಕ್ಕು ಬದಲಾಯಿಸಿದ್ದರೂ ಮುಂಬೈ ಪೊಲೀಸ್‌ನ ಟ್ರಾಫಿಕ್ ವಿಭಾಗ ರಸ್ತೆಯ ದಿಕ್ಕು ಬದಲಾವಣೆಯ ಬಗ್ಗೆ ಸೂಚನೆ ನೀಡಿಲ್ಲ.

ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಬಂದ್

ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ರಸ್ತೆ ಮೂಲಕ ನಗರದತ್ತ ಸಂಚರಿಸುವ ವಾಹನಗಳನ್ನು ರದ್ದುಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 2009ರಲ್ಲಿ ಲೋಕಾರ್ಪಣೆಗೊಂಡ ಬಳಿಕ ಈ ಸಂಪರ್ಕ ರಸ್ತೆಯಲ್ಲಿ ಮೊದಲ ಬಾರಿಗೆ ಸಂಚಾರ ಬಂದ್ ಆಗುತ್ತಿದೆ. ಜಲಾವೃತ ಪ್ರದೇಶಗಳು
  ಹಿಂದ್‌ಮಾತ, ಕಿಂಗ್‌ಸರ್ಕಲ್, ಚೆಂಬೂರ್, ಜಿಟಿಬಿ ನಗರ್, ಲಾಲ್‌ಬಾಗ್, ಮುಲುಂದ್, ಸಿಯೋನ್, ಅಂಧೇರಿ ಹಾಗೂ ಪರೇಲ್, ವರ್ಲಿ, ದಾದರ್‌ನಂತಹ ತಗ್ಗು ಪ್ರದೇಶಗಳು ನೆರೆ ಪೀಡಿತವಾಗಿದೆ. ಬೈಕುಲಾ ರೈಲ್ವೆ ನಿಲ್ದಾಣದ ಸಮೀಪದ ಪ್ರದೇಶ ಹಾಗೂ ಬೈಕುಲಾ ಮೃಗಾಲಯ ಕೂಡ ನೆರೆಗೆ ತುತ್ತಾಗಿದೆ. ಈ ಎಲ್ಲ ಪ್ರದೇಶಗಳಲ್ಲಿ ಬಿಎಂಸಿ 217 ಪಂಪ್‌ಗಳನ್ನು ಬಳಸಿ ನೀರು ಖಾಲಿ ಮಾಡುತ್ತಿದೆ.

ಸಂತ್ರಸ್ತರ ರಕ್ಷಣೆ ತಗ್ಗು ಪ್ರದೇಶದ ನೆರೆ ಸಂತ್ರಸ್ತರನ್ನು ಸ್ಥಳಾಂತರಿಸಲು ಸ್ಥಳೀಯಾಡಳಿತ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಾರಿ ಮಳೆ ಹಾಗೂ ನೆರೆಯಿಂದ ಕಾರ್ಯಾಚರಣೆಗೆ ತೊಡಕು ಉಂಟಾಗಿದೆ. ಅಲ್ಲದೆ ಚರಂಡಿ ಅಸಮರ್ಪಕತೆಯಿಂದ ಮಳೆ ನೀರು ಸರಾಗವಾಗಿ ಹರಿದುಹೋಗದೆ ಇನ್ನಷ್ಟು ಅಧ್ವಾನ ಉಂಟಾಗಿದೆ.

ವಿಮಾನ ಸಂಚಾರ ವಿಳಂಬ

ತೀವ್ರ ಬಿರುಗಾಳಿ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ. ಬಿರುಗಾಳಿಯಿಂದಾಗಿ ವಿಮಾನಗಳು 35 ನಿಮಿಷಗಳು ತಡವಾಗಿ ಸಂಚರಿಸಿದವು. ಮೂರು ವಿಮಾನಗಳನ್ನು ಗುಜರಾತ್‌ನತ್ತ ದಿಕ್ಕು ಬದಲಾಯಿಸಲಾಯಿತು. ಕೆಲವು ವಿಮಾನಗಳಿಗೆ ವಿಳಂಬವಾಗಿ ಭೂಸ್ಪರ್ಶಗೊಳಿಸುವಂತೆ ತಿಳಿಸಲಾಯಿತು. ವಿಮಾನಗಳನ್ನು ಸನಿಹದ ವಿಮಾನ ನಿಲ್ದಾಣಗಳಾದ ಅಹ್ಮದಾಬಾದ್ ಅಥವಾ ವಡೋದರಾದಲ್ಲಿ ಇಳಿಸಲು ಆದ್ಯತೆ ನೀಡಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

 ಶಾಲೆ-ಕಾಲೇಜುಗಳಿಗೆ ರಜೆ ಗಣೇಶೋತ್ಸವದ ಹಿನ್ನೆಲೆಯಲ್ಲಿ ಹೆಚ್ಚಿನ ಶಾಲೆ, ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಕೆಲವು ಶಾಲೆಗಳು ರಜೆ ಘೋಷಿಸದಿದ್ದರೂ ಹಾಜರಾತಿ ಸಂಖ್ಯೆ ತುಂಬಾ ಕಡಿಮೆ ಇತ್ತು. ಕೆಲವು ಶಾಲೆಗಳು ಅರ್ಧ ದಿನ ಮಾತ್ರ ಕಾರ್ಯಾಚರಿಸಿದವು. ಹೆತ್ತವರು ತಮ್ಮ ಮಕ್ಕಳನ್ನು ಸಮಯಕ್ಕೆ ಮುನ್ನವೇ ಕರೆದೊಯ್ಯುತ್ತಿದ್ದರು. ಪಶ್ಚಿಮ ಉಪನಗರದ ಶಾಲೆಗಳಿಗೆ ರಜೆ ಸಾರಲಾಯಿತು. ಬೋರಿವಿಲ್ಲಿ, ಕಂಡಿವಾಲಿ, ಜುಹು ಸಮೀಪದಲ್ಲಿ ಜಲಾವೃತವಾದ ಶಾಲೆಗಳಿಗೆ ಮಧ್ಯಾಹ್ನದ ಬಳಿಕ ರಜೆ ಸಾರಲಾಯಿತು ಎಂದು ಶಾಲಾ ಬಸ್ ಮಾಲಕರ ಸಂಘಟನೆ ಹೇಳಿದೆ. ನಾಳೆ ಕೂಡ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News