ನಿಮ್ಮಂತಹ ನಾಯಕರನ್ನು ಬೆಳೆಸಿರುವುದು ಈ ದೇಶದ ದೌರ್ಭಾಗ್ಯ!
ಗುಣಗಾನ ಮಾಡುತ್ತಿದ್ದ ಹಿಂದಿ ಚಾನಲ್ ನ ಪತ್ರಕರ್ತನಿಂದಲೇ ಯೋಗಿಗೆ ಮಂಗಳಾರತಿ
ಹೊಸದಿಲ್ಲಿ, ಆ.31: ಬಹುಶ ಇದೇ ಮೊದಲ ಬಾರಿ ಹಿಂದಿ ಚಾನಲ್ ಒಂದರ ಪತ್ರಕರ್ತ ಇಷ್ಟು ಕಟುವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಟೀಕಿಸಿದ್ದಾರೆ. ಖ್ಯಾತ ಪತ್ರಕರ್ತ ಹಾಗು ಸುದ್ದಿ ನಿರೂಪಕ ಅಭಿಸಾರ್ ಶರ್ಮ ಅವರು ಆದಿತ್ಯನಾಥ್ ವಿರುದ್ಧ ಫೇಸ್ ಬುಕ್ ಲೈವ್ ನಲ್ಲಿ ತೀವ್ರವಾಗಿ ಹರಿಹಾಯ್ದಿದ್ದಾರೆ.
ಗೋರಖ್ ಪುರದಲ್ಲಿ ಪುಟ್ಟ ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಬಲಿಯಾಗಿರುವ ದೊಡ್ಡ ದುರಂತದ ಬಗ್ಗೆ ಮಾತನಾಡುತ್ತಾ ಅಲ್ಲಿನ ಮುಖ್ಯಮಂತ್ರಿ ಆದಿತ್ಯನಾಥ್ ಅವರು " ಬಹುಶ ಇನ್ನು ಜನರು ತಮ್ಮ ಮಕ್ಕಳಿಗೆ ಎರಡು ವರ್ಷವಾಗುವಾಗ ಸರ್ಕಾರದ ಭರವಸೆಯಲ್ಲಿ ಬಿಟ್ಟು ಹೋಗಬಹುದು. ಸರ್ಕಾರವೇ ಅವರನ್ನು ನೋಡಿಕೊಳ್ಳಬೇಕೇನೋ .. " ಎಂಬರ್ಥದಲ್ಲಿ ಮಾತನಾಡಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು .
ಆದರೆ ಸಾಮಾನ್ಯವಾಗಿ ಆದಿತ್ಯನಾಥ್ ಅವರನ್ನು ಹಾಡಿ ಹೊಗಳುವ ಹಿಂದಿ ಚಾನಲ್ ಅದರಲ್ಲೂ ಸದಾ ಆದಿತ್ಯನಾಥ್ ರ ಗುಣಗಾನಕ್ಕೆ ಕುಖ್ಯಾತವಾಗಿರುವ ವಾಹಿನಿಯ ಹಿರಿಯ ಪತ್ರಕರ್ತ ಆದಿತ್ಯನಾಥ್ ರ ಬೇಜವಾಬ್ದಾರಿ ಹೇಳಿಕೆಗೆ ಬಿಸಿ ಮುಟ್ಟಿಸಿರುವುದು ಮಾತ್ರ ವಿಶೇಷವಾಗಿದೆ.
"ನಿಮ್ಮಂತಹ ನಾಯಕರನ್ನು ಈ ದೇಶ ಕಳೆದ 70 ವರ್ಷಗಳಲ್ಲಿ ಬೆಳೆಸಿಕೊಂಡು ಬಂದಿರುವುದು ದೇಶದ ದೌರ್ಭಾಗ್ಯ " ಎಂದು ಚಾಟಿ ಬೀಸಿರುವ ಅಭಿಸಾರ್ ಶರ್ಮ ಅವರ ಫೇಸ್ ಬುಕ್ ವೀಡಿಯೊ ಕೇವಲ ನಾಲ್ಕು ಗಂಟೆಗಳಲ್ಲಿ ಸಾವಿರಾರು ಮಂದಿ ಶೇರ್ ಮಾಡಿ ವೈರಲ್ ಆಗಿದೆ. ಜನರು ಅಭಿಸಾರ್ ಆವರ ನಿಲುವಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಅಭಿಸಾರ್ ಅವರ ವೀಡಿಯೊ ಇಲ್ಲಿದೆ , ನೋಡಿ: