ಮಾನವೀಯತೆಗಾಗಿ ಆಕ್ರಂದನ

Update: 2017-09-15 06:12 GMT

ಸಾವು ಮತ್ತು ದಮನಗಳಿಂದ ಬಚಾವಾಗಲು ಹತಾಶರಾಗಿ ಹರಿದು ಬರುತ್ತಿರುವ ನಿರಾಶ್ರಿತರಿಗೆ ಆಶ್ರಯವನ್ನು ನೀಡುವುದು ಮೊತ್ತಮೊದಲ ಆದ್ಯತೆಯಾಗಬೇಕು ಹಾಗೂ ಅದಕ್ಕೆ ನಿರಾಶ್ರಿತರ ಧರ್ಮ, ಪಂಥ, ವರ್ಣ ಅಥವಾ ಜನಾಂಗ ಯಾವುದೆಂಬುದು ಎಂದಿಗೂ ಪೂರ್ವಶರತ್ತಾಗಬಾರದು. ಸಾಧ್ಯವಾದರೆ ನಿರಾಶ್ರಿತರಿಗೆ ಅವರ ದೇಶದಲ್ಲೇ ಪುನರ್ವಸತಿ ಕಲ್ಪಿಸಲು ಅಥವಾ ಅವರ ದೇಶದಲ್ಲಿ ಪರಿಸ್ಥಿತಿ ಇನ್ನೂ ತಹಬದಿಗೆ ಬರದಿದ್ದಲ್ಲಿ ಅವರು ಆಶ್ರಯ ಕೋರಿ ಬಂದ ದೇಶಗಳಲ್ಲಿ ಪುನರ್ವಸತಿ ಕಲ್ಪಿಸಲು ಬೇಕಾದ ಸಂಪನ್ಮೂಲಗಳನ್ನು ಜಾಗತಿಕ ಮಟ್ಟದಲ್ಲಿ ಕ್ರೋಡೀಕರಿಸಬೇಕು. ಹಾಗೆ ಮಾಡದೆ ನಿರಾಶ್ರಿತರನ್ನು ಯಾವ ಕಾರಣಕ್ಕೂ ಮತ್ತೆ ಸಾವಿನ ದವಡೆಗೆ ತಳ್ಳಬಾರದು.


ಜಗತ್ತಿನ ಕೆಲವೆಡೆಗಳಲ್ಲಿ ಇಸ್ಲಾಮನ್ನು ಒಂದು ಭಯೋತ್ಪಾದಕ ಧರ್ಮವೆಂದು ಭಾವಿಸುತ್ತಾರೆ ಎಂದು ಹೇಳುವುದು ಈಗ ಒಂದು ಕ್ಲೀಷೆಯೇ ಆಗಿಬಿಟ್ಟಿದೆ. ಮತ್ತೊಂದು ಕಡೆ ಬೌದ್ಧ ಧರ್ಮವು ಶಾಂತಿಯುತವಾದ, ವೈಚಾರಿಕ ಮತ್ತು ವೈಜ್ಞಾನಿಕ ಧರ್ಮವಾಗಿದ್ದು ಆಧುನಿಕ ಜೀವನ ಪದ್ಧತಿಗೆ ಹೊಂದಾಣಿಕೆಯಾಗುವಂಥ ಧರ್ಮವೆಂದು ಪ್ರತಿಪಾದಿಸಲಾಗುತ್ತಿದೆ. ಆದರೆ ಮ್ಯಾನ್ಮಾರ್ ದೇಶದಲ್ಲಿ ಮಿಲಿಟರಿ ಆಡಳಿತದ ಸಕ್ರಿಯ ಬೆಂಬಲದೊಂದಿಗೆ ಆ ದೇಶದ ಬೌದ್ಧ ಧರ್ಮೀಯ ಉಗ್ರವಾದಿಗಳು ಪ್ರಧಾನವಾಗಿ ಇಸ್ಲಾಮ್ ಧರ್ಮವನ್ನು ಅನುಸರಿಸುವ ರೊಹಿಂಗ್ಯಾ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ಬರ್ಬರ ಹಿಂಸಾಚಾರವನ್ನು ನಡೆಸುತ್ತಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ದಕ್ಷಿಣ ಮತ್ತು ಆಗ್ನೇಯ ಏಶ್ಯಾ ದೇಶಗಳಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸೆಗಳ ಇತಿಹಾಸದ ಭಾಗವಾಗಿದ್ದು ಬೌದ್ಧ ಧರ್ಮದ ಬಗ್ಗೆ ಕಟ್ಟಿಕೊಂಡಿರುವ ಕಥನಕ್ಕೆ ಮತ್ತೊಂದು ತಡೆಯೊಡ್ಡುತ್ತಿದೆ. ಆದರೂ ಈ ಅತ್ಯಂತ ಗಂಭೀರ ಮಾನವೀಯ ಬಿಕ್ಕಟ್ಟಿಗೆ ಭಾರತವನ್ನು ಒಳಗೊಂಡಂತೆ ಜಾಗತಿಕ ಸಮುದಾಯ ತೋರುತ್ತಿರುವ ಪ್ರತಿಕ್ರಿಯೆ ಅತ್ಯಂತ ಸಂವೇದನಾ ರಹಿತವಾಗಿದ್ದು ಕಲ್ಪಿತ ಭೀತಿಯಿಂದ ಕೂಡಿದೆ.

ರೊಹಿಂಗ್ಯಾ ಮುಸ್ಲಿಮರ ಮೇಲೆ ಹಾಲಿ ಹಿಂಸಾಚಾರಗಳು ಪ್ರಾರಂಭವಾಗಿದ್ದು ಅರಕ್ಕಾನ್ ರೊಹಿಂಗ್ಯಾ ವಿಮೋಚನಾ ಸೇನೆಯು 2017ರ ಆಗಸ್ಟ್ 25ರಂದು ಮ್ಯಾನ್ಮಾರ್‌ನ ರಖೈನ್ ಪ್ರಾಂತದ ಪೊಲೀಸ್ ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ ನಂತರದಲ್ಲಿ. ಇದು ತುರ್ತು ಮಿಲಿಟರಿ ದಾಳಿಗೂ ಮತ್ತು ಮತ್ತೊಂದು ಸುತ್ತಿನ ಜನಾಂಗೀಯ ಹಿಂಸಾಚಾರಗಳಿಗೂ, ಕೊಲೆಗಳಿಗೂ ಮತ್ತು ಸಾವಿರಾರು ಅಮಾಯಕ ರೊಹಿಂಗ್ಯಾ ಮುಸ್ಲಿಮರು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಲು ಕಾರಣವಾಯಿತು. ಒಂದು ವರದಿಯ ಪ್ರಕಾರ 90,000ಕ್ಕೂ ಹೆಚ್ಚು ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ ಹಾಗೂ 20,000ಕ್ಕೂ ಹೆಚ್ಚು ನಿರಾಶ್ರಿತರು ಮ್ಯಾನ್ಮಾರ್-ಬಾಂಗ್ಲಾದೇಶದ ಗಡಿಯನ್ನು ದಾಟಲು ಕಾಯುತ್ತಿದ್ದಾರೆ. ಮ್ಯಾನ್ಮಾರ್ ಸರಕಾರವು ರೊಹಿಂಗ್ಯಾ ಸಂತ್ರಸ್ತರಿಗೆ ವಿಶ್ವಸಂಸ್ಥೆಯ ಅಂಗಸಂಸ್ಥೆಗಳ ನೆರವು ದೊರೆಯದಂತೆ ತಡೆಹಿಡಿದಿದೆ; ಜೊತೆಗೆ ಮಾಧ್ಯಮಗಳೂ ಇದರ ಬಗ್ಗೆ ಯಾವುದೇ ವರದಿ ನೀಡದಂತೆ ನಿಷೇಧ ಹೇರಿದೆ.

ಹೀಗಾಗಿ ಜಗತ್ತು ಮತ್ತೊಂದು ಸರಕಾರಿ ಪ್ರಾಯೋಜಿತ ಹತ್ಯಾಕಾಂಡಕ್ಕೆ ಸಾಕ್ಷಿಯಾಗಲಿದೆ ಎಂಬುದರಲ್ಲಿ ಎಳ್ಳಷ್ಟೂ ಅನುಮಾನ ಉಳಿದಿಲ್ಲ. ಇಷ್ಟಾದರೂ ನೆರೆಹೊರೆಯ ದೇಶಗಳು ರೊಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ಕೊಡಲು ಸಮ್ಮತಿಸುತ್ತಿಲ್ಲ. ಭಾರತ ಸರಕಾರವಂತೂ ರೊಹಿಂಗ್ಯಾ ಮುಸ್ಲಿಮರು ಭಾರತದ ಅಂತರಿಕ ಭದ್ರತೆಗೆ ಒಂದು ಸಂಭವನೀಯ ಆಪತ್ತು ಎಂದು ಹೇಳಿಬಿಟ್ಟಿದೆ. ಮ್ಯಾನ್ಮಾರ್‌ನಲ್ಲಿ 1962ರಲ್ಲಿ ಕ್ಷಿಪ್ರಕ್ರಾಂತಿ ನಡೆದು ಮಿಲಿಟರಿ ಆಡಳಿತ ಜಾರಿಗೆ ಬಂದಾಗಿನಿಂದಲೂ ರೊಹಿಂಗ್ಯಾ ಸಮುದಾಯದಿಂದ ನಾಗರಿಕತ್ವದ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ ಮತ್ತು ಆ ಸಮುದಾಯಕ್ಕೆ ಮೂಲಭೂತ ಆರೋಗ್ಯ ಸೇವೆ, ಉದ್ಯೋಗ ಹಾಗೂ ಶಿಕ್ಷಣಗಳನ್ನ್ನು ಕೂಡಾ ನೀಡದೇ ದಮನಿಸಲಾಗುತ್ತಿದೆ. ಆದರೆ 2011ರ ನಂತರದಲ್ಲಿ ಮ್ಯಾನ್ಮಾರ್ ದೇಶವು ತಥಾಕಥಿತ ಪ್ರಜಾಪ್ರಭುತ್ವ ವ್ಯವಸ್ಥೆಯೆಡೆಗೆ ಹೊರಳಿಕೊಳ್ಳುತ್ತಿದ್ದಂತೆ ಹಿಂಸಾಚಾರದ ಪ್ರಮಾಣ ಮತ್ತು ತೀವ್ರತೆಗಳೆರಡು ಹೆಚ್ಚಾಗತೊಡಗಿದವು. ತಮ್ಮ ಈ ಹಿಂಸಾಚಾರಕ್ಕೆ ಜನಬೆಂಬಲವನ್ನೂ ಪಡೆದುಕೊಳ್ಳುವ ಸಲುವಾಗಿ ಮಿಲಿಟರಿ ಆಡಳಿತವು ತನ್ನನ್ನು ತಾನು ಬೌದ್ಧ ಧರ್ಮದ ರಕ್ಷಕನೆಂಬಂತೆ ತೋರಿಸಿಕೊಳ್ಳುತ್ತಾ ಬುದ್ಧಧರ್ಮೀಯ ತೀವ್ರಗಾಮಿಗಳನ್ನು ರೊಹಿಂಗ್ಯಾ ಮುಸ್ಲಿಮರ ಮೇಲೆ ಹರಿಬಿಟ್ಟೀತು.

ವಾಸ್ತವವಾಗಿ ಹಾಲಿ ಹಿಂಸಾಚಾರಗಳು 2016ರ ಅಕ್ಟೋಬರ್‌ನಲ್ಲಿ ಭುಗಿಲೆದ್ದ ಹಿಂಸಾಚಾರಗಳ ಮುಂದುವರಿಕೆಯೇ ಆಗಿದೆ. ಆ ಹಿಂಸಾಚಾರಗಳ ಬಗ್ಗೆ ಸತ್ಯಶೋಧನೆ ನಡೆಸಿದ ವಿಶ್ವಸಂಸ್ಥೆಯ ತಂಡವೊಂದು 2017ರ ಫೆಬ್ರವರಿಯಲ್ಲಿ ತನ್ನ ವರದಿ ನೀಡಿದ್ದು ಭದ್ರತಾ ಪಡೆಗಳು ರೊಹಿಂಗ್ಯಾ ಸಮುದಾಯದ ಮೇಲೆ ನಡೆಸಿರುವ ಹಿಂಸಾಚಾರಗಳು ಮಾನವೀಯತೆಯ ಮೇಲೆ ಎಸಗಿರುವ ಅಪರಾಧವೆಂದೂ ಹಾಗೂ ಅದರ ಹಿಂದೆ ಜನಾಂಗೀಯ ನಿರ್ಮೂಲನೆಯ ಉದ್ದೇಶಗಳು ಇದ್ದಿರಬಹುದೆಂದೂ ಅಭಿಪ್ರಾಯಪಟ್ಟಿದೆ. ಮಯಾನ್ಮಾರ್ ಸರಕಾರವು ವಿಶ್ವಸಂಸ್ಥೆಯ ವರದಿಯನ್ನು ತಿರಸ್ಕರಿಸಿದೆ. 2017ರ ಮೇ ತಿಂಗಳಲ್ಲಿ ವಿಶ್ವಸಂಸ್ಥೆಯು ಮತ್ತೊಂದು ಸತ್ಯಶೋಧನಾ ತಂಡವನ್ನು ಕಳಿಸುವ ಪ್ರಸ್ತಾಪವನ್ನು ಮುಂದಿಟ್ಟಾಗ ಮ್ಯಾನ್ಮಾರ್ ಸರಕಾರವು ವಿಶ್ವಸಂಸ್ಥೆಯ ಸತ್ಯಶೋಧನಾ ತಂಡದ ಯಾವೊಬ್ಬ ಸದಸ್ಯರಿಗೂ ವೀಸಾ ಕೊಡುವುದಿಲ್ಲವೆಂದು ಘೋಷಿಸಿತು.

ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂ ಕಿ ಯವರಂತೂ ವಿಶ್ವಸಂಸ್ಥೆಯ ಮಧ್ಯಪ್ರವೇಶದಿಂದ ಸಮುದಾಯಗಳ ನಡುವಿನ ವೈಷಮ್ಯಗಳು ಮತ್ತಷ್ಟು ಹೆಚ್ಚುತ್ತವೆಂದು ಪ್ರತಿಪಾದಿಸಿದರು. ಅಷ್ಟೇ ಅಲ್ಲ. ಆಗಸ್ಟ್ ತಿಂಗಳಿಂದ ನಡೆಯುತ್ತಿರುವ ಈ ಮಾರಣಹೋಮದ ಬಗ್ಗೆ ಕಿವುಡಾಗಿದ್ದ ಅವರು ಇದೀಗ ತಮ್ಮ ಮೌನವನ್ನು ಮುರಿದಿದ್ದು ಜನಾಂಗೀಯ ಹಿಂಸಾಚಾರಗಳ ಬಗೆಗಿನ ಎಲ್ಲಾ ವರದಿಗಳನ್ನೂ ಸಾರಾಸಗಟಾಗಿ ನಿರಾಕರಿಸಿದ್ದಾರೆ ಮತ್ತು ಈ ಬಗೆಯ ತಪ್ಪುಕಲ್ಪನೆಯಿಂದ ಕೂಡಿರುವ ವರದಿಗಳು ಭಯೋತ್ಪಾದಕರ ಆಸಕ್ತಿಗಳಿಗೆ ಸಹಕರಿಸಿ ಸಮುದಾಯಗಳ ನಡುವೆ ಮತ್ತಷ್ಟು ದ್ವೇಷ ಹುಟ್ಟುಹಾಕುತ್ತದೆಂದು ಹೇಳಿದ್ದಾರೆ. ಈ ಬಿಕ್ಕಟ್ಟಿನ ಬಗ್ಗೆ ಭಾರತ ಸರಕಾರದ ಪ್ರತಿಸ್ಪಂದನೆಯಂತೂ ಅತ್ಯಂತ ಲಜ್ಜೆಗೇಡಿತನದಿಂದ ಕೂಡಿದೆ. ಭಾರತದ ವಿವಿಧ ಭಾಗಗಳಲ್ಲಿ ಅಂದಾಜು 40,000 ರೊಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ವಾಸಿಸುತ್ತಿದ್ದು ಅವರನ್ನೆಲ್ಲಾ ಮ್ಯಾನ್ಮಾರಿಗೆ ವಾಪಸ್ ಕಳಿಸುವ ಯೋಜನೆ ರೂಪಿಸುತ್ತಿದೆಯೆಂದು ಭಾರತ ಸರಕಾರ ಹೇಳಿಕೊಂಡಿದೆ.

ಸರಕಾರದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜಿಜು ಅವರು ‘‘ವಿಶ್ವಸಂಸ್ಥೆಯ ನಿರಾಶ್ರಿತರ ಹಕ್ಕುಗಳ ಕುರಿತಾದ ಒಪ್ಪಂದಕ್ಕೆ ಭಾರತವು ಸಹಿ ಹಾಕಿಲ್ಲವಾದ್ದರಿಂದ ರೊಹಿಂಗ್ಯಾ ನಿರಾಶ್ರಿತರ ಬಗೆಗಿನ ವಿಶ್ವಸಂಸ್ಥೆಯ ಅಭಿಪ್ರಾಯಗಳಿಗೆ ಭಾರತವು ಬದ್ಧವಾಗಿರಬೇಕಾದ ಅಗತ್ಯವೇನೂ ಇಲ್ಲ’’ವೆಂದು ಪ್ರತಿಪಾದಿಸಿದ್ದಾರೆ. ಆದರೆ ಹಲವಾರು ಸಂದರ್ಭಗಳಲ್ಲಿ ಭಾರತದ ಹಲವು ಉಚ್ಚ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟು ಸಹ ನಿರಾಶ್ರಿತರಿಗೆ ಅವರ ಮಾತೃದೇಶದಲ್ಲಿ ಜೀವಾಪಾಯವಿದ್ದಲ್ಲಿ ವಾಪಸ್ ಅವರ ದೇಶಗಳಿಗೆ ಕಳಿಸಬಾರದೆಂಬ ತತ್ವವನ್ನು ಎತ್ತಿಹಿಡಿದಿದೆ. ಇದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾರಿಯಲ್ಲಿರುವ ಮತ್ತು ಜಾಗತಿಕ ಸಮುದಾಯ ಒಪ್ಪಿಕೊಂಡಿರುವ ಒಂದು ಮಾನವೀಯ ನೀತಿಸೂತ್ರವಾಗಿದ್ದು ಭಾರತವೂ ಅದನ್ನು ನಿರಾಕರಿಸಲಾಗುವುದಿಲ್ಲ. ರೊಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಕಳಿಸುವ ಸರಕಾರದ ಯೋಜನೆಯ ವಿರುದ್ಧದ ದಾವೆಯೊಂದು ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿದ್ದು ವಿಚಾರಣೆಯ ಹಂತದಲ್ಲಿದೆ.

ಇದಕ್ಕಿಂತ ಹೆಚ್ಚಿನ ಆತಂಕಕಾರಿ ಸಂಗತಿಯೆಂದರೆ ಹಾಲಿ ಕೇಂದ್ರ ಸರಕಾರವು 1955ರ ನಾಗರಿಕ ಹಕ್ಕು ಕಾಯ್ದೆಗೆ ತಿದ್ದುಪಡಿಯೊಂದನ್ನು ತರಲು ಹೊರಟಿದ್ದು ಮುಸ್ಲಿಮ್ ನಿರಾಶ್ರಿತರ ಬಗ್ಗೆ ತಾರತಮ್ಯ ತೋರುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಅದರ ಮೂಲಕ ಇಸ್ಲಾಮ್‌ಭೀತಿಯ ನೀತಿಯನ್ನು ಸಂಸ್ಥೀಕರಿಸುವ ಪ್ರಯತ್ನಕ್ಕೆ ಮುಂದಾಗಿದೆ. ಈ ಪ್ರಸ್ತಾಪವು ನೈತಿಕವಾಗಿ ಅಸಮರ್ಥನೀಯವಾಗಿರುವುದು ಮಾತ್ರವಲ್ಲದೆ, ಎಲ್ಲರಿಗೂ ಸಮಾನತೆಯ ಹಕ್ಕನ್ನು ಖಾತ್ರಿ ಮಾಡುವ ಸಂವಿಧಾನದ 14ನೆ ಕಲಮಿನ ಆಶಯಗಳಿಗೂ ವಿರುದ್ಧವಾಗಿದೆ.

ಸಂಪನ್ಮೂಲದ ಕೊರತೆಯ ಹೆಸರಿನಲ್ಲಿ ಅಥವಾ ನಿರಾಶ್ರಿತರ ಹೆಸರಿನಲ್ಲಿ ಭಯೋತ್ಪಾದಕರು ದೇಶದೊಳಗೆ ನುಸುಳಿಬಿಡಬಹುದೆಂಬ ಕಪೋಲ ಕಲ್ಪಿತ ಊಹೆಗಳನ್ನು ಮುಂದೊಡ್ಡಿ ನಮ್ಮ ಕಣ್ಣೆದುರಿಗೇ ನಡೆಯುತ್ತಿರುವ ಜನಾಂಗೀಯ ಮಾರಣಹೋಮಕ್ಕೆ ಮೌನಸಾಕ್ಷಿಗಳಾಗಿ ಉಳಿಯಬಾರದೆಂಬ ಹಕ್ಕೊತ್ತಾಯವನ್ನು ಮುಂದಿಟ್ಟು ತೀವ್ರ ಹೋರಾಟಗಳನ್ನು ಮಾಡದೆ ಹಾಲಿ ಬಿಕ್ಕಟ್ಟಿಗೆ ಪರಿಹಾರ ಮಾರ್ಗಗಳು ಸಿಗುವುದಿಲ್ಲ. ಸಾವು ಮತ್ತು ದಮನಗಳಿಂದ ಬಚಾವಾಗಲು ಹತಾಶರಾಗಿ ಹರಿದು ಬರುತ್ತಿರುವ ನಿರಾಶ್ರಿತರಿಗೆ ಆಶ್ರಯವನ್ನು ನೀಡುವುದು ಮೊತ್ತಮೊದಲ ಆದ್ಯತೆಯಾಗಬೇಕು ಹಾಗೂ ಅದಕ್ಕೆ ನಿರಾಶ್ರಿತರ ಧರ್ಮ, ಪಂಥ, ವರ್ಣ ಅಥವಾ ಜನಾಂಗ ಯಾವುದೆಂಬುದು ಎಂದಿಗೂ ಪೂರ್ವಶರತ್ತಾಗಬಾರದು. ಸಾಧ್ಯವಾದರೆ ನಿರಾಶ್ರಿತರಿಗೆ ಅವರ ದೇಶದಲ್ಲೇ ಪುನರ್ವಸತಿ ಕಲ್ಪಿಸಲು ಅಥವಾ ಅವರ ದೇಶದಲ್ಲಿ ಪರಿಸ್ಥಿತಿ ಇನ್ನೂ ತಹಬದಿಗೆ ಬರದಿದ್ದಲ್ಲಿ ಅವರು ಆಶ್ರಯ ಕೋರಿ ಬಂದ ದೇಶಗಳಲ್ಲಿ ಪುನರ್ವಸತಿ ಕಲ್ಪಿಸಲು ಬೇಕಾದ ಸಂಪನ್ಮೂಲಗಳನ್ನು ಜಾಗತಿಕ ಮಟ್ಟದಲ್ಲಿ ಕ್ರೋಡೀಕರಿಸಬೇಕು. ಹಾಗೆ ಮಾಡದೆ ನಿರಾಶ್ರಿತರನ್ನು ಯಾವ ಕಾರಣಕ್ಕೂ ಮತ್ತೆ ಸಾವಿನ ದವಡೆಗೆ ತಳ್ಳಬಾರದು.

ಕೃಪೆ: Economic and Political Weekly

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News