ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ... ಭಾರತ

Update: 2017-09-26 18:44 GMT

ಪ್ರವಾಸ ಇದು ಮಾನವನಲ್ಲಷ್ಟೇ ಅಲ್ಲದೆ ಪಕ್ಷಿಗಳು, ಮೀನುಗಳು ಮುಂತಾದ ಹೆಚ್ಚಿನ ಜೀವಿಗಳಲ್ಲಿಯೂ ಕಂಡು ಬರುವ ವಿಶೇಷ ಗುಣ. ಬಹುಶಃ ಆದಿಜೀವಿಯ ಅಲೆಮಾರಿ ಲಕ್ಷಣವೇ ಇದಕ್ಕೆ ನಾಂದಿಯಾಗಿರಬೇಕು. ಈ ಮೊದಲು ಪ್ರವಾಸದ ಹಿಂದಿನ ಉದ್ದೇಶವೇ ಬೇರೆ ಇತ್ತು. ಜೀವಿಸುತ್ತಿರುವವರು ನೆಮ್ಮದಿ, ಹೊಸತನಕ್ಕಾಗಿ ಇತರೆ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರು. ಅಂಥವುಗಳಲ್ಲಿ ಧಾರ್ಮಿಕ ಸ್ಥಳಗಳಿಗೆ ಹೆಚ್ಚಿನ ಪ್ರಾಧಾನ್ಯತೆ, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪ್ರದೇಶಗಳ ವ್ಯಾಪ್ತಿಯಿಂದ ಸರಿದು ದೇಶ, ಅಂತಾರಾಷ್ಟ್ರೀಯ ಮಟ್ಟಕ್ಕೆ ಹರಡಿದೆ. ಇದರ ಪರಿಣಾಮ ಪ್ರವಾಸ ಎನ್ನುವುದು ಪ್ರವಾಸೋದ್ಯಮವಾಗಿ ಬದಲಾಗಿದೆ. ಜಗತ್ತಿನ ಪ್ರತಿಷ್ಠಿತ ಉದ್ಯಮಗಳಲ್ಲಿ ಒಂದೆನಿಸಿಕೊಂಡಿದೆ.

ಜಗತ್ತಿನ ಏಳು ಜೈವಿಕ ವೈವಿಧ್ಯತೆಯ ರಾಷ್ಟ್ರಗಳಲ್ಲಿ ಭಾರತವೂ ಒಂದು. ಪ್ರವಾಸೋದ್ಯಮಕ್ಕೆ ಅನುಕೂಲವಾಗಬಲ್ಲ ಎಲ್ಲ ಸಂಪನ್ಮೂಲಗಳು ಇಲ್ಲಿವೆ. ವಿದೇಶಿ ಪ್ರವಾಸಿಗರು ಸಂಶೋಧಕರು, ವಿಜ್ಞಾನಿಗಳು, ವಿಷಯ ತಜ್ಞರು, ಬಂಡವಾಳ ಹೂಡಿಕೆದಾರರು ಇವರೆಲ್ಲರ ಸಮ್ಮಿಲನದಿಂದಾಗಿ ನಾವು ನಮ್ಮ ಸಂಪನ್ಮೂಲಗಳನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಅರಿತುಕೊಳ್ಳಬಹುದಲ್ಲದೆ, ಆರ್ಥಿಕಾಭಿವೃದ್ಧಿಗಾಗಿ ಯಾವ ರೀತಿ ಯೋಜನೆಗಳನ್ನು ಹಮ್ಮಿಕೊಳ್ಳಬಹುದೆಂಬುದನ್ನು ಅರಿಯಲು ಸಹ ಸಹಾಯಕವಾಗುತ್ತದೆ.

ಭಾರತದಲ್ಲಿ ಶೇ. 4.68ರಷ್ಟು ಭೂಪ್ರದೇಶ ಅಭಯಾರಣ್ಯ ಗಳು ಮತ್ತು ಪಕ್ಷಿಧಾಮಗಳಿಂದ ಕೂಡಿದೆ. ಹಿಮಾಚಲ ಪ್ರದೇಶ ಸ್ಥಳೀಯ ಜನಾಂಗವನ್ನು ಪ್ರವಾಸೋದ್ಯಮ ಕಾರ್ಯಕ್ರಮದಲ್ಲಿ ಪ್ರೋತ್ಸಾಹಿಸುತ್ತದೆ. ಹಾಗೆಯೇ ಕರ್ನಾಟಕ, ಸಿಕ್ಕಿಂ, ರಾಜಸ್ಥಾನ ಮತ್ತು ಆಂಧ್ರ ಪ್ರದೇಶಗಳ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳು ಪ್ರವಾಸೋದ್ಯಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ್ಳುತ್ತಿವೆ.

ಭಾರತದಲ್ಲಿ 1970ರ ದಶಕದ ನಂತರ ಪ್ರವಾಸೋದ್ಯಮ ಹೊಸ ಚಾಲನೆ ಪಡೆದುಕೊಂಡಿತು. 1982ರಲ್ಲಿ ಪ್ರವಾಸೋದ್ಯಮಕ್ಕಾಗಿಯೇ ರಾಷ್ಟ್ರೀಯ ನೀತಿಯನ್ನು ಪ್ರಕಟಿಸಲಾಯಿತು. 1988ರಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ಸಮಿತಿಯನ್ನು ರಚಿಸಿ ನಿರೀಕ್ಷೆ ಗುರಿ ತಲುಪುವ ಯೋಜನೆ ಹಮ್ಮಿಕೊಳ್ಳಲಾಯಿತು. 1992ರಲ್ಲಿ ರಾಷ್ಟ್ರೀಯ ಕ್ರಮ ಯೋಜನೆ ಮತ್ತು 1996ರಲ್ಲಿ ರಾಷ್ಟ್ರೀಯ ಯೋಜನೆಗಳು ಜಾರಿಗೊಂಡವು. ಇದಕ್ಕೂ ಮುನ್ನ 1966ರಲ್ಲಿ ಇಂಡಿಯಾ ಟೂರಿಸಂ ಡೆವಲಪ್‌ಮೆಂಟ ಕಾರ್ಪೊರೇಷನ್ ಮತ್ತು 1989ರಲ್ಲಿ ಟೂರಿಸಂ ಫೈನಾನ್ಸ್ ಕಾರ್ಪೊರೇಷನ್‌ಗಳನ್ನು ಸ್ಥಾಪಿಸಿದ್ದು ಮಹತ್ವದ ಮೈಲುಗಲ್ಲುಗಳಾಗಿದ್ದವು. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಈ ಉದ್ಯಮಕ್ಕೆ ಸಂಬಂಧಿಸಿದಂತೆ ಭಾರತದ ಸ್ಥಿತಿ ಚಿಂತಾಜನಕವಾಗಿದೆಯೆಂದು ಹೇಳಬೇಕು. ಸದ್ಯಕ್ಕೆ ಪ್ರತಿವರ್ಷ ಭಾರತಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ 25 ಲಕ್ಷದಷ್ಟು ಮಾತ್ರ. ವಿಶ್ವ ಪ್ರವಾಸೋದ್ಯಮ ದಿನಾಚರಣೆ 2017ರ ಥೀಮ್ ""Sustainable Tourism-a tool for development” (ಸುಸ್ಥಿರ ಪ್ರವಾಸೋದ್ಯಮ -ಅಭಿವೃದ್ಧಿಯ ಒಂದು ಸಾಧನ) ಆಗಿರುತ್ತದೆ.

ಭಾರತೀಯರ ಜೀವನ ಶೈಲಿ, ಸಾಂಸ್ಕೃತಿಕ ಚರಿತ್ರೆ, ರಂಗುರಂಗಿನ ಜಾತ್ರೆಗಳು, ಉತ್ಸವಗಳು ಇವೆಲ್ಲ ಹೊರನಾಡಿ ನವರನ್ನು ಆಕರ್ಷಿಸುತ್ತದೆ. ಸುಂದರ ಕಡಲತೀರಗಳು, ಅಭಯಾರಣ್ಯಗಳು, ಕಾಡುಪ್ರಾಣಿಗಳು, ಹಿಮ, ನದಿ, ಪರ್ವತ ಶ್ರೇಣಿಗಳನ್ನು, ತಂತ್ರಜ್ಞಾನ ಸಂದರ್ಶಕರ ಮೆಚ್ಚಿನ ತಾಣವಾಗಿವೆ. ಭಾರತೀಯರ ಕರಕುಶಲತೆ ಅದರಲ್ಲೂ ವಿಶೇಷವಾಗಿ ಆಭರಣಗಳು, ನೆಲಹಾಸು, ಚರ್ಮದ ಉತ್ಪಾದನೆಗಳು, ಆನೆದಂತ, ಕುಸುರಿ ಕೆಲಸಗಳು ಇತ್ಯಾದಿ. ವಿದೇಶಿ ಪ್ರವಾಸಿಗರ ನೆಚ್ಚಿನ ಶಾಪಿಂಗ್ ವಸ್ತುಗಳಾಗಿವೆ. ಸಮೀಕ್ಷೆಯೊಂದರ ಪ್ರಕಾರ ನಮ್ಮ ಪ್ರವಾಸ ಖರೀದಿಯ ಶೇ. 40ರಷ್ಟು ಆದಾಯ ಈ ವಸ್ತುಗಳಿಂದ ಬರುತ್ತಿದೆ.

ಯುನೈಟೆಡ್ ನೇಷನ್ ವರ್ಲ್ಡ್ ಟೂರಿಸಂ ಆರ್ಗನೈಜೇಶನ್ 1980 ಸೆಪ್ಟೆಂಬರ್-27ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸುವ ಕುರಿತು ಗೊತ್ತುವಳಿಯನ್ನು ಅಂಗೀಕರಿಸಿದರು. ಇದರ ಉದ್ದೇಶ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಪ್ರವಾಸೋದ್ಯಮದ ಪಾತ್ರದ ಅರಿವು ಮೂಡಿಸುವುದು ಮತ್ತು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯಗಳನ್ನು ವಿಶ್ವಾದ್ಯಂತ ಪರಿಣಾಮಕಾರಿಯಾಗಿ ಪ್ರದರ್ಶಿಸುವುದಾಗಿದೆ.

ವಿದೇಶಿ ಪ್ರವಾಸಿಗರಿಗೆ ರಕ್ಷಣೆ ಅಗತ್ಯ

ವಿದೇಶಿ ಪ್ರವಾಸಗರಿಗೆ ಕೀಟಲೆ ಕೊಡುವ ಸ್ವಭಾವ ಇಂದು ನಮ್ಮವರಲ್ಲಿ ಜಾಸ್ತಿಯಾಗಿದೆ. ಇದು ನಮ್ಮ ಭವ್ಯ ಸಂಸ್ಕೃತಿಗೆ ಮಸಿ ಬಳಿಯುವ ಸಂಗತಿ ಕೂಡಾ. ಇಲ್ಲಿ ಅತಿಥಿಗಳಿಗೆ ರಕ್ಷಣೆ ಕೊಡುವುದಕ್ಕಿಂತ ಅವರಿಂದ ಭಕ್ಷಣೆಗಾಗಿ ಹುಡುಕಾಡುವವರೇ ಜಾಸ್ತಿ. ಅವರಿಂದ ಹಣ ಹಾಗೂ ಅಮೂಲ್ಯ ವಸ್ತುಗಳನ್ನು ಲಪಟಾಯಿಸುವ ಕಾರ್ಯ ನಮ್ಮವರಿಂದಲೇ ನಡೆಯುತ್ತಿದೆ. ವಿದೇಶಿ ಪ್ರವಾಸಿಗರ ಹತ್ಯೆ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಕಡಿಮೆಯೇನಿಲ್ಲ. ಇಂಥ ಕೃತ್ಯಗಳಲ್ಲಿ ತೊಡಗಿ ಕೊಳ್ಳುವ ಕೆಲವರಿಂದಾಗಿ ಇಡೀ ಪ್ರವಾಸೋದ್ಯಮ ಕ್ಷೇತ್ರ ಹಾಳಾಗುತ್ತಿದೆ. ಇಂಥ ಅಮಾನವೀಯ ಕೃತ್ಯಗಳನ್ನು ತಡೆಯು ವಂಥ ಕಾರ್ಯ ಇಲ್ಲಿ ಆಗಬೇಕಾದ್ದು ಅಗತ್ಯ.

ನಮ್ಮ ಭಾರತ ದೇಶದಲ್ಲಿ ಇನ್ನೂ ತನಕ ಸಮಗ್ರ ಪ್ರವಾಸಿ ಜಾಲವೊಂದು ರೂಪಗೊಂಡಿಲ್ಲ. ಅಲ್ಲದೇ ಇಲ್ಲಿಯ ಪ್ರವಾಸೋದ್ಯಮಕ್ಕೆ ಪೂರಕವಾಗಿ ಸಂಬಂಧಿಸಿದ ಇಲಾಖೆ ಗಳೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲದಿರುವುದು ವಿಷಾದನೀಯ.

Similar News

ಜಗದಗಲ
ಜಗ ದಗಲ