ಪೊಲೀಸ್ ಇಲಾಖೆಯಲ್ಲಿರುವ ಸಂಘಪರಿವಾರ ಬೆಂಬಲಿಗರ ರಹಸ್ಯ ಸಭೆ?: ತನಿಖೆ ಆರಂಭ

Update: 2017-10-05 13:20 GMT

ತಿರುವನಂತಪುರಂ, ಅ.5: ಕೇರಳ ಪೊಲೀಸ್‍ ಇಲಾಖೆಯಲ್ಲಿದ್ದಾರೆ ಎನ್ನಲಾದ ಆರೆಸ್ಸೆಸ್, ಬಿಜೆಪಿ ಬೆಂಬಲಿಗರ ರಹಸ್ಯ ಸಭೆಯೊಂದು ನಡೆದಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಕೇರಳದ ಮಾಧ್ಯಮವೊಂದು ವರದಿ ಮಾಡಿದೆ.

ಕೇರಳದಲ್ಲಿ ಸಭೆ ಸೇರಿದರೆ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬರಬಹುದೆಂದು ತಮಿಳುನಾಡಿನ ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿ ಸಭೆ ನಡೆಸಲಾಗಿದೆ ಎಂದು ಅದು ವರದಿ ಮಾಡಿದೆ.

ಆದರೆ, ಸಭೆಯ ತೀರ್ಮಾನಗಳನ್ನು ವಾಟ್ಸ್ ಆ್ಯಪ್ ಮೂಲಕ ಸದಸ್ಯರಿಗೆ ಕಳುಹಿಸಲಾಗಿದ್ದು, ಇದು ಸೋರಿಕೆಯಾಗಿ ರಹಸ್ಯ ಸಭೆಯ ವಿವರಗಳು ಬಹಿರಂಗಗೊಂಡಿದೆ ಎಂದು ಆರೋಪಿಸಲಾಗಿದೆ. ಭಾಗವಹಿಸಿದ ಪೊಲೀಸರ ವಿವರಗಳನ್ನು ಸಂಗ್ರಹಿಸುವ ಕೆಲಸ ಆರಂಭವಾಗಿದೆ. ಪೊಲೀಸರ ಹಿನ್ನೆಲೆ, ಈಗ ಸಂಘಪರಿವಾರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆಯೇ ಎನ್ನುವ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ವರದಿಯಾಗಿದೆ.

ಆರೆಸ್ಸೆಸ್ ನ ರಾಜ್ಯ ನಾಯಕರ ಸಮ್ಮುಖದಲ್ಲಿ ಪೊಲೀಸ್ ಇಲಾಖೆಯಲ್ಲಿರುವ ಸಂಘಪರಿವಾರದ ಬೆಂಬಲಿಗರ ಅನೌಪಚಾರಿಕ ಸಭೆಯನ್ನು ನಡೆಸಲಾಗಿದೆ. ಈ ಹಿಂದಿನ ತತ್ವಮಸಿ ಗ್ರೂಪ್‍ ಅನ್ನು ಸಕ್ರಿಯಗೊಳಿಸಬೇಕು ಎಂದು ಕನ್ಯಾಕುಮಾರಿಯ ಸಭೆಯ ಮುಖ್ಯ ನಿರ್ಧಾರವಾಗಿದೆ. ತತ್ವಮಸಿಯ ಅಧ್ಯಕ್ಷರನ್ನಾಗಿ ಗೋಪಕುಮಾರ್, ಕಾರ್ಯದರ್ಶಿಯಾಗಿ ರಾಜೇಶ್ ಮತ್ತು ಖಜಾಂಚಿಯಾಗಿ  ಪ್ರಶಾಂತ್‍ರನ್ನು, ಪ್ರಧಾನ ಕನ್ವೀನರ್ ಆಗಿ ಶ್ಯಾಮ್‍ರನ್ನು ಹಾಗೂ  ಹದಿನಾರು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕೇರಳದ ಮಾಧ್ಯಮಗಳು ವರದಿ ಮಾಡಿವೆ.

ತನಿಖಾ ವರದಿ ಸಿಕ್ಕಿದ ಬಳಿಕ ಕನ್ಯಾಕುಮಾರಿಯ ರಹಸ್ಯ ಸಭೆಯಲ್ಲಿ ಪಾಲ್ಗೊಂಡ ಪೊಲೀಸರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News