ಸಮಯ ಪರಿಪಾಲನೆಯ ಕೋಶಾಣು ಸಂಶೋಧನೆಗೆ ನೊಬೆಲ್ ಪ್ರಶಸ್ತಿ

Update: 2017-10-08 18:33 GMT

ಹೊತ್ತು ಕಳೆಯದಿರಲೋ ಮನವೇ

ಹೊತ್ತು ಕಳೆಯದಿರಲೋ... ಗೊತ್ತು ಗುರಿಯಿಲ್ಲದೆ ನಿನ್ನ

ಚಿತ್ತ ಚಂಚಲವ ಮಾಡಿಕೊಂಡು...

ಇದೊಂದು ದಾಸರಪದ. ಇದು ಹೊತ್ತಿನ ವೌಲ್ಯ ಕುರಿತು ಉತ್ತಮ ಸಂದೇಶವನ್ನು ಸಾರುತ್ತದೆ. ಸೋಮಾರಿತನವನ್ನು ಟೀಕಿಸುತ್ತದೆ. ಗ್ರಾಮೀಣ ಭಾಗದ ಜನತೆ ಬೆಳಗಿನ ಜಾವ ಬೇಗನೆ ಎದ್ದು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅವರಿವರ ಮನೆಯ ಕೋಳಿ ಕೂಗುವುದರಿಂದ. ಈ ಕುರಿತು ಜಾನಪದದಲ್ಲಿ ಹಲವಾರು ಹಾಡುಗಳಿವೆ. ಅದರಲ್ಲೊಂದು:

ಕೋಳಿ ಕೂಗಿತಕ್ಕ ನಂದನ ವನಕ್ಕಾ

ಬೆಳಕಾಗಿ ಬೆಳ್ಳಿಯ ಚುಕ್ಕಿ ಉದಯದ ಬಳಿಕ

ಕೋಳಿ ಕೂಗಿತಕ್ಕ ನಂದನ ವನಕ್ಕಾ

 ದಾಸರ ಪದ, ಜಾನಪದದ ಹಾಡುಗಳಲ್ಲಿ ಬರುವ ಜ್ಞಾನಕ್ಕೂ ವಿಜ್ಞಾನಕ್ಕೂ ನಿಕಟ ಸಂಬಂಧವಿದೆ. ಇಂತಹ ನಿಕಟ ಸಂಬಂಧವನ್ನು ವೈಜ್ಞಾನಿಕವಾಗಿ ಭೇದಿಸಿದ ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿರುವ ಮೂವರು ವಿಜ್ಞಾನಿಗಳಾದ ಜೆಫ್ರಿ ಹಾಲ್, ಮೈಕಲ್ ರೋಸ್‌ಬ್ಯಾಶ್ ಮತ್ತು ಮೈಕಲ್ ಯಂಗ್ ಅವರಿಗೆ 2017 ನೆ ಸಾಲಿನ ಫಿಶಿಯಾಲಜಿ ಅಥವಾ ಮೆಡಿಸಿನ್ ವಿಭಾಗಕ್ಕೆ ನೀಡುವ ನೊಬೆಲ್ ಪ್ರಶಸ್ತಿ ಲಭಿಸಿದೆ. ಒಟ್ಟು 11 ಲಕ್ಷ ಡಾಲರ್ ನಗದು ಬಹುಮಾನ ಈ ಮೂವರ ಪಾಲಾಗಲಿದೆ.

ಮಾನವ, ಪ್ರಾಣಿ ಹಾಗೂ ಸಸ್ಯಗಳು ಕೂಡ ದಿನದ ನಿರ್ದಿಷ್ಟ ಸಮಯವನ್ನು ಗ್ರಹಿಸಬಲ್ಲವು. ಎಂಬ ದೈನಂದಿನ ಸಮಯದ ಚಕ್ರ (circadian rhythm) ಕುರಿತಂತೆ, ಇವರು ಕಂಡುಹಿಡಿದ ಕೋಶಾಣುಗಳ ಅಸ್ಮಿತೆಗೆ ನೊಬೆಲ್ ಪ್ರಶಸ್ತಿ ಸಿಕ್ಕಿದೆ.

ಜೈವಿಕ ಗಡಿಯಾರ: ಮನುಷ್ಯನಿಂದಿಡಿದು ಪ್ರತೀ ಪ್ರಾಣಿಯು ದಿನದ ಸಮಯವನ್ನು ಅರಿಯುತ್ತವೆ. ಅದಕ್ಕಾಗಿ, ಅವುಗಳ ದೇಹದಲ್ಲಿ ಜೈವಿಕ ಗಡಿಯಾರವೊಂದಿದೆ ಎಂದಷ್ಟೇ ಇಲ್ಲಿಯವರೆಗೂ ತಿಳಿಯಲಾಗಿತ್ತು. ಆ ಜೈವಿಕ ಗಡಿಯಾರವೇ ಮೆದುಳಿನಲ್ಲಿರುವ ಪೈನಿಯಲ್ ಗ್ರಂಥಿ(pineal gland) ಇದನ್ನು ಶಿವನ ಮೂರನೆ ಕಣ್ಣಿನ ಪಳೆಯುಳಿಕೆ ಎಂದು ಭಾವಿಸಲಾಗಿದೆ. ರಾತ್ರಿಯ ಸಮಯದಲ್ಲಿ ಮೆಲಟೋನಿನ್ ಎಂಬ ಚೋಧಕವನ್ನು ಪೈನಿಯಲ್ ಗ್ರಂಥಿ ಸ್ರವಿಸುತ್ತದೆ. ಕಣ್ಣಿನ ಮೇಲೆ ಬೀಳುವ ಹಗಲು ರಾತ್ರಿಗಳ ಬೆಳಕು ಮತ್ತು ಕತ್ತಲು ಅಂತಿಮವಾಗಿ ಪೈನಿಯಲ್ ಗ್ರಂಥಿಯ ಮೇಲೆ ಪರಿಣಾಮ ಬೀರುತ್ತದೆ. ಇದು ದಿನದ ಸಮಯವನ್ನು ತಿಳಿಯಲು ಅನುಕೂಲಕರ. ಈ ಹಾದಿಯಲ್ಲಿ ನಡೆದ ಸಂಶೋಧನೆಗಳು, ಕಣ್ಣಿನ ರೆಟಿನಾದ ಮೇಲೆ ಬಿದ್ದ ಬೆಳಕು ನರವ್ಯೆಹದ ಮೂಲಕ ಹಾದು ಸುಪ್ರಖಯಾಸ್ಮಾಟಿಕ್ ನ್ಯೂಕ್ಲಿಯಸ್ ಎಂಬ ನರಕೇಂದ್ರದ ಮೂಲಕ ಪೈನಿಯಲ್ ಗ್ರಂಥಿಯನ್ನು ಸೇರಿಕೊಳ್ಳುತ್ತದೆ. ಸುಪ್ರಖಯಾಸ್ಮಾಟಿಕ್ ನ್ಯೂಕ್ಲಿಯಸ್ ಬೆಳಕು-ಕತ್ತಲನ್ನು ಪ್ರಸಾರ ಮಾಡುವ ಅವಿಭಾಜ್ಯ ಕೇಂದ್ರವಾದ್ದರಿಂದ ಈ ನ್ಯೂಕ್ಲಿಯಸ್ (Suprachiasmatic nucleus) ಅನ್ನೇ ಜೈವಿಕ ಗಡಿಯಾರವೆಂದು ತಿಳಿಯಬೇಕಾಗುತ್ತದೆ ಎಂದು ಕೆಲವು ವಿಜ್ಞಾನಿಗಳು ವಾದಿಸಿದರು. ಹೀಗೆ, ಕೆಲ ಕಾಲ ಪೈನಿಯಲ್ ಗ್ರಂಥಿಯನ್ನು ಜೈವಿಕ ಗಡಿಯಾರ ಎಂತಲೂ, ತದನಂತರ ಸುಪ್ರಖಯಾಸ್ಮಾಟಿಕ್ ನ್ಯೂಕ್ಲಿಯಸ್ ಅನ್ನು ಜೈವಿಕ ಗಡಿಯಾರ ಎಂತಲೂ ಅರಿತ ನಂತರ, ಇದೀಗ ಮತ್ತಷ್ಟು ಸಂಕೀರ್ಣ ವಿವರಗಳತ್ತ ಈ ಸಾಲಿನ ನೊಬೆಲ್ ಪ್ರಶಸ್ತಿ ವಿಜೇತರ ಅಧ್ಯಯನವು ಬೆಳಕು ಚೆಲ್ಲಿದೆ.

ಕಾಲಮಾನದ ವಂಶವಾಹಿ: ನೊಬೆಲ್ ಪ್ರಶಸ್ತಿ ವಿಜೇತ ತ್ರಿಮೂರ್ತಿ ವಿಜ್ಞಾನಿಗಳ ಪ್ರಕಾರ ಮನುಷ್ಯರಷ್ಟೇ ಅಲ್ಲದೆ, ಪ್ರತೀ ಸಸ್ಯ ಹಾಗೂ ಪ್ರಾಣಿಗಳು ಸೂರ್ಯನ ಸುತ್ತ ಭೂಮಿ ಸುತ್ತುವುದನ್ನು ಅವಲಂಬಿಸಿ ದೈನಂದಿನ ಚಟುವಟಿಕೆಗಳ ಚಕ್ರವನ್ನು ರೂಢಿಸಿಕೊಳ್ಳು ತ್ತವೆ. 1984ರಿಂದ ಸತತವಾಗಿ ಸಂಶೋಧನೆ ನಡೆಸಿ ಡ್ರಾಸೋಫಿಲಾ ಮೆಲನೋಗಾಸ್ಟರ್ ಎಂಬ ಹಣ್ಣಿನ ನೊಣದ ಡಿಎನ್‌ಎವನ್ನು ಹೆಕ್ಕಿ ತೆಗೆದು ಅದರಲ್ಲಿನ ದಿನದ ಕಾಲಮಾನವನ್ನು ಅಳೆಯುವ ವಂಶ ವಾಹಿಯನ್ನು ಗುರುತಿಸಿದ್ದಾರೆ. ಈ ವಂಶವಾಹಿಯನ್ನು ಪೀರಿಯಡ್‌ (period gene) ವಂಶವಾಹಿ ಎಂದು ಕರೆದು ಅದು ಸಂಶ್ಲೇಷಿ ಸುವ ಸಸಾರಜನಕವನ್ನು ಪೀರಿಯಡ್ ಪ್ರೋಟೀನ್ ಎಂದು ಕರೆದಿದ್ದಾರೆ. ರಾತ್ರಿಯ ಹೊತ್ತು ಸಂಶ್ಲೇಷಣೆಗೊಳ್ಳುವ ಪೀರಿಯಡ್ ಪ್ರೊಟೀನ್, ಹಗಲು ಹೊತ್ತಿನಲ್ಲಿ ಅಪಚಯವಾ ಗುತ್ತಾ ಹೋಗುತ್ತದೆ. ಇಂತಹ ಕ್ರಿಯೆಯು ಬ್ಯಾಕ್ಟಿರಿಯಾದಂತಹ ಸೂಕ್ಷ್ಮಾಣು ಜೀವಿಗಳಲ್ಲಿಯೂ ಜರುಗುತ್ತದೆ ಎಂದು ಅಂದಾಜಿಸಲಾಗಿದೆ.

ಪ್ರತೀ ಜೀವಿಯೂ ಸಮಯದ ಗುಲಾಮ: ದೈನಂದಿನ ಕ್ರಿಯೆಗಳ ಲಯಬದ್ಧತೆಯನ್ನು ಅನುಸರಿಸುವ ಸೂಕ್ಷ್ಮಾಣುಜೀವಿ, ಸಸ್ಯ, ಪ್ರಾಣಿ ಹಾಗೂ ಮನುಷ್ಯರನ್ನು ಒಳಗೊಂಡಂತೆ ಎಲ್ಲಾ ಜೀವಿಗಳು ದಿನದ ಸಮಯದ ಗುಲಾಮರೇ. ಮನುಷ್ಯ ಬೆಳಗ್ಗೆ ಏಳುವುದು, ಕೆಲಸಕಾರ್ಯಗಳಲ್ಲಿ ತೊಡಗುವುದು, ಚೋಧಕಗಳ ಸ್ರವಿಸುವಿಕೆಯಲ್ಲಿನ ಏರು ಪೇರು, ದೇಹದ ಉಷ್ಣತೆಯಲ್ಲಿನ ವ್ಯತ್ಯಾಸಗಳು, ಚಯಾಪಚಯ ಕ್ರಿಯೆಗಳ ನಿರ್ವಹಣೆಗೆ ದಿನದ ಲಯಬದ್ಧ್ದ ಜೀವನದ ನೇರ ಸಂಬಂಧವಿದೆ. ದಿನದ ಕಾಲಮಾನವನ್ನು ಅರಿತು, ಅದಕ್ಕೆ ತಕ್ಕ ಹಾಗೆ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಶಾರೀರಿಕವಾಗಿ ಸದೃಢವಾಗಿ, ಆರೋಗ್ಯದಿಂದಿದ್ದು, ರೋಗರುಜಿನಗಳಿಂದ ದೂರವಿರಬಹುದು.

ಜೆಟ್‌ಲ್ಯಾಗ್ ಸಿಕ್‌ನೆಸ್: ಜೆಟ್‌ಲ್ಯಾಗ್ ಸಿಕ್‌ನೆಸ್ ಒಂದು ವಿಮಾನ ಪ್ರಯಾಣ ಕಾಯಿಲೆ. ಇದನ್ನು ಪೈಲಟ್ ಸುಸ್ತು ಕಾಯಿಲೆ, ಸಮಯ ವಲಯದ ಪರಿಣಾಮ ಎಂತಲೂ ಕರೆಯುತ್ತಾರೆ. ಜೆಟ್‌ಲ್ಯಾಗ್ ಸಿಕ್‌ನೆಸ್‌ನಲ್ಲಿ ಎರಡು ವಿಧ. ಒಂದು ಪೂರ್ವ ದೇಶಗಳಿಂದ ಪಶ್ಚಿಮದ ದೇಶಗಳಿಗೆ ದೂರ ಪ್ರಯಾಣ ಮಾಡುವಾಗ ಆಗುವ ಸುಸ್ತು. ಮತ್ತೊಂದು ಪಶ್ಚಿಮದ ದೇಶಗಳಿಂದ ಪೂರ್ವ ದೇಶಗಳಿಗೆ ದೂರ ಪ್ರಯಾಣ ಮಾಡುವಾಗ ಆಗುವ ಸುಸ್ತು. ಎರಡನೆಯದಕ್ಕೆ ಉದಾಹರಣೆಯನ್ನು ಹೀಗೆ ವಿವರಿಸಲಾಗಿದೆ.

ವಿಮಾನಯಾನದ ಪ್ರಯಾಣಿಕನೊಬ್ಬ ಅಮೆರಿಕದ ನ್ಯೂಯಾ ರ್ಕ್‌ನಿಂದ ಸಂಜೆ 6 ಗಂಟೆಗೆ ಹೊರಟು ನೆದರ್‌ಲ್ಯಾಂಡ್ಸ್‌ನ ರಾಜ ಧಾನಿಯಾದ ಆಮ್ಸ್‌ಟರ್‌ಡ್ಯಾಮ್‌ಗೆ ರಾತ್ರಿ 12 ಗಂಟೆಗೆ ತಲು ಪುತ್ತಾನೆ. ಒಟ್ಟು ಆರು ಗಂಟೆಗಳ ಪ್ರಯಾಣ. ಹೊಟೇಲ್‌ಗೆ ಹೋಗಿ ಆ ರಾತ್ರಿಯ ಗಡತ್ತಾದ ನಿದ್ರೆ ಮಾಡಲು ಅಣಿಯಾಗುತ್ತಿದ್ದಂತೆ, ಕೊಠಡಿ ಮೇಲ್ವಿಚಾರಕ ಬಂದು ಪ್ರಯಾಣಿಕನಿಗೆ ಬೆಳಗಿನ ಉಪಾ ಹಾರಕ್ಕೆ ಅಣಿ ಮಾಡಬಹುದೇ ಎಂದು ಕೇಳುತ್ತಾನೆ. ಪ್ರಯಾಣಿಕ ಕಕ್ಕಾವಿಕ್ಕಿ ಯಾಗುತ್ತಾನೆ. ಯಾಕೆಂದರೆ, ಆಮ್ಸ್‌ಟರ್‌ಡ್ಯಾಮ್‌ನಲ್ಲಿ ಆಗ ಬೆಳಗ್ಗೆ ಆರು ಗಂಟೆಯ ಸಮಯ. ಇಲ್ಲಿ ಒಂದು ರಾತ್ರಿಯ ಪಲ್ಲಟವಾಗಿದೆ. ಅಂತಹ ಪಲ್ಲಟಕ್ಕೆ ದೇಹ ತಕ್ಷಣ ಹೊಂದಿಕೊಳ್ಳದು. ಒಂದು ರಾತ್ರಿಯ ನಿದ್ರಾಹೀನತೆ. ದಿನದ ಚಟುವಟಿಕೆಗಳ ಲಯಬದ್ಧತೆಗೆ ತೊಂದರೆ. ಇದು ಜೆಟ್‌ಲ್ಯಾಗ್ ಸಿಕ್‌ನೆಸ್. ಇಂತಹ ವಿಷಮತೆಯಿಂದ ಹೊರಬರಲು ಒಂದರಿಂದ ಐದು ದಿನಗಳೇ ಬೇಕಾಗಬಹುದು. ದೇಹದ ಎಲ್ಲ ಕೋಶಗಳು ಇದಕ್ಕೆ ಹೊಂದಿಕೊಳ್ಳಬೇಕು. ಪೀರಿಯಡ್ ವಂಶವಾಹಿಗಳು ಪೀರಿಯಡ್ ಸಸಾರಜನಕವನ್ನು ಉತ್ಪತ್ತಿ ಮಾಡಬೇಕು. ಸಸಾರಜನಕ ಬಳಕೆಯಾಗಬೇಕು. ಇದೊಂದು ಚಕ್ರದಂತೆ ನಡೆಯುತ್ತಿರಬೇಕು. ಆದರೆ, ಜೆಟ್‌ಲ್ಯಾಗ್ ಸಿಕ್‌ನೆಸ್‌ನಲ್ಲಿ ದೈನಂದಿನ ಚಕ್ರ (circadian rhythm) ಕ್ಕೆ ಧಕ್ಕೆಯಾಗುತ್ತದೆ.

ಈ ಸಾರಿಯ ನೊಬೆಲ್ ಪ್ರಶಸ್ತಿ ವಿಜೇತರು ಇಂತಹ ದೈನಂದಿನ ಚಕ್ರದ ಸಮಯ ಪರಿಪಾಲನೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ಅದಕ್ಕೆ ಕಾರಣವಾಗುವ ದೇಹದ ಪ್ರತೀ ಕೋಶದೊಳಗಿನ ಕೋಶಾಣುಗಳ ಶಾರೀರಿಕ ಕ್ರಿಯೆಗಳನ್ನು ಸಂಶೋಧಿಸಿದ್ದಾರೆ. ಈ ಸಹಸ್ರಮಾನವು ಮಾಲೆಕ್ಯೂಲಾರ್ ಬಯಾಲಜಿಯ ಕಾಲ. ಕೋಶಾಣು ಸಂಶೋಧನೆಗಳ ಕಾಲ. ಮುಂದಿನ ವರ್ಷಗಳಲ್ಲಿ ನಾವಿನ್ನೂ ಅದೆಷ್ಟೋ ಕೋಶಾಣುಗಳ ಕುರಿತು ಅರಿಯಬೇಕಿದೆ.

Writer - ಪ್ರೊ. ಎಂ. ನಾರಾಯಣ ಸ್ವಾಮಿ

contributor

Editor - ಪ್ರೊ. ಎಂ. ನಾರಾಯಣ ಸ್ವಾಮಿ

contributor

Similar News

ಜಗದಗಲ
ಜಗ ದಗಲ