ಕಾಶ್ಮೀರ ಸಮಸ್ಯೆ ಬಗೆಹರಿಸುವುದನ್ನು ತಡೆಯಲು ವಿಶ್ವ ಶಕ್ತಿಯಿಂದಲೂ ಅಸಾಧ್ಯ: ರಾಜನಾಥ್ ಸಿಂಗ್
ಬಾರ್ಡೋಲಿ (ಗುಜರಾತ್), ಅ. 14: ಕಾಶ್ಮೀರ ಸಮಸ್ಯೆ ಪರಿಹರಿಸುವಲ್ಲಿ ಜಗತ್ತಿನ ಯಾವುದೇ ಶಕ್ತಿಯೂ ಸರಕಾರವನ್ನು ತಡೆಯಲಾರದು ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.
ಭಾರತದ ವಿರುದ್ಧ ದುರುದ್ದೇಶಪೂರಿತ ಚಟುವಟಿಕೆ ನಡೆಸುತ್ತಿರುವ ಬಗ್ಗೆ ರಾಜನಾಥ್ ಸಿಂಗ್ ಪಾಕಿಸ್ತಾನ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಮುಕ್ತ ಅವಕಾಶ ನೀಡಲಾಗಿದೆ. ಕಾಶ್ಮೀರದ ಗಡಿಯಲ್ಲಿ ಗುಂಡು ಹಾರಿಸಿದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಅವರು ಹೇಳಿದರು.
ಕಾಶ್ಮೀರದ ಬಗ್ಗೆ ಯಾರೂ ಚಿಂತೆ ಪಡಬೇಕಾದ ಅಗತ್ಯ ಇಲ್ಲ ಎಂದು ಹೇಳಲು ನಾನು ಬಯಸುತ್ತೇನೆ. ಕಾಶ್ಮೀರ ಸಮಸ್ಯೆ ಬಗೆಹರಿಸುವುದನ್ನು ತಡೆಯಲು ಜಗತ್ತಿನಲ್ಲಿ ಯಾವುದೇ ಶಕ್ತಿಯಿಂದ ಸಾಧ್ಯವಾಗಲಾರದು ಎಂದು ಅವರು ಹೇಳಿದರು.
ಬಾರ್ಡೋಲಿಯಲ್ಲಿ ಬಿಜೆಪಿಯ ಗುಜರಾತ್ ಗೌರವ್ ಯಾತ್ರೆ ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಪಾಕಿಸ್ತಾನ ಭಯೋತ್ಪಾದಕರನ್ನು ರವಾನಿಸಿ ಭಾರತವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದರು.