ಉತ್ತರಪ್ರದೇಶ: ದಲಿತ ಬಾಲಕಿಯ ಅತ್ಯಾಚಾರಗೈದು ಕತ್ತು ಸೀಳಿ ಕೊಂದ ದುಷ್ಕರ್ಮಿಗಳು

Update: 2017-10-18 17:35 GMT

ಶಹಜಹಾನ್‍ಪುರ, ಅ.18: ಹದಿನಾಲ್ಕು ವರ್ಷದ ದಲಿತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಕತ್ತು ಸೀಳಿ ಆಕೆಯನ್ನು ಹತ್ಯೆ ಮಾಡಿರುವ ಪ್ರಕರಣ ಉತ್ತರಪ್ರದೇಶದ ಶಹಜಹಾನ್‍ಪುರದ ಗ್ರಾಮವೊಂದರಲ್ಲಿ ನಡೆದಿದೆ. ಎಂಟನೇ ತರಗತಿಯ ವಿದ್ಯಾರ್ಥಿನಿಯ ದೇಹ ನಗ್ನಸ್ಥಿತಿಯಲ್ಲಿ ಕಂಡುಬಂದಿದ್ದು, ಕತ್ತು ಕೊಯ್ದು ಆಕೆಯನ್ನು ಕೊಲೆ ಮಾಡಲಾಗಿದೆ.

"ನಗ್ನಸ್ಥಿತಿಯಲ್ಲಿ ಬಾಲಕಿಯ ದೇಹ ರಾತ್ರಿ ಕಂಡುಬಂದಿದೆ. ಆಕೆಯ ಕತ್ತು ಸೀಳಲಾಗಿದೆ" ಎಂದು ಎಸ್ಪಿ ದಿನೇಶ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ. "ಬಾಲಕಿಯ ಮೇಲೆ ಮೊದಲು ಅತ್ಯಾಚಾರ ಎಸಗಿ, ಬಳಿಕ ಹತ್ಯೆ ಮಾಡಿರುವ ಸಾಧ್ಯತೆ ಇದೆ" ಎಂದು ಠಾಣಾಧಿಖಾರಿ ಇಷ್ಕರ್ ಅಹ್ಮದ್ ಹೇಳಿದ್ದಾರೆ.

ಬಾಲಕಿಯ ದೇಹದ ಬಳಿ ಆಲ್ಕೊಹಾಲ್‍ನ ಖಾಲಿ ಪೊಟ್ಟಣಗಳು ಬಿದ್ದಿವೆ. ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯ ಅಹ್ಮದ್‍ನಗರ ಗ್ರಾಮದಿಂದ ಬಾಲಕಿ ನಿನ್ನೆ ಸಂಜೆ ನಾಪತ್ತೆಯಾಗಿದ್ದಳು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಜಾಲ ರೂಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News