ತ್ರಿಪುರಾ: ಗುಂಡಿಕ್ಕಿ ಮತ್ತೋರ್ವ ಪತ್ರಕರ್ತನ ಕೊಲೆ
Update: 2017-11-21 13:59 GMT
ಅಗರ್ತಲ, ನ.21: ಪತ್ರಕರ್ತರೊಬ್ಬರನ್ನು ತ್ರಿಪುರಾ ರಾಜ್ಯ ರೈಫಲ್ಸ್ ನ ಸಿಬ್ಬಂದಿಯೊಬ್ಬ ಗುಂಡಿಕ್ಕಿ ಕೊಂದ ಘಟನೆ ತ್ರಿಪುರಾದ ಬೋಧ್ ಜಂಗ್ ನಲ್ಲಿ ನಡೆದಿದೆ.
ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಏಕಾಏಕಿ ಪತ್ರಕರ್ತನ ಮೇಲೆ ತಪಾನ್ ದೆಬ್ಬರ್ಮ ಗುಂಡಿಕ್ಕಿದ ಎನ್ನಲಾಗಿದೆ. “ತ್ರಿಪುರಾ ರಾಜ್ಯ ರೈಫಲ್ಸ್ ನ 2ನೆ ಬೆಟಾಲಿಯನ್ ಕಮಾಂಡರ್ ರ ಬಾಡಿಗಾರ್ಡ್ ತಪಾನ್ ದೆಬ್ಬರ್ಮ ಪತ್ರಕರ್ತ ಸುದೀಪ್ ದತ್ತಾ ಭೌಮಿಕ್ ಗೆ ಗುಂಡಿಕ್ಕಿದ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಗೋವಿಂದ ಬಲ್ಲವ್ ಮೆಡಿಕಲ್ ಕಾಲೇಜಿಗೆ ತರಲಾಗಿದೆ. ಸೆಪ್ಟಂಬರ್ 20ರಂದು ನಡೆದ ಘಟನೆಯೊಂದರಲ್ಲಿ ಟಿವಿ ಪತ್ರಕರ್ತ ಶಾಂತನು ಭೌಮಿಕ್ ಅವರನ್ನು ಕೆಲ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.