ನ್ಯಾಯ ದೇವಿಯ ಮಡಿಲಲ್ಲಿನ ಅನ್ಯಾಯ!

Update: 2017-11-30 09:26 GMT

ಭಾಗ-2

ನ್ಯಾಯವ್ಯವಸ್ಥೆಯಲ್ಲಿ ಬಡಿದಾಡಿದ ಕಾರ್ನೆಲಿಯಾ ಸಂಕಟಗಳು ಅವರ ಜೊತೆಗೆ ಕೊನೆಯಾಗಲಿಲ್ಲ. ಇವತ್ತಿಗೂ ಓದು ಮುಗಿಸಿ ನೂರಾರು ಕನಸುಗಳೊಂದಿಗೆ ನಾನಾಹಂತದ ಕೋರ್ಟುಗಳನ್ನು ಪ್ರವೇಶಿಸಿ ತಮ್ಮನ್ನು ಸ್ಥಾಪಿಸಿಕೊಳ್ಳಬಯಸುವ ವಕೀಲೆಯರಿಗೆ ಪರಿಸ್ಥಿತಿ ಪೂರಕವಾಗೇನೂ ಇಲ್ಲ. ಪುರುಷ ವೃತ್ತಿ ಬಾಂಧವರಿರಲಿ, ಕೋರ್ಟಿನೊಳಗಿರುವ ನ್ಯಾಯಾಧೀಶ ರಿರಲಿ, ಕೊನೆಗೆ ಕಕ್ಷಿದಾರರಿರಲಿ - ಹೆಚ್ಚಿನವರು ಮಹಿಳಾ ಲಾಯರುಗಳ ಬಗೆಗೆ ಅಸಡ್ಡೆ, ಅಸಮ್ಮತಿ, ಅವರ ಸಾಮರ್ಥ್ಯ ಕುರಿತ ಅನುಮಾನ, ಪೂರ್ವಗ್ರಹಗಳನ್ನೇ ಹೊಂದಿದ್ದಾರೆ. ಕಾನೂನು ಶಾಲೆ-ಕಾಲೇಜುಗಳಲ್ಲಿ ಸಾಕಷ್ಟು ಸಂಖ್ಯೆಯ ಹೆಣ್ಣುಮಕ್ಕಳು ಕಾನೂನು ಪದವಿ ಪಡೆದು ವೃತ್ತಿ ಆರಂಭಿಸಿದರೂ ಸ್ವತಂತ್ರವಾಗಿ ವೃತ್ತಿನಿರತರಾಗುವವರ ಸಂಖ್ಯೆ ಕಡಿಮೆ. ದೀರ್ಘಾವಧಿಯವರೆಗೆ ವೃತ್ತಿ ಮುಂದುವರಿಸಿದವರು ಅತೀ ಕಡಿಮೆ. ಹೆಚ್ಚಿನವರು ತಮ್ಮ ಕುಟುಂಬದ ಅಥವಾ ಸ್ನೇಹಬಳಗದ ಸೀನಿಯರುಗಳ ಸಹಾಯಕರಾಗಿಯೋ, ಕಾರ್ಪೊರೇಟ್ ಕಾನೂನು ಸಲಹಾಕಾರರಾಗಿಯೋ, ಬ್ಯಾಂಕುಗಳಲ್ಲೋ, ಲಾ ಫರ್ಮುಗಳಲ್ಲೋ ಕೆಲಸ ಮಾಡುತ್ತಾರೆ. ಕೌಟುಂಬಿಕ ಜವಾಬ್ದಾರಿಗಳು ಅದಕ್ಕೆ ಮುಖ್ಯ ಕಾರಣವಾದರೂ ನ್ಯಾಯಸ್ಥಾನದ ಒಳಹೊರಗಿರುವ ಮಹಿಳಾ ಸ್ನೇಹಿಯಲ್ಲದ ಅನುತ್ತೇಜಕ ವಾತಾವರಣವೂ ಮುಖ್ಯವಾಗಿದೆ ಎನ್ನಬಹುದು.

ದಿಲ್ಲಿ ಹೈಕೋರ್ಟಿನ ಒಬ್ಬ ನ್ಯಾಯಾಧೀಶರು ವಕೀಲೆಯರ ವಾದ ಆಲಿಸಲು, ಅವರ ಪ್ರಕರಣಗಳ ತೀರ್ಪು ಹೇಳಲು ಪೂರ್ವಾಗ್ರಹ ಹೊಂದಿರುವವರೆಂದು ಪ್ರಖ್ಯಾತರು. ಅವರ ಬಳಿ ಹಿಯರಿಂಗ್ ಬಂದರೆ ವಕೀಲೆಯರು ಭಯಗೊಳ್ಳಬೇಕಾದ ಪರಿಸ್ಥಿತಿಯಿದೆಯಂತೆ. ಅಲಂಕಾರಗೊಂಡ ವಕೀಲೆಯರಿಗೆ, ‘‘ಪಾರ್ಟಿಗೆ ಹೋಗಲೆಂದು ಅಲಂಕಾರ ಮಾಡಿಕೊಂಡು ಬಂದಿರುವೆಯೆ?, ನಿನ್ನ ಅಲಂಕಾರದ ಮೇಲೆ ನಿನಗೆಷ್ಟು ಗಮನ’’ ಎಂದರೆ ‘‘ಮುಂದಿನ ಹಿಯರಿಂಗ್ ಡೇಟ್ ತೆಗೆದುಕೊಳ್ಳಲೂ ನಿನಗೆ ನೆದರಿಲ್ಲ’’ ಎನ್ನುವ ಕಾಮೆಂಟುಗಳು ನ್ಯಾಯಾಧೀಶರಿಂದ ಬರುತ್ತವಂತೆ! ‘‘ನನ್ನ ಲಿಪ್‌ಸ್ಟಿಕ್ ನೋಡಬೇಡಿ, ಅದು ಹೇಳಲಿರುವ ಮಾತುಗಳನ್ನು ಕೇಳಿಸಿಕೊಳ್ಳಿ ಎಂದು ಅವರಿಗೆ ಕಿರುಚಿ ಹೇಳಬೇಕೆನಿಸುವಂತಾಗುತ್ತದೆ’’ ಎಂದು ಒಬ್ಬ ವಕೀಲೆ ಹೇಳಿದ್ದಾಳೆ.

ನ್ಯಾಯಾಧೀಶರ ಸ್ಥಳದಲ್ಲಿ ಮಹಿಳೆಯರ ಸಂಖ್ಯೆ ಮತ್ತಷ್ಟು ಕಡಿಮೆಯಿದೆ. ಬಾರ್ ಅಸೋಸಿಯೇಷನ್‌ನಿಂದ ಯಶಸ್ವಿ ವಕೀಲೆಯರು ನ್ಯಾಯಾಧೀಶರ ಸ್ಥಾನಕ್ಕೆ ಶಿಫಾರಸುಗೊಳ್ಳುವುದೇ ಕಡಿಮೆ. ಎಲ್ಲೋ ಕೆಲವರು ದಿಲ್ಲಿ ಹೈಕೋರ್ಟಿನ ಮಾಜಿ ನ್ಯಾಯಮೂರ್ತಿ ಎ. ಪಿ. ಷಾ ತರಹದವರನ್ನು ಬಿಟ್ಟರೆ ಮಹಿಳೆಯರನ್ನು ನ್ಯಾಯಾಧೀಶರಾಗಿ ಶಿಫಾರಸು ಮಾಡುವವರು ಇಲ್ಲವೆನ್ನುವಷ್ಟು ಕಡಿಮೆ. ಅದರಲ್ಲಿ ನೇಮಕವಾಗುವವರ ಸಂಖ್ಯೆ ಇನ್ನೂ ಕಡಿಮೆ. ಹೀಗಿರುವುದರಿಂದಲೇ 1924ರಿಂದ 2017 ಬಂದರೂ ಒಬ್ಬ ಮಹಿಳೆ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಲು ಸಾಧ್ಯವಾಗಿಲ್ಲ. ಸದ್ಯ ಎಂಟು ರಾಜ್ಯಗಳ ಹೈಕೋರ್ಟುಗಳಾದ- ಮಣಿಪುರ, ತ್ರಿಪುರ, ಮೇಘಾಲಯ, ಹಿಮಾಚಲ ಪ್ರದೇಶ, ಜಾರ್ಖಂಡ್, ಛತ್ತೀಸ್‌ಗಡ, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಒಬ್ಬ ಮಹಿಳಾ ನ್ಯಾಯಮೂರ್ತಿಯೂ ಇಲ್ಲ. ದೇಶದ 24 ಹೈಕೋರ್ಟುಗಳಲ್ಲಿ 621 ನ್ಯಾಯಮೂರ್ತಿಗಳಿದ್ದರೆ ಅವರಲ್ಲಿ 64 ಜನ ಮಾತ್ರ ಮಹಿಳೆಯರಿದ್ದಾರೆ. ದೇಶದ ಮೂರು ಪ್ರಮುಖ ನ್ಯಾಯಾಲಯಗಳು - ಸುಪ್ರೀಂಕೋರ್ಟು, ಮುಂಬೈ ಮತ್ತು ದಿಲ್ಲಿ ಹೈಕೋರ್ಟುಗಳಲ್ಲಿ ಒಬ್ಬೊಬ್ಬರೇ ಸೀನಿಯರ್ ಅಡ್ವೊಕೇಟ್‌ಮಹಿಳೆ ಇದ್ದಾರೆ.

1961ರಲ್ಲಿ ಸ್ಥಾಪನೆಯಾದ ಬಾರ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಸ್ಥಾನವನ್ನು ಇದುವರೆಗೆ ಮಹಿಳೆ ಅಲಂಕರಿಸಿಲ್ಲ. ಈಗಿನ ಕೇಂದ್ರ ಬಾರ್ ಕೌನ್ಸಿಲ್‌ನಲ್ಲಿ ಒಬ್ಬ ಮಹಿಳಾ ಸದಸ್ಯೆಯೂ ಇಲ್ಲ. 12 ಬಾರ್ ಕೌನ್ಸಿಲುಗಳಲ್ಲಿ ಕರ್ನಾಟಕ(1), ಆಂಧ್ರ(2), ಉತ್ತರ ಪ್ರದೇಶ(2), ದಿಲ್ಲಿ(2)ಗಳಲ್ಲಿ ಮಾತ್ರ ಮಹಿಳೆಯರಿರುವುದು. ಉಳಿದ 8ರಲ್ಲಿ ಒಬ್ಬ ಮಹಿಳೆಯೂ ಇಲ್ಲ. ಎಂದರೆ ಬಾರ್ ಕೌನ್ಸಿಲ್‌ನಲ್ಲಿ ಈಗಿರುವ ಮಹಿಳಾ ಸದಸ್ಯರು ಶೇ. 2.8 ಅಷ್ಟೇ. 2016ರಲ್ಲಿ ಮುಂಬೈ ಹೈಕೋರ್ಟು ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಆಲಿಸಿತು. ಬಾರ್ ಕೌನ್ಸಿಲ್‌ಗಳಲ್ಲಿ ಕನಿಷ್ಠ ಶೇ.30 ಮಹಿಳಾ ಪ್ರಾತಿನಿಧ್ಯವಿರುವಂತೆ 1961ರ ಅಡ್ವೊಕೇಟ್ಸ್ ಆ್ಯಕ್ಟ್‌ಗೆ ತಿದ್ದುಪಡಿ ತರಲು ಒತ್ತಾಯಿಸಿ, ಅದಕ್ಕಿರುವ ಸಾಂವಿಧಾನಿಕ ಅವಕಾಶಗಳನ್ನು ಪ್ರಸ್ತಾಪಿಸಿ, ಬಾಂಬೆ ಲಾಯರ್ಸ್‌ ಅಸೋಸಿಯೇಷನ್ ಅರ್ಜಿ ಸಲ್ಲಿಸಿತ್ತು. ಅದನ್ನು ತಕ್ಷಣವೇ ಕೈಗೆತ್ತಿಕೊಂಡು ಅದಕ್ಕೆ ಬಾರ್ ಕೌನ್ಸಿಲ್, ಸರಕಾರ ಎಂಟು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರ್ಟು ಹೇಳಿತು. ಆದರೆ ಇನ್ನೂ ಅಂತಹ ಕ್ರಮಗಳು ಜರುಗಿದ ಸೂಚನೆಯಿಲ್ಲ. ನ್ಯಾಯವ್ಯವಸ್ಥೆಯೊಳಗೆ ಮೀಸಲಾತಿ ಬೇಕೇಬೇಡವೇ ಎಂಬ ಚರ್ಚೆ ನಡೆದಾಗಲೆಲ್ಲ ಜ್ಞಾನ, ಪರಿಣತಿ, ಸಾಮರ್ಥ್ಯ, ಬದ್ಧತೆ ಮುಂತಾದ ಭಾರವಾದ ಪದಗಳ ನೆಪದಲ್ಲಿ ಪ್ರಾತಿನಿಧ್ಯ ನಿರಾಕರಿಸಲಾಗುತ್ತದೆ.

                                        (ಇಂದಿರಾ ಜೈಸಿಂಗ್) 

ಇದರ ಜೊತೆಜೊತೆಗೆ ನ್ಯಾಯಾಲಯಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳೂ ಕಡಿಮೆಯಿಲ್ಲ. ಅದು ಭಾರತದ ನ್ಯಾಯವ್ಯವಸ್ಥೆಯ ಹೊಲಸು ಗುಟ್ಟು ಎನ್ನುತ್ತಾರೆ ಭಾರತದ ಮೊದಲ ಸಾಲಿಸಿಟರ್ ಜನರಲ್ ಮಹಿಳೆ ಇಂದಿರಾ ಜೈಸಿಂಗ್. ಜೂನಿಯರುಗಳನ್ನು ಲೈಂಗಿಕ ಗುಲಾಮರಂತೆ ಬಳಸಿಕೊಳ್ಳುವುದನ್ನು ನೋಡಿ ರೋಸಿ ಹೋಗಿರುವುದಾಗಿ ಕರ್ನಾಟಕದ ಹಿರಿಯ ಮಹಿಳಾ ನ್ಯಾಯವಾದಿ ನೊಂದು ಹೇಳುತ್ತಾರೆ. ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಯಬೇಕೆಂದು ವಿಶಾಖಾ ಗೈಡ್‌ಲೈನ್ಸ್ ಅನ್ನು 1997ರಲ್ಲಿ ರೂಪುಗೊಳಿಸಿದ ಸುಪ್ರೀಂಕೋರ್ಟಿನಲ್ಲಿ ಮಹಿಳೆಯರ ದೂರು ಪರಿಶೀಲನಾ ಸಮಿತಿ ರೂಪುಗೊಂಡಿದ್ದು 2013ರಲ್ಲಿ! ಭಾರತದ ಬಹುಪಾಲು ಕಚೇರಿಗಳಂತೆ ನ್ಯಾಯಸ್ಥಾನಗಳ ಆವರಣಗಳಲ್ಲೂ ಲೈಂಗಿಕ ದೌರ್ಜನ್ಯ ದೂರು ನಿರ್ವಹಣಾ ಸಮಿತಿ ರಚನೆಯಾಗಿಲ್ಲ. ಸ್ವತಃ ದೌರ್ಜನ್ಯಕ್ಕೊಳಗಾಗಿ ದೂರು ನೀಡಿದ್ದ ಇಂದಿರಾ ಜೈಸಿಂಗ್ ಈಗ ಅಂತಹ ಎರಡು ಕೇಸುಗಳನ್ನು ತಾವೇ ವಾದಿಸುತ್ತಿದ್ದಾರೆ. ಹಕ್ಕುಗಳ ಕುರಿತು, ಕಾನೂನು ಬಳಸಿಕೊಳ್ಳಬಹುದಾದ ಅವಕಾಶಗಳ ಕುರಿತು ವಕೀಲೆಯರಿಗೆ ಅರಿವೂ ಇಲ್ಲ, ಧೈರ್ಯವೂ ಇಲ್ಲ ಎಂದವರು ವಿಷಾದಿಸುತ್ತಾರೆ.

ಈ ಎಲ್ಲ ಕಹಿ ವಾಸ್ತವಗಳ ನಡುವೆ ಉಪೇಂದ್ರ ಭಕ್ಷಿ, ಜ. ಎ. ಪಿ. ಷಾ, ಜ. ಜೆ. ಎಸ್. ವರ್ಮಾ ತರಹದ ತಾಯಿ ಮನಸ್ಸಿನ ನ್ಯಾಯಾಧೀಶರಿರುವುದು ಭವಿಷ್ಯ ಕುರಿತು ಒಂದಷ್ಟು ಆಶಾಭಾವನೆ ಹೊಂದುವಂತೆ ಮಾಡಿದೆ. ಹಾಗೆಂದೇ ಎಲ್ಲ ಅಡೆತಡೆ ಮೀರಿಯೂ ಕೆಲವರಾದರೂ ಯಶಸ್ವಿ ವಕೀಲೆಯರು, ಮಹಿಳಾ ನ್ಯಾಯಾಧೀಶರು ಇದ್ದಾರೆ. ಉತ್ತಮ ಬೆಳವಣಿಗೆಯೆಂಬಂತೆ ಆಲ್ ಇಂಡಿಯಾ ಫೆಡರೇಷನ್ ಆಫ್ ವಿಮೆನ್ ಲಾಯರ್ಸ್‌ (ಫೆಡರೇಷನ್ ಆಫ್ ಇಂಟರ್ ನ್ಯಾಷನಲ್ ವಿಮೆನ್ ಲಾಯರ್ಸ್‌ನ ಭಾರತದ ಶಾಖೆ) 2007ರಲ್ಲಿ ರೂಪುಗೊಂಡಿದೆ. ಶೀಲಾ ಅನೀಶ್ ಅದರ ಸ್ಥಾಪಕ ಅಧ್ಯಕ್ಷೆ. ಬೆಂಗಳೂರು ಅದರ ಮುಖ್ಯಕೇಂದ್ರವಾಗಿದೆ. ಈಗ ಅಮಿ ಯಾಜ್ನಿಕ್ ಅಧ್ಯಕ್ಷೆ ಹಾಗೂ ಹೇಮಲತಾ ಮಹಿಷಿ ಉಪಾಧ್ಯಕ್ಷೆ ಆಗಿದ್ದಾರೆ.

ಮಹಿಳಾ ನ್ಯಾಯವಾದಿಗಳ ಸಂಘಟನೆ ಕಹಿ ವಾಸ್ತವಗಳತ್ತ ಗಮನ ಹರಿಸಿ ನ್ಯಾಯಕ್ಕಾಗಿ, ಹಕ್ಕಿಗಾಗಿ ಹೋರಾಡಬಹುದೆಂದು ಆಶಿಸಬಹುದಾಗಿದೆ.

ಆಸ್ಟಿಸಿಯ ಅಥವಾ ಥೆಮಿಸ್ ನ್ಯಾಯದೇವತೆ. ಅವಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಾಗಿರುವವಳು. ಅದು ಪಕ್ಷಪಾತರಹಿತ ಸ್ಥಿತಿಯ ಸೂಚಕ ಎನ್ನಲಾಗುತ್ತದೆ. ಭಯಗೊಳುವುದು, ಆಯ್ದವರಿಗೆ ಅನುಕೂಲ ಮಾಡುವುದನ್ನು ತಡೆಯಬಲ್ಲ ಸ್ಥಿತಿಯ ಕುರುಹಾಗಿ ಬಟ್ಟೆ ಕಟ್ಟಲಾಗಿದೆ. ನ್ಯಾಯದೇವತೆಯ ಎಡಗೈಯಲ್ಲಿ ತಕ್ಕಡಿಯಿದ್ದು ಅದು ವಿಷಯದ ಪರ ವಿರೋಧಗಳೆರಡನ್ನೂ ಸಮತೋಲನಗೊಳಿಸಿ ಆಲಿಸುವುದನ್ನು ಪ್ರತಿನಿಧಿಸುತ್ತದೆ. ಅವಳ ಬಲಗೈಯಲ್ಲಿ ಎರಡಲಗಿನ ಕತ್ತಿಯಿದೆ. ಅದು ತರ್ಕ ಮತ್ತು ವಿಶ್ಲೇಷಣೆ ಎಂಬ ಅಲಗುಗಳಿರುವ, ಶಿಕ್ಷೆಯನ್ನು ಪ್ರತಿನಿಧಿಸುವ ಕತ್ತಿ. ಭಾವುಕಳಾದರೂ ಸಮತೂಕದ ಯೋಚನೆಯಿರುವ; ತಾಯ್ತನದ ಮಮತೆಯಿದ್ದರೂ ತಪ್ಪಿದಲ್ಲಿ ಶಿಕ್ಷಿಸುವ ಹೆಣ್ಣು ನ್ಯಾಯಪರತೆಯ ಪ್ರತಿನಿಧಿಯಂತೆ ಎಂದಿನಿಂದಲೂ ಮನುಷ್ಯರಿಗೆ ಕಂಡಿದ್ದಾಳೆ. ನ್ಯಾಯದೇವತೆ ಪರಿಕಲ್ಪನೆ ರೂಪುಗೊಂಡಿದ್ದೂ ಹಾಗೆಯೇ.

ಆದರೆ ಇವತ್ತಿನ ಸಮಾಜಕ್ಕೆ ಹೆಣ್ಣಿನ ಶಕ್ತಿ, ಸಾಮರ್ಥ್ಯ, ಜ್ಞಾನದಲ್ಲಿ ನಂಬಿಕೆಯೇ ಇಲ್ಲವಾಗಿದೆ. ಒಂದೋ ಹೆಣ್ಣನ್ನು ಅಸಡ್ಡೆಯಿಂದ ಕಾಣುವುದು ಅಥವಾ ಅವರನ್ನು ತಮ್ಮ ರಕ್ಷಣಾ ಕೋಟೆಯೊಳಗೆ ತೆಗೆದುಕೊಂಡು ಪೊರೆಯುವುದು - ಇವೆರಡರಲ್ಲಿ ಒಂದು ಮಾತ್ರ ಹೆಣ್ಣಿನ ಕುರಿತು ಗಂಡಿಗಿರುವ ಸಾಮಾನ್ಯ ಧೋರಣೆ. ಅದರಾಚೆಗೆ ಸ್ನೇಹ-ಸಮಾನತೆ-ಸಮಾನ ಗೌರವದ ನೆಲೆಯಲ್ಲಿ ಸಹಬಾಳ್ವೆ ರೂಪಿಸುವುದು ಅವಶ್ಯವಾಗಿದೆ. ವಕೀಲಿಕೆಯೋ, ವೈದ್ಯಕೀಯವೋ, ರಾಜಕಾರಣವೋ, ಚಳವಳಿಯೋ ಎಲ್ಲ ಕಡೆ ಮಹಿಳಾ ಭಾಗವಹಿಸುವಿಕೆಗೆ ಅವಕಾಶ ಮತ್ತು ಸಮಾನ ಗೌರವ ಇವತ್ತಿನ ತುರ್ತಾಗಿದೆ.

(ಈ ಬರಹದಲ್ಲಿ ‘ದ ವೀಕ್’ ಇಂಗ್ಲಿಷ್ ಸಾಪ್ತಾಹಿಕದ ಬರಹ ಮತ್ತು ಕಾನೂನು ಅಂತರ್ಜಾಲ ತಾಣಗಳ ಮಾಹಿತಿ ಬಳಸಿಕೊಳ್ಳಲಾಗಿದೆ.)

 ಈಗ ಕ್ರಿಯಾಶೀಲರಾಗಿರುವ ಇಬ್ಬರು ಕನ್ನಡತಿ ನ್ಯಾಯಮೂರ್ತಿ ಪರಿಚಯ

ಮಂಜುಳಾ ಚೆಲ್ಲೂರ್

ಕರ್ನಾಟಕ ಹೈಕೋರ್ಟಿನ ಮೊದಲ ನ್ಯಾಯಾಧೀಶೆ ಜಸ್ಟಿಸ್ ಮಂಜುಳಾ ಚೆಲ್ಲೂರ್. ಬಳ್ಳಾರಿಯ ಮಂಜುಳಾ ಪದವಿ ತನಕ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದರು. ನಂತರ ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದು, ಇಂಗ್ಲೆಂಡಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಿದರು. ವಾಪಸಾದ ಮೇಲೆ ಬಳ್ಳಾರಿ ಕೋರ್ಟುಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಎರಡೂ ಕೇಸುಗಳ ತೆಗೆದುಕೊಂಡರು. ಹಾಗೆ ಅಲ್ಲಿ ಕೇಸು ವಾದಿಸಿದ ಮೊದಲ ಮಹಿಳಾ ನ್ಯಾಯವಾದಿ ಅವರು. 1988ರಲ್ಲಿ ಕೋಲಾರ ಹಾಗೂ ನಂತರ ಮೈಸೂರಿನ ಸೆಷನ್ಸ್ ಜಡ್ಜ್ ಆದ ಅವರಿಗೆ ವಿಜಯಪುರದ ಮಹಿಳಾ ವಿವಿ 2012ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ. 2000ನೇ ಇಸವಿಯಲ್ಲಿ ಕರ್ನಾಟಕ ಹೈಕೋರ್ಟಿನ ಜಡ್ಜ್ ಆದ ಅವರು 2012ರಲ್ಲಿ ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ, 2014ರಲ್ಲಿ ಕೋಲ್ಕತಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಆಗಿ ಈಗ ಮುಂಬೈ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಕೇರಳದಲ್ಲಿದ್ದಾಗ ರಾಜ್ಯಸಭೆಯ ಉಪಸಭಾಪತಿ ಪಿ.ಜೆ.ಕುರಿಯನ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸರಕಾರ ತನಿಖೆ ನಡೆಸಿ ವರದಿ ಕೊಡುವಂತೆ ಆದೇಶಿಸಿದ್ದರು. ವಿರೋಧಪಕ್ಷದ ನಾಯಕ ವಿ.ಎಸ್. ಅಚ್ಯುತಾನಂದನ್ ಅವರಿಗೆ ಐಸ್ ಕ್ರೀಂ ಪಾರ್ಲರ್ ಪ್ರಕರಣದಲ್ಲಿ ಬೇಗ ಹಿಯರಿಂಗ್ ಮುಗಿಸಿ ಹೋಗಲು ಅವಕಾಶ ಕೊಡದೆ ಎಲ್ಲರಂತೆ ಅವರ ಸರದಿ ಬರುವವರೆಗೂ ಕಾಯುವಂತೆ ಮಾಡಿ ಸುದ್ದಿಯಾಗಿದ್ದರು. ಒಟ್ಟಾರೆ ಹೈಪ್ರೊಫೈಲ್ ಪ್ರಕರಣಗಳನ್ನೂ ದಿಟ್ಟವಾಗಿ, ನ್ಯಾಯಯುತವಾಗಿ ಬಗೆಹರಿಸುವ ಜಸ್ಟಿಸ್ ಮಂಜುಳಾ ಚೆಲ್ಲೂರ್ ಮುಂದೊಂದು ದಿನ ಸುಪ್ರೀಂಕೋರ್ಟ್ ನ್ಯಾಯಯಮೂರ್ತಿ ಆದಾರು. ಅತ್ಯುಚ್ಚ ಸ್ಥಾನವೂ ಅವರಿಗೊಲಿದೀತೆಂದು ಆಶಿಸಬಹುದು.

ಫ್ಲೇವಿಯಾ ಆಗ್ನೆಸ್

ಮಂಗಳೂರು ಬಳಿಯ ಕದ್ರಿಯ ಫ್ಲೇವಿಯಾ ಆಗ್ನೆಸ್ (1947) 1988ರಿಂದ ಮುಂಬೈ ಹೈಕೋರ್ಟಿನಲ್ಲಿ ವೃತ್ತಿ ನಡೆಸುತ್ತಿರುವವರು. ಪ್ರೌಢಶಾಲೆಯವರೆಗೆ ಚಿಕ್ಕಮ್ಮನೊಡನೆ ಮಂಗಳೂರಿನಲ್ಲಿದ್ದು ವಿದ್ಯಾಭ್ಯಾಸ ಪಡೆವಾಗ ತಂದೆ ಯೆಮನಿನ ಆಡೆನ್ನಿನಲ್ಲಿದ್ದರು. ಆ ಹೊತ್ತಿಗೆ ಚಿಕ್ಕಮ್ಮ ತೀರಿಕೊಂಡರೆಂದು ತಂದೆಯ ಬಳಿ ಹೋದರೆ ಅವರೂ ಅಕಾಲ ಮರಣ ಹೊಂದಿದರು. ಕುಟುಂಬ ಮಂಗಳೂರಿಗೆ ಮರಳಿತು. ವಿದ್ಯೆ ಮೊಟಕುಗೊಳಿಸಿ ಅವರ ಮದುವೆ ಮಾಡಲಾಯಿತು. ಆದರೆ ಕೌಟುಂಬಿಕ ಬದುಕಿನಲ್ಲಿ ಸಾಕಷ್ಟು ಹಿಂಸೆ ಅನುಭವಿಸಿ, ಕ್ರೈಸ್ತ ಧರ್ಮದ ಪ್ರಕಾರ ವಿಚ್ಛೇದನ ಸಿಗದೆ, ಕೊನೆಗೆ ಕೋರ್ಟಿನ ಮೊರೆ ಹೋಗಿ ವಿಚ್ಛೇದನ, ಮಕ್ಕಳ ಕಸ್ಟಡಿ ಪಡೆದರು. ಸ್ವಂತ ಅನುಭವಗಳೇ ಅವರನ್ನು ಹೋರಾಟಗಾರ್ತಿಯಾಗಿ ರೂಪಿಸಿದವು.

ಮದುವೆಯಾಗುವಾಗ ಬರಿಯ ಎಸೆಸೆಲ್ಸಿ ಪಾಸು ಮಾಡಿದ್ದವರು ನಂತರ ವಿದ್ಯಾಭ್ಯಾಸ ಮುಂದುವರಿಸಿದರು. ಡಿಗ್ರಿ ಮುಗಿಸಿ ಕಾನೂನು ಪದವಿ ಪಡೆದು 1988ರಲ್ಲಿ ಮುಂಬೈ ಹೈಕೋರ್ಟಿನಲ್ಲಿ ವಕೀಲಿಕೆ ಶುರು ಮಾಡಿದರು. 1992ರಲ್ಲಿ ಸ್ನಾತಕೋತ್ತರ ಎಲ್‌ಎಲ್‌ಎಂ ಪಡೆದು ನಂತರ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲಿನಲ್ಲಿ ಎಂ.ಫಿಲ್ ಮುಗಿಸಿ (1997) ಅಲ್ಲೇ ಗೌರವ ಪ್ರಾಧ್ಯಾಪಕರಾದರು. ಅವರು ಕೌಟುಂಬಿಕ, ವೈವಾಹಿಕ, ಆಸ್ತಿ ಕಾನೂನು ಪರಿಣಿತರು. ನಟಿ, ನಿರ್ದೇಶಕಿ, ಕಲಾವಿದೆ ಮಧುಶ್ರೀ ದತ್ತಾ ಅವರೊಡನೆ 1990ರಿಂದ ‘ಮಜ್ಲಿಸ್’ ಎಂಬ ಮಹಿಳೆ ಮತ್ತು ಕಾನೂನು ಸಲಹಾ ಕೇಂದ್ರ ನಡೆಸುತ್ತಿದ್ದಾರೆ. ಇದುವರೆಗೆ 50 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಅವರ ಸಂಸ್ಥೆ ಕಾನೂನು ಸಹಾಯ ನೀಡಿದೆ. ಅವರಲ್ಲಿ ಹೆಚ್ಚಿನವರು ಅನಾಥರು. ಇದರ ಮೂರುಪಟ್ಟು ಜನರಿಗೆ ಕಾನೂನು ಸಲಹೆ ನೀಡಿದ್ದಾರೆ. ನಿರ್ಭಯಾ ಪ್ರಕರಣ ಮತ್ತು ಶಕ್ತಿ ಮಿಲ್ ಅತ್ಯಾಚಾರ ಪ್ರಕರಣದ ವೇಳೆ ಆರೋಪಿಗಳಿಗೆ ಮರಣದಂಡನೆ ವಿಧಿಸಿದಾಗ ಅದನ್ನು ವಿರೋಧಿಸಿದರು. ಅಷ್ಟೇ ಅಲ್ಲ, ಮರಣದಂಡನೆ ಶಿಕ್ಷೆ ಪಡೆಯುವವರ ವರ್ಗ ಹಿನ್ನೆಲೆ ವಿಶ್ಲೇಷಿಸಿ ಅದು ರದ್ದಾಗಬೇಕೆಂದೂ ಕೋರಿದ್ದರು. ಇವತ್ತಿಗೂ ಮಹಿಳಾ ಪರ ಕಾನೂನು ಕುರಿತ ಚರ್ಚೆ ಬಂದರೆ ಅಲ್ಲಿ ಎದ್ದು ಕಾಣುವ ಹೆಸರು ಅವರದು.

Writer - ಡಾ.ಎಚ್.ಎಸ್.ಅನುಪಮಾ

contributor

Editor - ಡಾ.ಎಚ್.ಎಸ್.ಅನುಪಮಾ

contributor

Similar News

ಜಗದಗಲ
ಜಗ ದಗಲ