ಇಂತಹ ಹತಾಶ ದುಃಸ್ಥಿತಿ ಇವರಿಗೆ ಬರಬಾರದಿತ್ತು
ಮಾನ್ಯರೆ,
ಬಿಜೆಪಿ ಮತ್ತು ಸಂಘ ಪರಿವಾರಿಗರು ಮೊದಲು ಸ್ವಾಮಿ ವಿವೇಕಾನಂದರನ್ನು ಹೈಜಾಕ್ ಮಾಡಿದರು, ಆದರೆ ವಿವೇಕಾನಂದರು ಜಾತಿವಾದಿ ಬಂಗಾಳಿ ವೈದಿಕರ ವಿರುದ್ಧ ಸೆಟೆದು ನಿಂತವರು ಎಂದು ಗೊತ್ತಾದ ಮೇಲೆ ವಿವೇಕಾನಂದರ ಕುರಿತ ತಮ್ಮ ಕೃತ್ರಿಮ ಅಭಿಮಾನ ಕಡಿಮೆ ಮಾಡಿದರು. ನಂತರ ಅವರು ಶಿವಾಜಿಯನ್ನು ಹೈಜಾಕ್ ಮಾಡಿದರು. ಆದರೆ ಶಿವಾಜಿಯ ನೌಕಾ ಪಡೆಯಲ್ಲಿ ಅರ್ಧದಷ್ಟು ಮುಸ್ಲಿಂ, ಸಿದ್ದಿ ಸೈನಿಕರು ಇದ್ದರು ಹಾಗೂ ಶಿವಾಜಿಯು ಔರಂಗಜೇಬನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದವನು ಔರಂಗಜೇಬನ ಒಬ್ಬ ಮುಸ್ಲಿಂ ಸೇನಾಪತಿ ಎಂದು ಇತಿಹಾಸಕಾರರು ಹೇಳಿದ ಮೇಲೆ ಶಿವಾಜಿಯ ಬಗ್ಗೆಯೂ ಸಂಘ ಪರಿವಾರಿಗರ ಅಭಿಮಾನ ತಣ್ಣಗಾಯಿತು. ಈಗ ಗುಜರಾತ್ ಚುನಾವಣೆ ಬಂದಿರುವಾಗ ಪರಿವಾರದಲ್ಲಿ ಯಾವುದೇ ಗುಜರಾತಿ ಸ್ವಾತಂತ್ರ್ಯ ಹೋರಾಟಗಾರ ಇಲ್ಲವೇ ಇಲ್ಲ ಎಂದು ಗೊತ್ತಾದ ಮೇಲೆ ಕಾಂಗ್ರೆಸ್ನ ಸರ್ದಾರ್ ಪಟೇಲರನ್ನು ಹೈಜಾಕ್ ಮಾಡುತ್ತಿದ್ದಾರೆ.
ಒಟ್ಟಾರೆ ದೇಶಕ್ಕಾಗಿ ಅಥವಾ ಧರ್ಮಕ್ಕಾಗಿ ಬಲಿದಾನ ಮಾಡಿದ ಯಾವುದೇ ಮಹಾಪುರುಷ ತಮ್ಮ ಸಂಘಪರಿವಾರದಲ್ಲಿ 1925ರಿಂದಲೂ ಇರಲಿಲ್ಲವೆಂದು ಅರಿತ ಅವರು ಈಗ ಬೇರೆ ಕಡೆಯಿಂದ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ಮಹಾಪುರುಷರನ್ನು ಹೈಜಾಕ್ ಮಾಡಿ ತಮ್ಮದು ದೀರ್ಘ ಇತಿಹಾಸವುಳ್ಳ ದೊಡ್ಡ ದೇಶಪ್ರೇಮಿಗಳ ಸಂಘಟನೆ ಎಂಬ ಫೋಸು ಕೊಡುತ್ತಿದ್ದಾರೆ. ಇಂತಹ ಹತಾಶ ದುಸ್ಥಿತಿ ಇವರಿಗೆ ಬರಬಾರದಿತ್ತು.