ನ್ಯಾಯದ ವರದಿಗಾರಿಕೆಯ ಮೇಲಿನ ನಿರ್ಬಂಧ!

Update: 2017-12-14 18:31 GMT

ನ್ಯಾಯ ಪ್ರಕ್ರಿಯೆಯನ್ನು
ಎಷ್ಟು ನಿಷ್ಪಕ್ಷಪಾತವಾಗಿ ನಡೆಸಲಾಗುತ್ತಿದೆಯೆಂಬುದರ ಮೇಲೆ ಸಾರ್ವಜನಿಕರು ನ್ಯಾಯಾಂಗದ ಮೇಲೆ ವಿಶ್ವಾಸವನ್ನಿಡುತ್ತಾರೆ. ‘ದೊಡ್ಡ ಪ್ರಕರಣ’ಗಳಲ್ಲಿ ವರದಿಗಾರಿಕೆಯ ಮೇಲೆ ನಿರ್ಬಂಧವನ್ನು ಹೇರುವ ಕ್ರಮಗಳು ಅಭಿವ್ಯಕ್ತಿ ಸ್ವಾತಂತ್ರದ ಮೇಲೂ ನಿರ್ಬಂಧ ಹೇರುತ್ತಿದೆ. ಮಾತ್ರವಲ್ಲದೆ ಆ ಮೂಲಕ ಸಾರ್ವಜನಿಕರಿಗೆ ನ್ಯಾಯಾಂಗದ ಮೇಲೆ ಇರುವ ವಿ್ವಾಸಕ್ಕೂ ಧಕ್ಕೆಯುಂಟುಮಾಡುತ್ತಿದೆ.

ಮುಕ್ತ ನ್ಯಾಯ ಪದ್ಧತಿಯು ಭಾರತದ ನ್ಯಾಯಾಂಗ ವ್ಯವಸ್ಥೆಯ ಒಂದು ಪ್ರಮುಖ ಲಕ್ಷಣವಾಗಿದೆ. ತಾತ್ವಿಕವಾಗಿ ನೋಡುವುದಾದರೆ ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸಲು ಎಲ್ಲ ಸಾರ್ವಜನಿಕರಿಗೂ ಹಾಗೂ ಅದನ್ನು ವರದಿ ಮಾಡಲು ಮಾಧ್ಯಮದವರಿಗೂ ಮುಕ್ತ ಅವಕಾಶವಿದೆ. ಆದರೆ ವಾಸ್ತವದಲ್ಲಿ ಬಹುಪಾಲು ನ್ಯಾಯಾಲಯಗಳ ಆವರಣವು ಕಿರಿದಾಗಿದ್ದು ನ್ಯಾಯಾಲಯದ ಕಲಾಪಗಳು ಸುಗಮವಾಗಿ ನಡೆಯುವ ಸಲುವಾಗಿ ಸಂಭವನೀಯ ಅಡಚಣೆಗಳನ್ನು ತಡೆಗಟ್ಟುವ ಅಗತ್ಯವಿದ್ದೇ ಇರುತ್ತದೆ. ಹೀಗಾಗಿ ನ್ಯಾಯಾಲಯದ ಒಳಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿತವಾಗಿಯೇ ಇರುತ್ತಿದ್ದು, ನ್ಯಾಯಾಲಯದ ಒಳಗೆ ನಡೆದ ಕಲಾಪಗಳ ನಿಖರವಾದ ಮತ್ತು ಸರಿಯಾದ ಮಾಹಿತಿಯನ್ನು ಪಡೆಯಲು ಸಾರ್ವಜನಿಕರು ಸಾಮಾನ್ಯವಾಗಿ ಪತ್ರಕರ್ತರನ್ನೇ ಆಶ್ರಯಿಸುತ್ತಾರೆ. ಯಾವ್ಯಾವ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗಳು ಹೆಚ್ಚಿರುತ್ತವೋ ಅಂಥ ಪ್ರಕರಣಗಳಲ್ಲಿ ಸಾರ್ವಜನಿಕರ ಕುತೂಹಲವೂ ಹೆಚ್ಚಿರುತ್ತದೆ. ಹೀಗಾಗಿ ನ್ಯಾಯಾಲಯಗಳು ಅಂಥಾ ಪ್ರಕರಣಗಳನ್ನು ಯಾವುದೇ ಅನಗತ್ಯ ಟೀಕೆಗಳಿಗೆ ಗುರಿಯಾಗದಂತೆ ನಡೆಸುವ ಅಗತ್ಯವೂ ಹೆಚ್ಚಿರುತ್ತದೆ. ಒಂದು ಪ್ರಕರಣದ ಬಗ್ಗೆ ನ್ಯಾಯಾಲಯವು ಅಂತಿಮವಾಗಿ ಕೊಡುವ ತೀರ್ಪು ಏನೇ ಆಗಿದ್ದರೂ, ಅದಕ್ಕಾಗಿ ಅನುಸರಿಸಿದ ಪ್ರಕ್ರಿಯೆ ಎಷ್ಟು ನ್ಯಾಯಸಮ್ಮತ ಮತ್ತು ಕಾನೂನುಬದ್ಧವಾಗಿತ್ತು ಎಂಬುದರ ಆಧಾರದ ಮೇಲೆಯೇ ಸಾರ್ವಜನಿಕರು ನ್ಯಾಯಾಂಗದ ಮೇಲಿಟ್ಟಿರುವ ವಿಶ್ವಾಸವು ದೃಢಗೊಳ್ಳುತ್ತದೆ. ಸರಕಾರದ ಇತರ ಯಾವುದೇ ಅಂಗಸಂಸ್ಥೆಗಳಿಗಿಂತ ಭಿನ್ನವಾಗಿ ನ್ಯಾಯಾಂಗ ಪ್ರಕ್ರಿಯೆಯನ್ನು ಮಾತ್ರ ಸಾರ್ವಜನಿಕರು ಗಮನಿಸುವಂತೆ ಮತ್ತು ಅದರ ಮೂಲಕ ಆ ಸಂಸ್ಥೆಯ ಪ್ರಾಮಾಣಿಕತೆಯ ಬಗ್ಗೆ ವಿಶ್ವಾಸವನ್ನು ಪಡೆದುೊಳ್ಳುವಂತೆ ಮುಕ್ತವಾಗಿರಿಸಲಾಗಿದೆ.

ಆದರೆ ಈ ನಿಯಮವನ್ನು ಉಲ್ಲಂಘಿಸಿದರೆ ಏನು ಪರಿಣಾಮ ಗಳುಂಟಾಗಬಹುದೆಂಬ ಪರಿಜ್ಞಾನ ಮತ್ತು ಕಾಳಜಿಯೇ ಇಲ್ಲದಂತೆ ನ್ಯಾಯಾಲಯಗಳೇ ಈ ಪದ್ಧತಿಯನ್ನು ಉಲ್ಲಂಘಿ ಸುತ್ತಿವೆ. ಇದು ಅತ್ಯಂತ ವಿಷಾದಕರ. ಇತ್ತೀಚಿನ ಎರಡು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಖುದ್ದು ನ್ಯಾಯಾಲಯವೇ ಮಾಧ್ಯಮದ ವರನ್ನು ಹೊರಗಿಡುವ ಮೂಲಕ ದಮನಕಾರಿ ಪ್ರವೃತ್ತಿಯನ್ನು ಅನುಸರಿಸಿದೆ. ಅದರಲ್ಲಿ ಮೊದಲನೆಯದು ಸೊಹ್ರಾಬುದ್ದೀನ್ ಮತ್ತಿತರರ ಹತ್ಯೆಯ ಪ್ರಕರಣದಲ್ಲಿ ಆರೋಪಕ್ಕೊಳಗಾಗಿರುವ ಹಲವು ಪೊಲೀಸ್ ಅಧಿಕಾರಿಗಳ ಕ್ರಿಮಿನಲ್ ವಿಚಾರಣೆಯ ಪ್ರಕರಣ. ಮತ್ತೊಂದು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಮಾಡಿದ್ದ ದ್ವೇಷ ಭಾಷಣದ ಪ್ರಕರಣದ ಹಿನ್ನೆಲೆಯಲ್ಲಿ ಅವರ ಮೇಲೆ ಮೊಕದ್ದಮೆ ಹೂಡಲು ಅನುಮತಿ ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ. ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಎರಡೂ ಸಹ ‘ದೊಡ್ಡ ಪ್ರಕರಣ’ಗಳಾಗಿದ್ದು ಅದರ ಫಲಿತಾಂಶವೇನಾಗಹುದೆಂಬ ಬಗ್ಗೆ ಅಪಾರವಾದ ಸಾರ್ವಜನಿಕ ಅಸಕ್ತಿಯಿದೆ.

ಇದೇ ಬಗೆಯ ದಮನಕಾರಿ ಆದೇಶಗಳನ್ನು ಇದಕ್ಕಿಂತ ಭಿನ್ನ ಸನ್ನಿವೇಶಗಳಲ್ಲೂ ನೀಡಲಾಗಿದೆ. ಮುಂಬೈನ್ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರು ತಾವು ವಿಚಾರಣೆ ನಡೆಸುತ್ತಿದ್ದ ಪ್ರಕರಣದ ದೈನಂದಿನ ವರದಿಗಳನ್ನು ವರದಿ ಮಾಡಬಾರದೆಂದು ಆದೇಶ ನೀಡಿದ್ದರು. ಅಂಥ ವರದಿಯಿಂದ ಆರೋಪಿಗಳು, ಎರಡು ಕಡೆಯ ವಕೀಲರು ಮತ್ತು ಸಾಕ್ಷಿಗಳು ಪ್ರಭಾವಿತರಾಗಿ ನ್ಯಾಯಸಮ್ಮತ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ ಎಂಬುದು ಅದಕ್ಕೆ ಕಾರಣವಾಗಿತ್ತು. ಆದರೂ, ಮಾಧ್ಯಮದವರು ವಿಚಾರಣೆಯ ಸಂದರ್ಭದಲ್ಲಿ ಹಾಜರಿದ್ದು, ದೈನಂದಿನ ಬೆಳವಣಿಗೆಯ ಬಗ್ಗೆ ಟಿಪ್ಪಣಿ ತೆಗೆದುಕೊಳ್ಳಲು ಅನುವುಮಾಡಿಕೊಡಲಾಗಿತ್ತು. ಆದರೆ ವಿಚಾರಣೆಯು ಪೂರ್ಣಗೊಂಡ ನಂತರದಲ್ಲೇ ವರದಿಯನ್ನು ಪ್ರಕಟಿಸಬೇಕೆಂದು ನಿರ್ಬಂಧಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಆರೋಪಿಗಳ ವಕೀಲರು ಕೈಬರಹದಲ್ಲಿ ನೀಡಿದ ಅರ್ಜಿಯನ್ನು ಬಿಟ್ಟರೆ ಬೇರೆ ಇನ್ಯಾವ ಆಧಾರದಲ್ಲಿ ನ್ಯಾಯಾಲಯವು ಈ ವಿಶೇಷ ನಿರ್ಬಂಧಗಳನ್ನು ಹೆೀರಿತ್ತೆಂಬುದರ ಬಗ್ಗೆ ಸ್ಪಷ್ಟತೆಯಿಲ್ಲ.

 ಮತ್ತೊಂದು ಕಡೆ ಅಲಹಾಬಾದ್ ಹೈಕೋರ್ಟು ನ್ಯಾಯಾದೇಶದ ಅಂತಿಮ ಘೋಷಣೆಯಾಗುವವರೆಗೂ ಯಾವುದೇ ಮಾಧ್ಯಮ ದವರು ನ್ಯಾಯಾಲಯದ ನಡಾವಳಿಗಳನ್ನು ಪ್ರಕಟಿಸ ಬಾರದೆಂಬ ಆದೇಶವನ್ನು ಹೊರಡಿಸಿದ್ದರು. ಅದಕ್ಕೆ ಇಂತಹ ನಡಾವಳಿಗಳ ತಪ್ಪುವರದಿಗಳ ಬಗ್ಗೆ ಹೆಚ್ಚುವರಿ ಸರಕಾರಿ ವಕೀಲರು ನೀಡಿದ ಕೆಲವು ಉದಾಹರಣೆಗಳು ಆಧಾರವಾಗಿತ್ತು. ಆದರೆ ಯಾವ ಪತ್ರಿಕೆಯ ಯಾವ ನಿರ್ದಿಷ್ಟ ವರದಿಯು ತಪ್ಪಾಗಿ ವರದಿಯಾಗಲ್ಪಟ್ಟಿದೆ ಎಂಬು ದನ್ನು ನ್ಯಾಯಾಲಯವು ಎಲ್ಲಿಯೂ ಸ್ಪಷ್ಟಪಡಿಸಿಲ್ಲ. ಹಾಗೆಯೇ ಅಂಥ ವರದಿಯನ್ನು ಪ್ರಕಟಿಸಿದ ಪತ್ರಕರ್ತರು ಈ ತಪ್ಪುವ್ಯಾಖ್ಯಾನದ ಆರೋಪವನ್ನು ಅಲ್ಲಗಳೆಯಲು ಅಥವಾ ಸಮರ್ಥಿಸಿಕೊಳ್ಳಲು ಯಾವ ಅವಕಾಶವನ್ನೂ ನೀಡಲಿಲ್ಲ. ಆದರೂ ಅಂತಿಮ ಆದೇಶ ನೀಡುವವರೆಗೂ ನಡಾವಳಿಗಳನ್ನು ಪ್ರಕಟಿಸಬಾರದೆಂದು ನ್ಯಾಯಾಲಯವು ಮಾಧ್ಯಮವನ್ನು ನಿಯಂತ್ರಿಸಿಬಿಟ್ಟಿತು.

ಎರಡೂ ಪ್ರಕರಣಗಳಲ್ಲಿ ನ್ಯಾಯಾಲಯಗಳು ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಮತ್ತು ಸೆಕ್ಯುರಿಟಿ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟು 2010ರಲ್ಲಿ ನೀಡಿದ ಮಾರ್ಗದರ್ಶಿ ಆದೇಶಕ್ಕೆ ಅಗೌರವ ತೋರುತ್ತಿದೆ. ಈ ಪ್ರಕರಣವನ್ನು ಆಲಿಸುತ್ತಿದ್ದ ಸಾಂವಿಧಾನಿಕ ಪೀಠವು ನ್ಯಾಯಾಲಯಗಳು ಒಂದೊಮ್ಮೆ ನಡಾವಳಿಗಳ ಬಗೆಗಿನ ವರದಿಗಾರಿಕೆಯನ್ನು ಮಾಡಬಾರದೆಂದು ಆದೇಶಿಸಬೇಕಾಗಿ ಬಂದಲ್ಲಿ ಅಂತಹ ಒಂದು ಆದೇಶ ನ್ಯಾಯದಾನಕ್ಕೆ ಮಾಡುವ ಲಾಭ ಮತ್ತು ನಿರ್ಬಂಧದಿಂದ ಆಗುವ ನಷ್ಟಗಳ ನಡುವಿನ ಅನುಪಾತವನ್ನು ಹಾಗೂ ನಿರ್ಬಂಧದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಳ್ಳ ಬೇಕೆಂದು ಹೇಳಿತ್ತು. ವರದಿಗಾರಿಕೆಯ ಮೇಲೆ ನಿರ್ಬಂಧ ಹೇರುವ ಮುನ್ನ ನ್ಯಾಯಪ್ರಕ್ರಿಯೆಯ ಋಜುತ್ವವನ್ನು ಕಾಪಾಡಿ ಕೊಳ್ಳಲು ಬೇರೆ ಯಾವ ಮಾರ್ಗವೂ ಇಲ್ಲವೆಂಬ ಬಗ್ಗೆ ಹಾಗೂ ಯಾವುದೇ ಮಧ್ಯಪ್ರವೇಶವಿಲ್ಲದೆ ವಿಚಾರಣೆಯು ನಡೆಯಲು ವರದಿಯ ಮುಂದೂಡಿಕೆಯೇ ಏಕೈಕ ಮಾರ್ಗವೆಂಬ ಬಗ್ಗೆ ಕೋರ್ಟು ನಿಶ್ಚಿತವಾಗಿ ಮನವರಿಕೆ ಮಾಡಿಕೊಳ್ಳಬೇಕು. ಆದರೆ ಮೇಲಿನ ಎರಡೂ ಪ್ರಕರಣಗಳಲ್ಲಿ ಮಾಧ್ಯಮಗಳ ವರದಿಗಾರಿಕೆಯ ಮೇಲೆ ನಿರ್ಬಂಧ ಹೇರುವ ಮುನ್ನ ನ್ಯಾಯಾಲಯಗಳು ಸುಪ್ರೀಂ ಕೋರ್ಟು ಹೇಳಿದ್ದ ಯಾವ ಶರತ್ತುಗಳನ್ನೂ ಪಾಲಿಸಿಲ್ಲ.

 ಮಾಧ್ಯಮಗಳ ಮೇಲೆ ನಿರ್ಬಂಧ ಹೇರುತ್ತಿರುವ ಪ್ರವೃತ್ತಿ ಕೇವಲ ಆ ಎರಡು ಕೋರ್ಟುಗಳಿಗೆ ಮಾತ್ರ ಸೀಮಿತವಾದದ್ದೇನಲ್ಲ. ಇಂಥ ಒಂದು ವಿಷಾದನೀಯ ಮೇಲ್ಪಂಕ್ತಿಯನ್ನು ಇತ್ತೀಚೆಗೆ ಸ್ವಯಂ ಸುಪ್ರೀಂ ಕೋರ್ಟೇ ಹಾಕಿಕೊಟ್ಟಿದೆ. ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಆಚರಣೆಯಲ್ಲಿದ್ದ ಪೂಜಾ ವಿಧಾನಗಳ ಬಗ್ಗೆ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಾಜರಿದ್ದ ಪತ್ರಕರ್ತರಿಗೆ ಅದನ್ನು ವರದಿ ಮಾಡಬಾರದೆಂದು ಸುಪ್ರೀಂ ಕೋರ್ಟು ಮೌಖಿಕವಾಗಿ ತಾಕೀತು ಮಾಡಿತ್ತು. ವಿಪರ್ಯಾಸವೆಂದರೆ ಪ್ರಕರಣದ ಸಂದರ್ಭ ಮತ್ತು ಸನ್ನಿವೇಶಗಳ ಪರಿವೆಯಿಲ್ಲದೆ ಮಾಡುವ ವರದಿಯು ತಪ್ಪಾಗಿರುತ್ತದೆಂಬ ಕಾರಣದಿಂದ ನಡಾವಳಿಯ ವರದಿಯನ್ನು ನಿರ್ಬಂಧಿಸಲಾಯಿತಾದರೂ ಅಂತಿಮವಾಗಿ ಹೊರಬಂದ ತೀರ್ಪೇ ತಪ್ಪಾಗಿ ವರದಿಯಾಯಿತು. ಅದೇ ಧೋರಣೆಯ ಮುಂದುವರಿಕೆ ಯಾಗಿ, ಕೋಲ್ಕತಾ ಹೈಕೋರ್ಟಿನ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಸಿ. ಎಸ್. ಕರ್ಣನ್ ಅವರಿಗೆ ಶಿಕ್ಷೆ ವಿಧಿಸಿದ ಆದೇಶದಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ಣನ್ ಅವರ ಯಾವ ಹೇಳಿಕೆಗಳನ್ನೂ ಮಾಧ್ಯಮಗಳು ಪ್ರಕಟಿಸಬಾರದೆಂದು ಸುಪ್ರೀಂ ಕೋರ್ಟು ಆದೇಶಿಸಿತ್ತು. ತನ್ನ ಆದೇಶಗಳಲ್ಲಿ ಸುಪ್ರೀಂ ಕೋರ್ಟು ಹೇಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನ್ಯಾಯಾಲಯಗಳು ವಿಚಾರಶೂನ್ಯತೆ ಮತ್ತು ಸಂವೇದನಾಶೂನ್ಯತೆಗಳನ್ನು ವ್ಯಕ್ತಪಡಿಸುತ್ತಾ ಬಂದಿದೆ ಎಂಬುದಕ್ಕೆ ನಿದರ್ಶನವಾಗಿದೆ.

 ಸಹಾರಾ ಪ್ರಕರಣದಲ್ಲಿ ಸ್ವಯಂ ಸುಪ್ರೀಂ ಕೋರ್ಟೇ ಒಪ್ಪಿಕೊಂಡಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನ್ಯಾಯದಾನದ ನಿರ್ವಹಣೆಯ ಬಗ್ಗೆ ಸಮತೋಲನವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭದ ಕೆಲಸವೇನಲ್ಲ. ಇಂತಹ ಆದೇಶಗಳು ಒಂದೆಡೆ ಪ್ರಕರಣದ ವರದಿಗಾರಿಕೆಯ ಮೇಲೆ ಆಧಾರರಹಿತ ನಿರ್ಬಂಧಗಳನ್ನು ಹೇರುತ್ತವೆ. ಮತ್ತೊಂದೆಡೆ, ಈ ನಿರ್ಬಂಧಗಳಿಗೆ ಸೂಕ್ತವಾದ ಕಾರಣಗಳನ್ನು ಒದಗಿಸದೆ ಅಥವಾ ಸರಿಯಾದ ತರ್ಕನುಪಾತವನ್ನು ಕಾದುಕೊಳ್ಳದೆ ಸಾರ್ವಜನಿಕರಲ್ಲಿ ನ್ಯಾಯಾಂಗದ ಬಗ್ಗೆ ಅಪಾರವಾದ ಸಂದೇಹಗಳನ್ನು ಹುಟ್ಟಿಹಾಕುತ್ತದೆ. ಅದರಲ್ಲೂ ‘ದೊಡ್ಡ ಪ್ರಕರಣ’ಗಳಲ್ಲಿ ಹೇರುವಂಥ ತರ್ಕರಹಿತ ನಿರ್ಬಂಧಗಳು ಇಂತಹ ಅನುಮಾನಗಳನ್ನು ಹೆಚ್ಚೆಚ್ಚು ಹುಟ್ಟಿಸುತ್ತವೆ. ನ್ಯಾಯಪ್ರಕ್ರಿಯೆಯನ್ನು ಎಷ್ಟು ನಿಷ್ಪಕ್ಷಪಾತವಾಗಿ ನಡೆಸಲಾಗುತ್ತಿದೆಯೆಂಬುದರ ಮೇಲೆ ಸಾರ್ವಜನಿಕರು ನ್ಯಾಯಾಂಗದ ಮೇಲೆ ವಿಶ್ವಾಸವನ್ನಿಡುತ್ತಾರೆ. ‘ದೊಡ್ಡ ಪ್ರಕರಣ’ಗಳಲ್ಲಿ ವರದಿಗಾರಿಕೆಯ ಮೇಲೆ ನಿರ್ಬಂಧವನ್ನು ಹೇರುವ ಕ್ರಮಗಳು ಅಭಿವ್ಯಕ್ತಿ ಸ್ವಾತಂತ್ರದ ಮೇಲೂ ನಿರ್ಬಂಧ ಹೇರುತ್ತಿದೆ. ಮಾತ್ರವಲ್ಲದೆ ಆ ಮೂಲಕ ಸಾರ್ವನಿಕರಿಗೆ ನ್ಯಾಯಾಂಗದ ಮೇಲೆ ಇರುವ ವಿ್ವಾಸಕ್ಕೂ ಧಕ್ಕೆಯುಂಟುಮಾಡುತ್ತಿದೆ.

ಕೃಪೆ: Economic and Political Weekly

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ