ಠುಮ್ರಿ ಗಾಯನದ ಅನಭಿಷಿಕ್ತ ರಾಣಿ ಗಿರಿಜಾದೇವಿ

Update: 2017-12-14 18:41 GMT

ಹಿಂದೂಸ್ಥಾನಿ ಸಂಗೀತದ ಪ್ರಕಾರಗಳಲ್ಲಿ ಒಂದಾದ ಹಾಗೂ ಅರೆ ಶಾಸ್ತ್ರೀಯವಾದ ಠುಮ್ರಿ ಗಾಯನದಲ್ಲಿ ಕಳೆದ ಅರುವತ್ತು ವರ್ಷಗಳಿಂದ ತಮ್ಮ ಛಾಪು ಮೂಡಿಸಿದ್ದ ಮತ್ತು ಠುಮ್ರಿ ಗಾಯನದ ರಾಣಿ ಎಂದು ಕರೆಯುಲಾಗುತ್ತಿದ್ದ ಬನಾರಸ್ ಮೂಲದ ಗಿರಿಜಾದೇವಿ ಕಳೆದ ಅಕ್ಟೋಬರ್ 24ರಂದು ಕೋಲ್ಕತಾ ನಗರದಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು. ಇದರೊಂದಿಗೆ ಭವ್ಯವಾದ ಠುಮ್ರಿಯ ಗಾಯನದ ಯುಗವೊಂದು ಭಾರತದಲ್ಲಿ ಅಂತ್ಯಗೊಂಡಂತಾಯಿತು.

ಗಿರಿಜಾ ದೇವಿಯವರು ಇಂದು ಭೌತಿಕವಾಗಿ ನಮ್ಮಡನೆ ಇಲ್ಲವಾದರೂ, ಅವರ ಕಂಠಸಿರಿಯಲ್ಲಿ ಮೊಳಗಿದ ಠುಮ್ರಿ, ಟಪ್ಪಾ, ದ್ರುಪದ್, ಖಯಾಲ್ ಪ್ರಕಾರದ ಗೀತ ಗಾಯನಗಳು ಮತ್ತು ಬಿಹಾರ ಹಾಗೂ ಪೂರ್ವ ಉತ್ತರಪ್ರದೇಶದ ಪ್ರಾದೇಶಿಕ ಜನಪದ ಗೀತೆಗಳು ಸಂಗೀತ ರಸಿಕರ ಎದೆಯಲ್ಲಿ ಜೀವಂತವಾಗಿದ್ದು ಅವರ ಹೆಸರನ್ನು ಹಿಂದೂಸ್ಥಾನಿ ಸಂಗೀತದಲ್ಲಿ ಶಾಶ್ವತಗೊಳಿಸಿವೆ. ಸದಾ ಶ್ವೇತ ವರ್ಣದ ಉಡುಪು, ಬೆಳ್ಳಿಯ ಎಳೆಗಳಂತಹ ಅಚ್ಚ ಬಿಳಿಗೂದಲು, ಸದಾ ಹಣೆಯಲ್ಲಿ ರಾರಾಜಿಸುತ್ತಿದ್ದ ಶ್ರೀಗಂಧದ ತಿಲಕ, ಬಾಯಿತುಂಬಾ ಹಾಕಿಕೊಂಡು ಜಗಿಯುತ್ತಿದ್ದ ಬನಾರಸ್ ತಾಂಬೂಲ, ತಬಲಾ ವಾದಕನನ್ನು ಉತ್ತೇಜಿಸುತ್ತಿದ್ದ ಪರಿ ಇವೆಲ್ಲವೂ ಗಿರಿಜಾದೇವಿಯವರನ್ನು ಸಂಗೀತ ರಸಿಕರು ಮರೆಯಲಾಗದಂತೆ ಮಾಡುವ ಸಂಗತಿಗಳಾಗಿವೆ.

 ಹಿಂದೂಸ್ಥಾನಿ ಸಂಗೀತದ ಪ್ರಕಾರದಲ್ಲಿ ಖಯಾಲ್ ಮತ್ತು ದ್ರುಪದ್ ನಂತರ ಪ್ರಮುಖವಾದ ಠುಮ್ರಿ ಗಾಯನವನ್ನು ಗಂಭೀರವಾದ ಪ್ರಕಾರ ಎಂದು ಪರಿಗಣಿಸುತ್ತಿರಲಿಲ್ಲ. ನಮ್ಮ ಕರ್ನಾಟಕ ಸಂಗೀತದ ಜಾವಳಿ ಪ್ರಕಾರಗಳಂತೆ ಹೆಚ್ಚು ಶೃಂಗಾರ ಸಾಹಿತ್ಯವನ್ನು ವಿಶೇಷವಾಗಿ ಶ್ರೀಕೃಷ್ಣ ಮತ್ತು ರಾಧೆಯ ಕುರಿತಾಗಿ ಇರುವ ಸಾಹಿತ್ಯವನ್ನು ಒಳಗೊಂಡಿರುವ ಠುಮ್ರಿ ಗಾಯನವು ಬನಾರಸ್, ಲಕ್ನೊ ಮತ್ತು ಪಂಜಾಬ್ ಎಂಬ ಮೂರು ಶೈಲಿಗಳನ್ನು ಒಳಗೊಂಡಿದೆ. ಲಕ್ನೋ ಶೈಲಿಯ ಠುಮ್ರಿ ಗಾಯನವು ಅತ್ಯಂತ ಹೆಚ್ಚು ರೋಚಕತೆಯಿಂದ ಮತ್ತು ಶೃಂಗಾರ ಹಾಗೂ ಪ್ರಣಯದ ಭಾವಗಳ ವರ್ಣನೆಯ ವೈಭವದಿಂದ ಕೂಡಿತ್ತು. ಈ ಶೈಲಿಯ ಹಾಡುಗಾರಿಕೆಯಲ್ಲಿ ಗಝಲ್ ರಾಣಿ ಎಂದು ಹೆಸರಾದ ಬೇಗಂ ಅಖ್ತ್ತರ್ ಪ್ರಖ್ಯಾತರಾಗಿದ್ದರು. ಇದಕ್ಕೆ ತದ್ವಿರುದ್ಧವಾಗಿ ಬನಾರಸ್ ಠುಮ್ರಿಯು ಬೋಲ್ ಬನಾವ್ ಶೈಲಿಯಿಂದ ಪ್ರಖ್ಯಾತವಾಯಿತು. ಈ ಶೈಲಿಯನ್ನು ಪೂರಬ್ ಅಂಗ್ ಎಂದೂ ಸಹ ಕರೆಯುತ್ತಾರೆ. ಇದನ್ನು ಮುನ್ನೆಲೆಗೆ ತಂದವರಲ್ಲಿ ಅಜಂಬಾಯ್, ಬಡಿ ಮೋತಿಬಾಯ್, ಸಿದ್ದೇಶ್ವರಿದೇವಿ, ಚನ್ನುಲಾಲ್‌ಮಿಶ್ರಾ ಪ್ರಮುಖರು. ಈ ಪರಂಪರೆಯನ್ನು ಮುಂದುವರಿಸಿದ ಕೀರ್ತಿ ಗಿರಿಜಾದೇವಿಯವರದು. ಠುಮ್ರಿ ಗಾಯನಕ್ಕೆ ಅನುಭಾವದ ಸ್ವರ್ಶವನ್ನು ನೀಡುವುದರ ಜೊತೆಗೆ ಅದನ್ನು ಶುದ್ಧ ಅನುಭಾವದ ಗಾಯನ ಪ್ರಕಾರವಾಗಿ ಪರಿವರ್ತಿಸಿ ಅದಕ್ಕೆ ಘನತೆ ಮತ್ತು ಗೌರವವನ್ನು ತಂದುಕೊಟ್ಟರು. ತಮ್ಮ ಆರು ದಶಕಗಳ ದಣಿವರಿಯದ ಇಂತಹ ಸಂಗೀತ ಸೇವೆಗಾಗಿ ಅವರು ಕೇಂದ್ರ ಸರಕಾರದಿಂದ 1972ರಲ್ಲಿ ಪದ್ಮಶ್ರೀ ಪ್ರಶಸ್ತಿ, 1989ರಲ್ಲಿ ಪದ್ಮಭೂಷಣ ಮತ್ತು 2016ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾದರು.

 1929ರಲ್ಲಿ ಬನಾರಸ್ ನಗರದ ಶ್ರೀಮಂತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಗಿರಿಜಾದೇವಿಯವರು ತಮ್ಮ ಐದನೆಯ ವಯಸ್ಸಿನಲ್ಲಿ ಪ್ರಖ್ಯಾತ ಸಾರಂಗಿ ವಾದಕ ಮತ್ತು ಖ್ಯಾಲ್ ಗಾಯಕ ಸರ್ಜುಪ್ರಸಾದ್ ಮಿಶ್ರಾ ಅವರ ಬಳಿ ಖಯಾಲ್ ಮತ್ತು ಟಪ್ಪಾ ಹಾಗೂ ಠುಮ್ರಿ ಗಾಯನವನ್ನು ಅಭ್ಯಾಸ ಮಾಡಿದರು. ಅವರ ತಂದೆಗೆ ಸಂಗೀತದಲ್ಲಿ ಅಪಾರವಾದ ಆಸಕ್ತಿ ಇದ್ದುದರ ಜೊತೆಗೆ ಹಾರ್ಮೋೀನಿಯಂ ನುಡಿಸುವುದರಲ್ಲಿ ಪ್ರವೀಣರಾಗಿದ್ದರು. ಹಾಗಾಗಿ ತಮ್ಮ ಮನೆಗೆ ಸಂಗೀತ ವಿದ್ವಾಂಸರನ್ನು ಆಹ್ವಾನಿಸುವುದರ ಮೂಲಕ ತಮ್ಮ ಪುತ್ರಿಯ ಸಂಗೀತದ ಆಸಕ್ತಿಯನ್ನು ನಿರಂತರವಾಗಿ ಪೋಷಿಸುತ್ತಾ ಬಂದರು. ಆ ಕಾಲದಲ್ಲಿ ಸ್ವರ ಶುದ್ಧತೆಗಾಗಿ ಸಾರಂಗಿಯ ವಾದನ ದೊಡನೆ ಸಂಗೀತ ಕಲಿಸುವ ಪದ್ಧತಿಯು ಚಾಲ್ತಿಯಲ್ಲಿತ್ತು. ಗಿರಿಜಾದೇವಿಯವರು ಯಮನ್, ಭೈರವಿ, ಬಿಲಾವಲ್ ನಂತಹ ಪ್ರಮುಖ ರಾಗಗಳಲ್ಲಿ ಖಯಾಲ್ ಗಾಯನ ವನ್ನು ಅಭ್ಯಾಸ ಮಾಡಿ, ಆನಂತರ ಠುಮ್ರಿ ಮತ್ತು ಟಪ್ಪಾಗಾಯನವನ್ನು ಕಲಿತರು. ನಂತರದ ದಿನಗಳಲ್ಲಿ ಚಾಂದ್ ಮಿಶ್ರಾ ಎಂಬವರ ಬಳಿ ತಮ್ಮ ಸಂಗೀತಾಭ್ಯಾಸವನ್ನು ಮುಂದುವರಿಸಿದ ಅವರನ್ನು 1944 ರಲ್ಲಿ ಅಲಹಾಬಾದ್ ನಗರ ಶ್ರೀಮಂತ ಕುಟುಂಬಕ್ಕೆ ವಿವಾಹ ಮಾಡಿಕೊಡಲಾಯಿತು. ಐದು ವರ್ಷಗಳ ಕಾಲ ಸಂಗೀತ ಲೋಕದಿಂದ ದೂರವಿದ್ದ ಗಿರಿಜಾದೇವಿಯವರು, ಮಗು ಜನಿಸಿದ ನಂತರ, 1949ರಲ್ಲಿ ಅಲಹಾಬಾದ್ ಅಕಾಶವಾಣಿಯಲ್ಲಿ ಸಂಗೀತ ಕಾರ್ಯಕ್ರಮ ನೀಡುವುದರ ಮೂಲಕ ಪುನಃ ಸಂಗೀತದ ಜೀವನಕ್ಕೆ ಮರಳಿದರು. ಶ್ರೀಮಂತ ಹಾಗೂ ಬ್ರಾಹ್ಮಣ ಕುಟುಂಬದ ಹೆಣ್ಣು ಮಕ್ಕಳು ಸಾರ್ವಜನಿಕವಾಗಿ ಸಂಗೀತ ಕಛೇರಿ ನಡೆಸಿಕೊಡುವುದು ಅಪಮಾನಕರ ಸಂಗತಿ ಎಂದು ಭಾವಿಸಿದ್ದ ಆ ಕಾಲಘಟ್ಟದಲ್ಲಿ ಎಲ್ಲಾ ಸಂಪ್ರದಾಯ ಮತ್ತು ನಂಬಿಕೆಗಳನ್ನು ಬದಿಗೊತ್ತಿದ ಗಿರಿಜಾದೇವಿಯವರು ತಮ್ಮ ತಾಯಿ ಮತ್ತು ಅಜ್ಜಿಯವರ ವಿರೋಧವನ್ನು ಲೆಕ್ಕಿಸಿದೆ ಬಿಹಾರದಲ್ಲಿ 1951ರಲ್ಲಿ ಪ್ರಥಮ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು.

1960ರಲ್ಲಿ ಕೋಲ್ಕತಾ ನಗರದಲ್ಲಿದ್ದ ಐ.ಟಿ.ಸಿ. ಕಂಪೆನಿಯ ಸಂಗೀತ್ ರೀಸರ್ಚ್ ಅಕಾಡಮಿ ಸಂಸ್ಥೆಗೆ ಸಂಗೀತ ಉಪನ್ಯಾಸಕಿಯಾಗಿ ಸೇರಿದ ಅವರು ನೂರಾರು ಶಿಷ್ಯ ಶಿಷ್ಯೆಯರನ್ನು ತಯಾರು ಮಾಡಿದರು. 1980ರಿಂದ 2009ರವರೆಗೆ ಬನಾರಸ್‌ನ ಹಿಂದೂ ವಿಶ್ವ ವಿದ್ಯಾನಿಲಯ ದಲ್ಲಿ ಸೇವೆ ಸಲ್ಲಿಸುತ್ತಾ, ದೇಶದ ವಿವಿಧ ಭಾಗಗಳಲ್ಲಿ ಸಂಗೀತ ಕಛೇರಿ ನಡೆಸಿಕೊಡುತ್ತಾ ಠುಮ್ರಿ ಗಾಯನವನ್ನು ಜನಪ್ರಿಯಗೊಳಿಸಿದರು.

15ನೇ ಶತಮಾನದಿಂದಲೂ ಅಸ್ತಿತ್ವದಲ್ಲಿರುವ ಠುಮ್ರಿ ಗಾಯನವು 20ನೇ ಶತಮಾನದಲ್ಲಿ ಅವಧ್ ಸಂಸ್ಥಾನದ ದೊರೆ ವಾಜಿದ್ ಅಲಿ ಷಾ ಹಾಗೂ ಅವನ ಆಸ್ಥಾನದಲ್ಲಿದ್ದ ಸಾದಿಕ್ ಆಲಿಖಾನ್ ಇವರ ಮೂಲಕ ಹೊಸರೂಪ ಪಡೆಯಿತು. ಬಹುತೇಕ ಠುಮ್ರಿಗಳು ಹಿಂದೂಸ್ಥಾನಿ ಸಂಗೀತದಲ್ಲಿ ಭೈರವಿ ರಾಗವನ್ನು ಹೊರತು ಪಡಿಸಿದರೆ, ಅಷ್ಟೇನು ಘನವಲ್ಲದ ಪೀಲೂ, ತಿಲಂಣ್, ದೇಶ್ ಖಮಾಜ್‌ನಂತಹ ರಾಗಗಳಲ್ಲಿವೆ. ಬನಾರಸ್ ಘರಾನೆಯ ಠುಮ್ರಿ ಗಾಯನವು ಬೋಲ್ ಬನಾವ್ ಅಂದರೆ, ಬಂದಿಶ್ ಎಂದು ಕರೆಯಲಾಗುವ ಸಂಗೀತದ ಸಾಹಿತ್ಯ ಅಥವಾ ಪದಗಳನ್ನು ಭಾವಪೂರ್ಣವಾಗಿ ಹಾಗೂ ಕೇಳುಗರ ಎದೆಗೆ ನಾಟುವಂತೆ ಹೃದಯಸ್ಪರ್ಶಿಯಾಗಿ ಹಾಡುವುದು. ಇದರಲ್ಲಿ ಗಿರಿಜಾ ದೇವಿಯವರು ನಿಪುಣೆಯಾಗಿದ್ದರು. ಬನಾರಸ್ ಘರಾನೆಯಲ್ಲಿ ಪ್ರಮುಖವಾಗಿ ಚೌಮುಖಿ ಗ್ಯಾನ್ ಎಂಬ ಹೆಸರಿನಲ್ಲಿ ಖಯಾಲ್, ಠುಮ್ರಿ, ಟಪ್ಪಾ ಮತ್ತು ದ್ರುಪದ್ ಪ್ರಕಾರಗಳನ್ನು ಕಲಿಸುವುದು ವಾಡಿಕೆ. ಈ ಪರಂಪರೆಯಲ್ಲಿ ಬೆಳೆದು ಬಂದಿದ್ದ ಗಿರಿಜಾದೇವಿಯವರು ತಮ್ಮ ಶಿಷ್ಯರಿಗೆ ಸಂಗೀತದ ಜೊತೆಗೆ ಬನಾರಸ್ ಹಿಂದಿಯ ಉಚ್ಚಾರಣೆಯ ಶೈಲಿಯನ್ನು ಸಹ ಕಲಿಸುತ್ತಿದ್ದರು.
  ಗಿರಿಜಾದೇವಿಯವರು ಸಂಪ್ರದಾಯದಂತೆ ಕಛೇರಿಯಲ್ಲಿ ಖಯಾಲ್ ಗಾಯನವನ್ನು ಪ್ರಸ್ತುತ ಪಡಿಸಿ, ನಂತರ ಅರ್ಧ ಭಾಗವನ್ನು ಅರೆ ಶಾಸ್ತ್ರೀಯ ರಚನೆಗಳಾದ ಟಪ್ಪಾ ಮತ್ತು ಠುಮ್ರಿಯನ್ನು ಹಾಡುತ್ತಿದ್ದರು. ಖಯಾಲ್ ಪ್ರಕಾರದ ಪ್ರಖ್ಯಾತಿಯಲ್ಲಿ ಮಾನ್ಯತೆ ಕಳೆದುಕೊಳ್ಳುತ್ತಿದ್ದ ಠುಮ್ರಿ ಗಾಯನಕ್ಕೆ ಹೆಚ್ಚು ಹೆಚ್ಚು ಒತ್ತು ನೀಡುತ್ತಾ ಬಂದ ಫಲವಾಗಿ ಭಾರತದಲ್ಲಿ ಇದು ಜನಪ್ರಿಯವಾಯಿತು. ಲೋಕಸಂಗೀತ ಎಂದು ಉತ್ತರ ಭಾರತದಲ್ಲಿ ಜನಪ್ರಿಯವಾಗಿದ್ದ ಜನಪದ ಗೀತೆಗಳನ್ನು ಕಛೇರಿಯಲ್ಲಿ ಹಾಡುವುದರ ಮೂಲಕ ಅವುಗಳಿಗೆ ಮಾನ್ಯತೆ ದೊರಕಿಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಠುಮ್ರಿ ಗಾಯನದಲ್ಲಿ ಸಂಗೀತ ಸಾಹಿತ್ಯ ಅಂದರೆ, ಅದರೊಳಗಿನ ಕಾವ್ಯದ ಗುಣಕ್ಕೆ ಅವರು ಸ್ಪಂದಿಸಿ ಹಾಡುತ್ತಿದ್ದ ರೀತಿ ಬೆರಗು ಮೂಡಿಸುವಂತಿತ್ತು. ಸಾಮಾನ್ಯವಾಗಿ ಅವರು ಬನಾರಸ್ ಘರಾನೆ ಶೈಲಿಯ ಠುಮ್ರಿಗಳಲ್ಲಿ ಇರುವ ದೇಶ್, ತಿಲಕ್ ಕಾಮೋದ್, ಕಾಫಿ, ಭೈರವಿ, ಬಿಹಾಣ್, ಖಮಾಜ್ ರಾಗಗಳಲ್ಲಿ ಮಾತ್ರ ಹಾಡುತ್ತಿದ್ದರು.

ಸಂಗೀತ ಸೇವೆಗೆ ನಿವೃತ್ತಿ ಇಲ್ಲ ಎಂದು ನಂಬಿದ್ದ ಅವರು ಠುಮ್ರಿಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಶಹನಾಯ್ ವಾದನದಲ್ಲಿ ಭಾರತದಲ್ಲಿ ದಂತ ಕಥೆಯಂತೆ ಬದುಕಿ, ಬಾಳಿದ ಪಂಡಿತ್ ಬಿಸ್ಮಿಲ್ಲಾ ಖಾನ್, ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿಖಾನ್, ಕೊಳಲು ವಾದಕ ರೋಣ್ ಮುಜಂದಾರ್ ಮುಂತಾದ ದಿಗ್ಗಜರ ಜೊತೆ ನಡೆಸಿಕೊಟ್ಟಿರುವ ಜುಗಲ್ ಬಂದಿ ಕಾರ್ಯಕ್ರಮ ಗಳು ಅವಿಸ್ಮರಣೀಯವಾಗಿವೆ. ಇವಲ್ಲದೆ, ತಬಲಾ ಮಾಂತ್ರಿಕ ಝಾಕಿರ್ ಹುಸೈನ್ ಜೊತೆ ನಡೆಸಿಕೊಟ್ಟಿರುವ ಸಂಗೀತ ಕಾರ್ಯಕ್ರಮಗಳು ಮತ್ತು ರವಿಕಿಬ್ಲು ಎಂಬ ಗಾಯಕನೊಡಗೂಡಿ ಕಜ್ರಿ ಎಂಬ ಗಾಯನ ಪ್ರಕಾರವನ್ನು ಹಾಡಿರುವ ಶೈಲಿ ಇವುಗಳು ಶ್ರೀಮತಿ ಗಿರಿಜಾದೇವಿಯವರಿಗೆ ಹಿಂದೂಸ್ಥಾನಿ ಸಂಗೀತದ ಇತಿಹಾಸದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿಕೊಟ್ಟಿವೆ. ಅವರ ನಿರ್ಗಮನದಿಂದ ಠುಮ್ರಿ ಗಾಯನದಲ್ಲಿ ಸೃಷ್ಟಿಯಾಗಿರುವ ಶೂನ್ಯವನ್ನು ತುಂಬುವುದು ಸದ್ಯದ ಸ್ಥಿತಿಯಲ್ಲಿ ಕಷ್ಟಕರ ಸಂಗತಿಯಂದೇ ಹೇಳಬಹುದು.

Writer - -ಡಾ.ಎನ್.ಜಗದೀಶ್ ಕೊಪ್ಪ

contributor

Editor - -ಡಾ.ಎನ್.ಜಗದೀಶ್ ಕೊಪ್ಪ

contributor

Similar News