ರಾಘವೇಶ್ವರ ಪ್ರಕರಣ: ಮುಂದುವರಿದ ಶೀಲಗೆಟ್ಟ ಸಂಬಂಧ

Update: 2018-01-15 06:01 GMT

ಸ್ವತಃ ನ್ಯಾಯಾಧೀಶರೇ ಶೀಲಗೆಟ್ಟ ಸಂಬಂಧವೆಂದು ಅನುಮಾನ ವ್ಯಕ್ತಪಡಿಸಿರುವ ರಾಘವೇಶ್ವರ ಸ್ವಾಮೀಜಿಯ ಪ್ರಕರಣದ ವಿಚಾರಣೆಯೆಂಬ ಕಣ್ಣು ಮುಚ್ಚಾಲೆಯಾಟದಲ್ಲಿ ಇನ್ನೋರ್ವ ನ್ಯಾಯಾಧೀಶರು ತಮ್ಮ ಕಣ್ಣಿಗೆ ಪಟ್ಟಿಕಟ್ಟಿ ಆಟದಿಂದ ಹೊರಬಿದ್ದಿದ್ದಾರೆ. ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಹೊಸನಗರ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳನ್ನು ಆರೋಪ ಮುಕ್ತಗೊಳಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಹಿಂದೆ ಸರಿದಿದ್ದಾರೆ. ಈ ಮೂಲಕ ಸುಮಾರು ಏಳು ಮಂದಿ ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿದಂತಾಯಿತು. ಈ ಮೂಲಕ ತಮ್ಮ ನ್ಯಾಯ ವ್ಯವಸ್ಥೆಯೆನ್ನುವುದು ಒಬ್ಬ ಮಠಾಧೀಶರ ಪೀಠಕ್ಕಿಂತ ದೊಡ್ಡದಲ್ಲ ಎಂಬ ಪರೋಕ್ಷ ತೀರ್ಪೊಂದನ್ನು ನೀಡಿದ್ದಾರೆ.

ಈ ವಿಚಾರಣೆಯಿಂದ ಹಿಂದೆ ಸರಿದವರಲ್ಲಿ ನಾಲ್ವರಂತೂ, ತಾವು ವಿಚಾರಣೆಯಿಂದ ಹಿಂದೆ ಸರಿದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನೇ ತಿಳಿಸಲಿಲ್ಲ. ವಿಪರ್ಯಾಸವೆಂದರೆ ನ್ಯಾ. ಕೆ.ಎನ್. ಫಣೀಂದ್ರ ಯಾಕೆ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ ಎನ್ನುವುದನ್ನು ಸ್ವತಃ ಮಠದ ಶ್ರೀಗಳ ಮಾಧ್ಯಮ ಕಾರ್ಯದರ್ಶಿ ತಮ್ಮದೊಂದು ಪ್ರಕಟನೆಯನ್ನು ನೀಡಿ ಸಮರ್ಥಿಸಿಕೊಂಡಿದ್ದಾರೆ. ಅಂದರೆ ನ್ಯಾಯಾಧೀಶರ ಪರವಾಗಿ ಆರೋಪಿ ಸ್ಥಾನದಲ್ಲಿರುವ ಸ್ವಾಮೀಜಿಯೇ ವಕಾಲತಿಗಿಳಿದಿದ್ದಾರೆ. ದೂರುದಾರ್ತಿಗೆ ನ್ಯಾಯಾಧೀಶರ ಮೇಲಿರುವ ಅವಿಶ್ವಾಸವೇ ಫಣೀಂದ್ರ ಅವರು ವಿಚಾರಣೆಯಿಂದ ಹಿಂದೆ ಸರಿಯುವುದಕ್ಕೆ ಕಾರಣ ಎಂದು ಅವರು ಹೇಳಿಕೆ ನೀಡಿದ್ದಾರೆ. ಸ್ವಾಮೀಜಿಯನ್ನು, ನ್ಯಾಯಾಧೀಶರನ್ನು ಜೊತೆ ಜೊತೆಗೇ ಈ ಪ್ರಕಟನೆಯಲ್ಲಿ ಸಮರ್ಥಿಸಿಕೊಳ್ಳಲಾಗಿದೆ. ಕುಂಬಳಕಾಯಿ ಕದ್ದವ ಹೆಗಲು ಮುಟ್ಟಿ ನೋಡಿದಂತಿದೆ ಈ ಮಾಧ್ಯಮ ಪ್ರಕಟನೆೆ.

ಒಂದಂತೂ ಸತ್ಯ. ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಶ್ರೀಗಳನ್ನು ಈ ಹಿಂದೆ ನ್ಯಾಯಾಲಯ ಆರೋಪ ಮುಕ್ತಗೊಳಿಸಿರಬಹುದು. ಆದರೆ ರಾಘವೇಶ್ವರ ಸ್ವಾಮೀಜಿಗೂ ಮಹಿಳೆಗೂ ಇರುವ ಸಂಬಂಧವನ್ನು ಅದು ನಿರಾಕರಿಸುವ ಧೈರ್ಯ ಮಾಡಿರಲಿಲ್ಲ. ಅತ್ಯಾಚಾರದ ಬದಲಿಗೆ ಅದನ್ನು ಶೀಲಗೆಟ್ಟ ಸಂಬಂಧ ಎಂಬುದಾಗಿ ನಾಜೂಕಾಗಿ ಕರೆದರು. ಸ್ವಾಮೀಜಿಯಂತಹ ಉನ್ನತ ಸ್ಥಾನದಲ್ಲಿರುವವರು ಶೀಲಗೆಡುವುದು ‘ಅಪರಾಧ’ ಅಲ್ಲವಾಗಿರುವುದರಿಂದ, ರಾಘವೇಶ್ವರರು ಆರೋಪ ಮುಕ್ತರಾಗಿದ್ದಾರೆ ಎಂದು ಅವರ ಭಕ್ತರು ಪಟಾಕಿ ಸಿಡಿಸಿ ಸಂಭ್ರಮವನ್ನೂ ಪಟ್ಟಿದ್ದಾರೆ. ‘ಅತ್ಯಾಚಾರ ಆರೋಪ’ ಹೊತ್ತು ಜೈಲು ಸೇರುವುದಕ್ಕಿಂತ, ‘ಶೀಲಗೆಡುವ’ ಶಿಕ್ಷೆಯನ್ನು ಹೊತ್ತು ಪೀಠದಲ್ಲಿ ಮುಂದುವರಿಯುವುದು ಅವರಿಗೆ ಹೆಮ್ಮೆಯ ವಿಷಯವೆನಿಸಿರಬಹುದು. ಮುಖ್ಯವಾಗಿ, ಈ ಶೀಲ ಎನ್ನುವುದು ಕೇವಲ ಹೆಣ್ಣಿಗಷ್ಟೇ ಸೀಮಿತವಾದಂತಹ ಪದವಲ್ಲ. ಶೀಲ ದೇಹಕ್ಕಷ್ಟೇ ಸಂಬಂಧಪಡುವುದಿಲ್ಲ. ಅದು ವ್ಯಕ್ತಿಯ ಚಾರಿತ್ರಕ್ಕೆ ಸಂಬಂಧಪಟ್ಟದ್ದು. ಆದುದರಿಂದ ಇದು ಗಂಡಿಗೂ ಅನ್ವಯವಾಗುತ್ತದೆ. ಅಷ್ಟೇ ಅಲ್ಲ, ಶೀಲವೆನ್ನುವುದು ಬೇರೆ ಬೇರೆ ಸ್ಥಾನ- ಮಾನಗಳಿಗೂ ಅನ್ವಯವಾಗುತ್ತದೆ. ಒಬ್ಬ ಸ್ವಾಮೀಜಿಯ ಶೀಲ, ಒಂದು ನ್ಯಾಯ ವ್ಯವಸ್ಥೆಯ ಶೀಲ, ರಾಜಕಾರಣದ ಶೀಲ ಹೀಗೆ ಆಯಾಯ ಸ್ಥಾನಗಳೂ ಶೀಲವನ್ನು ತನ್ನದಾಗಿಸಿಕೊಂಡಿದ್ದು, ಅದು ಕೆಡದಂತೆ ನೋಡಿಕೊಳ್ಳುವುದು ಆ ಸ್ಥಾನವನ್ನು ಅಲಂಕರಿಸಿದವರ ಕರ್ತವ್ಯ. ಇಲ್ಲಿ ಸ್ವಾಮೀಜಿಯ ಶೀಲದ ಬಗ್ಗೆ ನಾಡು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ನ್ಯಾಯವ್ಯವಸ್ಥೆ ಮಾತ್ರ ಸಂವಿಧಾನೇತರ ಶಕ್ತಿಗಳ ಜೊತೆಗೆ ಶೀಲಗೆಟ್ಟ ಸಂಬಂಧವನ್ನು ಹೊಂದುವುದು ಆತಂಕಕಾರಿ ವಿಷಯ.

ರಾಘವೇಶ್ವರ ಶ್ರೀ ಪ್ರಕರಣದಲ್ಲಿ ಇಂತಹದೊಂದು ಶೀಲಗೆಟ್ಟ ಸಂಬಂಧ ಕೆಲಸ ಮಾಡಿದೆಯೇ ಎನ್ನುವ ಆತಂಕವನ್ನು ನಾಡಿನ ಹಲವು ಸಂವಿಧಾನ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ರಾಘವೇಶ್ವರ ಸ್ವಾಮಿಯನ್ನು ಆರೋಪ ಮುಕ್ತಗೊಳಿಸಿದ ವಿಧಾನವನ್ನೇ ನಾವು ಗಮನಿಸೋಣ. ರಾಘವೇಶ್ವರ ಪ್ರಕರಣದಲ್ಲಿ, ಶೀಲ ಎನ್ನುವುದನ್ನು ನ್ಯಾಯಾಲಯ ಕೇವಲ ದೈಹಿಕ ಸಂಬಂಧಗಳಿಗೆ ಸಂಬಂಧಿಸಿ ಹೇಳಲು ಪ್ರಯತ್ನ ಮಾಡಿದೆ. ಶೀಲದ ಹೆಸರಿನಲ್ಲಿ ಅದು ಹೆಣ್ಣನ್ನು ಮುಖ್ಯವಾಗಿ ಸಂತ್ರಸ್ತೆಯನ್ನು ಗುರಿಯಾಗಿಸಲು ಯತ್ನಿಸಿದೆ. ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿರುವುದನ್ನು ಸಾರಾಸಗಟಾಗಿ ನ್ಯಾಯಾಲಯನಿರಾಕರಿಸಿದರೂ, ರಾಘವೇಶ್ವರ ಸ್ವಾಮೀಜಿ ಮತ್ತು ಮಹಿಳೆಯ ನಡುವೆ ಲೈಂಗಿಕ ಸಂಬಂಧ ವಿರುವುದನ್ನು ನಿಜ ಎಂದು ಒಪ್ಪಿಕೊಂಡಿದೆ. ಅದು ಶೀಲಗೆಟ್ಟ ಸಂಬಂಧವಾಗಿರುವುದರಿಂದ ರಾಘವೇಶ್ವರ ಶ್ರೀ ಪ್ರಕರಣದಲ್ಲಿ ಅವರು ನಿರಪರಾಧಿಗಳು ಎಂಬ ತೀರ್ಮಾನವೊಂದಕ್ಕೆ ನ್ಯಾಯಾ ಲಯ ಬಂದಿದೆ. ಹಲವು ತಿಂಗಳುಗಳಿಂದ ಈ ಅನೈತಿಕ ಸಂಬಂಧ ಮುಂದುವರಿದುಕೊಂಡು ಬಂದಿರುವುದರಿಂದ, ನ್ಯಾಯಾಲಯ ಇದನ್ನು ಅತ್ಯಾಚಾರ ಎಂದು ನಂಬಲು ಸಿದ್ಧವಿಲ್ಲ.

ಒಂದು ಹೆಣ್ಣಿನ ಮೇಲೆ ಅತ್ಯಾಚಾರವೆಸಗಲು ದೈಹಿಕ ಬಲ ಮಾತ್ರವಲ್ಲ, ತನ್ನ ಸುತ್ತಮುತ್ತಲಿರುವ ಧಾರ್ಮಿಕ, ರಾಜಕೀಯ ಬಲವನ್ನೂ ಬಳಸಿಕೊಳ್ಳಬಹುದು ಎನ್ನುವ ಅಂಶವನ್ನು ನ್ಯಾಯಾಲಯ ಉದ್ದೇಶಪೂರ್ವಕವಾಗಿ ಗಮನಕ್ಕೆ ತೆಗೆದುಕೊಂಡಿಲ್ಲ. ಈ ಶಕ್ತಿಗಳ ಮುಂದೆ ಹೆಣ್ಣಿನ ಧ್ವನಿ ಎಷ್ಟು ಕ್ಷೀಣವಾಗಿರುತ್ತದೆ ಮತ್ತು ಹೆಣ್ಣು ಎಷ್ಟು ಅಸಹಾಯಕಳಾಗಬೇಕಾಗುತ್ತದೆ ಎಂಬ ಬಗ್ಗೆ ನ್ಯಾಯಾಲಯ ಜಾಣ ಕುರುಡುತನವನ್ನು ಪ್ರದರ್ಶಿಸಿದೆ. ಹಾಗೆ ನೋಡಿದರೆ ರಾಘವೇಶ್ವರರ ಜೊತೆಗೆ ಶೀಲಗೆಟ್ಟ ಸಂಬಂಧವನ್ನು ಹೊಂದಿದವರು ಅಸಹಾಯಕ ಮಹಿಳೆಯಷ್ಟೇ ಅಲ್ಲ ಎನ್ನುವುದು ಈ ಪ್ರಕರಣದ ವಿಚಾರಣೆಯ ಇತಿಹಾಸ ನೋಡಿದರೆ ಬಹಿರಂಗವಾಗುತ್ತದೆ.

ಈ ನಾಡಿನ ಪತ್ರಿಕೆಗಳು, ನ್ಯಾಯ ವ್ಯವಸ್ಥೆಯೊಳಗಿನ ಜನರು, ರಾಜಕಾರಣಿಗಳು ರಾಘವೇಶ್ವರ ರೊಂದಿಗೆ ಇಟ್ಟುಕೊಂಡ ಲಜ್ಜೆಗೆಟ್ಟ, ಶೀಲಗೆಟ್ಟ ಸಂಬಂಧಗಳನ್ನು ನಾವು ಗುರುತಿಸಬಹುದು.ರಾಘವೇಶ್ವರ ಸ್ವಾಮೀಜಿಯ ಮೇಲೆ ಅತ್ಯಾಚಾರ ಪ್ರಕರಣವನ್ನು ದಾಖಲಿಸುವ ಸಂದರ್ಭದಲ್ಲೇ ಸಂತ್ರಸ್ತೆ ಸಂಕಟಗಳನ್ನು, ಸಂಕಷ್ಟಗಳನ್ನು ಎದುರಿಸಬೇಕಾಯಿತು. ಆರೋಪಿಸಿದ ಸಂತ್ರಸ್ತೆಯೇ ಜೈಲು ಸೇರಬೇಕಾದಂತಹ ವಿಪರ್ಯಾಸವನ್ನು ನಾಡಿನ ಜನರು ನೋಡಬೇಕಾಯಿತು. ಅಷ್ಟೇ ಅಲ್ಲ, ಹೊರಗಿನ ತೀವ್ರ ಒತ್ತಡದ ಕಾರಣದಿಂದ, ಆಕೆಯ ಕುಟುಂಬದ ಸದಸ್ಯರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಯಿತು.ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಜನರು ಯಾರು ಎನ್ನುವು ದನ್ನು ಬಹಿರಂಗಪಡಿಸಲು ನಮ್ಮ ಕಾನೂನು ವ್ಯವಸ್ಥೆಗೆ ಸಾಧ್ಯವಾಗಲಿಲ್ಲ. ರಾಘವೇಶ್ವರ ಸ್ವಾಮೀಜಿ ಯ ಜೊತೆಗೆ ಪೊಲೀಸರು ಶೀಲಗೆಟ್ಟ ಸಂಬಂಧವನ್ನು ಹೊಂದಿರುವುದಕ್ಕೆ ತನಿಖೆಯ ಕುರಿತು ದೂರು ದಾಖಲಿಸುವ ಸಂದರ್ಭ ದಲ್ಲಿ ಅವರ ನಡವಳಿಕೆಯೇ ಸಾಕ್ಷಿ. ಇದರ ಬೆನ್ನಿಗೇ ವಿಚಾರಣೆ ನಡೆಸಿ ನ್ಯಾಯ ನೀಡಬೇಕಾದ ನ್ಯಾಯಾಧೀಶರೇ ಕಾರಣಗಳಿಲ್ಲದೆ ವಿಚಾರಣೆಯಿಂದ ಹಿಂದೆ ಸರಿದರೇ?

ನ್ಯಾಯವ್ಯವಸ್ಥೆ ಯಾವುದೇ ಖಾಸಗಿ ಸಂಸ್ಥೆಯಲ್ಲ. ಅದು ಜನರ ತೆರಿಗೆಯ ಹಣದಿಂದಲೇ ನಿಂತಿದೆ. ನ್ಯಾಯಾಧೀಶರು ತಮಗೆ ತೀರ್ಪು ನೀಡಲು ಇಷ್ಟವಿಲ್ಲದ ಪ್ರಕರಣದಿಂದ ಸಾರಾಸಗ ಟಾಗಿ ಹಿಂದೆ ಸರಿಯುವುದು ಅಥವಾ ಪ್ರಕರಣದಲ್ಲಿ ವೈಯಕ್ತಿಕ ನಿಲುವು, ನಂಬಿಕೆಗಳನ್ನು ಜೋಡಿಸಿಕೊಳ್ಳುವುದು ನ್ಯಾಯವ್ಯವಸ್ಥೆಗೆ ಮಾಡುವ ಅವಮಾನ. ಈ ದೇಶದಲ್ಲಿ ಸ್ವಾಮೀಜಿಗಳಿಗೊಂದು, ಜನಸಾಮಾನ್ಯರಿಗೊಂದು ನ್ಯಾಯವಿಲ್ಲ. ಆದುದರಿಂದ, ರಾಘವೇಶ್ವರ ಸ್ವಾಮೀಜಿಯ ಅತ್ಯಾಚಾರ ಪ್ರಕರಣದಲ್ಲಿ ವೈಯಕ್ತಿಕವಾದ ನಿಲುವುಗಳನ್ನೆಲ್ಲ ಪಕ್ಕಕ್ಕಿಟ್ಟು ಅದನ್ನು ವಿಚಾರಣೆ ನಡೆಸುವುದು ನ್ಯಾಯಾಧೀಶರ ಕರ್ತವ್ಯವಾಗಿತ್ತು. ಆದರೆ ಅವರೇ ವಿಚಾರಣೆಗೆ ಹಿಂಜರಿಕೆ ವ್ಯಕ್ತಪಡಿಸುವ ಮೂಲಕ, ರಾಘವೇಶ್ವರರ ಜೊತೆಗೆ ಶೀಲಗೆಟ್ಟ ಸಂಬಂಧವನ್ನು ಹೊಂದಿರುವ ಇನ್ನಷ್ಟು ಜನರ ಮುಖಗಳು ಹೊರ ಬಿದ್ದವು.

ಒಬ್ಬ ಸ್ವಾಮೀಜಿಯ ಮೇಲಿನ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮೊದಲೇ ಅದರಿಂದ ನ್ಯಾಯಾಧೀಶರು ಹಿಂದೆ ಸರಿಯುತ್ತಿರುವುದು ಪದೇ ಪದೇ ನಡೆದಾಗ ಅದರ ಕುರಿತಂತೆ ಜನರು ಅನುಮಾನ ವ್ಯಕ್ತಪಡಿಸುವುದು, ನ್ಯಾಯವ್ಯವಸ್ಥೆಯ ವಿಶ್ವಾಸಾರ್ಹತೆ ಪ್ರಶ್ನೆಗೊಳಗಾಗುವುದು ಸಹಜವಾಗಿದೆ. ರಾಘವೇಶ್ವರ ಪ್ರಕರಣದಲ್ಲಿ ಇಂದು ಸಂತ್ರಸ್ತೆಯಾಗಿ ಬರೇ ರಾಮಕಥಾ ಗಾಯಕಿ ಪ್ರೇಮಲತಾ ನಿಂತಿಲ್ಲ. ಅವರ ಜೊತೆ ಜೊತೆಗೆ ನ್ಯಾಯವ್ಯವಸ್ಥೆಯೂ ತನಗಾಗಿರುವ ಅನ್ಯಾಯಕ್ಕೆ ನ್ಯಾಯಕೇಳುವಂತಹ ಸ್ಥಿತಿಯಲ್ಲಿ ನಿಂತಿದೆ. ಇತ್ತೀಚೆಗೆ ನಮ್ಮ ಉನ್ನತ ನ್ಯಾಯವ್ಯವಸ್ಥೆಯೊಳಗಿನ ಬಿರುಕುಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅದರೊಳಗೆ ನಡೆಯುತ್ತಿರುವ ಹಸ್ತಕ್ಷೇಪಗಳನ್ನು ಪ್ರತಿಭಟಿಸಿ ನಾಲ್ವರು ಹಿರಿಯ ನ್ಯಾಯಾಧೀಶರೇ ಬೀದಿಗೆ ಬಂದಿ ದ್ದಾರೆ. ರಾಘವೇಶ್ವರ ಸ್ವಾಮೀಜಿಯ ಪ್ರಕರಣದಲ್ಲಿ ನ್ಯಾಯಾಧೀಶರ ಅನುಮಾನಾಸ್ಪದ ನಡಿಗೆ ಹೀಗೇ ಮುಂದುವರಿದರೆ, ನ್ಯಾಯಾಧೀಶರ ವಿರುದ್ಧವೇ ಹಿರಿಯ ಸಂವಿಧಾನ ತಜ್ಞರು, ರಾಜ್ಯದ ವಕೀಲರು ಬೀದಿಗೆ ಬರುವ ಸನ್ನಿವೇಶ ನಿರ್ಮಾಣವಾಗಬಹುದು. ಅದಕ್ಕೆ ಮೊದಲು, ಈ ನ್ಯಾಯ ವ್ಯವಸ್ಥೆಯೊಳಗಿನ ಕೆಲವು ಶೀಲಗೆಟ್ಟ ಸಂಬಂಧಗಳನ್ನು ಗುರುತಿಸಿ ಸರಿಪಡಿಸಬೇಕಾದ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News