ಬೆಂಬಲ ಕೋರಿ ಆಪ್ತ ದೇಶ ಭಾರತಕ್ಕೆ ಪ್ರತಿನಿಧಿಗಳನ್ನು ಕಳುಹಿಸದ ಮಾಲ್ಡೀವ್ಸ್!

Update: 2018-02-08 16:46 GMT

ಹೊಸದಿಲ್ಲಿ,ಫೆ.8: ತುರ್ತು ಸ್ಥಿತಿಯನ್ನು ಕೊನೆಗೊಳಿಸುವಂತೆ ಜಾಗತಿಕ ಸಮುದಾಯದ ಒತ್ತಡವನ್ನು ಎದುರಿಸುತ್ತಿರುವ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ತನಗೆ ಬೆಂಬಲವನ್ನು ಕೋರಲು ‘ಮಿತ್ರ ದೇಶ’ಗಳಾದ ಚೀನಾ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾಗಳಿಗೆ ಪ್ರತಿನಿಧಿಗಳನ್ನು ರವಾನಿಸಿದ್ದಾರೆ. ಆದರೆ ದ್ವೀಪರಾಷ್ಟ್ರದ ಅತ್ಯಂತ ಆಪ್ತ ದೇಶಗಳಲ್ಲೊಂದಾಗಿರುವ ಭಾರತಕ್ಕೆ ಪ್ರತಿನಿಧಿಯನ್ನು ಕಳುಹಿಸುವ ಯಾವುದೇ ಯೋಜನೆಯನ್ನು ಅವರು ಹೊಂದಿಲ್ಲ.

 ಆದರೆ, ‘‘ವಾಸ್ತವದಲ್ಲಿ ಭಾರತವು ಮಾಲ್ಡೀವ್ಸ್ ಅಧ್ಯಕ್ಷರು ತನ್ನ ಪ್ರತಿನಿಧಿಯನ್ನು ಕಳುಹಿಸಲಿದ್ದ ಮೊದಲ ದೇಶವಾಗಿತ್ತು. ಆದರೆ ಅವರು ಸೂಚಿಸಿದ್ದ ದಿನಾಂಕಗಳು ಭಾರತದ ನಾಯಕತ್ವಕ್ಕೆ ಒಪ್ಪಿಗೆಯಾಗಿರಲಿಲ್ಲ. ವಿದೇಶಾಂಗ ವ್ಯವಹಾರಗಳ ಸಚಿವರು ವಿದೇಶ ಪ್ರವಾಸದಲ್ಲಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಈ ವಾರ ದುಬೈಗೆ ಪಯಣಿಸಲಿದ್ದಾರೆ ಎನ್ನುವುದು ನಮಗೆ ತಿಳಿದಿದೆ’’ ಎಂಬ ಭಾರತದಲ್ಲಿಯ ಮಾಲ್ಡೀವ್ಸ್ ರಾಯಭಾರಿ ಅಹ್ಮದ್ ಮುಹಮ್ಮದ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್‌ರನ್ನು ಭಯೋತ್ಪಾದನೆ ಆರೋಪಗಳಿಂದ ಮುಕ್ತಗೊಳಿಸಿರುವ ಮತ್ತು ಎಂಟು ಹಿರಿಯ ಪ್ರತಿಪಕ್ಷ ನಾಯಕರನ್ನು ಬಿಡುಗಡೆಗೊಳಿಸಿ ರುವ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಲು ಯಮೀನ್ ಕಳೆದ ವಾರ ನಿರಾಕರಿಸಿದ ಬಳಿಕ ಮಾಲ್ದೀವ್ಸ್‌ನಲ್ಲಿ ರಾಜಕೀಯ ಪ್ರಕ್ಷುಬ್ಧತೆ ಉಂಟಾಗಿದೆ. ದೇಶದಲ್ಲಿ 15 ದಿನಗಳ ತುರ್ತು ಸ್ಥಿತಿಯನ್ನು ಹೇರಿರುವ ಯಮೀನ್ ಸರ್ವೋಚ್ಚ ನ್ಯಾಯಲಯದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇಬ್ಬರು ನ್ಯಾಯಾಧೀಶರನ್ನು ಜೈಲಿಗೆ ತಳ್ಳಿದ್ದಾರೆ.

ಸಂಪುಟದ ಮೂವರು ಹಿರಿಯ ಸಚಿವರನ್ನು ಈ ಮೂರು ರಾಷ್ಟ್ರಗಳಿಗೆ ತನ್ನ ಪ್ರತಿನಿಧಿಗಳನ್ನಾಗಿ ರವಾನಿಸಿರುವ ಯಮೀನ್ ಕ್ರಮವು ಚೀನಾದೊಂದಿಗೆ ನಿಕಟವಾಗಲು ಆಡಳಿತವು ನಿರ್ಧರಿಸಿದೆ ಎನ್ನುವುದನ್ನು ಸೂಚಿಸುತ್ತಿದೆ. ದ್ವೀಪರಾಷ್ಟ್ರದಲ್ಲಿನ ಪ್ರಕ್ಷುಬ್ಧತೆಯನ್ನು ಅಂತ್ಯಗೊಳಿಸಲು ತನ್ನ ಮಿಲಿಟರಿಯನ್ನು ಬಳಸುವಂತೆ ನಶೀದ್ ಅವರು ಭಾರತಕ್ಕೆ ನೀಡಿರುವ ಕರೆಗೆ ಬುಧವಾರ ಪ್ರತಿಕ್ರಿಯಿಸಿದ್ದ ಚೀನಾ, ಮಾಲ್ದೀವ್ಸ್‌ನಲ್ಲಿ ಯಾವುದೇ ವಿದೇಶಿ ಹಸ್ತಕ್ಷೇಪವನ್ನು ವಿರೋಧಿಸಿದೆ.

ದೇಶಭ್ರಷ್ಟರಾಗಿ ಶ್ರೀಲಂಕಾದಲ್ಲಿರುವ ನಶೀದ್ ಮತ್ತು ಇತರ ಪ್ರತಿಪಕ್ಷ ನಾಯಕರು ಅಧಿಕಾರದ ಮೇಲಿನ ತನ್ನ ಹಿಡಿತವನ್ನು ಪ್ರಶ್ನಿಸುತ್ತಿದ್ದಂತೆ ಯಮೀನ ಚೀನಾಕ್ಕೆ ನಿಕಟವಾಗಿದ್ದಾರೆ. ತನ್ನ ವಿರುದ್ಧದ ಪ್ರತಿಭಟನೆಗಳನ್ನು ಬಗ್ಗುಬಡಿದಿರುವ ಅವರು ಹಲವಾರು ಪ್ರತಿಪಕ್ಷ ನಾಯಕರನ್ನು ಬಂಧಿಸಿದ್ದಾರೆ.

ಯಮೀನ್ ಅವರಿಂದ ತುರ್ತುಸ್ಥಿತಿ ಹೇರಿಕೆ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪಾಲನೆಗೆ ನಿರಾಕರಣೆ ಸೇರಿದಂತೆ ಮಾಲ್ದೀವ್ಸ್‌ನಲ್ಲಿಯ ಬೆಳವಣಿಗೆಗಳು ತನಗೆ ಚಿಂತೆಯನ್ನುಂಟು ಮಾಡಿವೆ ಎಂದು ಭಾರತವು ಹೇಳಿದೆ. ನಶೀದ್ ಅವರನ್ನು ಭಯೋತ್ಪಾದನೆ ಆರೋಪಗಳಿಂದ ಮುಕ್ತಗೊಳಿಸಿರುವ ಮತ್ತು ಬಂಧಿತ ಪ್ರತಿಪಕ್ಷ ನಾಯಕರನ್ನು ಬಿಡುಗಡೆಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಯಮೀನ್ ನಿಷ್ಠರೆನ್ನಲಾಗಿರುವ ನ್ಯಾಯಾಧೀಶರು ಹಿಂದೆಗೆದುಕೊಂಡಿದ್ದಾರೆ.

 ಭಾರತವು ಯಾವುದೇ ಹಸ್ತಕ್ಷೇಪವು ಅಗತ್ಯವಾದ ಸಂದರ್ಭದಲ್ಲಿ ತನ್ನ ಯೋಧರನ್ನು ಮತ್ತು ವಾಯುಪಡೆ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ ಎಂಬ ವರದಿಗಳಿದ್ದರೂ ಮಾಲ್ದೀವ್ಸ್‌ನಲ್ಲಿಯ ತುರ್ತು ಸ್ಥಿತಿಗೆ ಪ್ರತಿಕ್ರಿಯಿಸಲು ತನ್ನ ಯೋಜನೆಯೇನು ಎಂಬ ಬಗ್ಗೆ ಹೇಳಿಕೊಳ್ಳುವಂತಹ ಸುಳಿವುಗಳನ್ನು ಅದು ಅಧಿಕೃತವಾಗಿ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News