ಬಾಬಾ ಸಾಹೇಬ್ ಅಂಬೇಡ್ಕರ್‌ರ ವಿಜ್ಞಾನದ ಜ್ಞಾನ

Update: 2018-02-23 19:00 GMT

ಬಾಬಾ ಸಾಹೇಬ್ ಅಂಬೇಡ್ಕರ್ ಈ ದೇಶ ಕಂಡ ಮಹಾನ್ ಜ್ಞಾನಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗೆಯೇ ತನ್ನ ಜ್ಞಾನವನ್ನು ಸಮಾಜದ, ದೇಶದ ಒಳಿತಿಗೂ ಬಳಸಿದ್ದು ಕೂಡ ಅವರ ಹೆಗ್ಗಳಿಕೆ. ಜ್ಞಾನ ಎಂದರೆ ಅಲ್ಲಿ ವಿಜ್ಞಾನವೂ ಬರುತ್ತದೆ. ಅದರ ಬಗ್ಗೆ ಅಂಬೇಡ್ಕರ್‌ರ ಒಲವು ಎಷ್ಟಿತ್ತು? ಆ ಕಾಲದ ವಿಜ್ಞಾನದ ಬರಹಗಳನ್ನು ಸಂಶೋಧನೆಗಳನ್ನು ಅಂಬೇಡ್ಕರ್ ಗಮನಿಸುತ್ತಿದ್ದರೇ? ಆ ಹಿನ್ನೆಲೆಯಲ್ಲಿ ಚಿಂತಿಸುತ್ತಿದ್ದರೆ? ಹೌದು, ಗಮನಿಸುತ್ತಿದ್ದರು. ವಿಜ್ಞಾನದ ಲೇಖನಗಳನ್ನು ಅದರ ಆಶಯಗಳನ್ನು ಕುರಿತು ಚಿಂತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅರಿವಾಗುವುದು ಅಂಬೇಡ್ಕರ್‌ರಿಗಿದ್ದ ಆಳವಾದ ವಿಜ್ಞಾನದ ಜ್ಞಾನ ಮತ್ತು ಒಲವು. ಅಂತಹ ವಿಜ್ಞಾನದ ಜ್ಞಾನ ಮತ್ತು ಒಲವು ಇದ್ದಿದ್ದರಿಂದಲೇ ಅವರು ಜಾತಿ, ಅಸ್ಪಶ್ಯತೆಯಂತಹ ಸಾಮಾಜಿಕ ಸಮಸ್ಯೆಗಳಿಗೂ ವಿಜ್ಞಾನದ ಮಾದರಿಯಲ್ಲೇ ಪಕ್ಕಾ ಪರಿಹಾರ ಕಾಣುವಂತಹ ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯವಾದದ್ದು ಮತ್ತು ಅಂಬೇಡ್ಕರ್‌ರ ಅಂತಹ ವಿಜ್ಞಾನದ ಒಲವನ್ನು ನಿಲುವನ್ನು ಈ ದೇಶದ ನಾಗರಿಕರು ಅರಿಯುವ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ಅಂತಹ ಪ್ರಸಂಗವೊಂದನ್ನು ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್‌ರವರೇ 1955 ಜನವರಿ 18ರಂದು ಅಂದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಬರೆದಿದ್ದ ಪ್ರವಾಹ ನಿಯಂತ್ರಣ: ಅಣುಶಕ್ತಿಯ ಬಳಕೆ ಎಂಬ ಲೇಖನದ ಮೂಲಕ ಅರಿಯುವುದಾದರೆ, ಬಾಬಾಸಾಹೇಬ್ ಅಂಬೇಡ್ಕರ್‌ರವರು ಈ ದೇಶದಲ್ಲಿ ಅದೂ ಬ್ರಿಟಿಷ್ ವೈಸರಾಯ್‌ರವರ ಆಡಳಿತದಲ್ಲಿ ಮಂತ್ರಿಯಾಗಿದ್ದದ್ದು ಎಲ್ಲರಿಗೂ ತಿಳಿದಿರುವ ವಿಚಾರ. 1942ರಿಂದ 1944ರವರೆಗೆ ಅಂಬೇಡ್ಕರ್‌ರವರು ವೈಸರಾಯ್‌ರವರ ಮಂತ್ರಿಮಂಡಲದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ನೀರಾವರಿ ಖಾತೆಯ ಹೊಣೆಯೂ ಕೂಡ ಸಚಿವರಾಗಿದ್ದ ಅವರ ಹೆಗಲಿಗೆ ಬಿದ್ದಿತ್ತು ಮತ್ತು ಅವರು ನೀರಾವರಿ ಮತ್ತು ಜಲಸಾರಿಗೆ ಎಂಬ ಪ್ರತ್ಯೇಕ ಇಲಾಖೆಯನ್ನೇ ತಮ್ಮ ಆ ಖಾತೆಯ ಅಡಿಯಲ್ಲಿ ಸ್ಥಾಪಿಸಿದರು. ಮುಂದೆ ಅದು ನದಿ ನಿಯಂತ್ರಣ ಮಂಡಳಿ, ಕೇಂದ್ರ ಜಲವಿದ್ಯುತ್ ಆಯೋಗ ಎಂದು ಮರುನಾಮಕರಣಗೊಂಡಿತು.

ಈ ನಿಟ್ಟಿನಲ್ಲಿ ಆಯೋಗ ಆ ಸಮಯದಲ್ಲಿ ಆಗಾಗ ಉಂಟಾಗುತ್ತಿದ್ದ ಪ್ರವಾಹದ ಬಗ್ಗೆ ಭಾರೀ ತಲೆಕೆಡಿಸಿಕೊಂಡಿತ್ತು. ಅದರಲ್ಲೂ ಅಂಬೇಡ್ಕರ್‌ರವರು ಪ್ರಸ್ತಾಪಿಸುವುದು ಬ್ರಹ್ಮಪುತ್ರ ನದಿಯ ಪ್ರವಾಹದ ಬಗ್ಗೆ. ಏಕೆಂದರೆ ಬ್ರಹ್ಮಪುತ್ರ ನದಿಯ ಪ್ರವಾಹ ತಡೆಯಲು ಆಯೋಗ ಅದಾಗಲೇ ರೂ. 14 ಕೋಟಿ ವೆಚ್ಚ ಮಾಡಿ ಒಂದು ಪ್ರಾಯೋಗಿಕ ಅಣೆಕಟ್ಟನ್ನು ಮೇಘಾಲಯದ ಶಿಲ್ಲಾಂಗ್ ಬಳಿ ನಿರ್ಮಿಸಿತ್ತು. ಆದರೆ ಆಯೋಗದ ಆ ಪ್ರಯತ್ನ ನಿಷ್ಪಲವಾಗಿ ಅದು ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿತ್ತು. ಇದು ಆಯೋಗಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು. ಆ ಕಾರಣಕ್ಕಾಗಿ ಆಯೋಗ ಪ್ರವಾಹ ತಡೆಯಲು ಅಣೆಕಟ್ಟು ಕಟ್ಟುವ ಆಲೋಚನೆಯನ್ನೇ ಕೈಬಿಟ್ಟು ಹಳೆಯ ಕಾಲದ ಏರಿಗಳನ್ನು ನಿರ್ಮಿಸುವ ಯೋಜನೆಗೆ ಆದ್ಯತೆ ನೀಡಲಾರಂಭಿಸಿತು. ಇದನ್ನು ಪ್ರಸ್ತಾಪಿಸುತ್ತಾ ಅಂಬೇಡ್ಕರ್‌ರು 1955ರ ಸಂದರ್ಭದ ತಮ್ಮ ಆ ಲೇಖನದಲ್ಲಿ ಪ್ರವಾಹ ನಿಯಂತ್ರಣಕ್ಕೆ ಒಂದು ಹೊಸ ಚಿಂತನೆ ಮಂಡಿಸುತ್ತಾರೆ. ಪ್ರವಾಹ ನಿಯಂತ್ರಿಸಲು ಅಣುಶಕ್ತಿ ಬಳಸಬಹುದು ಎಂಬ ವೈಜ್ಞಾನಿಕ ಚಿಂತನೆ ಅದು.

ಈ ಬಗ್ಗೆ ಅವರು 1954 ಸೆಪ್ಟ್ಟಂಬರ್ 10ರ ವಿಜ್ಞಾನ ನಿಯತಕಾಲಿಕೆ ‘ಅಬ್ಸರ್ವರ್’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸಿ.ಎಸ್. ಪಿಳ್ಳೈ ಎಂಬವರು ಬರೆದಿದ್ದ ರಕ್ಷಣೆಗಾಗಿ ಅಣುಶಕ್ತಿ ಬಳಕೆ ಎಂಬ ಲೇಖನವನ್ನು ಉಲ್ಲೇಖಿಸುತ್ತಾರೆ. ಈ ಸಂದರ್ಭದಲ್ಲಿ ಸ್ವತಃ ಅಂಬೇಡ್ಕರ್‌ರವರು ಸಿ.ಎಸ್. ಪಿಳ್ಳೈ ಎಂಬ ಆ ಲೇಖಕ/ಇಂಜಿನಿಯರ್‌ರನ್ನು ಖುದ್ದು ಭೇಟಿಯಾಗುತ್ತಾರೆ ಮತ್ತು ಪಿಳ್ಳೈರವರ ಅಭಿಪ್ರಾಯಗಳನ್ನು ಅತ್ಯಂತ ಸ್ಪಷ್ಟವಾಗಿ ‘ಟೈಮ್ಸ್ ಆಫ್ ಇಂಡಿಯಾ’ದ ತಮ್ಮ ಆ ಲೇಖನದಲ್ಲಿ ಬಾಬಾಸಾಹೇಬರು ದಾಖಲಿಸುತ್ತಾರೆ. ಅಂದಹಾಗೆ ಅವರು ಹೇಳುವುದು ‘‘ಕಣ್ಣೀರಿನ ನದಿಯನ್ನು ಪಳಗಿಸಬಹುದು, ನಿಯಂತ್ರಿಸಬಹುದು ಮತ್ತು ಅತ್ಯಗತ್ಯಗಳಿಗೆ ಉಪಯೋಗಿಸಲು ಹೇಗೆ ಬೇಕೋ ಹಾಗೆ ತರಬೇತಿ ನೀಡಬಹುದು. ಬೈಜಿಕ ವಿದಳನnuclear fission) ಕ್ರಿಯೆ ಅನ್ವಯಿಸುವ ಮೂಲಕ ಇದನ್ನು ಸಾಧಿಸಬಹುದು’’ ಎಂದು. ಈ ಹಿನ್ನೆಲೆಯಲ್ಲಿ ಭೌತಶಾಸ್ತ್ರದ ಓಮನ ಆರ್ಧ್ರೀಕರಣದ ನಿಯಮ, ತಡೆಮಾದರಿಯ ವಿದ್ಯುತ್ ಕಣಗಳ(ನ್ಯೂಟ್ರಾನುಗಳ) ಹೊರಸೂಸುವಿಕೆ ಮತ್ತು ಪ್ರವಾಹ, ಆ ಮೂಲಕ ನ್ಯೂಟ್ರಾನುಗಳಿಂದ ನದಿಯ ಇಕ್ಕೆಲಗಳಲ್ಲಿ ಉಂಟಾಗಬಹುದಾದ ಓರೆ ದಿಬ್ಬ... ಇತ್ಯಾದಿಗಳನ್ನು ತಮ್ಮ ಆ ಲೇಖನದಲ್ಲಿ ಪ್ರಸ್ತಾಪಿಸುತ್ತಾರೆ. ಅಂದಹಾಗೆ ವಿದ್ಯುತ್ ಪ್ರವಾಹಕ್ಕೆ ಸಂಬಂಧಿಸಿದಂತೆ ಓಮನ ನಿಯಮ ವಿದ್ಯಾರ್ಥಿಗಳಿಗೆ ತಿಳಿದೇ ಇದೆ, ವಿಶೇಷವಾಗಿ ವಿಜ್ಞಾನದ ವಿದ್ಯಾರ್ಥಿಗಳಿಗೆ. ಅದು ಹೇಳುವುದೇನೆಂದರೆ V=IR ಎಂದು. V=ವಿಭವಾಂತರ, I=ವಿದ್ಯುತ್ ಪ್ರವಾಹ, R=ವಿದ್ಯುತ್ ರೋಧ). ಅಂದರೆ ವಿದ್ಯುತ್ ಪ್ರವಾಹವು ವಿಭವಾಂತರಕ್ಕೆ ನೇರ ಅನುಪಾತದಲ್ಲಿರುತ್ತದೆ ಎಂಬುದು. ಈ ನಿಯಮವೇ ಓಮನ ಆರ್ಧ್ರೀಕರಣ (evaporation) ನಿಯಮವಾಗಿ ಪರಿವರ್ತನೆಯಾಗಿದೆ. ಈ ನಿಯಮವನ್ನು ವಿದ್ಯುತ್ ಪ್ರವಾಹದ ಬದಲು ನೀರಿನ ಪ್ರವಾಹಕ್ಕೆ ಅನ್ವಯಿಸಿದರೆ? ಏಕೆಂದರೆ ನೀರಿನ ಪ್ರವಾಹ ಕೂಡ ಎತ್ತರಗಳ ವ್ಯತ್ಯಾಸಕ್ಕೆ ನೇರ ಅನುಪಾತದಲ್ಲಿರುತ್ತದೆ. ಆ ವ್ಯತ್ಯಾಸವನ್ನು ಕಡಿಮೆ ಮಾಡಿದರೆ? ನೀರು ನಿಧಾನಕ್ಕೆ ಹರಿಯುತ್ತದೆ. ಓಮನ ಆರ್ಧ್ರೀಕರಣದ ನಿಯಮ ಹೇಳಿದುದು ಇದನ್ನೇ. ಹಾಗಿದ್ದರೆ ನೀರನ್ನು ನಿಧಾನಗೊಳಿಸುವುದು ಹೇಗೆ? 

 ಅಂಬೇಡ್ಕರ್‌ರವರು ಹೇಳುವುದು ಅಣು ವಿದ್ಯುತ್ ಸ್ಥಾವರಗಳಿಂದ ನ್ಯೂಟ್ರಾನುಗಳ ಪ್ರವಾಹ ಉತ್ಪಾದಿಸುವುದು ಮತ್ತು ಆ ನ್ಯೂಟ್ರಾನುಗಳ ಪ್ರವಾಹವನ್ನು ನದಿಯ ಆಳಕ್ಕೆ, ಮತ್ತದರ ಸಂಗ್ರಹಣ ಸ್ಥಳಕ್ಕೆ ಹರಿಸುವುದು. ಹಾಗೆ ಹರಿಸುವ ಮೂಲಕ ಪ್ರವಾಹವನ್ನು ನಿಯಂತ್ರಿಸಬಹುದು. ಹಾಗೆ ನಿಯಂತ್ರಣಗೊಂಡ ಆ ನೀರನ್ನು ವ್ಯವಸಾಯ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಿ, ಹೆಚ್ಚುವರಿ ಪ್ರವಾಹದ ನೀರನ್ನು ಆ ಕ್ಷಣವೇ ಆರ್ಧ್ರೀಕರಣಗೊಳಿಸಬಹುದು ಎಂದು. ‘‘ನ್ಯೂಟ್ರಾನುಗಳು ಕೆಲಸ ಮಾಡುವುದಾದರು ಹೇಗೆ? ಎಲ್ಲರಿಗೂ ತಿಳಿದಿರುವಂತೆ ಪರಮಾಣುವಿನಲ್ಲಿರುವ ನ್ಯೂಟ್ರಾನುಗಳು ತಟಸ್ಥ ಕಣಗಳು. ಅವುಗಳಿಗೆ ಧನ ಅಥವಾ ಋಣ ಹೀಗೆ ಯಾವ ವಿದ್ಯುದಾವೇಶವೂ ಇಲ್ಲ. ಆದ್ದರಿಂದ ಹೀಗೆ ಯಾವ ವಿದ್ಯುದಾವೇಶವೂ ಇಲ್ಲದ ನ್ಯೂಟ್ರಾನುಗಳ ಪ್ರವಾಹ ಪರಮಾಣುವಿನ ಬೀಜಕೇಂದ್ರದ ಸುತ್ತಲೂ ಇರುವ ಋಣ ವಿದ್ಯುತ್ ಆವೇಶ ಹೊಂದಿರುವ ಎಲೆಕ್ಟ್ರಾನುಗಳ ಮೋಡಗಳ ಯಾವುದೇ ಪರಿಣಾಮಕ್ಕೂ ಒಳಗಾಗದೆ ನೇರ ನೀರಿನ ಆಳಕ್ಕೆ ಇಳಿಯಬಲ್ಲದು. ಅದು ಅಣು ಶಕ್ತಿಯಾಗಿರುವ ಕಾರಣದಿಂದ, ನೀರಿನ ಆಳಕ್ಕೆ ಇಳಿದು ಹೂಳೆತ್ತಬಲ್ಲದು, ಬಂಡೆಗಳನ್ನು ಪುಡಿ ಪುಡಿ ಸಹ ಮಾಡಬಲ್ಲದು. ಈ ನಿಟ್ಟಿನಲ್ಲಿ ಹಾಗೆ ಏಳಬಹುದಾದ ಊಳು ಮತ್ತು ಬಂಡೆಗಳ ಚೂರುಗಳನ್ನು ನ್ಯೂಟ್ರಾನ್ ಪ್ರವಾಹ ನದಿಯ ದಂಡೆಗೋ ಅಥವಾ ಸಮುದ್ರಕ್ಕೋ ಸಾಗಿಸಬಲ್ಲದು. ನಿಜ, ಇದು ಕೆಲವೆರಡು ಗಂಟೆಗಳಲ್ಲಿ ಆಗುವ ಕೆಲಸವಲ್ಲ. ಒಂದಷ್ಟು ದಿನಗಳಾದರೂ ಬೇಕಾಗುತ್ತದೆ. ಒಟ್ಟಾರೆ(ಹೂಳೆತ್ತಲ್ಪಡುವುದರಿಂದ) ನದಿಯ ತಟ ಓರೆಯಾಕಾರದಲ್ಲಿ ವಿಸ್ತರಣೆಯಾಗುತ್ತದೆ, ನದಿ ಮತ್ತಷ್ಟು ಆಳವಾಗುತ್ತದೆ, ಪರಿಣಾಮ ಪ್ರವಾಹ ನಿಯಂತ್ರಣವಾಗುತ್ತದೆ....’’ (ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಇಂಗ್ಲಿಷ್ ಸಂ.17, ಭಾಗ-2, ಪು.388)

ಖಂಡಿತ, ಬಾಬಾಸಾಹೇಬರು ನೀಡುವ ಈ ವಿವರಣೆ ಯಾರನ್ನಾದರೂ ಚಕಿತಗೊಳಿಸದಿರದು. ಅದರಲ್ಲೂ ವಿಜ್ಞಾನದ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಪ್ರೊಫೆಸರ್‌ರನ್ನು. ಏಕೆಂದರೆ ಅಣುಶಕ್ತಿಯ ಶಕ್ತಿ ಎಲ್ಲರಿಗೂ ಗೊತ್ತೇ ಇದೆ. ಈ ದಿಸೆಯಲ್ಲಿ ಅಣುಶಕ್ತಿಯ ಒಂದು ಅಣು ಬಾಂಬ್ ದುಷ್ಟ ಉದ್ದೇಶಕ್ಕೆ ಬಳಸಲ್ಪಟ್ಟು ಇಡೀ ಪ್ರಪಂಚವನ್ನೇ ನಾಶಗೊಳಿಸಬಲ್ಲುದಾದರೆ ಅದೇ ಅಣುಶಕ್ತಿಯನ್ನು ಶಿಷ್ಟ ಉದ್ದೇಶಕ್ಕೆ ಬಳಸಿ ಅದರಿಂದ ಹೊರಬರುವ ಅಗಾಧ ಪ್ರಮಾಣದ ನ್ಯೂಟ್ರಾನುಗಳ ಪ್ರವಾಹವನ್ನು ಪ್ರವಾಹ ಇರುವ ನದಿಯ ಆಳಕ್ಕೆ ಇಳಿಯಬಿಟ್ಟರೆ...? ಅಂಬೇಡ್ಕರ್‌ರವರು ವಿವರಿಸಿದ ಮಾದರಿಯಲ್ಲಿ ಪ್ರವಾಹ ನಿಯಂತ್ರಣವಾದರೆ...? ನಾಶ ಎಲ್ಲಾಗುತ್ತದೆ? ಅಗಾಧ ಜೀವರಾಶಿಗಳ ರಕ್ಷಣೆಯಾಗುತ್ತದೆಯಲ್ಲವೇ?

ಈ ನಿಟ್ಟಿನಲ್ಲಿ ಸರಕಾರಕ್ಕೆ ಸಲಹೆ ನೀಡುವ ಅಂಬೇಡ್ಕರ್‌ರವರು ‘‘ನದಿಪ್ರವಾಹ ಮತ್ತೆ ಮತ್ತೆ ಉಂಟಾಗುವ ಸಮಸ್ಯೆ. ಇದಕ್ಕಿಂತ ದೊಡ್ಡದಾದ ಸಮೂಹ ನಾಶ ಶಕ್ತಿ ಮತ್ತೊಂದಿಲ್ಲ. ಆದ್ದರಿಂದ ಸರಕಾರ ಇದರ ನಿಯಂತ್ರಣಕ್ಕೆ ಕೇವಲ ತನ್ನ ಅಧಿಕಾರಿಗಳ ವಿಜ್ಞಾನದ ಜ್ಞಾನಕ್ಕಷ್ಟೆ ಜೋತುಬೀಳದೆ ದೇಶದ ಇತರ ಮೂಲಗಳಿಂದಲೂ ಬರುವ ಸಲಹೆಗಳಿಗೂ ಅರ್ಹತೆಯ ಆಧಾರದ ಮೇಲೆ ಆದ್ಯತೆ ನೀಡಬೇಕು. ಯಾಕೆಂದರೆ ಸಲಹೆಗಳ ಬಹುತ್ವದಲ್ಲಿ ನಮ್ಮ ರಕ್ಷಣೆ ಅಡಗಿದೆ’’ ಎನ್ನುತ್ತಾರೆ.

ಆ ಮೂಲಕ ಪ್ರವಾಹ ನಿಯಂತ್ರಿಸಲು ಅಣುಶಕ್ತಿಯನ್ನು ಕೂಡ ಸಮರ್ಥವಾಗಿ ಬಳಸಬಹುದು. ಈ ದಿಸೆಯಲ್ಲಿ ಸರಕಾರ ಚಿತ್ತಹರಿಸಬೇಕು ಎಂದು ತಮ್ಮ ಆ ಲೇಖನದಲ್ಲಿ ತಿಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅರಿವಾಗುವುದೇನೆಂದರೆ ಅಂಬೇಡ್ಕರ್‌ರ ವಿಜ್ಞಾನದ ಜ್ಞಾನ. ಅದರಲ್ಲೂ ಭೌತಶಾಸ್ತ್ರದ ಪ್ರೋಟಾನು, ನ್ಯೂಟ್ರಾನು, ಎಲೆಕ್ಟ್ರಾನು, ಓಮನ ನಿಯಮ ಇತ್ಯಾದಿಗಳ ಸ್ಪಷ್ಟ ಜ್ಞಾನ ಮತ್ತು ಅದನ್ನು ಸಮಾಜದ ಒಳಿತಿಗೆ ಬಳಸಬಹುದು ಎಂಬ ಅವರ ಅನ್ವಯಿಕ ನಿಲುವು. ಬಾಬಾಸಾಹೇಬರ ಅಂತಹ ವಿಜ್ಞಾನದ ಜ್ಞಾನ ನಿಜಕ್ಕೂ ಆಶ್ಚರ್ಯಕರವಾದದ್ದು, ಹಾಗೆಯೇ ಸ್ಫೂರ್ತಿದಾಯಕವಾದದ್ದು, ವಿಶೇಷವಾಗಿ ಸಂಶೋಧಕರಿಗೆ. ಅದರಲ್ಲೂ ವಿಜ್ಞಾನದ ಕಲಿಕೆಯಲ್ಲಿ, ಕಲಿಸುವಿಕೆಯಲ್ಲಿ ತೊಡಗಿರುವ ಕೋಟ್ಯಂತರ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಎಂದರೆ ಅದು ಅತಿಶಯೋಕ್ತಿಯೆನಿಸದು.

Writer - ರಘೋತ್ತಮ ಹೊ.ಬ., ಮೈಸೂರು

contributor

Editor - ರಘೋತ್ತಮ ಹೊ.ಬ., ಮೈಸೂರು

contributor

Similar News