ಜೈಲುಪಾಲಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾರಿಗೆ ಪತಿವಿಯೋಗ

Update: 2018-03-20 04:09 GMT

ಚೆನ್ನೈ, ಮಾ.20: ಅಕ್ರಮ ಸಂಪತ್ತು ಪ್ರಕರಣದಲ್ಲಿ ಜೈಲುಪಾಲಾಗಿರುವ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರ ಪತಿ ಎಂ.ನಟರಾಜನ್ ಮುಂಜಾನೆ 1.30ಕ್ಕೆ ನಿಧನರಾಗಿದ್ದಾರೆ.

ಅವರು ಗ್ಲೆನೆಗ್ಲೆಸ್ ಗ್ಲೋಬಲ್ ಹೆಲ್ತ್ ಸಿಟಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಟರಾಜನ್ ಮರುತಪ್ಪ ಅವರು ಇಂದು ಮುಂಜಾನೆ 1:30ಕ್ಕೆ ನಿಧನರಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದವು ಎಂದು ಆಸ್ಪತ್ರೆಯ ಪ್ರಕಟನೆ ಹೇಳಿದೆ.

ಅವರ ಆರೋಗ್ಯ ಸುಧಾರಣೆಗೆ ಎಲ್ಲ ಪ್ರಯತ್ನ ನಡೆಸಿದರೂ, ಪುನಶ್ಚೇತನ ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಷಣ್ಮುಗಪ್ರಿಯನ್ ಪ್ರಕಟಿಸಿದ್ದಾರೆ. 74 ವರ್ಷದ ನಟರಾಜನ್ ಅವರಿಗೆ ಕಳೆದ ವರ್ಷ ಎರಡು ಅಂಗಾಂಗ ಕಸಿ ನಡೆದಿತ್ತು. ತೀವ್ರ ಹೃದಯ ಸೋಂಕಿನ ಹಿನ್ನೆಲೆಯೆಲ್ಲಿ ಮಾ.16ರಂದು ಅವರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಸೋಮವಾರ ಅವರಿಗೆ ಟ್ರೆಂಚೋಸ್ಟಮಿ ಚಿಕಿತ್ಸೆ ನೀಡಲಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.

ನಟರಾಜನ್ ಪಾರ್ಥಿವ ಶರೀರವನ್ನು ಅವರ ಬೆಸೆಂಟ್‌ನಗರ ನಿವಾಸದಲ್ಲಿ 11 ಗಂಟೆಯವರೆಗೆ ಇರಿಸಲಾಗುವುದು. ಬಳಿಕ ಹುಟ್ಟೂರಾದ ತಂಜಾವೂರ್ ಜಿಲ್ಲೆಗೆ ಅಂತ್ಯಸಂಸ್ಕಾರಕ್ಕಾಗಿ ಒಯ್ಯಲಾಗುವುದು ಎಂದು ನಿಕಟವರ್ತಿಗಳು ಹೇಳಿದ್ದಾರೆ. ಕಳೆದ ವಾರ ನಟರಾಜನ್ ಅವರ ಆರೋಗ್ಯಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಶಶಿಕಲಾ ಪತಿಯನ್ನು ನೋಡುವ ಸಲುವಾಗಿ ಪರೋಲ್‌ಗೆ ಮನವಿ ಸಲ್ಲಿಸುತ್ತಾರೆ ಎಂಬ ವದಂತಿ ಹಬ್ಬಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News