ಜೈನಮುನಿಯ ಮೇಲೆ ಮುಸ್ಲಿಮರಿಂದ ದಾಳಿ ಎಂದು ಸುಳ್ಳುಸುದ್ದಿ ಹರಡಿ ಸಿಕ್ಕಿಬಿದ್ದ ‘ಪೋಸ್ಟ್ ಕಾರ್ಡ್’

Update: 2018-03-20 10:53 GMT

“ತುಂಬಾ ಬೇಸರದ ಸುದ್ದಿ, ನಿನ್ನೆ ಕರ್ನಾಟಕದಲ್ಲಿ ಜೈನ ಮುನಿಯೊಬ್ಬರ ಮೇಲೆ ಮುಸ್ಲಿಮ್ ಯುವಕರು ದಾಳಿ ನಡೆಸಿದ್ದಾರೆ…. ಸಿದ್ದರಾಮಯ್ಯ ಸರಕಾರದ ಕರ್ನಾಟಕದಲ್ಲಿ ಯಾರೊಬ್ಬರೂ ಸುರಕ್ಷಿತರಲ್ಲ” ಇಂತಹ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದ ತಕ್ಷಣ ಹಲವರು ಇದನ್ನು ನಂಬುತ್ತಾರೆ. ಕೆಲವೊಮ್ಮೆ ಇವುಗಳು ಸಮಾಜದ ಸ್ವಾಸ್ಥ್ಯ ಹದಗೆಡಲೂ ಕಾರಣವಾಗುತ್ತದೆ.

ಜೈನ ಮುನಿಯ ಮೇಲೆ ಮುಸ್ಲಿಮರಿಂದ ಹಲ್ಲೆ ಎನ್ನುವ ಸುದ್ದಿಯನ್ನು ಸುಳ್ಳು ಸುದ್ದಿಗಳನ್ನೇ ಹರಡುವಲ್ಲಿ ಕುಖ್ಯಾತಿ ಗಳಿಸಿರುವ ಹಲವರು ಶೇರ್ ಮಾಡಿದ್ದರು. ಫೇಕ್ ನ್ಯೂಸ್ ಹರಡುವ ಪೋಸ್ಟ್ ಕಾರ್ಡ್ ನ ಸ್ಥಾಪಕ ವಿಕ್ರಮ್ ಹೆಗ್ಡೆ ಹಾಗು ಹಲವು ಬಾರಿ ಸುಳ್ಳು ಸುದ್ದಿ ಹರಡಿ ಸಿಕ್ಕಿಬಿದ್ದ ಗೌರವ್ ಪ್ರಧಾನ್ ಎಂಬವನ ಟ್ವಿಟರ್ ಖಾತೆಗಳಲ್ಲಿ ಜೈನ ಮುನಿಯ ಮೇಲಿನ ಹಲ್ಲೆಯ ಸುದ್ದಿಯನ್ನು ಪೋಸ್ಟ್ ಮಾಡಲಾಗಿತ್ತು. ಈ ಇಬ್ಬರನ್ನೂ ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ. ಈ ಸುದ್ದಿಯ ಸತ್ಯಾಸತ್ಯತೆಯನ್ನು altnews.in ವರದಿ ಮಾಡಿದೆ.

ಈ ಸುದ್ದಿಯನ್ನು ಫೇಸ್ ಬುಕ್ ನಲ್ಲಿ ಮೊದಲು ಶೇರ್ ಮಾಡಿದ್ದು ದೀಪಕ್ ಶೆಟ್ಟಿ ಎಂಬಾತ. ಈತನ ಪೋಸ್ಟ್ 6000 ಬಾರಿ ಶೇರ್ ಆಗಿತ್ತು. ಪೋಸ್ಟ್ ಕಾರ್ಡ್ ನ್ಯೂಸ್ ಪೇಜ್ ಕೂಡ ಇದನ್ನು ಶೇರ್ ಮಾಡಿತ್ತು.  

ಆದರೆ altnews.in ಈ ಸುದ್ದಿಯ ಹಿಂದೆ ಬಿದ್ದಾಗ ಮುಸ್ಲಿಮ್ ಯುವಕರಿಂದ ಜೈನ ಮುನಿಯ ಮೇಲೆ ದಾಳಿ ನಡೆದಿಲ್ಲ ಎನ್ನುವುದು ಸ್ಪಷ್ಟಗೊಂಡಿದೆ. ಬೈಕ್ ಒಂದು ಢಿಕ್ಕಿ ಹೊಡೆದ ಪರಿಣಾಮ ಜೈನ ಮುನಿ ಮಾಯಂಕ್ ಸಾಗರ್ ಎಂಬವರ ಭುಜಕ್ಕೆ ಸಣ್ಣ ಮಟ್ಟಿನ ಗಾಯವಾಗಿತ್ತು. ಕರ್ನಾಟಕದ ಕನಕಪುರದಲ್ಲಿ ಈ ಘಟನೆ ನಡೆದಿತ್ತು. ಇದೀಗ ಅವರು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.

‘ಅಹಿಂಸಾ ಕ್ರಾಂತಿ’ ಎನ್ನುವ ಜೈನ ಪಬ್ಲಿಕೇಶನ್ ಒಂದು ಈ ಬಗ್ಗೆ ವರದಿ ಮಾಡಿತ್ತು. ಈ ಬಗ್ಗೆ altnews.in ಪಬ್ಲಿಕೇಶನ್  ನ ಸಂಪಾದಕರನ್ನು ಸಂಪರ್ಕಿಸಿದ್ದು, ಅಪಘಾತದ ಸುದ್ದಿ ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ಬಗ್ಗೆಯೂ, ಈ ಘಟನೆಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಅವರು ಸ್ಪಷ್ಟಪಡಿಸಿದ್ದರು. ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಲು ಮಯಾಂಕ್ ಸಾಗರ್ ಫೆಬ್ರವರಿ 4ರಂದು ಕರ್ನಾಟಕಕ್ಕೆ ಆಗಮಿಸಿದ್ದರು. ಈ ಸಂದರ್ಭ ಅಪಘಾತ ಸಂಭವಿಸಿತ್ತು. ಈ ಬಗ್ಗೆ ಮಾರ್ಚ್ 13ರಂದೇ ಅಹಿಂಸಾ ಕ್ರಾಂತಿ ವರದಿ ಮಾಡಿತ್ತು.

ಚುನಾವಣೆಗೂ ಮುನ್ನ ಇಂತಹ ಕಟ್ಟುಕಥೆಗಳ ಸುದ್ದಿಗಳು ಹರಡುವುದು ಸಾಮಾನ್ಯ ಸಂಗತಿ. ಸುಳ್ಳನ್ನೇ ಸತ್ಯವೆಂದು ನಂಬಿಸುವ ಹಲವರು ಇಂತಹ ಅವಕಾಶಕ್ಕಾಗಿಯೇ ಕಾಯುತ್ತಾ ಇರುತ್ತಾರೆ. ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಇಂತಹವರ ವಿರುದ್ಧ ಜನರು ಜಾಗೃತರಾಗಬೇಕು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News