ಹೆಸರಿನಲ್ಲೇನಿದೆ?

Update: 2018-04-14 06:46 GMT

ಅಂಬೇಡ್ಕರ್ ತಮ್ಮ ಜೀವಮಾನದ ಉದ್ದಕ್ಕೂ ಯಾವ ವೌಲ್ಯಗಳಿಗಾಗಿ ಹೋರಾಡಿದರೋ, ಆ ವೌಲ್ಯಗಳನ್ನು, ತತ್ವಗಳನ್ನು ಬದಿಗೆ ತಳ್ಳುತ್ತ, ತೋರಿಕೆಗೆ ಅವರನ್ನು ಹಾಡಿ ಹೊಗಳಲಾಗುತ್ತಿದೆ. ಈಗ ಹಿಂದೂ ರಾಷ್ಟ್ರೀಯವಾದಿ ರಾಜಕಾರಣದಲ್ಲಿ ಹೊಸದಾದ ಒಂದು ಆಯಾಮ ಕಂಡು ಬರುತ್ತದೆ. ರಾಮನ ರಾಜಕಾರಣವನ್ನು ಅಂಬೇಡ್ಕರ್‌ರ ಹೆಸರು ಬಳಸಿ ಇನ್ನಷ್ಟು ಬಲಪಡಿಸುವ ರಾಜಕಾರಣ ಇದು.

ಭೀಮರಾವ್ ಅಂಬೇಡ್ಕರ್‌ರವರ (ಸರಕಾರಿ) ಅಧಿಕೃತ ದಾಖಲೆಗಳಲ್ಲಿ ‘ರಾಮ್‌ಜಿ’ ಎಂಬ ಶಬ್ದವನ್ನು ಸೇರಿಸಿರುವ ಉತ್ತರ ಪ್ರದೇಶ (ಯುಪಿ) ಸರಕಾರದ ಕ್ರಮವನ್ನು ಟೀಕಿಸಿ ಹಲವಾರು ದಲಿತ ನಾಯಕರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಸಂವಿಧಾನದಲ್ಲಿ ಬಾಬಾ ಸಾಹೇಬ್‌ರವರು ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಎಂದು ಸಹಿ ಮಾಡಿರುವುದು ನಿಜ. ಆದರೆ ಅವರ ಹೆಸರಿಗೆ ರಾಮ್‌ಜಿಯನ್ನು ಸಾಮಾನ್ಯವಾಗಿ ಸೇರಿಸುವುದಿಲ್ಲ. ತಾಂತ್ರಿಕವಾಗಿ, ಸರಕಾರದ ಕ್ರಮವನ್ನು ಪ್ರಶ್ನಿಸುವುದು ಸಾಧ್ಯವಿಲ್ಲದಿರಬಹುದು. ಆದರೆ, ಹೀಗೆ ರಾಮ್‌ಜಿ ಎಂಬ ಶಬ್ದದ ಸೇರಿಸುವಿಕೆಯ ಹಿಂದೆ ಅವರನ್ನು ಹಿಂದುತ್ವ ರಾಜಕಾರಣದ ತೆಕ್ಕೆಯೊಳಗೆ ಎಳೆದುಕೊಳ್ಳುವ ಒಂದು ಹುನ್ನಾರವಿದೆ, ರಾಜಕೀಯ ಸಾಂಕೇತಿಕತೆ ಇದೆ.

ಯಾಕೆಂದರೆ ರಾಮ ದೇವಾಲಯದ ಪ್ರಶ್ನೆಯಿರಲಿ ಅಥವಾ ರಾಮ ನವಮಿ ಸಂದರ್ಭದಲ್ಲಿ ಹುಟ್ಟು ಹಾಕುವ ಹಿಂಸೆಯಿರಲಿ, ಬಿಜೆಪಿಗೆ ಶ್ರೀರಾಮನು ಸಮಾಜವನ್ನು ಕೋಮುವಾದೀಕರಿಸಲು ಒಂದು ಕೇಂದ್ರ ವ್ಯಕ್ತಿ, ಶಕ್ತಿ. ಮೋದಿ-ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದರೊಂದಿಗೆ ಎರಡು ಒಂದಕ್ಕೊಂದು ವಿರುದ್ಧವಾದ ನಿಲುವುಗಳು ಕಂಡು ಬಂದವು. ಒಂದು, ದಲಿತರ ವಿರುದ್ಧ ದೌರ್ಜನ್ಯ ಪ್ರಕರಣಗಳ ಹೆಚ್ಚಳ ಮತ್ತು ಎರಡನೆಯದಾಗಿ ಹಿಂದೂ ರಾಷ್ಟ್ರೀಯವಾದಿಗಳಿಂದ ಅದ್ದೂರಿಯಾಗಿ ಅಂಬೇಡ್ಕರ್ ದಿನಾಚರಣೆಗಳ ಏರ್ಪಡಿಸುವಿಕೆ.
ಕಳೆದ ಸುಮಾರು ನಾಲ್ಕು ವರ್ಷಗಳಲ್ಲಿ ನಾವು ಹಲವು ಬೆಳವಣಿಗೆಗಳನ್ನು, ಘಟನೆಗಳನ್ನು ಕಂಡಿದ್ದೇವೆ. ಮದರಾಸ್‌ನ ಐಐಟಿಯಲ್ಲಿ ಪೆರಿಯಾರ್ ಸ್ಟಡಿ ಸರ್ಕಲ್‌ನ ಮೇಲೆ ದಾಳಿ, ರೋಹಿತ್ ವೇಮುಲಾರ ಸಾಂಸ್ಥಿಕ ಕೊಲೆ ಮತ್ತು ಉನಾದಲ್ಲಿ ಗೋಮಾಂಸದ ಹೆಸರಿನಲ್ಲಿ ದಲಿತ ವಿರೋಧಿ ಹಿಂಸೆ ಇತ್ಯಾದಿ. ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಲೇ ಇದೆ. 2016ರಲ್ಲಿ ವಿ.ಕೆ.ಸಿಂಗ್, ದಲಿತರನ್ನು ನಾಯಿಗಳಿಗೆ ಹೋಲಿಸಿದ್ದರು. ಯುಪಿಯ ಖುಶಿ ನಗರದಲ್ಲಿ ಮುಖ್ಯಮಂತ್ರಿ ಯೋಗಿ ಮುಶಾರ್‌ಗಳಿಗೆ ಭೇಟಿ ನೀಡುವ ಮೊದಲು ಆ ಜಾಗವನ್ನು ತೊಳೆದು ಶುದ್ಧೀಕರಣ ಮಾಡಲು ಅಧಿಕಾರಿಗಳು ಸೋಪ್ ಬಾರ್‌ಗಳನ್ನು ಹಾಗೂ ಶಾಂಪುಗಳನ್ನು ವಿತರಿಸಿದರು.
ಇದಕ್ಕೆ ವ್ಯತಿರಿಕ್ತವಾಗಿ, ಅಂಬೇಡ್ಕರ್ ಜಾತಿ ವ್ಯವಸ್ಥೆಯ ಉಗ್ರ ವಿರೋಧಿಯಾಗಿದ್ದರು. ಕಟು ಟೀಕಾಕಾರರಾಗಿದ್ದರು. ಅವರು ಭಾರತೀಯ ರಾಷ್ಟ್ರೀಯತೆಯ ಹಾಗೂ ‘‘ಜಾತಿ ಪದ್ಧತಿ ನಿರ್ಮೂಲನ’’ದ ಪರವಾಗಿದ್ದರು. ಜಾತಿ ವ್ಯವಸ್ಥೆ ಮತ್ತು ಅಸ್ಪಶ್ಯತೆಗೆ ಹಿಂದೂ ಸ್ಮತಿ, ಶಾಸ್ತ್ರ ಗ್ರಂಥಗಳೇ ಕಾರಣ ಎಂದು ಅವರು ತರ್ಕ ಬದ್ಧವಾಗಿ ವಾದಿಸಿದ್ದರು. ಇಂತಹ ಜೀವ ವಿರೋಧಿ ವೌಲ್ಯಗಳಿಂದ ದೂರವಿರುವುದಕ್ಕಾಗಿ ಅವರು ಮನುಸ್ಮತಿಯನ್ನು ಸಾರ್ವಜನಿಕವಾಗಿ ಸುಡುವ ಹಂತಕ್ಕೂ ಹೋದರು.
ಇನ್ನೊಂದೆಡೆ, ಹಿಂದೂ ರಾಜರು ಹಾಗೂ ಜಮೀನ್ದಾರರ ಬೆಂಬಲದಿಂದ ಆರಂಭವಾದ ಹಿಂದೂ ಮಹಾಸಭಾ ‘ಗತಕಾಲದ ವೈಭವ’ದ ಜಪ ಮಾಡುತ್ತ ಜಾತಿ ವ್ಯವಸ್ಥೆಯನ್ನು ದೈವಿಕ ಎಂದು ಪರಿಗಣಿಸಿರುವುದನ್ನು ಕಾಣಬಹುದು. ಇಲ್ಲಿಂದ ಹಿಂದುತ್ವದ ಪರಿಕಲ್ಪನೆ ಮುನ್ನೆಲೆಗೆ ಬಂತು. ಹಿಂದುತ್ವ ಅಥವಾ ‘ಸಂಪೂರ್ಣ ಹಿಂದೂತನ’ ಹಿಂದೂ ರಾಷ್ಟ್ರದ ಗುರಿ ಹೊಂದಿದೆ. (ಸಾವರ್ಕರ್ ಪ್ರಕಾರ) ಈ ಹಿಂದೂ ರಾಷ್ಟ್ರವು ಆರ್ಯನ್ ಜನಾಂಗ ಮತ್ತು ಸಂಸ್ಕೃತಿಯನ್ನು ಹೊಂದಿರುವುದಾಗಿದೆ. ಈ ರಾಜಕಾರಣವನ್ನು ಆರೆಸ್ಸೆಸ್ ಮತ್ತೂ ಮುಂದಕ್ಕೆ ಕೊಂಡೊಯ್ಯಿತು.
 ಮಾಧವ್ ಸದಾಶಿವ್ ಗೋಳ್ವಾಲ್ಕರ್ ಮತ್ತು ಹೆಚ್ಚಿನ ಇತರ ಹಿಂದುತ್ವ ಸಿದ್ಧಾಂತಿಗಳು ಅಂಬೇಡ್ಕರ್ ವಿರೋಧಿಸಿದ ಶಾಸ್ತ್ರ ಗ್ರಂಥಗಳನ್ನು, ಪವಿತ್ರ ಗ್ರಂಥಗಳನ್ನು ಎತ್ತಿ ಹಿಡಿದರು. ಮನುಸ್ಮತಿ ಇಂದು ಹಿಂದೂ ಕಾನೂನು ಎಂದು ಸಾವರ್ಕರ್ ಹೇಳಿದರು. ಗೋಳ್ವಾಲ್ಕರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನು ಸಾರ್ವಕಾಲಿಕವಾಗಿ ಅತ್ಯಂತ ಶ್ರೇಷ್ಠ ಕಾನೂನು ನಿರ್ಮಾತೃ ಎಂದು ಘೋಷಿಸಿದರು. ಅವರ ಕಾನೂನುಗಳು ಇಂದಿಗೂ ಪ್ರಸ್ತುತ ಎಂದು ಅವರು ಹೇಳಿದರು.
ಭಾರತದ ಸಂವಿಧಾನವು ಅಸ್ತಿತ್ವಕ್ಕೆ ಬಂದು, ಅನುಷ್ಠಾನಗೊಂಡಾಗ ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್’ ಸಂವಿಧಾನವನ್ನು ಖಂಡಿಸಿ ಸಂಪಾದಕೀಯವೊಂದನ್ನು ಬರೆಯಿತು. ಆರೆಸ್ಸೆಸ್ ಮತ್ತು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಕೂಡ, ಸಾರ್ವಜನಿಕವಾಗಿ ‘‘ಸಂವಿಧಾನವನ್ನು ಬದಲಿಸುವ’’ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಅಂಬೇಡ್ಕರ್ ಹಿಂದೂ ಕೋಡ್ ಮಸೂದೆಯನ್ನು ಮಂಡಿಸಿದಾಗ ಅದಕ್ಕೆ ತೀವ್ರವಾದ ವಿರೋಧ ವ್ಯಕ್ತವಾಗಿತ್ತು. ಆಗ ಅಂಬೇಡ್ಕರ್ ತನ್ನ ನಿಲುವಿಗೆ ಬದ್ಧರಾಗಿ ನಿಂತು ಹೇಳಿದ್ದರು, ‘‘ನೀವು ಶಾಸ್ತ್ರಗಳನ್ನು ತ್ಯಜಿಸಿದರಷ್ಟೇ ಸಾಲದು, ಬುದ್ಧ ಮತ್ತು ನಾನಕ್ ಮಾಡಿದಂತೆ, ನೀವು ಅವುಗಳ ಅಧಿಕಾರವನ್ನು ಅಲ್ಲಗಳೆಯಬೇಕು. ಹಿಂದೂಗಳ ಸಮಸ್ಯೆ, ದೋಷ ಏನೆಂದರೆ ಅವರ ಧರ್ಮ ಎಂದು ಅವರಿಗೆ ಹೇಳುವ ಧೈರ್ಯ ನಿಮಗಿರಬೇಕು. ಜಾತಿಯ ಪವಿತ್ರತೆಯ ವಿಚಾರವನ್ನು ಅವರಲ್ಲಿ ಉತ್ಪಾದಿಸಿರುವ, ಉಂಟು ಮಾಡಿರುವ, ಧರ್ಮವೇ ಅವರ ಸಮಸ್ಯೆ’’.
ಈಗ ಏನಾಗುತ್ತಿದೆ? ಜಾತಿಯನ್ನು ಹಲವಾರು ರೀತಿಗಳಲ್ಲಿ ಎತ್ತಿ ಹಿಡಿಯಲಾಗುತ್ತಿದೆ. ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲ ಗೊಳಿಸುವಂತೆ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಕರಿಗೆ ಮೀಸಲಾತಿ ನಿಯಮದ ರದ್ದುಪಡಿಸುವಿಕೆಯು ಸಾಮಾಜಿಕ ನ್ಯಾಯ ಪರಿಕಲ್ಪನೆಯ ಮೇಲೆ ನಡೆದಿರುವ ನೇರವಾದ ದಾಳಿಯಾಗಿದೆ.
ಹಿಂದೂ ರಾಷ್ಟ್ರೀಯವಾದಿ ರಾಜಕಾರಣವು ಜಾತಿ ಮತ್ತು ಲಿಂಗ ಶ್ರೇಣೀಕರಣ ಕೇಂದ್ರವಾಗಿರುವ ವೌಲ್ಯ ವ್ಯವಸ್ಥೆಯನ್ನಾಧರಿಸಿದೆ. ಹಿಂದುತ್ವವಾದಿಗಳು ಒಂದೆಡೆ ದಲಿತರ ಆಕಾಂಕ್ಷೆಗಳನ್ನು ಬದಿಗೆ ತಳ್ಳುತ್ತ, ಇನ್ನೊಂದೆಡೆ ತಮ್ಮ ರಾಜಕೀಯ ಗುರಿಗಳ ಸಾಧನೆಗಾಗಿ ದಲಿತರನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಈ ಓಲೈಸುವಿಕೆಯು ದಲಿತರ ಪ್ರಶ್ನೆಗಳಿಗೆ ಸಂಬಂಧಿಸಿದ ಅವರ ಸಾಂಕೇತಿಕತೆ (ಟೋಕನಿಸಂ)ಯಲ್ಲಿ, ವಿಶೇಷವಾಗಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರಿಗೆ ಗೌರವ ಸಲ್ಲಿಸುವುದರಲ್ಲಿ, ಸ್ಪಷ್ಟವಾಗಿ ಕಾಣಿಸುತ್ತದೆ. ಅದೇ ವೇಳೆ, ಅವರ ತಿರುಳು ಸಿದ್ಧಾಂತವಾಗಿರುವ ಶ್ರೀರಾಮ, ಪವಿತ್ರ ಹಸು ಮತ್ತು ಧಾರ್ಮಿಕ ಅಲ್ಪಸಂಖ್ಯಾಕರನ್ನು ಗುರಿ ಮಾಡುವ ಧಾರ್ಮಿಕ ಭಾವನೆಗಳ ಕೆರಳಿಸುವಿಕೆಯೊಂದಿಗೆ ತಮ್ಮ ವಲಯದೊಳಕ್ಕೆ ದಲಿತರನ್ನು ಸೆಳೆದುಕೊಳ್ಳುವ ತಂತ್ರಗಾರಿಕೆಯೂ ಕಾಣಿಸುತ್ತ್ತಿದೆ.
ಅಂಬೇಡ್ಕರ್ ತಮ್ಮ ಜೀವಮಾನದ ಉದ್ದಕ್ಕೂ ಯಾವ ವೌಲ್ಯಗಳಿಗಾಗಿ ಹೋರಾಡಿದರೋ, ಆ ವೌಲ್ಯಗಳನ್ನು, ತತ್ವಗಳನ್ನು ಬದಿಗೆ ತಳ್ಳುತ್ತ, ತೋರಿಕೆಗೆ ಅವರನ್ನು ಹಾಡಿ ಹೊಗಳಲಾಗುತ್ತಿದೆ. ಈಗ ಹಿಂದೂ ರಾಷ್ಟ್ರೀಯವಾದಿ ರಾಜಕಾರಣದಲ್ಲಿ ಹೊಸದಾದ ಒಂದು ಆಯಾಮ ಕಂಡು ಬರುತ್ತದೆ. ರಾಮನ ರಾಜಕಾರಣವನ್ನು ಅಂಬೇಡ್ಕರ್‌ರ ಹೆಸರು ಬಳಸಿ ಇನ್ನಷ್ಟು ಬಲಪಡಿಸುವ ರಾಜಕಾರಣ ಇದು.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News

ಜಗದಗಲ
ಜಗ ದಗಲ