ಭಾರತೀಯರ ‘ಮನಸ್ಸು ಮುರಿದ ’ ಪಾಕ್ ಆಟಗಾರನಿಂದ ಹೃದಯ ಚಿಕಿತ್ಸೆಗೆ ನೆರವಿಗೆ ಮನವಿ

Update: 2018-04-24 18:52 GMT

ಕರಾಚಿ, ಎ.24: ಹಾಕಿ ವಿಶ್ವಕಪ್ ಜಯಿಸಿದ ಪಾಕಿಸ್ತಾನ ಹಾಕಿ ತಂಡದ ಗೋಲ್ ಕೀಪರ್ ಮನ್ಸೂರ್ ಅಹ್ಮದ್ ಹೃದಯ ಚಿಕಿತ್ಸೆಯ ಉದ್ದೇಶಕ್ಕಾಗಿ ಸೋಮವಾರ ಭಾರತಕ್ಕೆ ಆಗಮಿಸಿದ್ದಾರೆ. 49ರ ಹರೆಯದ ಅಹ್ಮದ್ ಕೆಲವು ಸಮಯಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೀಗ ಅವರಿಗೆ ಹೃದಯ ಕಸಿ ಚಿಕಿತ್ಸೆಯ ಅಗತ್ಯವಿದೆ. ಅದಕ್ಕೆ ನೆರವು ನೀಡುವಂತೆ ಭಾರತ ಸರಕಾರಕ್ಕೆ ಮನವಿ ಮಾಡಿದ್ದಾರೆ.

   26/11 ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಸಾಮಾಜಿಕ ಮತ್ತು ರಾಜಕೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಸಂಬಂಧ ಪುನರಾರಂಭಕ್ಕೆ ಸಮಸ್ಯೆ ಉಂಟಾಗಿದೆ. ಪರಿಸ್ಥಿತಿ ಹೀಗಿದ್ದರೂ ಅನಾರೋಗ್ಯದಿಂದ ಬಳಲುತ್ತಿರುವ ಪಾಕ್ ಪ್ರಜೆಗಳಿಗೆ ಭಾರತದಲ್ಲಿ ಚಿಕಿತ್ಸೆ ಪಡೆಯಲು ಯಾವುದೇ ಸಮಸ್ಯೆ ಇಲ್ಲ. ಭಾರತಕ್ಕೆ ಆಗಮಿಸಲು ಮೆಡಿಕಲ್ ವೀಸಾ ಪಡೆಯಲು ಪಾಕ್ ಪ್ರಜೆಗಳಿಗೆ ಅವಕಾಶ ಇದೆ.

 ಇದೀಗ ಹಾಕಿ ಆಟಗಾರ ಅಹ್ಮದ್ ಭಾರತಕ್ಕೆ ಆಗಮಿಸಿ ತನಗೆ ಚಿಕಿತ್ಸೆಗೆ ನೆರವಾಗುವಂತೆ ಮನವಿ ಮಾಡಿದ್ದಾರೆ. ಅಹ್ಮದ್ ಪಾಕ್ ಕ್ರೀಡಾ ರಂಗದ ಐಕಾನ್ ಆಗಿದ್ದಾರೆ. 1994ರಲ್ಲಿ ಸಿಡ್ನಿಯಲ್ಲಿ ನಡೆದ ಹಾಕಿ ವಿಶ್ವಕಪ್‌ನ ಫೈನಲ್‌ನಲ್ಲಿ ಹಾಲೆಂಡ್‌ನ್ನು ಮಣಿಸಿ ಪಾಕ್ ತಂಡ ವಿಶ್ವ ಚಾಂಪಿಯನ್‌ಪಟ್ಟವನ್ನಲಂಕರಿಸುವಲ್ಲಿ ಅಹ್ಮದ್ ಕೊಡುಗೆ ನೀಡಿದ್ದರು. 1989ರಲ್ಲಿ ಇಂದಿರಾ ಗಾಂಧಿ ಕಪ್ ಹಾಕಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡಕ್ಕೆ ಗೆಲುವು ದಾಖಲಿಸಲು ಅಹ್ಮದ್ ನೆರವಾಗಿದ್ದರು. ‘‘ಆ ಹೊತ್ತು ನನ್ನಿಂದಾಗಿ ಭಾರತದ ಹಲವರ ಮನಸ್ಸು ಮುರಿದಿರಬಹುದು. ಆದರೆ ಅದು ಕ್ರೀಡೆಗೆ ಸೀಮಿತ’’ ಎಂದು ಅಹ್ಮದ್ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

‘‘ ನನಗೆ ಹೃದಯ ಕಸಿ ಚಿಕಿತ್ಸೆ ಅಗತ್ಯ. ಇದಕ್ಕಾಗಿ ಭಾರತ ಸರಕಾರದ ನೆರವು ಬೇಕಾಗಿದೆ ’’ ಎಂದು ಅಹ್ಮದ್ ಹೇಳಿದ್ದಾರೆ. ಆದರೆ ಈ ಮೊದಲು ಶಾಹಿದ್ ಅಫ್ರಿದಿ ಪ್ರತಿಷ್ಠಾನವು ಅಹ್ಮದ್ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಲಿದೆ ಎಂದು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ತಿಳಿಸಿದ್ದರು.

1986ರಿಂದ 2000 ತನಕ ಅಹ್ಮದ್ ಪಾಕಿಸ್ತಾನ ತಂಡದಲ್ಲಿ 338 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News