ಸಿದ್ದರಾಮಯ್ಯ-ಬಿಎಸ್ವೈ ನಡುವೆ ಟ್ವಿಟರ್ ವಾಗ್ವಾದ
ಬೆಂಗಳೂರು, ಮೇ 2: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವೆ ಟ್ವಿಟರ್ನಲ್ಲಿ ವಾಗ್ವಾದಗಳು ಮುಂದುವರೆದಿವೆ.
'ಕೇಂದ್ರದ ಸಾಧನೆ ಬಗ್ಗೆ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿಯವರು 2022 ರೊಳಗೆ ರೈತರ ಆದಾಯ ದ್ವಿಗುಣಗೊಳಿಸಲು ಕಾರ್ಯೋನ್ಮುಖರಾಗಿದ್ದಾರೆ. ಕರ್ನಾಟಕದ 14 ಲಕ್ಷ ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. 60 ವರ್ಷಗಳಲ್ಲಿ ಕೃಷಿಗೆ ಕಾಂಗ್ರೆಸ್ ನೀಡಿದ್ದಕ್ಕಿಂತ ಹೆಚ್ಚಿನದನ್ನು ಪ್ರಧಾನಿ ಮೋದಿಯವರು ನಾಲ್ಕು ವರ್ಷಗಳಲ್ಲಿ ನೀಡಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಅಷ್ಟೇ ತೀವ್ರವಾಗಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಕರ್ನಾಟಕ ಸರಕಾರ ಶೇ.50 ರಷ್ಟು ಹಣವನ್ನು ಫಸಲ್ ಬಿಮಾ ಯೋಜನೆಗೆ ಭರಿಸುತ್ತಿದೆ. ದೇಶದಲ್ಲಿ ಅರ್ಧದಷ್ಟು ಹಣ ರೈತರ ಅಕೌಂಟ್ಗೆ ಹಾಕುವ ಸರಕಾರ ನಮ್ಮದು. ವಿಶೇಷ ಎಂದರೆ, ಬೆಳೆ ವಿಮೆ ಯೋಜನೆ ಯುಪಿಎ ಸರಕಾರದ್ದು, ಅದನ್ನೇ ನೀವು ಬಳಸಿಕೊಳ್ಳುತ್ತಿದ್ದೀರಿ' ಎಂದು ತಿರುಗೇಟು ನೀಡಿದ್ದಾರೆ.