ಚರ್ಮದ ಕ್ಯಾನ್ಸರ್ ಕುರಿತ ಈ ತಪ್ಪುಗ್ರಹಿಕೆಗಳು ನಿಮಗೆ ಗೊತ್ತೇ.....?

Update: 2018-05-03 10:18 GMT

ಬೇಸಿಗೆಯ ದಿನಗಳಲ್ಲಿ ಹವಾಮಾನ ಮತ್ತು ನಮ್ಮ ಸುತ್ತಲಿನ ವಾತಾವರಣದಲ್ಲಿ ಉಂಟಾಗುವ ವ್ಯತ್ಯಾಸಗಳು ನಮ್ಮ ಚರ್ಮದ ಮೇಲೆ ಗಣನೀಯ ಪರಿಣಾಮ ವನ್ನುಂಟು ಮಾಡುತ್ತವೆ. ನಮ್ಮ ಚರ್ಮವು ಸೂರ್ಯನ ಬಿಸಿಲಿಗೆ ಹೆಚ್ಚು ಒಡ್ಡಿಕೊಂಡಿದ್ದರೆ ಅದು ಚರ್ಮದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಚರ್ಮದ ಜೀವಕೋಶಗಳು ಅನಿಯಂತ್ರಿತವಾಗಿ ಬೆಳವಣಿಗೆಯಾಗುವುದರಿಂದ ಕ್ಯಾನ್ಸರ್ ಉಂಟಾಗುತ್ತದೆ.

ಚರ್ಮದ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಹಲವಾರು ತಪ್ಪುಗ್ರಹಿಕೆಗಳಿವೆ ಮತ್ತು ಜನರಿಗೆ ಈ ಕ್ಯಾನ್ಸ್‌ರ್‌ನ ಅಪಾಯದ ಕುರಿತು ಹೆಚ್ಚಿನ ಅರಿವಿಲ್ಲ.

ಚರ್ಮದ ಕ್ಯಾನ್ಸರ್ ಕುರಿತು ಕೆಲವು ಸಾಮಾನ್ಯ ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ.......

1. ಮಿಥ್ಯೆ: ಚರ್ಮದ ಕ್ಯಾನ್ಸರ್ ಮಾರಣಾಂತಿಕವಲ್ಲ ಸುಳ್ಳು,ದುರದೃಷ್ಟಕರವೆಂದರೆ ಚರ್ಮದ ಕ್ಯಾನ್ಸರ್ ಜೀವವನ್ನೇ ಬಲಿ ಪಡೆಯಬಹುದು. ಚರ್ಮದ ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿದ್ದು, ಮೆಲಾನೋಮಾ ಅತ್ಯಂತ ಗಂಭೀರವಾಗಿದೆ. ಇತರ ಚರ್ಮ ಕ್ಯಾನ್ಸರ್‌ಗಳೂ ಮಾರಣಾಂತಿಕವಾಗಬಹುದು. ಹೀಗಾಗಿ ಚರ್ಮದ ಕ್ಯಾನ್ಸರ್‌ನ್ನೆಂದಿಗೂ ಕಡೆಗಣಿಸಬಾರದು. ಆಗಾಗ್ಗೆ ಚರ್ಮದ ತಪಾಸಣೆ ಮಾಡಿಸಿಕೊಳ್ಳುವುದು ಯಾವಾಗಲೂ ಒಳ್ಳೆಯದು ಮತ್ತು ಬಿಸಿಲಿನಲ್ಲಿ ತಿರುಗಾಡುವಾಗ ಚರ್ಮದ ರಕ್ಷಣೆಯ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ.

2. ಮಿಥ್ಯೆ: ಚರ್ಮದ ಕ್ಯಾನ್ಸರ್‌ನಿಂದ ರಕ್ಷಿಸಿಕೊಳ್ಳಲು ಸನ್‌ಸ್ಕ್ರೀನ್ ಸಾಕು

ಸನ್‌ಸ್ಕ್ರೀನ್ ಚರ್ಮದ ರಕ್ಷಣೆಗಾಗಿ ಬಳಸಬಹುದಾದ ಒಂದು ವಿಧಾನವಾಗಿದೆ. ಆದರೆ ಅದೊಂದನ್ನೇ ನಂಬಿಕೊಳ್ಳಬಾರದು. ಯಾವುದೇ ಸನ್‌ಸ್ಕ್ರೀನ್ ಸೂರ್ಯನ ಬಿಸಿಲಿನಲ್ಲಿರುವ ಅಲ್ಟ್ರಾವಯಲೆಟ್ ಕಿರಣಗಳನ್ನು ತಡೆಯುವಲ್ಲಿ ಶೇ.100ರಷ್ಟು ಪರಿಣಾಮಕಾರಿಯಲ್ಲ ಮತ್ತು ಅದನ್ನು ಸರಿಯಾಗಿ ಬಳಸದಿದ್ದರೆ ಅದು ನಾವು ಎಣಿಸಿದಷ್ಟು ರಕ್ಷಣೆಯನ್ನು ನೀಡದಿರಬಹುದು. ಅಂಗೈ ತುಂಬ ಸನ್‌ಸ್ಕ್ರೀನ್ ಲೋಷನ್‌ನ್ನು ಮುಖ, ತೋಳುಗಳು, ಕೈಕಾಲುಗಳಿಗೆ ಹಚ್ಚಿಕೊಳ್ಳಬೇಕು. ವಿಶೇಷವಾಗಿ,ನೀವು ಅತಿಯಾಗಿ ಬೆವರುತ್ತಿದ್ದರೆ ಅಥವಾ ಈಜಾಡುತ್ತಿದ್ದರೆ ಈ ಲೋಷನ್‌ನನ್ನು ಆಗಾಗ್ಗೆ ಹಚ್ಚಿಕೊಳ್ಳುತ್ತಿರಬೇಕು.

3. ಮಿಥ್ಯೆ: ಬಿಸಿಲಿಗೆ ತೆರೆದುಕೊಂಡ ಶರೀರದ ಭಾಗಗಳಲ್ಲಿ ಮಾತ್ರ ಚರ್ಮದ ಕ್ಯಾನ್ಸರ್ ಆಗುತ್ತದೆ

ಮುಖ,ತೋಳುಗಳು,ಭುಜಗಳಂತಹ ಬಿಸಿಲಿಗೆ ಹೆಚ್ಚಾಗಿ ಒಡ್ಡಿಕೊಳ್ಳುವ ಭಾಗಗಳಲ್ಲಿ ಚರ್ಮದ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯಿದೆ ಎನ್ನುವುದು ನಿಜವಾದರೂ ಅದು ವೃಷಣಗಳು,ಅಂಗೈಗಳು,ಕಾಲಿನ ಹಿಮ್ಮಡಿಗಳು,ಬೆರಳುಗಳು ಅಥವಾ ಹೆಬ್ಬೆರಳುಗಳ ನಡುವೆ ಮತ್ತು ಉಗುರುಗಳ ಕೆಳಗೆ ಸೇರಿದಂತೆ ಶರೀರದ ಯಾವುದೇ ಭಾಗದಲ್ಲಿಯೂ ಕಾಣಿಸಿಕೊಳ್ಳಬಹುದು. ಈ ಜಾಗಗಳಲ್ಲಿ ಉಂಟಾಗುವ ಚರ್ಮದ ಕ್ಯಾನ್ಸರ್ ಮಾರಣಾಂತಿಕವೂ ಆಗಬಹುದು.

4. ಮಿಥ್ಯೆ: ಹೊರಗೆ ಹೆಚ್ಚು ತಿರುಗದವರಲ್ಲಿ ಚರ್ಮದ ಕ್ಯಾನ್ಸರ್‌ನ ಅಪಾಯ ಕಡಿಮೆ

 ಎಲ್ಲೋ ಕೆಲವು ಸಮಯ ಮಾತ್ರ ಸೂರ್ಯನ ಬಿಸಿಲಿಗೆ ತೆರೆದುಕೊಳ್ಳುವ ಬಿಳಿಯ ಚರ್ಮದವರಿಗೆ ಹೆಚ್ಚಿನ ಹಾನಿಯಾಗಬಹುದು ಎನ್ನುತ್ತಾರೆ ಚರ್ಮರೋಗ ತಜ್ಞರು. ಬೈಸಿಕಲ್ ಸವಾರಿ ಅಥವಾ ಶಾಪಿಂಗ್ ಇವುಗಳಲ್ಲಿ ಸೇರಿವೆ. ಪ್ರತಿದಿನ ಕೆಲವೇ ಸಮಯ ಬಿಸಿಲಿಗೆ ಓಡಾಡಿದರೆ ಇಂತಹವರಲ್ಲಿ ಸ್ಕ್ವಾಮಸ್ ಸೆಲ್ ಕ್ಯಾನ್ಸರ್ ಎಂಬ ಚರ್ಮದ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು ಮತ್ತು ಇದು ಶೇ.20ರಷ್ಟು ಸಾವುಗಳಿಗೆ ಕಾರಣವಾಗಿದೆ.

5. ಮಿಥ್ಯೆ: ಕಪ್ಪುಬಣ್ಣದ ಚರ್ಮ ಹೊಂದಿದವರಿಗೆ ಚರ್ಮದ ಕ್ಯಾನ್ಸರ್‌ನ ಅಪಾಯವಿಲ್ಲ

ಬಿಳಿಯ ಚರ್ಮದ ವ್ಯಕ್ತಿಗಳಿಗೆ ಹೋಲಿಸಿದರೆ ಕಪ್ಪುಚರ್ಮದ ವ್ಯಕ್ತಿಗಳಲ್ಲಿ ಚರ್ಮದ ಕ್ಯಾನ್ಸರ್‌ನ ಅಪಾಯ ಕಡಿಮೆ,ಆದರೆ ಅವರಿಗೆ ಚರ್ಮದ ಕ್ಯಾನ್ಸರ್ ಆಗುವುದೇ ಇಲ್ಲ ಎನ್ನುವುದು ಸುಳ್ಳು. ಕಪ್ಪುಚರ್ಮ ಹೊಂದಿರುವವರಲ್ಲಿ ಈ ರೋಗವು ಅತ್ಯಂತ ಗಂಭೀರಾವಸ್ಥೆಯನ್ನು ತಲುಪುವವರೆಗೆ ಪತ್ತೆಯೇ ಆಗುವುದಿಲ್ಲ.

6. ಮಿಥ್ಯೆ: ಶಂಕಾತ್ಮಕ ನರುಲಿಯನ್ನು ಅದು ಕ್ಯಾನ್ಸರ್‌ಗೆ ತಿರುಗುವ ಮೊದಲೇ ಕತ್ತರಿಸಿ ತೆಗೆಯಬಹುದು

ಶೀಘ್ರ ಗುಣವಾಗದ ವೃಣ ಅಥವಾ ತನ್ನ ಗಾತ್ರ ಅಥವಾ ಬಣ್ಣವನ್ನು ಬದಲಿಸಿಕೊಂಡಿರುವ ನರುಲಿ ನಿಜಕ್ಕೂ ಗಂಭೀರ ಸ್ಥಿತಿಯಾಗಿರಬಹುದು ಮತ್ತು ಚರ್ಮದ ಕ್ಯಾನ್ಸರ್‌ನ ಪೂರ್ವಭಾವಿ ರೂಪವಾಗಿರಬಹುದು. ಕ್ಯಾನ್ಸರ್‌ನ್ನು ಅದರ ಆರಂಭದ ಹಂತದಲ್ಲಿಯೇ ಪತ್ತೆ ಹಚ್ಚಲು ವರ್ಷಕ್ಕೊವ್ಮೆು ಚರ್ಮದ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಚರ್ಮರೋಗ ತಜ್ಞರನ್ನು ನಿಯಮಿತವಾಗಿ ಭೇಟಿಯಾಗುವುದೂ ಮುಖ್ಯವಾಗುತ್ತದೆ.

7. ಮಿಥ್ಯೆ: ಮೋಡಗಳಿರುವಾಗ ಸನ್‌ಸ್ಕ್ರೀನ್ ಅಗತ್ಯವಿಲ್ಲ

ಇದೊಂದು ಅತ್ಯಂತ ಸಾಮಾನ್ಯ ಮಿಥ್ಯೆಯಾಗಿದೆ. ಮೋಡದ ದಿನಗಳಲ್ಲಿಯೂ ಸೂರ್ಯನ ಕಿರಣಗಳು ನಿಮ್ಮ ಚರ್ಮಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆಗಳಿವೆ ಮತ್ತು ಇದು ದೀರ್ಘಕಾಲದ ಹಾನಿಗೆ ಕಾರಣವಾಗಬಹುದು. ಹೀಗಾಗಿ ಮೋಡವಿರುವ ದಿನಗಳಲ್ಲಿಯೂ ಹೊರಗೆ ತಿರುಗುವಾಗ ಸನ್‌ಸ್ಕ್ರೀನ್ ಹಚ್ಚಿಕೊಳ್ಳುವುದು ಒಳ್ಳೆಯದು.

8. ಮಿಥ್ಯೆ: ವೃದ್ಧರಿಗೆ ಮಾತ್ರ ಚರ್ಮದ ಕ್ಯಾನ್ಸರ್ ಉಂಟಾಗುತ್ತದೆ

ಮೆಲಾನೋಮಾ 25ರಿಂದ 29 ವರ್ಷ ವಯೋಮಾನದವರಲ್ಲಿ ಕಾಣಿಸಿಕೊಳ್ಳುವ ಚರ್ಮದ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ರೂಪವಾಗಿದೆ. ಈ ವಯೋಮಾನದ ಗುಂಪಿನಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಇದು ಕಾಣಿಸಿಕೊಳ್ಳುವುದು ಹೆಚ್ಚು. ಹೀಗಾಗಿ ಪ್ರತಿ ತಿಂಗಳು,ವಿಶೇಷವಾಗಿ ನಿಮ್ಮ ಚರ್ಮದ ಮೇಲಿರುವ ನರುಲಿಗಳಲ್ಲಿ ತುರಿಕೆಯಾಗುತ್ತಿದ್ದರೆ ಅಥವಾ ರಕ್ತ ಬರುತ್ತಿದ್ದರೆ ಚರ್ಮದ ತಪಾಸಣೆ ಅಗತ್ಯವಾಗುತ್ತದೆ.

9. ಮಿಥ್ಯೆ: ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು ಚರ್ಮದ ಕ್ಯಾನ್ಸರ್ ಬಗ್ಗೆ ಚಿಂತಿಸಬೇಕಿಲ್ಲ

ಒಂದು ವಿಧದ ಕ್ಯಾನ್ಸರ್‌ಗೆ ಪಡೆಯುತ್ತಿರುವ ಚಿಕಿತ್ಸೆಯು ಇನ್ನೊಂದು ವಿಧದ ಕ್ಯಾನ್ಸರ್‌ನಿಂದ ರಕ್ಷಣೆ ನೀಡುವುದಿಲ್ಲ. ವಿಕಿರಣದಂತಹ ಕೆಲವು ಕ್ಯಾನ್ಸರ್ ಚಿಕಿತ್ಸೆಗಳು ವಾಸ್ತವದಲ್ಲಿ ಅಲ್ಟ್ರಾ ವಯಲೆಟ್ ಕಿರಣಗಳಿಗೆ ಸಂವೇದನಾಶೀಲತೆಯನ್ನು ಹೆಚ್ಚಿಸುತ್ತವೆ. ಹೀಗಾಗಿ ಇಂತಹ ಕ್ಯಾನ್ಸರ್ ಚಿಕಿತ್ಸೆಗಳ ಕಾರಣದಿಂದಾಗಿ ಚರ್ಮದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುವ ಬಗ್ಗೆ ವೈದ್ಯರ ಸಲಹೆ ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News