ಪೆಟ್ರೋಲ್ ಬೆಲೆ ಏರಿಕೆಯನ್ನು ವ್ಯಂಗ್ಯ ಮಾಡಿದ ಹಳೆ ಟ್ವೀಟನ್ನು ಡಿಲಿಟ್ ಮಾಡಿದ ಅಕ್ಷಯ್!

Update: 2018-05-22 13:12 GMT

“ನಿಮ್ಮ ಬೈಸಿಕಲ್ ಗಳನ್ನು ಕ್ಲೀನ್ ಮಾಡಿ ಮತ್ತೆ ರಸ್ತೆಗಿಳಿಯುವ ಸಮಯ ಬಂದಿದೆ ಎಂದು ಅನಿಸುತ್ತದೆ. ಮೂಲಗಳ ಪ್ರಕಾರ ಇನ್ನೊಂದು ಪೆಟ್ರೋಲ್ ಬೆಲೆ ಏರಿಕೆ ನಿರೀಕ್ಷಿಸಬಹುದು”….. ಹೀಗೆಂದು  ಬಾಲಿವುಡ್ ನಟ ಅಕ್ಷಯ್ ಕುಮಾರ್ ಫೆಬ್ರವರಿ 2012ರಲ್ಲಿ ಟ್ವೀಟ್ ಮಾಡಿದ್ದರು. ಅಂದ ಹಾಗೆ, ಈ ಟ್ವೀಟ್ ಇಂದಿಗೂ ಪ್ರಸ್ತುತ. ಇದೇ ಹಳೆಯ ಟ್ವೀಟ್ ಈಗ ಇದೆಯೇ ಎಂದು ಟ್ವಿಟರಿಗರು ಹುಡುಕಾಡಿದರೆ ‘ಕಿಲಾಡಿ’ ಅಕ್ಷಯ್ ಅದನ್ನು ಡಿಲಿಟ್ ಮಾಡಿದ್ದಾರೆ.

“ಅಷ್ಟಕ್ಕೂ ಅವರು ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದೇಕೆ?, ಈಗಿನ  ಬಿಜೆಪಿ ಸರಕಾರದ ವಿರುದ್ಧ ಅವರು ಟೀಕೆ ಮಾಡುತ್ತಿದ್ದಾರೆಂದು ಯಾರೂ ತಿಳಿಯುವುದು ಬೇಡವೆಂದೇ?, ತಮ್ಮ ಇಬ್ಬಗೆಯ ನೀತಿಯನ್ನು ಜನರು ತಿಳಿಯುವುದು ಬೇಡವೆಂದೇ?” ಎಂದು ಟ್ವಿಟರಿಗರು ಪ್ರಶ್ನಿಸುತ್ತಿದ್ದಾರೆ.

ಟ್ವೀಟ್ ಡಿಲೀಟ್ ಮಾಡಿದ ನಿಜವಾದ ಕಾರಣ ಬಹುಷ ಅಕ್ಷಯ್ ಒಬ್ಬರಿಗೆ ಮಾತ್ರ ಗೊತ್ತಿರಬಹುದು. ಆದರೆ ತಮ್ಮ ಹಳೆಯ ಟ್ವೀಟನ್ನು ಜನರು ನೋಡಬಾರದೆಂದು ಅಕ್ಷಯ್ ಅದನ್ನು ಡಿಲೀಟ್ ಮಾಡಿದ್ದರೂ ಅದನ್ನು ಆರ್ಕೈವ್ ಮಾಡಲಾಗಿದೆ ಎಂಬುದು ಬಹುಷ ಅವರಿಗೆ ಗೊತ್ತಿರಲಿಕ್ಕಿಲ್ಲ.

ಪೆಟ್ರೋಲ್ ಬೆಲೆಯೇರಿಕೆಯಾದಾಗಲೆಲ್ಲಾ 2014ಕ್ಕಿಂತ ಮೊದಲು ಟ್ವಿಟ್ಟರ್ ನಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಿದ್ದವರೆಲ್ಲ ಈಗ ಮೌನಿಗಳಾಗಿ ಬಿಟ್ಟಿದ್ದಾರೆ. ಆದರೆ ಟ್ವಿಟ್ಟರಿಗರು ಮಾತ್ರ ಆ ಹಳೆಯ ಟ್ವೀಟ್ ಗಳನ್ನು ಅಗೆದು ಹೊರ ಹಾಕಿ ಈಗ ಆ ಗಣ್ಯರು ವಹಿಸಿರುವ ಮೌನವನ್ನು ಪ್ರಶ್ನಿಸುತ್ತಿದ್ದಾರೆ. 2014ಕ್ಕಿಂತ ಮೊದಲು ಅಮಿತಾಭ್ ಬಚ್ಚನ್ ಕೂಡ ಪೆಟ್ರೋಲ್ ಬೆಲೆ ಏರಿಕೆಯನ್ನು ಅಣಕಿಸಿ ಟ್ವೀಟ್ ಮಾಡುತ್ತಿದ್ದರು. ಅವರು ಕೂಡ ಈಗ ಏನನ್ನೂ ಹೇಳುತ್ತಿಲ್ಲ.

ಆದರೆ ಅಕ್ಷಯ್ ಬಗ್ಗೆ ಹೇಳುವಾಗ ಅವರು ಡಿಲೀಟ್ ಮಾಡಲು ಮರೆತಿರುವ ಟ್ವೀಟ್ ಒಂದಿದೆ. ಅದು ಕೂಡ ಪ್ರಸ್ತುತ “ರಾತ್ರಿ  ಮನೆಗೆ ತಲುಪಲು ಕಷ್ಟವಾಗಿತ್ತು, ಪೆಟ್ರೋಲ್ ಬೆಲೆಗಳು ಮತ್ತೆ ಗಗನಕ್ಕೇರುವ ಮುನ್ನ ಖರೀದಿಸಲು ಇಡೀ ಮುಂಬೈ ಪೆಟ್ರೋಲ್ ಗಾಗಿ ಸರತಿ ನಿಂತಿತ್ತು…!

2011ರಲ್ಲಿ ಅಕ್ಷಯ್ ಕುಮಾರ್ ಈ ಟ್ವೀಟ್ ಮಾಡಿದ್ದು, ಟ್ವಿಟರಿಗರು ಇದೇ ಟ್ವೀಟ್ ಗೆ ಈಗ ಕಮೆಂಟ್ ಮಾಡಿ ಅಕ್ಷಯ್ ಕಾಲೆಳೆಯುತ್ತಿದ್ದಾರೆ.

“140 ಶೇ. ತೈಲತೆರಿಗೆಯ ಮೂಲಕ ಮೋದಿ ಭಾರತೀಯರ ಲೂಟಿ ಹೊಡೆಯುತ್ತಿರುವ ಕಾರಣ ನೀವು ಕೆನಡಾದ ಪೌರತ್ವವನ್ನು ಪಡೆದುಕೊಂಡಿದ್ದೀರಾ”, “ಅಕ್ಷಯ್ ಸರ್. ನಿಮ್ಮ ದೊಡ್ಡ ಅಭಿಮಾನಿ. ನೀವು ನಿಮ್ಮ ಸೈಕಲನ್ನು ಈಗ ನೀಡುತ್ತೀರಾ”, “ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಬೇಕಿದ್ದರೆ ಕೆನಡಾಗೆ ಹೋಗಿ” ಎಂದು ಟ್ವಿಟರಿಗರು ಅಕ್ಷಯ್ ಕಾಲೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News