ಪರಿಸರ ಸಂಬಂಧಿ ಗುರಿಗಳನ್ನು ಸಾಧಿಸಲು ಎದುರಿಸಬೇಕಾಗುವ ಬೃಹತ್ ಸವಾಲುಗಳು

Update: 2018-06-04 18:31 GMT

ರಾಜ್ಯದ ಒಟ್ಟು ಕೃಷಿ ಭೂಮಿಯ ಶೇ.37 ಭಾಗ ಬೇಸಾಯಕ್ಕಾಗಿ ಅಂತರ್ಜಲವನ್ನು ನೆಲಮಟ್ಟದ ನೀರನ್ನು ಅವಲಂಬಿಸಿದೆ. ಈ ನೀರಿನ ಬಹುಪಾಲು ಓಬಿರಾಯನ ಕಾಲದ ಪಂಪುಗಳಿಂದ ಪೂರೈಕೆಯಾಗುತ್ತಿವೆ. ರಾಜ್ಯದಲ್ಲಿ ಕೃಷಿ ರಂಗಕ್ಕೆ ಒಟ್ಟು ವಿದ್ಯುತ್ ಉತ್ಪನ್ನದ ಶೇ. 33 ವಿದ್ಯುತ್ ಕೃಷಿರಂಗಕ್ಕೆ ಬೇಕಾಗಿದೆ. ಗೃಹ ಬಳಕೆಗೆ ಶೇ.19ರಷ್ಟು ವಿದ್ಯುತ್ ಬಳಕೆಯಾಗುತ್ತಿದೆ. ಶೇ.11ರಷ್ಟು ವಿದ್ಯುತ್ ಬಳಸುತ್ತಿರುವ ವಾಣಿಜ್ಯ ರಂಗದ ಬೇಡಿಕೆ ವರ್ಷವೊಂದರ ಶೇ.10ರಷ್ಟು ಏರಿಕೆಯಾಗುತ್ತಿದೆ.


ಭಾರತದ ಉದ್ದೇಶ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ.5.46 ನ್ನು ಕೊಡುಗೆ ನೀಡುತ್ತಿರುವ ಕರ್ನಾಟಕವು ದೇಶದಲ್ಲೇ ಅತ್ಯಂತ ಹೆಚ್ಚು ಔದ್ಯೋಗೀಕೃತ ಐದನೆಯ ರಾಜ್ಯ. ಕರ್ನಾಟಕವು ಸಿಮೆಂಟ್, ಕಬ್ಬಿಣ ಮತ್ತು ಉಕ್ಕು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 38 ಮಂದಿ ಈಗ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದು ಅದು ತುಂಬಾ ಶೀಘ್ರಗತಿಯಲ್ಲಿ ನಗರೀಕರಣಗೊಳ್ಳುತ್ತಿದೆ. ರಾಜ್ಯದ ಒಳಗೆ ವಾಸಿಸುತ್ತಿರುವ ಓರ್ವ ಸಾಮಾನ್ಯ ನಾಗರಿಕನಿಗೆ ಈ ವಿಷಯಗಳು ಸಂತೋಷದಾಯಕವಾದರೂ ಭಾರತದ ರಾಜ್ಯಗಳಲ್ಲಿ (ರಾಜಸ್ಥಾನದ ಬಳಿಕ) ಅತ್ಯಂತ ವಿಸ್ತಾರವಾದ ಒಣಭೂಮಿ ಇರುವ ಎರಡನೇ ರಾಜ್ಯ ಕರ್ನಾಟಕ ಎಂಬುದನ್ನು ನಾವು ಅಲಕ್ಷಿಸುವಂತಿಲ್ಲ. ರಾಜ್ಯದ ಒಟ್ಟು ಕೃಷಿ ಭೂಮಿಯ ಶೇ.37 ಭಾಗ ಬೇಸಾಯಕ್ಕಾಗಿ ಅಂತರ್ಜಲವನ್ನು ನೆಲಮಟ್ಟದ ನೀರನ್ನು ಅವಲಂಬಿಸಿದೆ. ಈ ನೀರಿನ ಬಹುಪಾಲು ಓಬಿರಾಯನ ಕಾಲದ ಪಂಪುಗಳಿಂದ ಪೂರೈಕೆಯಾಗುತ್ತಿವೆ. ರಾಜ್ಯದಲ್ಲಿ ಕೃಷಿ ರಂಗಕ್ಕೆ ಒಟ್ಟು ವಿದ್ಯುತ್ ಉತ್ಪನ್ನದ ಶೇ. 33 ವಿದ್ಯುತ್ ಕೃಷಿರಂಗಕ್ಕೆ ಬೇಕಾಗಿದೆ. ಗೃಹ ಬಳಕೆಗೆ ಶೇ.19ರಷ್ಟು ವಿದ್ಯುತ್ ಬಳಕೆಯಾಗುತ್ತಿದೆ. ಶೇ.11ರಷ್ಟು ವಿದ್ಯುತ್ ಬಳಸುತ್ತಿರುವ ವಾಣಿಜ್ಯ ರಂಗದ ಬೇಡಿಕೆ ವರ್ಷವೊಂದರ ಶೇ.10ರಷ್ಟು ಏರಿಕೆಯಾಗುತ್ತಿದೆ.

 ರಾಜ್ಯದ ಜನರ ಬದುಕಿನ ಮತ್ತು ಅಭಿವೃದ್ಧಿಯ ನಿಟ್ಟಿನಲ್ಲಿ ಅಭಿವೃದ್ಧಿಗಾಗಿ ನಾವು ಹಿಡಿದ ಹಾದಿಯ ಬಗ್ಗೆ ‘ವಿಶ್ವ ಪರಿಸರ ದಿನ’ದಂದು ವಿವೇಚನೆ ನಡೆಸಬೇಕಾಗಿದೆ. ರಾಜ್ಯದಲ್ಲಿ ಬಳಸಲ್ಪಡುತ್ತಿರುವ ಒಟ್ಟು ಇಂಧನದ ಶೇ. 57ರಷ್ಟನ್ನು ರಾಜ್ಯದಲ್ಲಿರುವ ಕೈಗಾರಿಕೆಗಳು ಬಳಸುತ್ತವೆ. ಇಲ್ಲಿ ತಯಾರಾಗುವ ಉತ್ಪನ್ನಗಳ ಒಟ್ಟು ವೆಚ್ಚದ ಶೇ.40 ಕೇವಲ ಇಂಧನಕ್ಕೇ ವ್ಯಯವಾಗುತ್ತಿವೆ. ರಾಜ್ಯದ ಸಾರಿಗೆ ಬೇಡಿಕೆ ವಾರ್ಷಿಕ 100 ಬಿಲಿಯ ಪ್ಯಾಸೆಂಜರ್ ಕಿಲೋಮೀಟರ್ (ಜಿಪಿಕೆಎಂ) ಇದೆ. ಇದರ ಅರ್ಧ ಪಾಲನ್ನು ಬಸ್ಸುಗಳು ಮತ್ತು ಶೇ. 30ರಷ್ಟನ್ನು ದ್ವಿಚಕ್ರ ವಾಹನಗಳು ಪೂರೈಸುತ್ತವೆ. ಇದನ್ನೆಲ್ಲ ಸರಿದೂಗಿಸಲು, ನಮ್ಮ ಎಲ್ಲ ತಾಳಿಕೊಳ್ಳಬಲ್ಲ ಅಭಿವೃದ್ಧಿ ಗುರಿಗಳನ್ನು 2030ರ ವೇಳೆಗೆ ತಲುಪಬೇಕಾದರೆ ಸರಕಾರದ ನೆರವು 100 ಬಿಲಿಯ ರುಪಾಯಿಯಷ್ಟು ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಇಂಧನದ/ವಿದ್ಯುತ್‌ನ ಗರಿಷ್ಠ ಬೇಡಿಕೆ ಇರುವ ಸಂದರ್ಭಗಳಲ್ಲಿ ರಾಜ್ಯವು ಶೇ.13ರಷ್ಟು ಕೊರತೆ ಎದುರಿಸುತ್ತಿದೆ.

ರಾಜ್ಯದ ಒಟ್ಟು 176 ತಾಲೂಕುಗಳಲ್ಲಿ 90 ತಾಲೂಕುಗಳು ಮತ್ತು 30 ಜಿಲ್ಲೆಗಳ ಪೈಕಿ 16 ಜಿಲ್ಲೆಗಳು ಸತತ ಬರಗಾಲ ಮತ್ತು ಕುಸಿಯುತ್ತಿರುವ ಅಂತರ್ಜಲದಿಂದ ಬಳಲುತ್ತಿವೆ. ನಗರ ಪ್ರದೇಶದ ಹತ್ತು ಮನೆಗಳಲ್ಲಿ ಮೂರು ಮತ್ತು ಗ್ರಾಮೀಣ ಪ್ರದೇಶದ ಹತ್ತು ಮನೆಗಳಲ್ಲಿ ಒಂಬತ್ತು ಮನೆಗಳಿಗೆ ಎಲ್ಪಿಜಿ ಅಡುಗೆ ಅನಿಲದ ಸೌಕರ್ಯವಿಲ್ಲ ಅಂದರೆ ಅವುಗಳು ಹಸಿರು ಮನೆ ಅನಿಲ ಗಳಿಗೆ ಕಾರಣವಾಗುವ ಜೈವಿಕ ಸಾರವನ್ನು ಅವಲಂಬಿಸಿವೆ. ತಾಳಿಕೊಳ್ಳಬಲ್ಲ ಅಭಿವೃದ್ಧಿಯ ಮೂರು ಮುಖ್ಯ ಅಂಶಗಳೆಂದರೆ ಪಳಿಯುಳಿಕೆ ಅನಿಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ಜಲ ಸಂಪನ್ಮೂಲಗಳ ರಕ್ಷಣೆ ಮತ್ತು ವಾತಾವರಣಕ್ಕೆ ಬಿಡುಗಡೆಯಾಗುವ ಜಿಎಚ್‌ಜಿಗಳನ್ನು ಕಡಿತಗೊಳಿಸುವುದು. ಈ ನಿಟ್ಟಿನಿಂದ ನೋಡಿದಾಗ ಪರಿಸರವು ಖಂಡಿತವಾಗಿಯೂ ಒತ್ತಡದಲ್ಲಿದೆ: ಅಂತರ್ಜಲ ಕುಸಿಯುತ್ತಿದೆ, ಜಿಎಚ್‌ಜಿ ಅನಿಲ ಬಿಡುಗಡೆ ಹೆಚ್ಚುತ್ತಿದೆ ರೈತರು ಬೇಸಾಯ ತೊರೆಯುತ್ತಿದ್ದಾರೆ ಮತ್ತು ಅರಣ್ಯಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ.

ಸರಿಯಾದ ಯೋಜನೆಯಿಲ್ಲದೆ ಹಾಗೂ ಸತತವಾದ ನಗರೀಕರಣವು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ರಾಜ್ಯದಲ್ಲಿ ದಿನವೊಂದರ 10,000 ಟನ್ ಘನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಇದರ ಶೇ.80 ಭಾಗ ಲ್ಯಾಂಡ್‌ಫಿಲ್‌ಗಳಿಗೆ ಹೋಗುತ್ತದೆ. 2030ರ ವೇಳೆಗೆ ತ್ಯಾಜ್ಯ ಉತ್ಪತ್ತಿ 22,000 ಟನ್ನುಗಳಿಗೆ ಏರಲಿದ್ದು ಇದನ್ನು ಭೂಮಿಯಲ್ಲಿ ಹೊಂಡ ತೆಗೆದು ಹೂಳಲು, ವಿಲೇವಾರಿ ಮಾಡಲು ದಿನವೊಂದರ 130 ಹೆಕ್ಟೇರ್‌ನಷ್ಟು ಜಾಗ ಬೇಕಾಗುತ್ತದೆ. ಗೃಹಗಳು ಕಾರ್ಖಾನೆಗಳು ಮತ್ತು ವಾಣಿಜ್ಯ ಕಟ್ಟಡಗಳು ಪ್ರತಿದಿನ 1,300 ಮಿಲಿಯ ಲೀಟರ್ ತ್ಯಾಜ್ಯ ನೀರನ್ನು ಹೊರಹಾಕುತ್ತವೆ. ಇದರಲ್ಲಿ ಬಹುಪಾಲು ಜಲಮೂಲಗಳಿಗೆ ಸೇರಿ ಅವುಗಳನ್ನು ಕಲುಷಿತಗೊಳಿಸುತ್ತದೆ ತ್ಯಾಜ್ಯ ನೀರಿನ ಕೇವಲ ಶೇ. 30ರಿಂದ 40ರಷ್ಟು ಮಾತ್ರ ಸ್ವಚ್ಛಗೊಳಿಸಲ್ಪಟ್ಟು ಕೃಷಿಗೆ ಬಳಕೆಯಾಗುತ್ತದೆ.

ಪರಿಸ್ಥಿತಿ ಹೀಗಿರುವಾಗ ಉದ್ಯಮಗಳಿಗೆ ಬೇಕಾಗುವ ಇಂಧನದ ಬೇಡಿಕೆ ಮೂರು ಪಟ್ಟು ಹೆಚ್ಚಾಗುತ್ತದೆ ಮತ್ತು 2030ರ ವೇಳೆಗೆ ಸಂಚಾರದ ಬೇಡಿಕೆ ನಾಲ್ಕು ಪಟ್ಟು ಹೆಚ್ಚಾಗಲಿದೆ. ಅಲ್ಲದೆ, ಅಂತರ್ಜಲ ಕುಸಿತ ಇನ್ನಷ್ಟು ಹೆಚ್ಚಾಗಿ ಬೇಸಾಯದ ಪಂಪುಗಳಿಗೆ ಬೇಕಾಗುವ ವಿದ್ಯುತ್‌ನ ಬೇಡಿಕೆ ದ್ವಿಗುಣಗೊಳ್ಳುತ್ತದೆ. (2014ರ) ವಿಶ್ವ ಬ್ಯಾಂಕ್ ಸಮೀಕ್ಷೆಯ ಪ್ರಕಾರ ವಾಯುಮಾಲಿನ್ಯವು ಭಾರತದ ಜಿಡಿಪಿಯ ಸುಮಾರು ಶೇ. 1.7ರಷ್ಟು ನಷ್ಟಕ್ಕೆ ಕಾರಣವಾಗುತ್ತದೆ. ಇದು ಕರ್ನಾಟಕದ ವಿಷಯದಲ್ಲೂ ನಿಜವಾಗುವುದಾದಲ್ಲಿ ರಾಜ್ಯದ ಬೊಕ್ಕಸಕ್ಕೆ ಇದರಿಂದ 5,100 ಕೋಟಿ ರೂಪಾಯಿ ನಷ್ಟವಾಗುತ್ತದೆಂದು ಅಂದಾಜಿಸಲಾಗಿದೆ.

ಪರಿಸರ ರಂಗದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಕರ್ನಾಟಕವು ಕಾರ್ಯಪಡೆಯೊಂದನ್ನು ರಚಿಸುವುದು ಒಳ್ಳೆಯದು. ಅದು ತುರ್ತಾಗಿ ತೆಗೆದುಕೊಳ್ಳಬೇಕಾದ ಕ್ರಮಗಳೆಂದರೆ ಬೇಸಾಯದ ಪಂಪುಗಳಿಗೆ ಸೌರಶಕ್ತಿಯ ಬಳಕೆ, ಹನಿ ನೀರಾವರಿ ಮತ್ತು ಬಾವಿ ಕೆರೆಗಳ ಹೂಳೆತ್ತುವಿಕೆ ಮೂಲಕ ಅವುಗಳು ಪುನಃ ಬೇಸಾಯಕ್ಕೆ ಬೇಕಾದ ನೀರು ಪೂರೈಸುವಂತೆ ಮಾಡುವುದು, ತ್ಯಾಜ್ಯ ವಿಲೇವಾರಿಯ ಸ್ಥಾವರಗಳನ್ನು ಸ್ಥಾಪಿಸುವುದರ ಜೊತೆಗೆ ನಗರ ಹಾಗೂ ಪಟ್ಟಣಗಳಲ್ಲಿ ನೈರ್ಮಲ್ಯ ವಿಲೇವಾರಿಗೆ ಸೂಕ್ತ ಒಳಚರಂಡಿ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಈಗ ಇರುವ 127 ಸೆನ್ಸಸ್‌ಟೌನ್‌ಗಳನ್ನು ಸ್ಟ್ಯಾಚುಚರಿ ಟೌನ್‌ಗಳಾಗಿ ಪರಿವರ್ತಿಸಬೇಕು. ವಧಾಗೃಹಗಳನ್ನು ಯಾಂತ್ರೀಕರಿಸಿ, ‘ಆಕ್ಸಿಜನ್ ಹಬ್’ ಯೋಜನೆಯ ಅಡಿಯಲ್ಲಿ ಕೃಷಿ-ಅರಣ್ಯ ಯೋಜನೆಯನ್ನು ಕಾರ್ಯಗತಗೊಳಿಸಬೇಕು. ಜಲ ಸಂಪನ್ಮೂಲಗಳ ಅಭಿವೃದ್ಧಿಗಾಗಿ ಮಳೆನೀರು ಕೊಯ್ಲು ಯೋಜನೆಯನ್ನೂ ಕೈಗೆತ್ತಿಕೊಳ್ಳಬೇಕು.

Writer - ಎಂ. ಎ. ಸಿರಾಜ್

contributor

Editor - ಎಂ. ಎ. ಸಿರಾಜ್

contributor

Similar News