ಅಸ್ಸಾಂನಲ್ಲಿ ಕೈಮೀರಿದ ನೆರೆ ಪರಿಸ್ಥಿತಿ: ಸಾವಿನ ಸಂಖ್ಯೆ 20ಕ್ಕೆ ಏರಿಕೆ
ಗುವಹಾಟಿ, ಜೂ.20: ಅಸ್ಸಾಂನಲ್ಲಿ ನೆರೆ ಹಾವಳಿಯಿಂದ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಿದ್ದು ಬುಧವಾರದಂದು ಆರು ಜನರು ಸಾವನ್ನಪ್ಪುವ ಮೂಲಕ ಮೃತರ ಸಂಖ್ಯೆ 20ಕ್ಕೇರಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಈಶಾನ್ಯ ರಾಜ್ಯಗಳಾದ ಅಸ್ಸಾಂ, ತ್ರಿಪುರಾ ಮತ್ತು ಮಣಿಪುರದಲ್ಲಿ ಉಂಟಾಗಿರುವ ಭೀಕರ ನೆರೆಹಾವಳಿ, ಅವ್ಯಾಹತ ಮಳೆ ಹಾಗೂ ಭೂಕುಸಿತದಿಂದ ಜನಜೀವನ ದುಸ್ತರವಾಗಿದೆ. ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದ ಅಧಿಕೃತ ಪ್ರಕಟಣೆಯ ಪ್ರಕಾರ, ಅಸ್ಸಾಂನ ಹೈಲಕಂಡಿ ಜಿಲ್ಲೆಯಲ್ಲಿ 58,208 ಜನರು ನೆರೆಯಿಂದ ಬಾಧಿತರಾಗಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳು ಮತ್ತು ಸರಕಾರಿ ಕಚೇರಿಗಳು ಮುಚ್ಚಿವೆ. ಒಟ್ಟಾರೆಯಾಗಿ ಆರು ಜಿಲ್ಲೆಗಳಲ್ಲಿ 4.5 ಲಕ್ಷ ಮಂದಿ ನೆರೆ ಹಾವಳಿಯಿಂದ ಪೀಡಿತರಾಗಿದ್ದಾರೆ. ವಂಗೊಯ್, ಲಂಫೆಲ್, ಇರೊಯಿಶೆಂಬ, ಲಮ್ಸಂಗ್, ಪಟ್ಸೊಯಿ ಹಾಗೂ ಕೊಂತುಜಾಮ್ ಜಿಲ್ಲೆಗಳು ನೆರೆಯಿಂದ ಅತಿಯಾಗಿ ಬಾಧಿತವಾಗಿವೆ ಎಂದು ಪ್ರಕಟಣೆ ತಿಳಿಸಿದೆ.