ಅರವಿಂದ ಕೇಜ್ರಿವಾಲ್ ವರ್ಸಸ್ ನರೇಂದ್ರಮೋದಿ!

Update: 2018-07-10 18:46 GMT

ನ್ಯಾಯಾಲಯದ ಮಧ್ಯಪ್ರವೇಶಗಳ ನಂತರವೂ ದಿಲ್ಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್(ಇವರ ಹಿಂದಿರುವುದು ಅದೇ ದಿಲ್ಲಿಯ ಗದ್ದುಗೆ ಹಿಡಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೇಂದ್ರ ಸರಕಾರ) ನಡುವಿನ ಜಟಾಪಟಿ ಮುಗಿಯುವಂತೆ ಕಾಣುತ್ತಿಲ್ಲ.

ತನ್ನ ಸರಿಸಮಾನಾದ ಒಬ್ಬನೇ ಒಬ್ಬ ನಾಯಕನೂ ಇರದ ರಾಜಕೀಯ ಪಕ್ಷಗಳ ನಡುವೆ ತಮ್ಮಪಕ್ಷದ ಸಾಂಪ್ರದಾಯಿಕ ನಡೆಗಳನ್ನು ಧಿಕ್ಕರಿಸಿ ನಿಲ್ಲುವ ಛಾತಿ ತೋರಿದ ಕೇಜ್ರಿವಾಲ್ ಯಾವತ್ತಿಗಾದರೂ ತಮಗೆ ಅಪಾಯಕಾರಿಯೆಂದು ಭಾವಿಸಿದ ಭಾಜಪ ಕೇಜ್ರಿವಾಲ್‌ರನ್ನು ಗುರಿಯಾಗಿಸಿಟ್ಟುಕೊಂಡೇ ದಿಲ್ಲಿಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿಗಿಂತ ಹೆಚ್ಚು ಸ್ಥಾನಗಳನ್ನು ಭಾಜಪ ಗೆದ್ದರೂ, 2020ರಲ್ಲಿ ನಡೆಯುವ ದಿಲ್ಲಿಯ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್‌ರನ್ನು ಸೋಲಿಸುವುದು ಅಷ್ಟು ಸುಲಭವಲ್ಲವೆಂಬುದನ್ನು ಮನಗಂಡಿರುವ ಭಾಜಪ ತನಗೆ ಗೊತ್ತಿರುವ ಎಲ್ಲ ಪಟ್ಟುಗಳನ್ನೂ ಬಳಸಿಕೊಂಡು ಅವರನ್ನು ಹಣಿಯಲು ಹೊರಟಿದೆ.

2015ರಲ್ಲಿ ಬಾರೀ ಬಹುಮತದೊಂದಿಗೆ ದಿಲ್ಲಿಯಲ್ಲಿ ಅಧಿಕಾರ ಹಿಡಿದ ಅರವಿಂದ ಕೇಜ್ರಿವಾಲ್‌ರು ಒಂದು ದಿನವೂ ನೆಮ್ಮದಿಯಾಗಿ ಸರಕಾರ ನಡೆಸಲು ಅಲ್ಲಿನ ಲೆಫ್ಟಿನಂಟ್ ಗವರ್ನರ್ ಬಿಡಲೇ ಇಲ್ಲ. ಬ್ರಿಟಿಷ್ ಸಂಸದೀಯ ಪ್ರಜಾಸತ್ತೆಯಿಂದ ಎರವಲು ಪಡೆದು ನಾವು ಸ್ಥಾಪಿಸಿಕೊಂಡಿರುವ ಈ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಲ್ಲಿರುವವರು ಸದಾ ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಪಕ್ಷದ ಆಣತಿಯಂತೆ ನಡೆದುಕೊಳ್ಳುವವರೇ ಆಗಿರುತ್ತಾರೆ. ಶೀಲಾ ದೀಕ್ಷಿತ್ ಅಂತಹವರು ದಿಲ್ಲಿಯ ಮುಖ್ಯಮಂತ್ರಿಯಾಗಿದ್ದಾಗ ಇಂತಹ ಸಮಸ್ಯೆಗಳೇನು ಎದುರಾಗಿರಲಿಲ್ಲ. ಅದಕ್ಕೆ ಕಾರಣ ಆಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದದ್ದು ಶೀಲಾ ದೀಕ್ಷೀತರ ಕಾಂಗ್ರೆಸ್ ಪಕ್ಷವೇ. ಹೀಗಾಗಿ ಆಗ ದಿಲ್ಲಿ ಮುಖ್ಯಮಂತ್ರಿಗಳ ಅಧಿಕಾರವನ್ನು ಕೇಂದ್ರಸರಕಾರ ಲೆಫ್ಟಿನೆಂಟ್ ಗವರ್ನರ್ ಮೂಲಕ ನಿಯಂತ್ರಿಸಲು ಹೋಗಿರಲಿಲ್ಲ. ಆ ನಂತರವೂ ಭಾಜಪದ ಸುಶ್ಮಾ ಸ್ವರಾಜ್ ಮತ್ತು ದಿವಂಗತ ಮದನ್‌ಲಾಲ್ ಖುರಾನಾ ಮುಖ್ಯಮಂತ್ರಿಗಳಾಗಿದ್ದಾಗಲೂ ಮುಖ್ಯಮಂತ್ರಿಗಳ ಅಧಿಕಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರಕಾರ ಮಾಡಿರಲಿಲ್ಲ. ತನ್ಮೂಲಕ ಪ್ರಜಾಸತ್ತಾತ್ಮಕವಾಗಿ ದಿಲ್ಲಿಯ ಜನತೆ ಆಯ್ಕೆ ಮಾಡಿದ ಸರಕಾರವೊಂದು ತನಗಿರುವ ಅಧಿಕಾರಗಳ ಮಿತಿಯಲ್ಲಿಯೇ ಸುಗಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿತ್ತು. ಆದರೆ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಬಂದನಂತರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಈಗಿನ ಭಾಜಪ ಸರಕಾರ ಒಂದೇ ಒಂದು ದಿನಕ್ಕೂ ಕೇಜ್ರಿವಾಲ್ ನೆಮ್ಮದಿಯಾಗಿ ಆಡಳಿತ ನಡೆಸಲು ಬಿಟ್ಟಿಲ್ಲ. ಜೊತೆಗೆ ಕೇಜ್ರಿವಾಲ್‌ಅನುಷ್ಠಾನಗೊಳಿಸಲು ಯತ್ನಿಸಿದ ಪ್ರತಿಯೊಂದು ಯೋಜನೆಗೂ ಇಲ್ಲಸಲ್ಲದ ಕಾನೂನುಗಳ ನೆಪ ಹೇಳಿ ಲೆಫ್ಟಿನೆಂಟ್ ಗವರ್ನರ್ ಅವರು ತಡೆಯೊಡ್ಡುವ ಸತತ ಪ್ರಯತ್ನವನ್ನು ಮಾಡುತ್ತಲೇ ಬಂದರು. ತನ್ನ ಹಿಡಿತದಲ್ಲಿರುವ ಸಿಬಿಐ ಮತ್ತು ಇತರ ಸಂಸ್ಥೆಗಳನ್ನು ಬಳಸಿಕೊಂಡ ಕೇಂದ್ರ ಸರಕಾರ ಆಮ್ ಆದ್ಮಿ ಪಕ್ಷದ ಹಲವು ಶಾಸಕರು ಮತ್ತು ಮಂತ್ರಿಗಳಿಗೆ ಕಿರುಕುಳ ನೀಡುತ್ತಲೇ ಬಂದಿದೆ. ಕೇಂದ್ರ ಸರಕಾರದ ಮರ್ಜಿಗನುಗುಣವಾಗಿಯೇ ನಡೆದುಕೊಂಡ ಚುನಾವಣಾ ಆಯೋಗ ಸಹ ಲಾಭದಾಯಕ ಹುದ್ದೆಯ ನೆಪದಲ್ಲಿ 20 ಶಾಸಕರನ್ನು ಅನರ್ಹಗೊಳಿಸಿ ಆಮ್ ಆದ್ಮಿ ಪಕ್ಷದ ಜಂಘಾಬಲ ಉಡುಗಿಸುವ ಕೆಲಸ ಮಾಡಿತು. ಆದರೆ ತದನಂತರದಲ್ಲಿ ಹೈಕೋರ್ಟಿನ ತೀರ್ಪು ಆ ಶಾಸಕರ ಪರ ಬಂದು, ಪಕ್ಷ ನಿರಾಳವಾಗಿ ಉಸಿರಾಡುವಂತೆ ಮಾಡಿತು. ಇದೀಗ ಕೇಂದ್ರ ಸರಕಾರ ದಿಲ್ಲಿ ಸರಕಾರದ ಅಧಿಕಾರಿಗಳ ನಿಯುಕ್ತಿಯ ಅಧಿಕಾರವನ್ನೂ ಕೇಜ್ರಿವಾಲ್‌ರಿಂದ ಕಿತ್ತುಕೊಂಡಿದ್ದು, ಈ ಪ್ರಕರಣವೀಗ ನ್ಯಾಯಾಲಯದಲ್ಲಿದೆ. ನೇರವಾಗಿ ಅಲ್ಲದಿದ್ದರೂ ತಾನು ನೇಮಿಸಿದ ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರ ಸರಕಾರ ದಿಲ್ಲಿಯ ಆಮ್ ಆದ್ಮಿ ಸರಕಾರದ ವಿರುದ್ಧ ಕಳೆದ ಮೂರು ವರ್ಷಗಳಿಂದ ಸಮರ ಸಾರಿ ನಿಂತಿದೆ. ಯಾಕೆ ಮೋದಿಯವರು ಮತ್ತು ಅವರ ಸರಕಾರ ಕೇಜ್ರಿವಾಲ್ ವಿರುದ್ಧ ಇಷ್ಟೊಂದು ಅಸಹನೆ ತೋರಿಸುತ್ತಿದೆಯೆಂದು ನೋಡಲು ನಾವು ಸ್ವಲ್ಪಹಿಂದಕ್ಕೆ ಹೋಗಬೇಕಾಗುತ್ತದೆ.

   ಅಣ್ಣಾಹಝಾರೆ ಅವರು ಜನಲೋಕಪಾಲ್ ಮಸೂದೆಗೆ ಒತ್ತಾಯಿಸಿ ನಡೆಸಿದ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಅರವಿಂದ ಕೇಜ್ರಿವಾಲ್ ಆ ದಿನಗಳಲ್ಲಿ ಇಡೀ ದೇಶದ ಗಮನ ಸೆಳೆದಿದ್ದರು. ಭಾಜಪ ಸಹ ಈ ಚಳವಳಿಯನ್ನು ಪರೋಕ್ಷವಾಗಿ ಬೆಂಬಲಿಸುತ್ತ ಅಂದಿನ ಆಡಳಿತ ಪಕ್ಷವಾದ ಕಾಂಗ್ರೆಸ್ ವಿರುದ್ಧ ರಾಜಕೀಯ ಲಾಭ ಪಡೆಯಲು ಪ್ರಯತ್ನ ನಡೆಸಿತ್ತು. ಆ ದಿನಗಳಲ್ಲಿ ಕೇಜ್ರಿವಾಲ್ ರಾಜಕಾರಣಕ್ಕೆ ಧುಮುಕುತ್ತಾರೆಂದು ಯಾರೂ ಭಾವಿಸಿರಲಿಲ್ಲ. ಆದರೆ ನಂತರದಲ್ಲಿ ಹಝಾರೆಯವರನ್ನೂ ಧಿಕ್ಕರಿಸಿ ಕೇಜ್ರಿವಾಲ್‌ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿದಾಗ ಭಾಜಪವಾಗಲಿ ಕಾಂಗ್ರೆಸ್ ಆಗಲಿ ಕೇಜ್ರಿವಾಲ್‌ರನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತ ಬಾರದೆ ಮೈತ್ರಿ ಸರಕಾರ ರಚಿಸಿ ನಂತರ ರಾಜಿನಾಮೆ ನೀಡಿ ಹೊರಬಂದ ಕೇಜ್ರಿವಾಲ್‌ರ ಜನಪ್ರಿಯತೆಯನ್ನು ಹಗುರವಾಗಿ ಪರಿಗಣಿಸಿದ ಭಾಜಪ ಕಾಂಗ್ರೆಸ್ ಎರಡೂ ಪಕ್ಷಗಳು 2015ರ ದಿಲ್ಲಿ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯನ್ನು ಎದುರಿಸಬೇಕಾಯಿತು. ಕೇಜ್ರಿವಾಲ್‌ರ ಪಕ್ಷವನ್ನು ಮಣಿಸಲು ಭಾಜಪ ಆಮ್‌ಆದ್ಮಿ ಪಕ್ಷದಲ್ಲಿ ಸಕ್ರಿಯವಾಗಿದ್ದ ಕಿರಣ್ ಬೇಡಿಯವರನ್ನು ತಮ್ಮ ಪಕ್ಷಕ್ಕೆ ಕರೆದುಕೊಂಡು ಬಂದು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಿತು. ಆದರೆ ಸ್ವತಃ ಕೇಜ್ರಿವಾಲ್‌ರೇ ಅಚ್ಚರಿಗೊಳ್ಳುವಂತೆ ಆಮ್ ಆದ್ಮಿ ಪಕ್ಷ ಎಪ್ಪತ್ತು ಸ್ಥಾನಗಳ ಪೈಕಿ ಅರವತ್ತೇಳು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಹಿಡಿಯಿತು. ದಿಲ್ಲಿಯ ಮಧ್ಯಮವರ್ಗ ಮತ್ತು ಮತ್ತು ತಳ ಸಮುದಾಯ ಸಂಪೂರ್ಣವಾಗಿ ಕೇಜ್ರಿವಾಲ್‌ರ ಪರ ನಿಂತಿತ್ತು. 2014ರ ವೇಳೆಗೆ ದೇಶದ ಬಲಿಷ್ಠ ನಾಯಕರಾಗಿ ಬೆಳೆದಿದ್ದ ನರೇಂದ್ರ ಮೋದಿಯವರಿಗೆ ಕೇಜ್ರಿವಾಲ್‌ರ ಈ ಜನಪ್ರಿಯತೆ ಆತಂಕವನ್ನುಂಟು ಮಾಡಿದ್ದು ಸುಳ್ಳೇನಲ್ಲ. ಯಾಕೆಂದರೆ ದಿನದಿನಕ್ಕೆ ಕೇಜ್ರಿವಾಲ್‌ರ ಜನಪ್ರಿಯತೆ ದಿಲ್ಲಿಯ ಆಚೆಗೂ ಹಬ್ಬುತ್ತಾ ಹೋಗುತ್ತಿತ್ತು. ಆ ಸಂದರ್ಭದಲ್ಲಿ ಉತ್ತರ ಭಾರತದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಬೇಕಿದ್ದು ಎಲ್ಲಿ ಆಮ್ ಆದ್ಮಿ ಪಕ್ಷ ಆ ಚುನಾವಣೆಗಳಲ್ಲಿ ಭಾಗವಹಿಸಿ ತನ್ನ ಮತಬ್ಯಾಂಕಿಗೆ ಕೈ ಹಾಕುತ್ತದೆಯೋ ಎಂಬ ಅತಂಕದಲ್ಲಿ ಭಾಜಪ ವಿಧಿಯಿರದೆ ದಿಲ್ಲಿ ಸರಕಾರದ ಆಡಳಿತಕ್ಕೆ ಹಲವು ರೀತಿಯ ಅಡೆತಡೆಗಳನ್ನು ಒಡ್ಡುತ್ತಾ ಕೇಜ್ರಿವಾಲ್‌ರು ದಿಲ್ಲಿಯ ಆಚೆಗೆ ಯೋಚಿಸುವುದಕ್ಕೆ ಕಡಿವಾಣ ಹಾಕಲು ಸ್ವಲ್ಪ ಮಟ್ಟಿಗೆ ಯಶಸ್ವಿಯಾಯಿತು. ಆ ಸಮಯದಲ್ಲಿ ಎಲ್ಲಿ ಮೋದಿಯವರಿಗೆ ಸಮಾನಾಂತರ ನಾಯಕನಾಗಿ ಕೇಜ್ರಿವಾಲ್‌ರು ಬೆಳೆದು ಬಿಡುತ್ತಾರೊ ಎನ್ನುವ ಭಯ ಮೋದಿಯವರನ್ನೂ ಸೇರಿದಂತೆ ಭಾಜಪದ ನಾಯಕರನ್ನು ಕಾಡಿದ್ದು ಸತ್ಯ. ಆ ಭೀತಿಯಿಂದಲೇ ಕೇಜ್ರಿವಾಲ್‌ರನ್ನು ದಿಲ್ಲಿಗೆ ಸೀಮಿತಗೊಳಿಸುವ ಹುನ್ನಾರದ ಭಾಗವಾಗಿ ದಿಲ್ಲಿ ಸರಕಾರದ ದೈನಂದಿನ ಆಡಳಿತದಲ್ಲಿ ತನ್ನ ಪ್ರತಿನಿಧಿ ಲೆಫ್ಟಿನೆಂಟ್ ಗವರ್ನರ್ ಮೂಲಕ ಮೂಗು ತೂರಿಸಲು ಪ್ರಾರಂಭಿಸಿತು. ಅದಕ್ಕೆ ತಕ್ಕಂತೆ ಕೇಜ್ರಿವಾಲ್ ಸಹ ಹಿಂದೆ ಮುಂದೆ ನೋಡದೆ ತೆಗೆದುಕೊಂಡ ಹಲವು ನಿರ್ಧಾರಗಳು ಮತ್ತು ನಡೆದುಕೊಂಡ ರೀತಿ ಮಾಧ್ಯಮಗಳು ಅವರನ್ನು ಸರ್ವಾಧಿಕಾರಿಯೆಂಬಂತೆ ಬಿಂಬಿಸಲು ಸಹಕಾರಿಯಾಯಿತು. ತನಗೆ ಸರಿಸಾಟಿಯಾಗಿ ಬೆಳೆಯಬಲ್ಲ ತನ್ನ ಪಕ್ಷದ ನಾಯಕರನ್ನೆಲ್ಲ ಮೂಲೆಗುಂಪು ಮಾಡಿ ಬೀಗುತ್ತಿದ್ದ ಮೋದಿಗೆ ವಿರೋಧಪಕ್ಷಗಳಲ್ಲಿಯೂ ಅಂತಹ ಬಲಿಷ್ಠ ನಾಯಕರು ಇರಲಿಲ್ಲ. ಆದರೆ ತನ್ನ ಶಕ್ತಿಕೇಂದ್ರವಾದ ದಿಲ್ಲಿಯಲ್ಲಿಯೇ ನಿಂತು ತನಗೆ ಪ್ರಶ್ನೆ ಕೇಳಬಲ್ಲ ದಿಟ್ಟತನ ತೋರಿಸುತ್ತಿದ್ದ ಕೇಜ್ರಿವಾಲ್‌ರನ್ನು ಮೋದಿಯವರು ಸಹಿಸುವುದು ಸಾಧ್ಯವಿರಲಿಲ್ಲ. ಕೇಜ್ರಿವಾಲ್ ಜನಸಮುದಾಯದ ಚಳವಳಿಗಳ ಮೂಲಕ ರಾಜಕಾರಣಕ್ಕೆ ಬಂದವರಾಗಿದ್ದು ಇಂಡಿಯಾದ ಶಕ್ತಿ ರಾಜಕಾರಣದ ಆಟಗಳನ್ನು ಆಳವಾಗಿ ಅರ್ಥಮಾಡಿ ಕೊಂಡವರೇನಲ್ಲ. ಆದರೆ ಮೋದಿಯವರು ಒಂದು ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಸಕ್ರಿಯ ರಾಜಕಾರಣದ ಎಲ್ಲ ಪಟ್ಟುಗಳನ್ನು ಕಲಿಯುತ್ತಲೇ ಪ್ರಧಾನಿ ಪಟ್ಟದವರೆಗೂ ನಡೆದುಕೊಂಡು ಬಂದವರು. ಹಾಗಾಗಿ ಮೋದಿ ಲೆಫ್ಟಿನೆಂಟ್ ಗವರ್ನರ್ ಮೂಲಕ ನೀಡಿದ ಕಿರುಕುಳವನ್ನು ರಾಜಕೀಯವಾಗಿ ಎದುರಿಸುವ ಚಾಣಾಕ್ಷತೆ ಕೇಜ್ರಿವಾಲ್‌ಗೆ ಇಲ್ಲದೆ ಹೋಯಿತು. ಹೀಗಾಗಿಯೇ ಹಲವು ವಿಷಯಗಳಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಮತ್ತು ಇಟ್ಟ ಹೆಜ್ಜೆಗಳು ಭಾಜಪಕ್ಕೆ ಸಹಾಯಕಾರಿಯಾಗುತ್ತ ಹೋದವು. ತನ್ನ ಸರಿಸಮಾನಾದ ಒಬ್ಬನೇ ಒಬ್ಬ ನಾಯಕನೂ ಇರದ ರಾಜಕೀಯ ಪಕ್ಷಗಳ ನಡುವೆ ತಮ್ಮಪಕ್ಷದ ಸಾಂಪ್ರದಾಯಿಕ ನಡೆಗಳನ್ನು ಧಿಕ್ಕರಿಸಿ ನಿಲ್ಲುವ ಛಾತಿ ತೋರಿದ ಕೇಜ್ರಿವಾಲ್ ಯಾವತ್ತಿಗಾದರೂ ತಮಗೆ ಅಪಾಯಕಾರಿಯೆಂದು ಭಾವಿಸಿದ ಭಾಜಪ ಕೇಜ್ರಿವಾಲ್‌ರನ್ನು ಗುರಿಯಾಗಿಸಿಟ್ಟುಕೊಂಡೇ ದಿಲ್ಲಿಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿಗಿಂತ ಹೆಚ್ಚು ಸ್ಥಾನಗಳನ್ನು ಭಾಜಪ ಗೆದ್ದರೂ, 2020ರಲ್ಲಿ ನಡೆಯುವ ದಿಲ್ಲಿಯ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್‌ರನ್ನು ಸೋಲಿಸುವುದು ಅಷ್ಟು ಸುಲಭವಲ್ಲವೆಂಬುದನ್ನು ಮನಗಂಡಿರುವ ಭಾಜಪ ತನಗೆ ಗೊತ್ತಿರುವ ಎಲ್ಲ ಪಟ್ಟುಗಳನ್ನೂ ಬಳಸಿಕೊಂಡು ಅವರನ್ನು ಹಣಿಯಲು ಹೊರಟಿದೆ. ಭಾಜಪ ವಿರೋಧಿ ಮೈತ್ರಿಕೂಟದ ಬಗ್ಗೆ ಮಾತಾಡುವ ಕಾಂಗ್ರೆಸ್ ಕೂಡಾ ಕೇಜ್ರಿವಾಲ್‌ರನ್ನು ದೂರವಿಟ್ಟು ರಾಜಕಾರಣ ಮಾಡುತ್ತಿದೆ. ಕೇಜ್ರಿವಾಲ್‌ಜನಪ್ರಿಯತೆ ಬಗ್ಗೆ ಕಾಂಗ್ರೆಸ್ ನಾಯಕರಿಗೂ ಭಾಜಪದಷ್ಟೆ ಭಯವಿದೆ, ಹೀಗಾಗಿಯೇ ಆಮ್ ಆದ್ಮಿ ಪಕ್ಷದ ಸಂಕಷ್ಟಗಳ ಸಂದರ್ಭಗಳಲ್ಲಿ ಕಾಂಗ್ರೆಸ್ ಭಾಜಪದ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳನ್ನು ಖಂಡಿಸದೆ ಮೂಕಪ್ರೇಕ್ಷಕನಾಗಿ ಕೂತಿದೆ.

ಕೇಜ್ರಿವಾಲ್ ಮತ್ತು ಕೇಂದ್ರ ಸರಕಾರಗಳ ನಡುವಿನ ಈ ಜಟಾಪಟಿಯಲ್ಲಿ ಪದೆಪದೇ ನ್ಯಾಯಾಲಯ ಮಧ್ಯಪ್ರವೇಶ ಮಾಡುವಂತಾಗಿರುವುದು ಆರೋಗ್ಯಕಾರಿ ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು ಎಂಬುದಂತು ಸತ್ಯ.

Similar News