ಸಂಬಂಧಿಕರೇ ಈ ನತದೃಷ್ಟ ಮಹಿಳೆ ಪಾಲಿಗೆ ಕಂಟಕವಾದರು
ಬರೇಲಿ, ಜು.16: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ದೇವಾಲಯದ ಯಜ್ಞಶಾಲೆಯ ಬಳಿ ಜೀವಂತವಾಗಿ ದಹಿಸಿದ ಘಟನೆ ಇಡೀ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮತ್ತಷ್ಟು ಆಘಾತಕಾರಿ ಅಂಶವನ್ನು ಹೊರಗೆಡವಿದ್ದಾರೆ. ಮಹಿಳೆಯ ಮೇಲೆ ಈ ಪೈಶಾಚಿಕ ಕೃತ್ಯ ಎಸಗಿರುವವರು ಆಕೆಯ ನಿಕಟ ಸಂಬಂಧಿಕರೇ ಎನ್ನುವುದು ಇದೀಗ ಬಹಿರಂಗವಾಗಿದೆ.
"ಐವರು ಆರೋಪಿಗಳ ಪೈಕಿ ಮಹಾವೀರ್ ಎಂಬಾತ, ಸಂತ್ರಸ್ತ ಮಹಿಳೆಯ ಪತಿಯ ಸೋದರ ಸಂಬಂಧಿ. ಉಳಿದವರೂ ಅವರ ಸಂಬಂಧಿಕರೇ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದೇವೆ. ಆದರೆ ಎಲ್ಲರೂ ತಲೆಮರೆಸಿಕೊಂಡಿದ್ದಾರೆ" ಎಂದು ತನಿಖಾಧಿಕಾರಿ ವರುಣ್ ಕುಮಾರ್ ಹೇಳಿದ್ದಾರೆ.
ಈ ಮಧ್ಯೆ ಎಡಿಜಿಪಿ ಪ್ರೇಮ್ಪ್ರಕಾಶ್ ರವಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದರು. "ಮಹಿಳೆ ಪೊಲೀಸ್ ಸಹಾಯವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿರುವ ಯಾವುದೇ ದಾಖಲೆಗಳಿಲ್ಲ. ಆಕೆ ಪ್ರಯತ್ನಿಸಿರಬಹುದು. ಆದರೆ ಕರೆ ವಿಫಲವಾಗಿರಬಹುದು" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಹಿಳೆಯನ್ನು ದಹಿಸುವ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತೇ ಎನ್ನುವುದನ್ನು ಪತ್ತೆ ಮಾಡಲು ವಿಧಿವಿಜ್ಞಾನ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಶನಿವಾರ ಮುಂಜಾನೆ ಮನೆಯಲ್ಲಿ ನಿದ್ರಿಸುತ್ತಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಬಳಿಕ ಮಹಿಳೆಯನ್ನು ಪಕ್ಕದ ದೇವಾಲಯಕ್ಕೆ ಎಳೆದೊಯ್ದು, ಬೆಂಕಿ ಹಚ್ಚಿ ಸುಡಲಾಗಿತ್ತು.