ಸರಕಾರಿ ಭಯೋತ್ಪಾದನೆಯ ಮತ್ತೊಂದು ಮುಖ

Update: 2018-07-18 18:33 GMT

 ‘ಸಾರ್ವಜನಿಕರ ಒಳಿತಿಗಾಗಿ’ ಎಂಬ ಹೆಸರಿನಲ್ಲಿ ಜಾರಿಯಾಗುತ್ತಿರುವ ಬೃಹತ್ ಯೋಜನೆಗಳನ್ನು ವಿರೋಧಿಸುತ್ತಿರುವವರಿಗೆ ‘ಅಭಿವೃದ್ಧಿ ವಿರೋಧಿ’ಗಳೆಂದು ಹಣೆಪಟ್ಟಿ ಕಟ್ಟುವುದರಿಂದ ಹಿಡಿದು ‘ರಾಷ್ಟ್ರ ವಿರೋಧಿ’, ‘ನಗರ ನಕ್ಸಲ್’ ಹಾಗೂ ‘ಭಯೋತ್ಪಾದಕ’ರೆನ್ನುವವರೆಗೆ ಬೇರೆಬೇರೆ ಸರಕಾರಗಳು ಹೊಸಹೊಸ ಹಣೆಪಟ್ಟಿಗಳನ್ನು ಕಟ್ಟುತ್ತಿವೆ. ಇದೇ ಜುಲೈ 6ರಂದು ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೇಂದ್ರ ಸರಕಾರದ ಹಣಕಾಸು ಮತ್ತು ಹಡಗು ಉದ್ಯಮ ಇಲಾಖೆಯ ರಾಜ್ಯಮಂತ್ರಿ ಪೊನ್ ರಾಧಾಕೃಷ್ಣನ್‌ರವರು ‘‘ಸರಕಾರಿ ಯೋಜನೆಗಳನ್ನು ವಿರೋಧಿಸುವವರು ಮತ್ತು ಅದರ ವಿರುದ್ಧ ಪ್ರತಿಭಟನೆಗಳನ್ನು ನಡೆಸುವವರನ್ನು ಭಯೋತ್ಪಾದಕರೆಂದಲ್ಲದೆ ಬೇರೇನೂ ಹೇಳಲು ಸಾಧ್ಯವಿಲ್ಲ’’ ಎಂದು ಘೋಷಿಸಿದರು. ‘‘ಅಂಥವರು ಜನತೆ ಮತ್ತು ಅಭಿವೃದ್ಧಿಯ ವಿರುದ್ಧ ಇರುವುದರಿಂದ ಅಂಥ ವ್ಯಕ್ತಿಗಳನ್ನು ಭಯೋತ್ಪಾದಕರೆನ್ನದೆ ಬೇರೇನೂ ಹೇಳಲೂ ಸಾಧ್ಯವಿಲ್ಲ’’ ಎಂದು ಒತ್ತುಕೊಟ್ಟು ಹೇಳಿದರು.

ಪ್ರಾಯಶಃ ಆ ಮಂತ್ರಿಗೆ ‘ಭಯೋತ್ಪಾದಕ’ನೆಂದರೆ ಯಾರು ಎಂಬ ಬಗ್ಗೆ ನಿಘಂಟಿನಲ್ಲಿರುವ ನಿರ್ವಚನದ ಬಗ್ಗೆ ಮಾಹಿತಿಯಿರಲಿಕ್ಕಿಲ್ಲ. ನಿಘಂಟಿನ ಪ್ರಕಾರ ಭಯೋತ್ಪಾದಕನೆಂದರೆ ‘‘ಒಂದು ನಿರ್ದಿಷ್ಟ ರಾಜಕೀಯ ಉದ್ದೇಶಗಳಿಗೋಸ್ಕರ ನಾಗರಿಕರ ವಿರುದ್ಧ ಕಾನೂನುಬಾಹಿರ ಹಿಂಸೆ ಮತ್ತು ಬೆದರಿಕೆಯನ್ನು ಬಳಸುವ ವ್ಯಕ್ತಿ.’’ ತಮಿಳುನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ನಾಗರಿಕರ ವಿರುದ್ಧ ಕಾನೂನುಬಾಹಿರ ಹಿಂಸೆ ಮತ್ತು ಬೆದರಿಕೆಗಳನ್ನು ಬಳಸಿರುವುದು ಪ್ರಭುತ್ವವೇ ಆಗಿದೆಯೆಂಬುದು ಅರ್ಥಮಾಡಿಕೊಳ್ಳುವುದು ಪ್ರಾಯಶಃ ಆ ಮಂತ್ರಿವರ್ಯರಿಗೆ ಸಾಧ್ಯವಾಗಿಲ್ಲ. ಅದರಲ್ಲೂ ಮೇ 22ರಂದು ‘ವೇದಾಂತ’ ಎಂಬ ಕಾರ್ಪೊರೇಟ್ ಕಂಪೆನಿಗೆ ಸೇರಿದ ಸ್ಟೆರಲೈಟ್ ತಾಮ್ರ ಸಂಸ್ಕರಣೆ ಕಾರ್ಖಾನೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನಾಗರಿಕರನ್ನು ಗುಂಡಿಟ್ಟು ಕೊಂದಿದ್ದು ಸರಕಾರವೇ. ಈ ಪೊಲೀಸ್ ಗೋಲಿಬಾರಿನಲ್ಲಿ 13 ಜನರು ಕೊಲ್ಲಲ್ಪಟ್ಟರು. ಆ ನಂತರವೂ ಸರಕಾರವು ನೂರಾರು ಅಮಾಯಕರನ್ನು ಬಂಧಿಸಿ ಕರಾಳ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಸೆರೆಗಟ್ಟಿತು. ತಮ್ಮ ಪ್ರಾಣವನ್ನು ಬಲಿತೆಗೆದುಕೊಳ್ಳುತ್ತಿದ್ದ ಕಾರ್ಖಾನೆಯೊಂದು ಸೃಷ್ಟಿಸುತ್ತಿದ್ದ ಮಾಲಿನ್ಯದ ವಿರುದ್ಧ ಹೋರಾಡುತ್ತಿದ್ದ ಜನರು ಹೇಗೆ ಭಯೋತ್ಪಾದಕರಾಗುತ್ತಾರೆ? ಮತ್ತು ಜನರ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಅತಿರೇಕದ ಹಿಂಸಾಚಾರವನ್ನು ಪ್ರಯೋಗಿಸಿದ ಸರಕಾರದ ಕ್ರಮಗಳನ್ನು ಭಯೋತ್ಪಾದನೆ ಎನ್ನದೇ ಬೇರೇನೆಂದು ಹೇಳಲು ಸಾಧ್ಯ?
ವಾಸ್ತವವಾಗಿ ತನ್ನ ಯೋಜನೆಗಳ ವಿರುದ್ಧ ಪ್ರತಿಭಟಿಸುವ ಜನಸಾಮಾನ್ಯರಲ್ಲಿ ಹೇಗೆ ಪ್ರಭುತ್ವವು ಭೀತಿಯನ್ನು ಹುಟ್ಟಿಸಬಹುದೆಂಬುದಕ್ಕೆ ತಮಿಳುನಾಡು ಒಂದು ನಿದರ್ಶನವಾಗಿಬಿಡುತ್ತಿದೆ. ಸ್ಟೆರಲೈಟ್ ವಿರೋಧಿ ಪ್ರದರ್ಶನವಾದ ಕಳೆದ ಒಂದು ತಿಂಗಳಲ್ಲಿ ಸರಕಾರವು ಆ ಹೋರಾಟಗಳಲ್ಲಿ ನೇರವಾಗಿ ಭಾಗವಹಿಸಿದ್ದವರನ್ನು ಬಂಧಿಸುವುದರ ಜೊತೆಜೊತೆಗೆ ಬಂಧಿತರ ಪರ ವಕಾಲತ್ತು ವಹಿಸಿದ್ದ ವಕೀಲರನ್ನು, ಖ್ಯಾತ ಪರಿಸರವಾದಿಯೊಬ್ಬರನ್ನು ಕೂಡಾ ಬಂಧಿಸಿದೆಯಲ್ಲದೆ ಮೇ 22ರ ಪ್ರದರ್ಶನವನ್ನು ಹಾಗೂ ಮತ್ತಿತರ ಹೋರಾಟಗಳನ್ನು ವರದಿ ಮಾಡುತ್ತಿದ್ದ ಪತ್ರಕರ್ತರನ್ನೂ ಸಹ ವಶಕ್ಕೆ ತೆಗೆದುಕೊಂಡು ಕೆಲಸಮಯದ ನಂತರ ಬಿಡುಗಡೆ ಮಾಡಿದೆ. ಈ ದಾಳಿಗೆ ಮುನ್ನ ತೂತುಕುಡಿಯಲ್ಲಿ ನಡೆದಂಥ ಹಲವು ಹೋರಾಟಗಳನ್ನು ಜನರ ಗಮನಕ್ಕೆ ಬರದಂತೆ ಮಾಡಲು ತಮಿಳುನಾಡಿನ 85 ಲಕ್ಷ ಮನೆಗಳಿಗೆ ಕೇಬಲ್ ಟಿವಿ ಸಂಪರ್ಕವನ್ನು ಕೊಡುವ ಸರಕಾರಿ ಸ್ವಾಮ್ಯದ ಅರಸು ಕೇಬಲ್ ಟಿವಿ ಕಾರ್ಪೊರೇಷನ್ ತನ್ನ ಜಾಲದಿಂದ 11 ಸುದ್ದಿ ವಾಹಿನಿಗಳನ್ನು ನಿಷೇಧಿಸುವಂತೆ ಮಾಡಿತ್ತು. ಅದೇ ರೀತಿ ಚೆನ್ನೈ- ಸೇಲಂ ಹಸಿರು ಕಾರಿಡಾರ್ ಯೋಜನೆಯನ್ನು ಜಾರಿಮಾಡಲು ಸರಕಾರವು ಹಾಕುತ್ತಿರುವ ಒತ್ತಡವೂ ಆತಂಕವನ್ನು ಹುಟ್ಟಿಸುತ್ತಿದೆ. ಕೇಂದ್ರಸರಕಾರದ ಧನಸಹಾಯದಿಂದ ಜಾರಿಯಾಗಲಿರುವ ಈ ಹೆದ್ದಾರಿ ಯೋಜನೆಯಿಂದ 159 ಹಳ್ಳಿಗಳು, ಫಲವತ್ತಾದ ಜಮೀನು ಹಾಗೂ ಮೀಸಲು ಅರಣ್ಯವನ್ನು ಒಳಗೊಂಡಂತೆ ಸಾಕಷ್ಟು ಅರಣ್ಯಭೂಮಿಯೂ ನಾಶವಾಗುವುದಲ್ಲದೆ ಸಾವಿರಾರು ಕುಟುಂಬಗಳು ಬೀದಿಪಾಲಾಗಲಿವೆ.
 ಇಂತಹ ಯೋಜನೆಗಳಿಗೆ ಎದುರಾಗುವ ಪ್ರತಿರೋಧದ ಬಗ್ಗೆ ತಮಿಳುನಾಡು ಸರಕಾರ ತೋರಿರುವ ಅಸಹನೆ ಅತಿರೇಕದಿಂದ ಕೂಡಿದ್ದರೂ ಇದೇ ಬಗೆಯ ಧೋರಣೆಯು ಇತರ ಸರಕಾರಗಳ ಕ್ರಮಗಳಲ್ಲೂ ಪ್ರತಿಫಲಿತಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಚ್ಚುಮೆಚ್ಚಿನ ಯೋಜನೆಯಾದ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ಟ್ರೈನ್ ಯೋಜನೆಗೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದರ ವಿರುದ್ಧ ಎದುರಾಗುತ್ತಿರುವ ಜನಪ್ರತಿರೋಧವನ್ನು ಮಹಾರಾಷ್ಟ್ರ ಸರಕಾರ ಹೇಗೆ ನಿಭಾಯಿಸಲಿದೆಯೆಂಬುದನ್ನು ಕಾದುನೋಡಬೇಕಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಲು 2018ರ ಡಿಸೆಂಬರ್ ಗಡುವಾಗಿದ್ದರೂ ಭೂಮಿಯನ್ನು ತೊರೆಯಲು ನಿರಾಕರಿಸುತ್ತಿರುವ ರೈತಾಪಿಯ ಪ್ರತಿರೋಧ ದಿನೇದಿನೇ ಹೆಚ್ಚಾಗುತ್ತಿರುವುದರಿಂದ ಈ ಗಡುವಿನೊಳಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿಯುವಂತೆ ಕಾಣುತ್ತಿಲ್ಲ.
 ಯಾವ ಸರಕಾರಗಳು ಸಹ ತಾವು ಅಭಿವೃದ್ಧಿಗೆ ಅಗತ್ಯ ಎಂದು ಭಾವಿಸಿದ ಯೋಜನೆಗಳ ವಿರುದ್ಧ ಎದುರಾಗುವ ಪ್ರತಿರೋಧದ ಬಗ್ಗೆ ಸಹನೆಯನ್ನು ಪ್ರದರ್ಶಿಸಿಲ್ಲ. ಆದರೂ ಈ ಹಿಂದೆ ಯಾವ ಯೋಜನೆಗಳು ಜನರಿಗೆ ಮತ್ತು ಅಭಿವೃದ್ಧಿಗೆ ಉಪಯೋಗಕಾರಿ ಎಂದು ಭಾವಿಸಲ್ಪಟ್ಟಿದ್ದವೋ ಅಂಥಾ ಯೋಜನೆಗಳ ನೈಜ ಪ್ರಯೋಜನದ ಬಗ್ಗೆ 1980ರ ಂತರದಲ್ಲಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಉದಾಹರಣೆಗೆ ಸರ್ದಾರ್ ಸರೋವರ ಅಣೆಕಟ್ಟನ್ನೂ ಒಳಗೊಂಡಂತೆ ನರ್ಮದಾ ನದಿಯುದ್ದಕ್ಕೂ ನಿರ್ಮಿಸಲು ಉದ್ದೇಶಿಸಿದ ಹಲವು ಅಣೆಕಟ್ಟುಗಳ ವಿರುದ್ಧ 1980ರ ದಶಕದಲ್ಲಿ ನರ್ಮದಾ ಬಚಾವ್ ಆಂದೋಲನವು ಕಟ್ಟಿದ ಜನಾಂದೋಲನದಿಂದಾಗಿ ವಿಶ್ವಬ್ಯಾಂಕಿನಂಥ ಅಂತರ್‌ರಾಷ್ಟ್ರೀಯ ಧನಸಹಾಯ ನೀಡುತ್ತಿದ್ದ ಸಂಸ್ಥೆಗಳು ಸಹ ಇಂತಹ ಬೃಹತ್ ಅಣೆಕಟ್ಟು ಯೋಜನೆಗಳಿಗೆ ನೀಡುತ್ತಿದ್ದ ಬೆಂಬಲದ ಬಗ್ಗೆ ಪುನರಾವಲೋಕನ ಮಾಡಲು ಪ್ರಾರಂಭಿಸಿದವು. 1992ರಲ್ಲಿ ವಿಶ್ವಬ್ಯಾಂಕು ಪ್ರಪ್ರಥಮ ಬಾರಿಗೆ ತಾನು ಧನಸಹಾಯ ಮಾಡುತ್ತಿದ್ದ ಸರ್ದಾರ್ ಸರೋವರ ಯೋಜನೆಯ ಬಗ್ಗೆ ಸ್ವತಂತ್ರ ಪರಿಶೋಧನೆಯನ್ನು ನಡೆಸಲು ಆದೇಶಿಸಿತು. ಇದರ ಪರಿಣಾಮವಾಗಿ ವಿಶ್ವಬ್ಯಾಂಕು ಸರ್ದಾರ್ ಸರೋವರ ಯೋಜನೆಗೆ ತಾನು ನೀಡುತ್ತಿದ್ದ ಸಹಾಯವನ್ನು ಹಿಂದೆೆಗೆದುಕೊಂಡಿತು. ಮಾತ್ರವಲ್ಲದೆ ನಂತರದಲ್ಲಿ ತಾನು ಬೆಂಬಲಿಸುವ ಯೋಜನೆಗಳಲ್ಲಿ ಪರಿಸರ ಮತ್ತು ಸಾಮಾಜಿಕ ಕಾಳಜಿಗಳು ಅಂತರ್ಗತವಾಗಿರುವಂತೆ ನೋಡಿಕೊಳ್ಳಲು ಪ್ರಪಂಚಾದ್ಯಂತ ಜಾರಿಯಲ್ಲಿದ್ದ ಇಂತಹ ಯೋಜನೆಗಳ ಬಗ್ಗೆ ಅಧ್ಯಯನ ಮಾಡಲು ವಿಶ್ವ ಅಣೆಕಟ್ಟು ಅಯೋಗ (ವರ್ಲ್ಡ್ ಕಮಿಷನ್ ಆನ್ ಡ್ಯಾಮ್ಸ್)ವೊಂದನ್ನು ರಚಿಸಲು ಸಹ ಮುಂದಾಯಿತು. ನರ್ಮದಾ ಬಚಾವ್ ಆಂದೋಲನದಿಂದ ಸರ್ದಾರ್ ಸರೋವರ ಅಣೆಕಟ್ಟನ್ನು ತಡೆಹಿಡಿಯಲು ಸಾಧ್ಯವಾಗದಿದ್ದರೂ ಬೃಹತ್ ಪ್ರಮಾಣದ ಪರಿಸರ ಹಾನಿಯುಂಟು ಮಾಡಿ ಲಕ್ಷಾಂತರ ಜನರನ್ನು ನಿರ್ವಸಿತಗೊಳಿಸಿ ಕಟ್ಟಲಾಗುವ ಬೃಹತ್ ಯೋಜನೆಗಳ ನೈಜ ಪ್ರಯೋಜನಗಳ ಬಗ್ಗೆ ಸರಿಯಾದ ಸಂದೇಹಗಳನ್ನು ಹುಟ್ಟುಹಾಕುವಲ್ಲಿ ಮಾತ್ರ ಖಂಡಿತಾ ಯಶಸ್ವಿಯಾಗಿದೆ.
ಇಂತಹ ಬೃಹತ್ ಯೋಜನೆಗಳನ್ನು ಯಾವ ಸ್ಥಳದಲ್ಲಿ ನಿರ್ಮಿಸಬೇಕೆಂಬ ನಿರ್ಧಾರದಲ್ಲಿ ಸ್ಥಳೀಯ ಸಂತ್ರಸ್ತ ಸಮುದಾಯಗಳ ಪಾಲುದಾರಿಕೆಯು ಇರಬೇಕೆಂಬುದನ್ನು ಒಡಿಶಾದ ನಯಮ್‌ಗಿರಿ ಪರ್ವತದಾಸರೆಯಲ್ಲಿ ಬದುಕುತ್ತಿರುವ ಆದಿವಾಸಿ ಡೋಗ್ರಿಯಾ ಕೋಂದ್ ಸಮುದಾಯ 2013ರಲ್ಲಿ ಸ್ಪಷ್ಟವಾಗಿ ತೋರಿಸಿದೆ. 2006ರ ಪರಿಶಿಷ್ಟ ಬುಡಕಟ್ಟು ಮತ್ತು ಇತರ ಅರಣ್ಯವಾಸಿಗಳ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಆ ಸಮುದಾಯವು ತಮ್ಮ ಪ್ರದೇಶದಲ್ಲಿ ವೇದಾಂತ ಕಂಪೆನಿಯು ಬಾಕ್ಸೈಟ್ ಗಣಿಗಾರಿಕೆ ಮಾಡುವುದನ್ನು ತಡೆಗಟ್ಟಿತು. ಜಗತ್ತಿನಾದ್ಯಂತ ಈ ಸಮುದಾಯದ ಹೋರಾಟ ದೊಡ್ಡ ಸ್ಫೂರ್ತಿಯನ್ನೇ ನೀಡಿತು. ಹಾಗಿದ್ದರೂ, ವೇದಾಂತ ಕಂಪೆನಿಯ ವಿರುದ್ಧ ಹೋರಾಟ ನಡೆಸಿದ ನಿಯಾಮ್‌ಗಿರಿ ಸುರಕ್ಷಾ ಸಮಿತಿಗೆ ಮಾವೋವಾದಿಗಳೊಂದಿಗೆ ಸಂಪರ್ಕವಿತ್ತೆಂದು ಕಳೆದ ವರ್ಷ ಕೇಂದ್ರ ಗೃಹ ಇಲಾಖೆ ಅದರ ಮೇಲೆ ಆರೊಪ ಹೊರಿಸಿದೆ. ಈ ರೀತಿ ಕೇಂದ್ರ ಮತ್ತು ಹಲವು ರಾಜ್ಯ ಸರಕಾರಗಳು ತಾವು ಜಾರಿಮಾಡ ಬಯಸುವ ಬೃಹತ್ ಯೋಜನೆಗಳ ವಿರುದ್ಧ ನಡೆಯುವ ಜನಾಂದೋಲನಗಳ ಹಿಂದೆ ತೀವ್ರಗಾಮಿಗಳಿದ್ದರೆಂಬ ಕಥನಗಳನ್ನು ಹುಟ್ಟುಹಾಕುವುದು ಕಳವಳ ಹುಟ್ಟಿಸುತ್ತದೆ. ಏಕೆಂದರೆ ಇಂದು ಜನರು ಪ್ರಶ್ನಿಸುವ ಹಕ್ಕನ್ನೂ ಒಳಗೊಂಡಂತೆ ತಮ್ಮ ಹಕ್ಕುಗಳ ಬಗ್ಗೆ ಸಾಕಷ್ಟು ಜಾಗೃತರಾಗಿದ್ದಾರೆ ಎಂಬುದನ್ನು ಈ ಬಗೆಯ ತಿಳವಳಿಕೆಯು ಕಡೆಗಣಿಸುತ್ತದೆ.
ಇದೇ ರೀತಿ ಜೂನ್ ಮಾಸಂತ್ಯದಲ್ಲಿ ಮುಂಬೈನಲ್ಲಿ ತನ್ನ ಆಡಳಿತ ನಿರ್ವಾಹಕರ ವಾರ್ಷಿಕ ಸಭೆಯನ್ನು ನಡೆಸಿದ ಏಶಿಯನ್ ಇನ್ಫ್ರಾಸ್ಟ್ರಕ್ಚರ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ನಂಥ ಬಹುಪಕ್ಷೀಯ ಧನಸಹಾಯ ನೀಡುವ ಸಂಸ್ಥೆಗಳಿಗೆ ಜನಹೋರಾಟಗಳು ಎತ್ತುತ್ತಿರುವ ಕಾಳಜಿಗಳ ಬಗ್ಗೆ ಅರಿವೇ ಇಲ್ಲದಿರುವುದೂ ಸಹ ಅತ್ಯಂತ ಕಳವಳ ಹುಟ್ಟಿಸುವ ಸಂಗತಿಯಾಗಿದೆ. ಬದಲಿಗೆ ಅಂತಹ ಸಂಸ್ಥೆಗಳು ಹೋರಾಟಗಳನ್ನು ಗಣನೆಗೇ ತೆಗೆದುಕೊಳ್ಳದೆ ಮತ್ತಷ್ಟು ಧನಸಹಾಯ ನೀಡಲು ಮುಂದೆ ಬರುತ್ತಿವೆ. ಇದು ನಮ್ಮ ದೇಶದ ಸರಕಾರಗಳಿಗೆ ಅಸ್ತಿತ್ವದಲ್ಲಿರುವ ಪರಿಸರ ಹಾಗೂ ಕಾರ್ಮಿಕ ಸಂಬಂಧಿ ಮತ್ತು ಭೂಸ್ವಾಧೀನ ಕಾನೂನುಗಳನ್ನು ಒಳಗೊಂಡಂತೆ ಎಲ್ಲಾ ಕಾನೂನು ಮತ್ತು ನಿಯಂತ್ರಣಗಳನ್ನು ಮತ್ತಷ್ಟು ಸಡಿಲಗೊಳಿಸಿ ಇಂಥಾ ಯೋಜನೆಗಳಿಗೆ ಮತ್ತಷ್ಟು ಅನುವು ಮಾಡಿಕೊಡಲು ಉತ್ತೇಜನ ನೀಡುತ್ತಿದೆ. ಇದರ ಜೊತೆಗೆ ಜನಪ್ರತಿರೋಧಗಳಿಗೆ ಭಯೋತ್ಪಾದಕ ಕೃತ್ಯವೆಂದು ಹಣೆಪಟ್ಟಿ ಹಚ್ಚಿಬಿಟ್ಟರಂತೂ ಪ್ರಭುತ್ವ ದಮನವನ್ನು ಹರಿಬಿಡಲು ಹಸಿರು ನಿಶಾನೆ ನೀಡಿದಂತೆ ಆಗುವುದರಲ್ಲಿ ಸಂಶಯವಿಲ್ಲ.
ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ