ಇವರೆಲ್ಲ ಇಂದು ಜೀವಂತ ಇದ್ದಿದ್ದರೆ...

Update: 2018-07-27 18:32 GMT

ಮಾನ್ಯರೇ,

ಆಚಾರ್ಯ ಅಗ್ನಿವೇಶ್‌ರು ಆರ್ಯ ಸಮಾಜದ ಸಂತರು. ಆರ್ಯ ಸಮಾಜವು ಏಕದೇವಾರಾಧನೆಯನ್ನು ಬೋಧಿಸುತ್ತದೆ ಹಾಗೂ ಮೂರ್ತಿ ಪೂಜೆ ವಿರೋಧಿಸುತ್ತದೆ. ಕಳೆದ ವಾರ ಜಾರ್ಖಂಡ್ ರಾಜ್ಯದಲ್ಲಿ ಆದಿವಾಸಿಗಳ ಸಮಸ್ಯೆಗಳ ಬಗ್ಗೆ ಅವರು ಹಮ್ಮಿಕೊಂಡಿದ್ದ ಒಂದು ಕಾರ್ಯಕ್ರಮದಲ್ಲಿ ಬಲಪಂಥೀಯ ಕೇಸರಿ ಸಂಘಟನೆಯವರು 79 ವರ್ಷದ ಅಗ್ನಿವೇಶರ ಮೇಲೆ ಭೀಕರವಾಗಿ ಹಲ್ಲೆ ಮಾಡಿದರು. ದೇಶದಲ್ಲಿ ಕೇಸರಿ ಸಂಘಟನೆಗಳಿಂದ ಆಗುತ್ತಿರುವ ಗುಂಪು ದಾಳಿ ಹಾಗೂ ಹತ್ಯೆಗಳು ಹಿಂದಿನ ನಾಲ್ಕು ವರ್ಷದಿಂದ ದೇಶದಲ್ಲಿ ಸೃಷ್ಟಿಯಾಗಿರುವ ತೀವ್ರ ವಿಷಮ ವಾತಾವರಣದ ಸಂಕೇತಗಳಾಗಿವೆ. ಆರ್ಯ ಸಮಾಜ ಸ್ಥಾಪಿಸಿದ ದಯಾನಂದ ಸರಸ್ವತಿ ಇಂದು ಜೀವಂತ ಇರುತ್ತಿದ್ದರೆ ಅವರಿಗೂ ಅಗ್ನಿವೇಶರಿಗೆ ಆದ ಗತಿಯೇ ಆಗುತ್ತಿತ್ತು. ಹಾಗೆಯೇ ಸ್ವಾಮಿ ವಿವೇಕಾನಂದರನ್ನು ಹೈಜಾಕ್‌ಮಾಡಿ ತಮ್ಮ ಐಕಾನ್ ಮಾಡಿಕೊಂಡಿರುವ ಸಂಘ ಪರಿವಾರದವರಿಗೆ ವಿವೇಕಾನಂದರ ನಿಜವಾದ ಪ್ರಗತಿಪರ (ವೈದಿಕ ವಿರೋಧಿ) ವಿಚಾರಗಳು ಗೊತ್ತಿಲ್ಲ, ಗೊತ್ತಿದ್ದರೆ ಸುಳ್ಳು ಕಥೆಗಳಿಂದ ನೆಹರೂರನ್ನು ಅವಮಾನಿಸಿದಂತೆ ವಿವೇಕಾನಂದರನ್ನೂ ಅವಮಾನಿಸದೆ ಬಿಡುತ್ತಿರಲಿಲ್ಲ. ಅವೇ ವಿಚಾರಗಳನ್ನು ವಿವೇಕಾನಂದರು ಇಂದು ಪ್ರಚಾರ ಮಾಡಿದ್ದರೆ ಅವರಿಗೂ ಸಂಘ ಪರಿವಾರಿಗರು ಅಗ್ನಿವೇಶರಂತೆ ಹಲ್ಲೆ ಮಾಡುತ್ತಿದ್ದರು. ಅದು ಬಿಡಿ, ಒಂದೇ ವೇಳೆ ನಮ್ಮ ವಿಶ್ವಕವಿ ಕುವೆಂಪು ಇಂದು ಜೀವಂತ ಇರುತ್ತಿದ್ದರೆ ಅವರನ್ನೂ ಗೌರಿ ಲಂಕೇಶರಂತೆ ಹತ್ಯೆ ಮಾಡಿಸಲಾಗುತ್ತಿತ್ತು.
ವೈದಿಕ ಧರ್ಮದ ವಿರುದ್ಧ ಬಸವಣ್ಣ ಬಂಡಾಯವೆದ್ದು ಹೊಸ ಧರ್ಮವೊಂದನ್ನು ಸ್ಥಾಪಿಸಿ ಅದರಲ್ಲಿ ಮೇಲ್ಜಾತಿ ಕೆಳಜಾತಿ ಎಲ್ಲರೂ ಸಮಾನ ಎಂದು ಸಾರಿದ್ದರು. ಇಂದೇನಾದರೂ ಅದೇ ಬಸವವಣ್ಣ ವೈದಿಕ ಧರ್ಮದ ವಿರುದ್ಧ ಬಂಡಾಯವೆದ್ದಿದ್ದರೆ ಅವರಿಗೂ ಡಾ.ಕಲಬುರ್ಗಿಯ ಪರಿಸ್ಥಿತಿ ಬರುತ್ತಿತ್ತು, ಅಥವಾ ಅವರಿಗೂ ಹಲ್ಲೆ ಮಾಡಿ ಪಾಕಿಸ್ತಾನಕ್ಕೆ ಹೋಗಲು ಹೇಳುತ್ತಿದ್ದರು. ಇದೆ ಗತಿ ಸರ್ವಜ್ಞ ಮತ್ತು ಕನಕದಾಸರಿಗೂ ಆಗುತ್ತಿತ್ತು.
ಛತ್ರಪತಿ ಶಿವಾಜಿಯ ಹದಿನೆಂಟು ಅಂಗ ರಕ್ಷಕರಲ್ಲಿ ಹನ್ನೊಂದು ಅಂಗರಕ್ಷಕರು ಮುಸ್ಲಿಮರಾಗಿದ್ದರು. ಶಿವಾಜಿಗೆ ಅಫ್ಝಲ್ ಖಾನ್‌ನನ್ನು ಹುಲಿ ಉಗುರಿನಿಂದ ಕೊಲ್ಲುವ ಯೋಜನೆ ಹೇಳಿಕೊಟ್ಟಿದ್ದು ಶಿವಾಜಿಯ ಮುಸ್ಲಿಂ ಅಂಗ ರಕ್ಷಕ. ಶಿವಾಜಿಯ ಸೈನ್ಯದಲ್ಲಿ ಶೇ.35ರಷ್ಟು ಸೈನಿಕರು ಮುಸ್ಲಿಮರಾಗಿದ್ದರು. ಶಿವಾಜಿಯ ಜಲಸೈನ್ಯದಲ್ಲಂತೂ ಶೇ.75ರಷ್ಟು ಸೈನಿಕರು ಆಫ್ರಿಕಾದ ಸಿದ್ದಿ ಮತ್ತು ಅರಬಿ ಮುಸ್ಲಿಮರಾಗಿದ್ದರು (ಆಗ ಅರಬಿಯರಿಗೆ ಭಾರತಕ್ಕೆ ಬರಲು ಪಾಸ್‌ಪೋರ್ಟ್ ವೀಸಾ ಬೇಕಿರಲಿಲ್ಲ!). ಸಮುದ್ರದ ನಡುವೆ ಶಿವಾಜಿಯ ವಿಶ್ವಪ್ರಸಿದ್ಧ ಜಂಜಿರಾ ಕೋಟೆ ಕಟ್ಟಿಕೊಟ್ಟಿದ್ದು ಅರಬಿ ಮತ್ತು ಆಫ್ರಿಕಾದ ಸಿದ್ದಿ ಮುಸ್ಲಿಮರು. ಇವತ್ತೇನಾದರೂ ಶಿವಾಜಿ ಇದ್ದಿದ್ದರೆ ಅವನನ್ನೂ ಸಿದ್ದರಾಮಯ್ಯರಂತೆ ಮುಸ್ಲಿಂ ತುಷ್ಟೀಕರಣ ಮಾಡುವವನು ಮತ್ತು ಹಿಂದೂ ವಿರೋಧಿ ಎಂದು ಹೀಯಾಳಿಸುತ್ತಿದ್ದರು ಸಂಘ ಪರಿವಾರಿಗರು. (ಇತಿಹಾಸದಲ್ಲಿ ಅಡಗಿರುವ ಘೋರ ಸತ್ಯವೇನೆಂದರೆ ಶಿವಾಜಿಯ ಪಟ್ಟಾಭಿಷೇಕ ಮಾಡಲು ಮರಾಠಿ ಬ್ರಾಹ್ಮಣರು ಆಗ ನಿರಾಕರಿಸಿದ್ದು ಮಾತ್ರವಲ್ಲ, ಶಿವಾಜಿ ಕೇವಲ 52 ವರ್ಷದವನಾಗಿದ್ದಾಗ ಅವನಿಗೆ ನಿಜವಾಗಿ ವಿಷಪ್ರಾಶನ ಮಾಡಿ ಕೊಂದವರೂ ಶಿವಾಜಿಯ ಬ್ರಾಹ್ಮಣ ಮಂತ್ರಿಗಳೇ ಆಗಿದ್ದರು!)
ಮರಾಠಿ ಚಿತ್ಪಾವನ ಬ್ರಾಹ್ಮಣರಾದ ವಿನಾಯಕ ಸಾವರ್ಕರ್ ಆರೆಸ್ಸೆಸ್ಸ್ ಸ್ಥಾಪಕರಲ್ಲಿ ಒಬ್ಬರು. ಸಾವರ್ಕರ್ ಇಂದು ಬದುಕಿರುತ್ತಿದ್ದರೆ ಉತ್ತರ ಭಾರತದ ಗೋರಕ್ಷಕರು (ಗೋ-ರಾಕ್ಷಸರು) ಅವರನ್ನು ಚಚ್ಚಿ ಕೊಲ್ಲುತ್ತಿದ್ದದ್ದು ಖಂಡಿತ. ಯಾಕೆಂದರೆ ಸಾವರ್ಕರರು ತಮ್ಮ ಒಂದು ಪುಸ್ತಕದಲ್ಲಿ ‘‘ಗೋವು ಮನುಷ್ಯನಿಗೆ ಉಪಯುಕ್ತವಾಗಿರುವ ಒಂದು ಪ್ರಾಣಿ ಅಷ್ಟೇ. ಅದು ಹಾಲು ಕೊಡುವುದನ್ನು ನಿಲ್ಲಿಸಿದಾಗ ಅದನ್ನು ಕೊಂದು ಅದರ ಮಾಂಸ ತಿನ್ನುವುದರಲ್ಲಿ ತಪ್ಪಿಲ್ಲ, ಗೋವಿನ ಹೊಟ್ಟೆಯಲ್ಲಿ 33 ಕೋಟಿ ದೇವರು ಬಿಡಿ 33 ಕೋಟಿ ಹುಳಗಳೂ ಇಲ್ಲ, ಅಂತಹ ಪ್ರಾಣಿಯನ್ನು ದೇವರೆಂದು ಅಥವಾ ತಾಯಿಯೆಂದು ಪೂಜಿಸುವುದು ಶತಮೂರ್ಖತನ’’ ಎಂದು ಸಾವರ್ಕರ್ ಸ್ಪಷ್ಟವಾಗಿ ಬರೆದಿರುವುದನ್ನು ಸಂಘ ಪರಿವಾರದ ನೇತಾರರು ಬೇಕೆಂದೇ ಬಚ್ಚಿಡುತ್ತಿದ್ದಾರೆ. ಯಾಕೆಂದರೆ ಸಂಘ ಪರಿವಾರಿಗರಿಗೆ ಸಾವರ್ಕರರು ಹೇಳಿರುವ ಈ ‘ಗೋವಿನ ಹಾಡು’ ಗೊತ್ತಾದರೆ ಅವರು ಅಖ್ಲಾಕ್, ಪೆಹ್ಲೂಖಾನ್‌ರನ್ನು ಚಚ್ಚಿ ಕೊಂದಂತೆ ಸಾವರ್ಕರ್‌ರನ್ನೂ ಚಚ್ಚಿ ಕೊಂದು, ಆನಂತರ ಅವರು ‘ಮುಸ್ಲಿಂ ಪಕ್ಷಪಾತಿ’ ಹಾಗೂ ‘ಪಾಕಿಸ್ತಾನದ ಏಜಂಟ್’ ಆಗಿದ್ದರು ಎಂದು ಆರೋಪ ಹೊರಿಸುತ್ತಿದ್ದರು. ಗೋಮಾತೆ, ಗೋಮೂತ್ರ, ಸೆಗಣಿ ಬಗ್ಗೆ ಸಾವರ್ಕರ್‌ರ ಈ ಅಶುಭ ಮಾತು ನಮ್ಮ ದೇಶವನ್ನು ಈಗ ಆಳುತ್ತಿರುವ ಎರಡು ಕುತ್ಸಿತ ಗುಜರಾತಿಗಳಿಗಂತೂ ಖಂಡಿತಾ ಪಥ್ಯವಾಗುತ್ತಿರಲಿಲ್ಲ.
ಬಸವಣ್ಣ, ವಿವೇಕಾನಂದ, ಕುವೆಂಪು, ಸರ್ವಜ್ಞ, ಕನಕದಾಸ, ಛತ್ರಪತಿ ಶಿವಾಜಿ, ಶಾಹೂ ಮಹಾರಾಜ್, ಜ್ಯೋತಿಬಾ ಫುಲೆ, ನಾರಾಯಣ ಗುರು, ಪೆರಿಯಾರ್ ಇವರೆಲ್ಲ ಇಂದು ಜೀವಂತ ಇದ್ದಿದ್ದರೆ ಗುಂಡಿಗೆ ಬಲಿಯಾಗದಿದ್ದರೂ ಬಿಜೆಪಿ ಐಟಿ ಸೆಲ್‌ನ ಎರಡು ಲಕ್ಷ ಅರೆ-ಸಾಕ್ಷರ ಹುಂಬ ಟ್ರೋಲ್ಗಳು ಈ ಎಲ್ಲಾ ಮಹಾತ್ಮರನ್ನು ಅತ್ಯಂತ ಕೊಳಕು ಭಾಷೆಯಲ್ಲಿ ಟ್ರೋಲ್ ಮಾಡಿ ದಿನಾಲೂ ಅವಮಾನಿಸುತ್ತಿದ್ದರು.

Writer - ಆರ್. ಬಿ. ಶೇಣವ, ಮಂಗಳೂರು

contributor

Editor - ಆರ್. ಬಿ. ಶೇಣವ, ಮಂಗಳೂರು

contributor

Similar News