ನಾಡು ಒಡೆಯಲು ಹೊರಟ ಮನೆ ಮುರುಕರು

Update: 2018-07-29 18:32 GMT

ಅಪಾರ ತ್ಯಾಗ-ಬಲಿದಾನದಿಂದ ಕಟ್ಟಿದ ಅಖಂಡ ಕರ್ನಾಟಕವನ್ನು ಒಡೆದು ಹೋಳು ಹೋಳು ಮಾಡುವ ಅಪಸ್ವರ ಮತ್ತೆ ಕೇಳಿ ಬರುತ್ತಿವೆ. ಈ ಅಪಸ್ವರಗಳಿಗೆ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಈ ಹಿಂದಿನಂತೆ ಅಖಂಡ ಭಾರತ ನಿರ್ಮಿಸಲು ಹೊರಟವರ ಪಕ್ಷದಿಂದಲೇ ಅಖಂಡ ಕರ್ನಾಟಕವನ್ನು ವಿಭಜಿಸುವ ಮಾತುಗಳು ಕೇಳಿ ಬರುತ್ತಿವೆ. ಇದಕ್ಕಾಗಿ ಕೆಲ ಸಂಘಟನೆಗಳು ಆಗಸ್ಟ್ 2ರಂದು ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಆದರೆ ಈ ಬಂದ್ ಕರೆಗೆ ಉತ್ತರ ಕರ್ನಾಟಕದ ಬಹುತೇಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಪ್ರತಿ ವಿಧಾನಸಭೆೆ ಚುನಾವಣೆ ಫಲಿತಾಂಶ ಬಂದಾಗ, ಸೋತ ಪಕ್ಷದ ಕೆಲವರಿಂದ ಇಂಥ ಮಾತುಗಳು ಹೊರಹೊಮ್ಮತ್ತವೆ. ತಮಗೆ ಮಂತ್ರಿಯಾಗುವ ಅವಕಾಶ ಸಿಗದಿದ್ದರೆ, ಪ್ರತ್ಯೇಕ ಕರ್ನಾಟಕದ ಧ್ವನಿ ಎತ್ತುತ್ತಾರೆ. ಅಧಿಕಾರದಲ್ಲಿದ್ದಾಗ, ಇಂತಹ ಮಾತುಗಳು ಅವರಿಂದ ಕೇಳಿ ಬರುವುದಿಲ್ಲ. ಆಗ ತಮ್ಮ ಅಧಿಕಾರವನ್ನು ಬಳಸಿಕೊಂಡು ತಮ್ಮ ಹಿತಾಸಕ್ತಿ ರಕ್ಷಣೆಗಾಗಿ ಕಸರತ್ತು ನಡೆಸುತ್ತಾರೆ.

 ಪ್ರತ್ಯೇಕ ರಾಜ್ಯದ ಬಗ್ಗೆ ಉತ್ತರ ಕರ್ನಾಟಕದ ಜನ ತಲೆ ಕೆಡಿಸಿಕೊಂಡಿಲ್ಲ. ಆದರೆ ಒಂದೇ ಒಂದು ಬಾರಿ ಶಾಸಕರಾದರೆ ಸಾಕು, ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಅಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಶಾಲಾ ಕಾಲೇಜು ಕಟ್ಟಿಕೊಂಡು ಪುರಸೊತ್ತಾದಾಗ ತಮ್ಮ ಮತ ಕ್ಷೇತ್ರಗಳಿಗೆ ಹೋಗಿ ಬರುವ ಅನಿವಾಸಿ ಜನಪ್ರತಿನಿಧಿಗಳಿಂದಲೇ ಇಂಥ ಮಾತು ಕೇಳಿ ಬರುತ್ತವೆ. ಈ ಹಿಂದೆ ಬಿಜೆಪಿ ಈ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಈಗ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುವವರು ಆಗ ಅಧಿಕಾರದಲ್ಲಿ ಇದ್ದರು. ಅಧಿಕಾರದಲ್ಲಿದ್ದಾಗ, ಇವರು ಏನು ಕಡೆದು ಕಟ್ಟೆ ಹಾಕಿದ್ದಾರೆಂದು ಜನರಿಗೆ ಗೊತ್ತಿದೆ.

ಬಳ್ಳಾರಿಯಲ್ಲಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿಕೊಂಡು ಗಣಿಗಾರಿಕೆ ಮೂಲಕ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿಕೊಂಡು ಆಧುನಿಕ ಕೃಷ್ಣದೇವ ರಾಯ ಆಗಲು ಹೊರಟವರು ಪ್ರತ್ಯೇಕ ರಾಜ್ಯದ ಕೂಗಿನ ಹಿಂದಿದ್ದಾರೆ. ಬಳ್ಳಾರಿಯ ಬೆಟ್ಟಗುಡ್ಡಗಳನ್ನು ನೆಲಸಮ ಮಾಡಿ, ಪ್ರತಿ ಊರಿನಲ್ಲಿ ಐಷಾರಾಮಿ ಮನೆಗಳನ್ನು ಕಟ್ಟಿಕೊಂಡು ಹೆಲಿಕಾಪ್ಟರ್‌ನಲ್ಲಿ ಓಡಾಡಿದವರು, ಗಣಿಗಾರಿಕೆಗೆ ಅಡ್ಡಿಯಾಗುತ್ತದೆ ಎಂದು ಸುಗ್ಗಲಮ್ಮ ದೇವಸ್ಥಾನ ಕೆಡವಿದವರು, ಕರ್ನಾಟಕದ ನಕಾಶೆಯನ್ನು ಬದಲಿಸಿ ನಮ್ಮ ಭೂಪ್ರದೇಶವನ್ನು ಆಂಧ್ರಕ್ಕೆ ಸೇರಿಸಿದವರು ಈಗ ಪ್ರತ್ಯೇಕ ಉತ್ತರ ಕರ್ನಾಟಕದ ಬಗ್ಗೆ ಮಾತನಾಡುತ್ತಿದ್ದಾರೆ. ಗಣಿಗಾರಿಕೆಯಲ್ಲಿ ಬಂದ ಹಣವನ್ನು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಳಸಲು ಇವರಿಗೆ ಯಾರು ಬೇಡ ಎಂದಿದ್ದರು?

 ಅಭಿವೃದ್ಧಿ ಯೋಜನೆಗಳಲ್ಲಿ ಉತ್ತರ ಕರ್ನಾಟಕ ಕಡೆಗಣಿಸಲ್ಪಟ್ಟಿದೆ ಎಂಬುದು ಸುಳ್ಳಲ್ಲ. ಅದಕ್ಕಾಗಿಯೇ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಡಾ. ನಂಜುಂಡಪ್ಪ ಆಯೋಗ ರಚಿಸಲಾಯಿತು. ಈ ಆಯೋಗ ರಾಜ್ಯದೆಲ್ಲೆಡೆ ಸಂಚರಿಸಿತನ್ನ ವರದಿ ನೀಡಿತು. ಉತ್ತರ ಕರ್ನಾಟಕದ ಜಿಲ್ಲೆಗಳು ಮಾತ್ರವಲ್ಲ, ಹಳೆಯ ಮೈಸೂರಿನ ಕೋಲಾರ-ಚಿಕ್ಕಬಳ್ಳಾಪುರ, ತುಮಕೂರಿನ ಕೆಲ ಭಾಗಗಳು ಹಿಂದುಳಿದ ಪ್ರದೇಶಗಳೆಂದು ನಂಜುಂಡಪ್ಪ ಆಯೋಗದ ವರದಿ ತಿಳಿಸಿದೆ. ಅತ್ಯಂತ ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ 371 (ಜೆ) ಅನ್ವಯ ವಿಶೇಷ ಸ್ಥಾನಮಾನ ನೀಡಲಾಗಿದೆ. ಸರಕಾರಿ ನೌಕರಿಗಳಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ಇದೆ. ಆದರೂ ಇದಿಷ್ಟೇ ಸಾಲದು. ಇನ್ನಷ್ಟು ಗಮನ ನೀಡಬೇಕಾಗಿದೆ ಎಂಬುದು ಸತ್ಯ.

ಆದರೆ, ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಹೋರಾಡುವ ಬದಲು ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವುದು ಸದುದ್ದೇಶದಿಂದಲ್ಲ. ಈ ಬಾರಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉತ್ತರ ಕರ್ನಾಟಕದ ಬಗ್ಗೆ ಆಡಿದ ಕೆಲ ಮಾತುಗಳ ಬಗ್ಗೆ ಪ್ರತ್ಯೇಕತೆಯ ಕೂಗು ಮತ್ತೆ ಕೇಳಿ ಬರುತ್ತಿದೆ. ಉತ್ತರ ಕರ್ನಾಟಕದ ಬಗ್ಗೆ ದೇವೇಗೌಡರು ಮಾತನಾಡುತ್ತ, ರಾಜ್ಯವನ್ನಾಳಿದ ಲಿಂಗಾಯತ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕಕ್ಕೆ ಏನು ಮಾಡಿದ್ದಾರೆ? ಒಕ್ಕಲಿಗಮುಖ್ಯಮಂತ್ರಿ ಏನು ಮಾಡಿದ್ದಾರೆ ಎಂದು ಅಂಕಿ ಸಂಖ್ಯೆ ಕೊಡುತ್ತೇನೆ ಎಂದು ಆಡಿದ ಮಾತು ಅನಗತ್ಯವಾಗಿತ್ತು. ಉತ್ತರ ಕರ್ನಾಟಕವೆಂದರೆ, ಬರೇ ಲಿಂಗಾಯತರದ್ದಲ್ಲ. ದಕ್ಷಿಣ ಕರ್ನಾಟಕವೆಂದರೆ, ಬರೀ ಒಕ್ಕಲಿಗರದ್ದಲ್ಲ. ಹೀಗೆ ಎರಡು ಕಡೆ ದೊಡ್ಡ ಸಂಖ್ಯೆಯಲ್ಲಿ ಹಿಂದುಳಿದ ಸಮುದಾಯಗಳು, ದಲಿತರು ಮತ್ತು ಅಲ್ಪಸಂಖ್ಯಾತರು ಇದ್ದಾರೆ. ಕರ್ನಾಟಕದಲ್ಲಿ ಕರಾವಳಿಯ ಎರಡು ಜಿಲ್ಲೆಗಳು ಸೇರುತ್ತವೆ. ಇದು ಯಾವುದೇ ಒಂದು ಜಾತಿಗೆ ಸೇರಿದ ರಾಜ್ಯವಲ್ಲ. ಇದು ಎಲ್ಲಾ ಜಾತಿಗಳ ದುಡಿಯುವ ಜನ ಸೇರಿ ಕಟ್ಟಿದ ರಾಜ್ಯ.

ರಾಜಕಾರಣಿಗಳು ಮಾತನಾಡುವಾಗ, ವಿವೇಚನೆಯಿಂದ ಮಾತನಾಡಬೇಕು. ಉತ್ತರ ಕರ್ನಾಟಕದ ಕೆಲ ರಾಜಕಾರಣಿಗಳಿಗೆ ಇಷ್ಟೇ ಬೇಕಾಗಿತ್ತು. ಉಮೇಶ ಕತ್ತಿ, ರಾಮುಲು ಮುಂತಾದವರು ಪ್ರತ್ಯೇಕ ರಾಜ್ಯದ ಅಪಸ್ವರ ತೆಗೆದರು. ಆದರೆ ಈ ರೀತಿ ಅಪಸ್ವರ ತೆಗೆದವರು ಈ ಭಾಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರೂ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ಕಾಣಲಿಲ್ಲ. ಪ್ರಹ್ಲಾದ್ ಜೋಶಿ ಸಂಸದರಾದರೂ ಈ ಭಾಗಕ್ಕೆ ಏನೂ ಮಾಡಲಿಲ್ಲ. ಹುಬ್ಬಳ್ಳಿ- ಧಾರವಾಡದ ರಸ್ತೆಗಳನ್ನು ನೋಡಿದರೆ, ಇವರು ಮಾಡಿದ ಅಭಿವೃದ್ಧಿ ಗೊತ್ತಾಗುತ್ತದೆ. ಆದರೆ, ಹೈದರಾಬಾದ್-ಕರ್ನಾಟಕದಲ್ಲಿ ಮಾತ್ರ ತಮ್ಮ ಪ್ರಭಾವ ಬಳಸಿ ಅನೇಕ ಯೋಜನೆಗಳನ್ನು ಈ ಭಾಗಕ್ಕೆ ತಂದಿದ್ದಾರೆ. ಎರಡು ದಶಕಗಳ ಹಿಂದಿನ ಕಲಬುರಗಿ ಮತ್ತು ಇಂದಿನ ಕಲಬುರಗಿ ನೋಡಿದರೆ ಇದು ಗೊತ್ತಾಗುತ್ತದೆ. ಕರ್ನಾಟಕ ರಾಜ್ಯ ಎಂಬುದು ಸುಮ್ಮನೆ ಅಸ್ತಿತ್ವಕ್ಕೆ ಬರಲಿಲ್ಲ. ಅಕ್ಕಪಕ್ಕದ ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದುಗೂಡಿಸಲು ದೊಡ್ಡ ಹೋರಾಟವೇ ನಡೆಯಿತು. ಅನೇಕರು ತ್ಯಾಗ-ಬಲಿದಾನ ಮಾಡಿದರು.

ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ರಾಷ್ಟ್ರಕವಿ ಕುವೆಂಪು, ಅ.ನ. ಕೃಷ್ಣರಾಯರು, ಬಿ.ವಿ.ಕಕ್ಕಿಲಾಯ, ಮಹಾದೇವಪ್ಪ ಮುರಗೋಡ, ಕೋ.ಚನ್ನಬಸಪ್ಪ, ಬಳ್ಳಾರಿಯ ರಮಝಾನ್ ಸಾಬ್, ಶಾಂತವೇರಿ ಗೋಪಾಲಗೌಡ ಹೀಗೆ ಅನೇಕರು ಕರ್ನಾಟಕದ ನಿರ್ಮಾಣಕ್ಕಾಗಿ ಹೋರಾಡಿದ್ದಾರೆ. ಕರ್ನಾಟಕ ಹೇಗೆ ಒಂದಾಯಿತು ಎಂಬುದು ಈಗಿನ ಪೀಳಿಗೆಯವರಿಗೆ ಗೊತ್ತಿಲ್ಲ. ಈಗ ಕರ್ನಾಟಕದಲ್ಲಿರುವ ಬಿಜಾಪುರ, ಬೆಳಗಾವಿ, ಧಾರವಾಡ, ಕಾರವಾರ ಜಿಲ್ಲೆಗಳು ಮುಂಚೆ ಮುಂಬೈ ಪ್ರಾಂತದಲ್ಲಿದ್ದವು. ಕಲಬುರಗಿ, ರಾಯಚೂರು, ಬೀದರ್ ಮತ್ತು ಕೊಪ್ಪಳ ಹೈದರಾಬಾದ್ ಪ್ರಾಂತದಲ್ಲಿದ್ದವು. ಬಳ್ಳಾರಿ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳು ಮದ್ರಾಸ್ ಪ್ರಾಂತದಲ್ಲಿದ್ದವು. ಇವೆಲ್ಲ ಕನ್ನಡ ಭಾಷಿಕ ಪ್ರದೇಶಗಳನ್ನು ಮೈಸೂರು ಪ್ರಾಂತದಲ್ಲಿ ಸೇರಿಸಿ, ಕನ್ನಡನಾಡು ಅಸ್ತಿತ್ವಕ್ಕೆ ಬಂತು. ಇದಕ್ಕಾಗಿ 50ರ ದಶಕದಲ್ಲಿ ದಾವಣಗೆರೆ ಮತ್ತು ಹಂಪಿಗಳಲ್ಲಿ ಕನ್ನಡಿಗರ ದೊಡ್ಡ ಸಮಾವೇಶಗಳು ನಡೆದವು. ಆಗ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ನಾಯಕರಾಗಿದ್ದ ಕೋಟ ರಾಮಕೃಷ್ಣ ಕಾರಂತರು ಈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಈ ಸಮಾವೇಶಕ್ಕೆ ಮೈಸೂರು ಮತ್ತು ಕೊಡಗು ಭಾಗದಿಂದಲೂ ಜನ ಬಂದಿದ್ದರು. ಆಗ ಕರ್ನಾಟಕ ರಾಜ್ಯ ನಿರ್ಮಾಣಕ್ಕಾಗಿ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು (ಅಕರಾನಿ) ಅಸ್ತಿತ್ವಕ್ಕೆ ಬಂತು. ಬಿ.ವಿ.ಕಕ್ಕಿಲಾಯ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಕರ್ನಾಟಕ ರಾಜ್ಯ ನಿರ್ಮಾಣಕ್ಕೆ ಅಂದಿನ ಪ್ರಧಾನಿ ನೆಹರೂ ಮೊದಲು ಒಪ್ಪಿಗೆ ನೀಡಲಿಲ್ಲ. ಆದರೆ, ದೇಶದ ಎಲ್ಲಾ ಕಡೆ ಭಾಷಾವಾರು ಪ್ರಾಂತದ ರಚನೆಗಾಗಿ ಚಳವಳಿಗಳು ಆರಂಭವಾದವು. ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಸೋಶಿಯಲಿಸ್ಟ್ ಪಕ್ಷಗಳು ಭಾಷಾವಾರು ಪ್ರಾಂತದ ರಚನೆ ಪರವಾಗಿದ್ದವು. ಆದರೆ ಆರೆಸ್ಸೆಸ್ ಮತ್ತು ಜನಸಂಘ ಇದನ್ನು ವಿರೋಧಿಸಿದವು. ಈ ಹೋರಾಟ ತೀವ್ರಗೊಂಡು ಆಂಧ್ರ ಪ್ರದೇಶದಲ್ಲಿ ಆಮರಣ ನಿರಶನ ನಡೆಸಿದ ಪೊಟ್ಟಿ ಶ್ರೀರಾಮುಲು ಸಾವಿಗೀಡಾದರು. ಆನಂತರ ಭಾಷಾವಾರು ಪ್ರಾಂತ ರಚನೆಗೆ ನೆಹರೂ ಒಪ್ಪಿದರು. ಹೀಗೆ ಕರ್ನಾಟಕ ಅಸ್ತಿತ್ವಕ್ಕೆ ಬಂತು. ಕರ್ನಾಟಕ ರಾಜ್ಯ ನಿರ್ಮಾಣಕ್ಕೆ ಹಳೆಯ ಮೈಸೂರು ಪ್ರಾಂತದಲ್ಲಿ ಕೆಲವರ ವಿರೋಧ ಇದ್ದರೂ ಕೂಡ ಅಂದಿನ ಮೈಸೂರು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮತ್ತು ಕುವೆಂಪು ಕರ್ನಾಟಕ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈ ರೀತಿ ಕರ್ನಾಟಕ ಅಸ್ತಿತ್ವಕ್ಕೆ ಬಂದ ಇತಿಹಾಸವನ್ನು ಒಂದು ಪುಟ್ಟ ಲೇಖನದಲ್ಲಿ ಬರೆಯಲು ಆಗುವುದಿಲ್ಲ. ದಕ್ಷಿಣ ಮತ್ತು ಉತ್ತರ ಕರ್ನಾಟಕದಲ್ಲಿ ಆಹಾರ ಮತ್ತು ಸಂಸ್ಕೃತಿಯಲ್ಲಿ ಹಲವಾರು ವ್ಯತ್ಯಾಸಗಳಿದ್ದರೂ ಆಡುವ ಭಾಷೆ ಕನ್ನಡ ಈ ನಾಡನ್ನು ಒಂದಾಗಿ ಬೆಸೆದಿದೆ. ಟಿಪ್ಪು ಸುಲ್ತಾನ್ ಕಾಲದಿಂದ ದಕ್ಷಿಣ ಕರ್ನಾಟಕ ಅಭಿವೃದ್ಧಿಯಲ್ಲಿ ಸದಾ ಮುಂದಿದೆ. ಆದರೆ ಬೇರೆ ರಾಜ್ಯಗಳಲ್ಲಿ ಹಂಚಿ ಹೋಗಿದ್ದ ಉತ್ತರ ಕರ್ನಾಟಕ ಜಿಲ್ಲೆಗಳು ಸಹಜವಾಗಿ ನಿರ್ಲಕ್ಷಕ್ಕೆ ಒಳಗಾಗಿವೆ. ಕರ್ನಾಟಕ ರಾಜ್ಯ ನಿರ್ಮಾಣವಾದ ನಂತರ ಈ ಪ್ರಾದೇಶಿಕ ಅಸಮಾನತೆ ಸರಿಪಡಿಸಬೇಕಾಗಿತ್ತು. ಉತ್ತರ ಕರ್ನಾಟಕದ ರಾಜಕಾರಣಿಗಳು ಆ ನಿಟ್ಟಿನಲ್ಲಿ ಶ್ರಮಿಸಲಿಲ್ಲ. ಉತ್ತರ ಕರ್ನಾಟಕ ಹಿಂದುಳಿದಿರುವಿಕೆಗೆ ಪ್ರತ್ಯೇಕ ರಾಜ್ಯ ನಿರ್ಮಾಣ ಪರಿಹಾರ ವಲ್ಲ. ಈ ರೀತಿ ನಿರ್ಮಾಣಗೊಂಡ ಪ್ರತ್ಯೇಕ ರಾಜ್ಯಗಳಲ್ಲಿ ಅಭಿವೃದ್ಧಿ ಸಾಧಿಸಿದ ಉದಾಹರಣೆ ಗಳಿಲ್ಲ. ಆಂಧ್ರದಿಂದ ತೆಲಂಗಾಣ ಪ್ರತ್ಯೇಕಗೊಂಡ ನಂತರ, ಆಂಧ್ರದಲ್ಲಿ ಸಂಪನ್ಮೂಲದ ಕೊರತೆ ಉಂಟಾಗಿ ಸರಕಾರಿ ನೌಕರರ ಸಂಬಳ ಕೊಡಲು ಸಹ ಪರದಾಡುವಂತಾಗಿದೆ. ಉತ್ತರ ಕರ್ನಾಟಕ ಈಗ ಮುಂಚಿನಷ್ಟು ಹಿಂದುಳಿದಿಲ್ಲ. ಈ ಭಾಗದಲ್ಲಿ 40ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ಅನೇಕ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲ ಯಗಳು ತಲೆಯೆತ್ತಿವೆ. ಚಾಲುಕ್ಯರ ಸಾಮ್ರಾಜ್ಯ, ರಾಷ್ಟ್ರಕೂಟರ, ವಿಜಯನಗರದ ಐತಿಹಾಸಿಕ ಹಿನ್ನೆಲೆ ಜೊತೆಗೆ 900 ವರ್ಷಗಳ ಹಿಂದೆಯೇ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರ ವಚನ ಚಳವಳಿ ಪ್ರಭಾವ ಇಲ್ಲಿದೆ. ಸಾಂಸ್ಕೃತಿಕವಾಗಿ ಇದು ಅತ್ಯಂತ ಮುಂದುವರಿದ ಪ್ರದೇಶ. ಇದು ಹಿಂದುಳಿದಿದ್ದರೆ, ಅದು ಕೈಲಾಗದ ಸ್ವಾರ್ಥ ಸಾಧಕ ರಾಜಕಾರಣಿಗಳಿಂದ ಮಾತ್ರ.

ಇಂಥ ಕರ್ನಾಟಕ ಒಂದಾಗಿರಬೇಕು. ರಾಷ್ಟ್ರಕವಿ ಕುವೆಂಪು ಇದನ್ನು ಭಾರತ ಮಾತೆ ತನುಜಾತೆ ಎಂದು ಕರೆದರು. ಕವಿ ಬೇಂದ್ರೆ ಕರ್ನಾಟಕ ಒಂದೇ ಎಂದು ಹೇಳಿದರು. ಇಂಥ ನಾಡಿನಲ್ಲಿ ಒಡಕಿನ ಅಪಸ್ವರ ಬೇಡ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News