ಸತ್ತ ಬಳಿಕವೂ ಬದುಕುವ ಆಸೆ ಇದೆಯೋ?

Update: 2018-08-13 07:43 GMT

ಆಗಸ್ಟ್ 13ನ್ನು ಭಾರತದಾದ್ಯಂತ ಅಂಗಾಂಗ ದಾನಿಗಳ ದಿನ ಎಂದು ಆಚರಿಸಲಾಗುತ್ತಿದೆ. ಅಂಗಾಂಗ ದಾನವನ್ನು ಪ್ರಚೋದಿಸಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ವಿಪರ್ಯಾಸದ ವಿಷಯವೆಂದರೆ 130 ಕೋಟಿಗೂ ಜಾಸ್ತಿ ಜನ ಸಂಖ್ಯೆ ಇರುವ ಭಾರತ ದೇಶದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್, ಹೃದಯ, ಪಿತ್ತಜನಕಾಂಗ ಮತ್ತು ಶ್ವಾಸಕೋಶಗಳ ತುರ್ತು ಅಗತ್ಯ ಇದೆ. ನಮ್ಮ ಬೃಹತ್ ಭಾರತದಲ್ಲಿ ಬಹಳಷ್ಟು ಅಂಗಾಂಗಗಳು ಇವೆಯಾದರೂ, ದಾನಿಗಳ ಕೊರತೆ ಕಾಡುತ್ತಿದೆ. ಕೇವಲ ಸಾವಿರಗಳ ಸಂಖ್ಯೆಯಲ್ಲಿರುವ ಅಂಗಾಂಗ ದಾನಿಗಳಿಂದಾಗಿ ಲಕ್ಷಾಂತರ ಮಂದಿ ಜೀವ ನಷ್ಟವಾಗುತ್ತಿದೆ. ಸಾಕಷ್ಟು ಮಾಹಿತಿಯ ಕೊರತೆ, ಕಾನೂನಿನ ಅಡಚಣೆ ಮತ್ತು ಸೂಕ್ತ ಮಾರ್ಗದರ್ಶನ ಲಭ್ಯವಿಲ್ಲದ ಕಾರಣ ಬದುಕಿ ಬಾಳಬೇಕಾದ ಜೀವಗಳು ಕಮರಿ ಹೋಗುತ್ತಿವೆ. ಉದಾಹರಣೆಗೆ, ವಾರ್ಷಿಕ ಸರಾಸರಿ 2 ಲಕ್ಷ ಮಂದಿಗೆ ಭಾರತದಲ್ಲಿ ಕಿಡ್ನಿ ಕಸಿಯ ಆವಶ್ಯಕತೆ ಇದೆ. ಅದರೆ ಕೇವಲ 5ರಿಂದ 6ಸಾವಿರ ಮಂದಿಗೆ ಮಾತ್ರ ದಾನಿಗಳು ಸಿಗುತ್ತಾರೆ. ಈ ನಿಟ್ಟಿನಲ್ಲಿ ಅಂಗಾಂಗ ದಾನಗಳ ಬಗ್ಗೆ ಜಾಗೃತಿ ನೀಡುವ ಮಹತ್ಕಾರ್ಯ ಆಗಲೇಬೇಕು. ನಮ್ಮಲ್ಲಿ ಬಹಳಷ್ಟು ಮಂದಿಗೆ ಹಗಲು ಇರುಳಾಗುತ್ತದೆಯೋ ಹೊರತು, ಬದುಕಿಗೆ ಗೊತ್ತು ಗುರಿಯಿಲ್ಲ. ಯಾಕೆ ಬದುಕುತ್ತಿದ್ದೇವೆ ಎಂಬುದರ ಅರಿವೂ ಇರುವುದಿಲ್ಲ. ಬದುಕಿದ್ದೂ ಸತ್ತಂತೆ ಬದುಕುವ ಬದಲು, ಸತ್ತ ಮೇಲೂ ಬದುಕುವುದಲ್ಲಿಯೇ ನಿಜವಾದ ಸಾರ್ಥಕತೆ ಇದೆ.

ಡಾ. ಮುರಲೀ ಮೋಹನ್ ಚೂಂತಾರು

ಏನಿದು ಅಂಗಾಂಗ ದಾನ?
ಅಂಗಾಂಗ ದಾನಗಳಲ್ಲಿ ಎರಡು ವಿಧಗಳಿವೆ.
1. ಜೀವಂತ ವ್ಯಕ್ತಿಗಳು ಮಾಡುವ ದಾನ:
ವ್ಯಕ್ತಿಯ ದೇಹದಲ್ಲಿ ಮರುಸೃಷ್ಟಿಯಾಗುವ ಅಂಗಾಂಗಗಳನ್ನು ಜೀವಕೋಶಗಳನ್ನು ಮತ್ತು ದ್ರವ್ಯಗಳನ್ನು ದಾನ ಮಾಡುವುದು.
ಉದಾಹರಣೆಗೆ: ರಕ್ತದಾನ, ವೀರ್ಯದಾನ, ಚರ್ಮದಾನ, ಅಸ್ಥಿಮಜ್ಜೆದಾನ ಇತ್ಯಾದಿ. ಇನ್ನೊಂದು ವಿಧವೆಂದರೆ ದೇಹದ ಯಾವುದಾ ದರೂ ಅಂಗವನ್ನು ಅಥವಾ ಅದರ ಭಾಗಗಳನ್ನು ಇನ್ನೊಬ್ಬನಿಗೆ ದಾನ ಮಾಡುವುದು. ಉದಾಹರಣೆಗೆ ಎರಡು ಕಿಡ್ನಿಗಳಲ್ಲಿ ಒಂದನ್ನು ನೀಡುವುದು, ಯಕೃತಿನ ಒಂದು ಭಾಗ ಅಥವಾ ಸಣ್ಣ ಕರುಳಿನ ಒಂದು ಭಾಗ ಇತ್ಯಾದಿ.
2. ಎರಡನೇ ದಾನ: ಮೃತ ಅಥವಾ ಮೆದುಳು ನಿಷ್ಕ್ರೀಯಗೊಂಡ (BRAIN DEATH) ವ್ಯಕ್ತಿಗಳ ಅಂಗಾಂಗವನ್ನು ಇನ್ನೊಂದು ರೋಗಿಗೆ ನೀಡುವುದು ಅಥವಾ ಜೋಡಿಸುವುದು
ಉದಾ: ಹೃದಯ, ಶ್ವಾಸಕೋಶ, ಪಿತ್ತ ಜನಕಾಂಗ, ಸಣ್ಣ ಕರುಳು, ಮೋದೋಜಿರಕಾಂಗ, ಕಾರ್ನಿಯಾ (ಅಕ್ಷಿಪಟಲ) ಮೂಳೆಗಳು, ಹೃದಯದ ಕವಾಟಗಳು ಇತ್ಯಾದಿ
ಒಬ್ಬ ಮೃತ ವ್ಯಕ್ತಿಯಿಂದ ಕನಿಷ್ಠ 8 ಜೀವಗಳನ್ನು ಉಳಿಸ ಬಹುದು. ಅಂಕಿ ಅಂಶಗಳ ಪ್ರಕಾರ, ನಿಮಿಷಕ್ಕೊಬ್ಬರು ಸಾಯುತ್ತಾರೆ. ಪ್ರತಿಯೊಬ್ಬರೂ ಅಂಗಾಂಗ ದಾನ ಮಾಡಿದಲ್ಲಿ ನಿಮಿಷಕ್ಕೆ 8 ಜೀವಗಳು ಪುನರ್ಜನ್ಮ ಪಡೆಯುವ ಅವಕಾಶವಿದೆ.
ಏನಿದು ಬ್ರೈನ್ ಡೆತ್?

ಅಪಘಾತದಿಂದ ತಲೆಗೆ ಏಟು ಬಿದ್ದು ಅಥವಾ ಇನ್ನಾವುದೇ ಕಾರಣದಿಂದ ಮೆದುಳಿಗೆ ಘಾಸಿಯಾಗಿ ಸಂಪೂರ್ಣ ರಕ್ತಸಂಚಾರ ನಿಂತಿರುತ್ತದೆ. ಆಮ್ಲಜನಕದ ಪೂರೈಕೆಯೂ ಸ್ಥಗಿತವಾಗಿರುತ್ತದೆ. ಆದರೆ ಹೃದಯ, ಕಿಡ್ನಿ, ಶ್ವಾಸಕೋಶ ತನ್ನ ಪಾಡಿಗೆ ತಾನು ಕಾರ್ಯ ಮಾಡುತ್ತಿರುತ್ತದೆ. ವ್ಯಕ್ತಿಯನ್ನು ತೀವ್ರ ನಿಗಾ ವಿಭಾಗದಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯ ಮುಖಾಂತರ, ಉಸಿರಾಟಕ್ಕೆ ಬೇಕಾದ ಆಮ್ಲಜನಕದ ಪೂರೈಕೆ ನಡೆಯುತ್ತಿರುತ್ತದೆ. ಹೃದಯ, ಶ್ವಾಸಕೋಶ, ಪಿತ್ತಜನಕಾಂಗ, ಮೂತ್ರಪಿಂಡಗಳಿಗೆ ಆಮ್ಲಜನಕ ಸರಬರಾಜು ಆಗುತ್ತಲೇ ಇರುತ್ತದೆ. ವ್ಯಕ್ತಿ ಮಾತ್ರ ಬದುಕಿದ್ದು, ಸತ್ತಿರುತ್ತಾನೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಬ್ರೈನ್ ಡೆತ್ ಅಥವಾ ಮೆದುಳು ನಿಷ್ಕ್ರಿಯತೆ ಎಂದು ಹೇಳುತ್ತಾರೆ. ಇಂತಹ ವ್ಯಕ್ತಿಯ ದೇಹದಿಂದ ಅಗತ್ಯರೋಗಿಗಳಿಗೆ ಅಂಗಾಂಗಗಳನ್ನು ತೆಗೆದು, ವ್ಯಕ್ತಿಯ ಬಂಧುಗಳ ಸಮ್ಮತಿಯೊಂದಿಗೆ ಜೋಡಿಸಬಹುದು. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳು ಕೃತಕ ಉಸಿರಾಟದ ವ್ಯವಸ್ಥೆ ತೆಗೆದೊಡನೆಯೂ ಸಾವನ್ನಪ್ಪುತ್ತಾರೆ. ಅಂಗಾಂಗ ದಾನ ಮಾಡಿದಲ್ಲಿ ಸತ್ತು ಹುತಾತ್ಮರಾಗುವುದರ ಜೊತೆಗೆ ಮತ್ತೊಬ್ಬ ವ್ಯಕ್ತಿಯಲ್ಲಿ ಮರುಜನ್ಮ ಪಡೆಯುತ್ತಾರೆ ಮತ್ತು ಸಾವಲ್ಲೂ ಸಾರ್ಥಕತೆಯನ್ನು ಪಡೆಯುತ್ತಾರೆ. ವೈದ್ಯರು ಲಿಖಿತ ರೂಪದಲ್ಲಿ ಬ್ರೈನ್ ಡೆತ್ ಎಂದು ವರದಿ ನೀಡಿದ ಬಳಿಕವೇ, ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಅನುಸರಿಸಿ ಅಂಗಾಂಗ ದಾನಕ್ಕೆ ಸಮ್ಮತಿ ನೀಡಲಾಗುತ್ತದೆ. ಈ ರೀತಿ ದಾನಿಗಳಿಂದ ಪಡೆದ ಹೃದಯವನ್ನು ನಾಲ್ಕೈದು ಗಂಟೆಗಳ ಒಳಗೆ, ಹತ್ತು ಹನ್ನೆರಡು ಗಂಟೆಗಳ ಒಳಗೆ ಪಿತ್ತಕೋಶಜನಕಾಂಗ ಹಾಗೂ 24 ಗಂಟೆಗಳ ಒಳಗೆ ಮೂತ್ರಪಿಂಡವನ್ನು ಅಗತ್ಯ ರೋಗಿಗಳಿಗೆ ಜೋಡಿಸಲಾಗುತ್ತದೆ. ಇದೇ ರೀತಿ ಚರ್ಮ, ಹೃದಯದ ಕವಾಟಗಳು ಮೂಳೆಗಳನ್ನು ದಾನ ಮಾಡಲಾಗುತ್ತದೆ. ಸಹಜವಾಗಿ ಸತ್ತ ವ್ಯಕ್ತಿಗಳಿಂದ ನೇತ್ರದಾನವನ್ನು 4ರಿಂದ 5ಗಂಟೆಗಳ ಒಳಗೆ ಬೇರೆಯವರಿಗೆ ಜೋಡಿಸಲಾಗುತ್ತದೆ. ಒಟ್ಟಿನಲ್ಲಿ ಸತ್ತು ಮಣ್ಣಾಗುವ ಹಲವಾರು ಅಂಗಾಂಗಗಳು ಮತ್ತೆ ಬೇರೊಬ್ಬ ರೋಗಿಯಲ್ಲಿ ಬದುಕಿ ಬಾಳುತ್ತವೆ. ಒಟ್ಟಿನಲ್ಲಿ ರಕ್ತದಾನ, ದೇಹದಾನ, ನೇತ್ರದಾನದಂತೆಯೇ ಅಂಗಾಂಗದಾನವೂ ಬಹಳ ಪವಿತ್ರವಾದ ದಾನವಾಗಿರುತ್ತದೆ.

 ಯಾರು ದಾನ ಮಾಡಬಹುದು?
ಅಂಗಾಂಗ ದಾನಕ್ಕೆ ಯಾವುದೇ ರೀತಿಯ ಚೌಕಟ್ಟಿಲ್ಲ. ಸಣ್ಣ ಮಗುವಿನಿಂದ ಹಿಡಿದು ವೃದ್ಧರೂ ಕೂಡಾ ಅಂಗಾಂಗ ದಾನ ಮಾಡಬಹುದು. ಸ್ವ ಇಚ್ಛೆಯಿಂದ ಯಾರು ಬೇಕಾದರೂ ಅಂಗಾಂಗ ದಾನ ಮಾಡಬಹುದು. ಅದರೆ ನಮ್ಮ ಭಾರತ ದೇಶದಲ್ಲಿ ಮೂಢನಂಬಿಕೆ ಮತ್ತು ತಪ್ಪು ಕಲ್ಪನೆಗಳಿಂದಾಗಿ, ನಮ್ಮಲ್ಲಿ ಅಂಗಾಂಗ ದಾನಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಸಂಪೂರ್ಣವಾಗಿ ಅಂಗಾಂಗಗಳಿಲ್ಲದ ದೇಹಕ್ಕೆ ಅಂತ್ಯಕ್ರಿಯೆ ಮಾಡಿದಲ್ಲಿ ಪರಲೋಕ ಪ್ರಾಪ್ತಿಯಾಗುವುದಿಲ್ಲ, ಮೋಕ್ಷ ಸಿಗುವುದಿಲ್ಲ ಎಂಬ ಮೂಢನಂಬಿಕೆಯಿಂದಾಗಿ ಅಂಗಾಂಗ ದಾನಿಗಳ ಸಂಖ್ಯೆಯ ಕೊರತೆ ಬಾಧಿಸುತ್ತಿದೆ. ಅದೇ ರೀತಿ ಸರಿಯಾದ ನಿಯಂತ್ರಣ ಮತ್ತು ಸೂಕ್ತ ಕಾನೂನಿನ ಚೌಕಟ್ಟು ಇಲ್ಲದ ಕಾರಣ 80 ಮತ್ತು 90ರ ದಶಕದಲ್ಲಿ ಅಂಗಾಂಗ ಮಾರಾಟ ದಂಧೆ ವ್ಯಾಪಕವಾಗಿ ಹುಟ್ಟಿಕೊಂಡಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕ ಸಂಸ್ಥೆಗಳು, ಸರಕಾರಿ ಸಂಸ್ಥೆಗಳು ಮತ್ತು ಸ್ವಯಂ ಸೇವಕ ಸಂಘಗಳು, ಸಾರ್ವಜನಿಕರನ್ನು ಉತ್ತೇಜಿಸುವ ಕಾರ್ಯ ಮಾಡಬೇಕು ಮತ್ತು ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ತುರ್ತು ಅಗತ್ಯ ಇದೆ. ಅಂಗಾಂಗ ದಾನಿಗಳು ಮತ್ತು ದಾನ ಪಡೆಯುವ ವ್ಯಕ್ತಿಗಳ ನಡುವಿನ ಅಂತರ ಕಡಿಮೆ ಮಾಡುವ ದಾನಿಗಳ ಬ್ಯಾಂಕ್ ಸ್ಥಾಪಿಸುವ ತುರ್ತು ಅವಶ್ಯಕತೆ ಇದೆ. ಹೀಗೆ ಮಾಡಿದಲ್ಲಿ ಬದಲಿ ಅಂಗ ಸಿಗದೆ ಸಾಯುವ ರೋಗಿಗಳ ಸಂಖ್ಯೆ ಕಡಿಮೆಯಾಗಬಹುದು. ಬಡವ ಬಲ್ಲಿದ ಎನ್ನದೇ ಎಲ್ಲರಿಗೂ ಅಂಗಾಂಗ ಸಿಗುವ ನಿಟ್ಟಿನಲ್ಲಿ ಸರಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.

ಕಾನೂನು ಏನನ್ನುತ್ತದೆ?
ಭಾರತದಲ್ಲಿ 1994ರಲ್ಲಿ ಅಂಗಾಂಗ ದಾನವನ್ನು ಸರಕಾರ ಕಾನೂನು ಬದ್ಧಗೊಳಿಸಿದೆ. 1967ರಲ್ಲಿ ಮೊದಲ ಬಾರಿ ಭಾರತದಲ್ಲಿ ಮೂತ್ರಪಿಂಡದ ಕಸಿ ಮಾಡಲಾಯಿತು ಮತ್ತು 1994ರಲ್ಲಿ ಬದಲಿ ಹೃದಯವನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಜೋಡಿಸಲಾಯಿತು ಮತ್ತು 1995ರಲ್ಲಿ ಮದ್ರಾಸಿನ ಆಸ್ಪತ್ರೆಯಲ್ಲಿ ಅಂಗಾಂಗ ಬದಲಿ ಜೋಡಣೆಯನ್ನು ಯಶಸ್ವಿಯಾಗಿ ಮಾಡಲಾಯಿತು. ಭಾರತದಾದ್ಯಂತ ಅಂಗಾಂಗ ಜೋಡಿಸುವ ನೂರಾರು ಸುಸಜ್ಜಿತ ಆಸ್ಪತ್ರೆಗಳಿವೆ ಆದರೆ ದುರದೃಷ್ಟವೆಂದರೆ ಅಂಗಾಂಗ ದಾನಿಗಳ ತೀವ್ರ ಕೊರತೆಯಿದೆ. ಜನರನ್ನು ಜಾಗೃತಿಗೊಳಿಸುವ ಕೆಲಸ ತುರ್ತಾಗಿ ನಡೆಯಬೇಕಾಗಿದೆ. ಅಂಕಿಅಂಶಗಳ ಪ್ರಕಾರ 2012ರಲ್ಲಿ ಸುಮಾರು ಒಂದೂವರೆ ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು ಮತ್ತು ಇದರಲ್ಲಿ ಕೇವಲ ಒಂದು ಶೇಕಡಾ ಮಂದಿ ಮಾತ್ರ ಅಂಗಾಂಗ ದಾನ ಮಾಡಿದ್ದಾರೆ ಎಂಬುದು ಬಹಳ ಖೇದಕರ ವಿಚಾರ. ಅಂದಾಜಿನ ಪ್ರಕಾರ ಭಾರತದಲ್ಲಿ ವರ್ಷಕ್ಕೆ 2 ಲಕ್ಷ ಮಂದಿಗೆ ಕಿಡ್ನಿಯ ಅಗತ್ಯವಿದೆ. ಆದರೆ ಕೇವಲ 5,000 ರಿಂದ 6,000 ಮಂದಿಗೆ ಮಾತ್ರ ಕಿಡ್ನಿ ಸಿಗುತ್ತದೆ. 50 ರಿಂದ 55 ಮಂದಿಗೆ ಹೃದಯದ ಅಗತ್ಯವಿದೆ. ಆದರೆ ಕೇವಲ ಹತ್ತಿಪ್ಪತ್ತು ಮಂದಿಗೆ ಹೃದಯ ದೊರಕುತ್ತಿದೆ. 50,000 ಮಂದಿಗೆ ಯಕೃತ್ತಿನ ಅವಶ್ಯಕತೆ ಇದ್ದು ಕೇವಲ 800 ರಿಂದ 1000 ಮಂದಿಗೆ ಮಾತ್ರ ಈ ಭಾಗ್ಯ ದೊರಕುತ್ತಿದೆ. ಸಂತೋಷದ ವಿಚಾರವೆಂದರೆ ನೇತ್ರದಾನಿಗಳ ಮತ್ತು ರಕ್ತದಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಜೀವಂತ ವ್ಯಕ್ತಿಯು ದಾನ ನೀಡಬಹುದಾದ ದೇಹದ ಅಂಗಗಳು
1.ರಕ್ತ
2.ಅಸ್ಥಿಮಜ್ಜೆ
3.ಕಿಡ್ನಿ
4.ಯಕೃತ್ತು (ಲಿವರ್)ನ ಭಾಗ
(Lungs) 5.ಶ್ವಾಸಕೋಶದ ಭಾಗ
(Pancreas) 6.ಮೇದೋಜಿರಕ ಗ್ರಂಥಿಯ ಭಾಗ
  ಸಹಜ ಮರಣಾ ನಂತರ ವ್ಯಕ್ತಿಯು ದಾನ ಮಾಡಬಹುದಾದ ದೇಹದ ಅಂಗಗಳು
1.ಕಣ್ಣುಗಳು
2.ಹೃದಯದ ಕವಾಟಗಳು
3.ಚರ್ಮ ಮತ್ತು ಒಳಪದರಗಳು
4.ಎಲುಬು ಮತ್ತು ಟೆಂಡಾನ್
5.ಕಾರ್ಟಿಲೇಟ್
6.ರಕ್ತನಾಳಗಳು
  ಬ್ರೈನ್  ಡೆತ್‌ನ ಬಳಿಕ ದಾನ ಮಾಡಬಹುದಾದ ಅಂಗಗಳು
1.ಮೂತ್ರಪಿಂಡಗಳು (ಕಿಡ್ನಿ)
2.ಯಕೃತ್ತು (ಲಿವರ್)
3.ಶ್ವಾಸಕೋಶಗಳು
4.ಮೇದೋಜಿರಕ ಗ್ರಂಥಿ
5.ಸಣ್ಣ ಕರುಳು
6.ಧ್ವನಿ ಪೆಟ್ಟಿಗೆ
7.ರಕ್ತನಾಳಗಳು
8.ಗರ್ಭಕೋಶ
9.ಅಂಡಾಶಯ ಮತ್ತು ಅಂಡಾಣುಗಳು
10.ಕಣ್ಣುಗಳು
11.ಮಧ್ಯ ಕಿವಿಯ ಮೂಳೆಗಳು
12 .ಚರ್ಮ ಮತ್ತು ಒಳಪದರಗಳು
13.ಎಲುಬು ಮತ್ತು ಮೂಳೆಗಳು
14.ಕಾರ್ಟಿಲೇಟ್
15.ಟೆಂಡಾನ್‌ಗಳು
16.ನರಗಳು
17.ಕೈಗಳು, ಕೈ ಮತ್ತು ಕಾಲು ಬೆರಳುಗಳು
18. ಮುಖ

Writer - ಡಾ. ಮುರಲೀ ಮೋಹನ್ ಚೂಂತಾರು

contributor

Editor - ಡಾ. ಮುರಲೀ ಮೋಹನ್ ಚೂಂತಾರು

contributor

Similar News

ಜಗದಗಲ
ಜಗ ದಗಲ