ಅಪರೂಪದ ಮುತ್ಸದ್ದಿ ರಾಜಕಾರಣಿ; ಅಟಲ್

Update: 2018-08-16 18:46 GMT

ಭಾರತೀಯ ರಾಜಕಾರಣದಲ್ಲಿ ಅಜಾತಶತ್ರುವೆಂದೇ ಜನಜನಿತರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಐದು ವರ್ಷ ಪೂರೈಸಿದ ಪ್ರಥಮ ಕಾಂಗ್ರೆಸೇತರ ಪ್ರಧಾನ ಮಂತ್ರಿಯಾಗಿದ್ದಾರೆ. ದೇಶದ ಹತ್ತನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಅವರು 1996ರಲ್ಲಿ ಹದಿಮೂರು ದಿನಗಳು ಮತ್ತು ನಂತರ 1999ರಿಂದ 2004ರವರೆಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.

ವಾಜಪೇಯಿಯವರು ಸಾಂಸ್ಕೃತಿಕ ಸಮಾನತೆ, ಉದಾರವಾದಿತ್ವ ಮತ್ತು ರಾಜಕೀಯ ತಾರ್ಕಿಕತೆಯಿಂದ ಜನಮೆಚ್ಚುಗೆ ಗಳಿಸಿದ್ದರು.ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ 1924ರ ಡಿಸೆಂಬರ್ 25ರಂದು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ವಾಜಪೇಯಿ ಜನಿಸಿ ದರು. ಅವರ ತಂದೆ ಓರ್ವ ಕವಿ ಮತ್ತು ಶಾಲಾ ಶಿಕ್ಷಕರಾಗಿ ದ್ದರು. ಗ್ವಾಲಿಯರ್‌ನಲ್ಲೇ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿ ಸಿದ ವಾಜಪೇಯಿ ಕಾನ್ಪುರದ ದಯಾನಂದ ಆಂಗ್ಲೊ- ವೇದಿಕ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. 1939ರಲ್ಲಿ ಓರ್ವ ಕಾರ್ಯಕರ್ತನಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದ ಅವರು ಮುಂದೆ 1947ರಲ್ಲಿ ತಮ್ಮ ಸಂಪೂರ್ಣ ಸಮಯವನ್ನು ಸಂಘಕ್ಕಾಗಿ ಮೀಸಲಿಟ್ಟರು.
ಓರ್ವ ಸ್ವಾತಂತ್ರ ಹೋರಾಟಗಾರನಾಗಿ ರಾಜಕೀಯ ಪ್ರವೇಶಿಸಿದ ವಾಜಪೇಯಿ ನಂತರ ಹಿಂದೂ ಬಲ ಪಂಥೀಯ ರಾಜಕೀಯ ಪಕ್ಷ ಭಾರತೀಯ ಜನಸಂಘ (ಬಿಜೆಎಸ್)ವನ್ನು ಸೇರಿದರು. ಬಿಜೆಎಸ್‌ನ ನೂತನ ನಾಯಕರಾಗಿದ್ದ ವಾಜಪೇಯಿ 1957ರಲ್ಲಿ ಮೊದಲ ಬಾರಿಗೆ ಬಲರಾಮಪುರದಿಂದ ಲೋಕಸಭಾ ಕ್ಷೇತ್ರಕ್ಕೆ ಚುನಾಯಿತರಾದರು.
1977ರಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ವಾಜಪೇಯಿ ಅದರಲ್ಲಿ ವಿದೇಶ ವ್ಯವಹಾರಗಳ ಸಚಿವ ರಾಗಿ ನೇಮಕ ಗೊಂಡರು. ವಿದೇಶ ಸಚಿವರಾಗಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಪ್ರಥಮ ವ್ಯಕ್ತಿಯೆಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. 1979ರಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿ ಹುದ್ದೆಗೆ ರಾಜೀ ನಾಮೆ ನೀಡಿದ ಸಂದರ್ಭದಲ್ಲಿ ವಾಜಪೇಯಿ ತಮ್ಮ ಸಚಿವ ಸ್ಥಾನವನ್ನು ತೊರೆದಿದ್ದರು. ಆದರೆ ಆ ವೇಳೆಗಾಗಲೇ ಅವರು ಓರ್ವ ಪ್ರಖರ ರಾಜಕೀಯ ಧುರೀಣರಾಗಿ ಹೆಸರುಗಳಿಸಿದ್ದರು.


 ವಾಜಪೇಯಿ, ಎಲ್.ಕೆ ಅಡ್ವಾಣಿ, ಬೈರೊನ್ ಸಿಂಗ್ ಶೆಖಾವತ್ ಹಾಗೂ ಆರೆಸ್ಸೆಸ್ ಮತ್ತು ಬಿಜೆಎಸ್‌ನ ಇತರರ ಜೊತೆ ಸೇರಿ 1980ರಲ್ಲಿ ಭಾರತೀಯ ಜನತಾಪಕ್ಷ ಸ್ಥಾಪಿಸಿದರು. 1984ರಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲಲಷ್ಟೇ ಸಾಧ್ಯವಾಯಿತು. ಎನ್‌ಡಿಎ ಮೈತ್ರಿಕೂಟದಿಂದ ಮೂರು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿ ದೇಶದ ಸೇವೆ ಸಲ್ಲಿಸಿದ ವಾಜಪೇಯಿ 2004ರಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರ ಕಳೆದುಕೊಂಡ ಸಮಯದಲ್ಲಿ ವಿರೋಧಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತುಕೊಳ್ಳಲು ನಿರಾಕರಿಸಿದರು. ಆಮೂಲಕ ಎಲ್.ಕೆ ಅಡ್ವಾಣಿ ಬಿಜೆಪಿಯ ನಾಯಕತ್ವ ವಹಿಸಿಕೊಂಡರು. ವಾಜಪೇಯಿ ಕೇವಲ ರಾಜಕಾರಣಿಯಾಗಿರಲಿಲ್ಲ ಅವರೊಬ್ಬ ಅಪ್ಪಟ ಕವಿ, ಪತ್ರಕರ್ತ ಹಾಗೂ ಅದ್ಭುತ ವಾಕ್ಪಟುವಾಗಿದ್ದರು. ವಿರೋಧ ಪಕ್ಷಗಳ ನಾಯಕರು ಅವರನ್ನು ಸೂಕ್ತವಲ್ಲದ ಪಕ್ಷದಲ್ಲಿರುವ ಸೂಕ್ತ ವ್ಯಕ್ತಿ ಎಂದೇ ವ್ಯಾಖ್ಯಾನಿಸುತ್ತಿದ್ದರು. ಅಟಲ್ ಬಿಹಾರಿ ವಾಜಪೇಯಿಯವರನ್ನು ಪದ್ಮವಿಭೂಷಣ, ಅತ್ಯುತ್ತಮ ಸಂಸದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. 2015ರಲ್ಲಿ ಭಾರತ ಸರಕಾರ ವಾಜಪೇಯಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದೆ.
ಭಯೋತ್ಪಾದಕರ ದಾಳಿಗಳು
ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಹಲವು ಭಯೋತ್ಪಾದನಾ ಚಟುವಟಿಕೆಗಳು ನಡೆದವು. 1999ರ ಮೇ ಮತ್ತು ಜುಲೈ ತಿಂಗಳಲ್ಲಿ ಭಾರತದ ನಿಯಂತ್ರಣದಲ್ಲಿರುವ ಪ್ರದೇಶದ ಮೇಲೆ ಪಾಕಿಸ್ತಾನಿ ಯೋಧರು ಮತ್ತು ಉಗ್ರರು ದಾಳಿ ನಡೆಸಿದ ಪರಿಣಾಮ ಕಾರ್ಗಿಲ್ ಯುದ್ಧ ನಡೆಯಿತು.
1999ರ ಡಿಸೆಂಬರ್‌ನಲ್ಲಿ ಕಾಠ್ಮಂಡುವಿನಿಂದ ಹೊಸದಿಲ್ಲಿಗೆ ಆಗಮಿಸುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಉಗ್ರರು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರ್‌ಗೆ ಕೊಂಡೊಯ್ದಿದ್ದರು. ಅದರಲ್ಲಿದ್ದ ಪ್ರಯಾಣಿಕರ ಬಿಡುಗಡೆಗಾಗಿ ಸರಕಾರ ವೌಲಾನಾ ಮಸೂದ್ ಅಝರ್ ಹಾಗೂ ಇತರ ಬಂಧಿತರ ಉಗ್ರರನ್ನು ಬಿಡುಗಡೆ ಮಾಡ ಬೇಕಾಗಿ ಬಂತು. 2001ರ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ದಾಳಿ ನಡೆಸಿದ ಉಗ್ರರು ಹದಿನಾಲ್ಕು ಮಂದಿಯನ್ನು ಹತ್ಯೆಗೈದಿದ್ದರು.

ಮೂರು ಬಾರಿ ಪ್ರಧಾನಿ
ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿಯಾಗಿ ಮೂರು ಬಾರಿ ಕಾರ್ಯನಿರ್ವಹಿಸಿದ್ದಾರೆ. ಮೊದಲಿಗೆ 1996ರಲ್ಲಿ ಹದಿಮೂರು ದಿನಗಳ ಕಾಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ವಾಜಪೇಯಿ ತಮ್ಮ ಪಕ್ಷಕ್ಕೆ ಬಹುಮತ ಪಡೆಯಲು ವಿಫಲವಾದ ಕಾರಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಎರಡನೆಯ ಬಾರಿ 1998ರಲ್ಲಿ ವಾಜಪೇಯಿ ಪುನಃ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಈ ಬಾರಿ ಎಐಎಡಿಎಂಕೆ ಪಕ್ಷ ಸರಕಾರಕ್ಕೆ ಬೆಂಬಲ ವಾಪಸ್ ಪಡೆದ ಕಾರಣ ಸರಕಾರ ಬಿದ್ದು ವಾಜಪೇಯಿ ರಾಜೀನಾಮೆ ನೀಡಬೇಕಾಯಿತು. 1999ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಪಡೆದು ಅಧಿಕಾರಕ್ಕೇರಿದ ಸಂದರ್ಭದಲ್ಲಿ ವಾಜಪೇಯಿ ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಬಾರಿ ಅವರು ಪ್ರಧಾನಿಯಾಗಿ ಐದು ವರ್ಷ ಪೂರ್ಣಗೊಳಿಸಿದರು.

ಬಾಬರಿ ಮಸೀದಿ ಧ್ವಂಸಕ್ಕೆ ದುಃಖ
ಓರ್ವ ಮುತ್ಸದ್ದಿಯಾಗಿ ಉದಾರವಾದಿ ದೃಷ್ಟಿಕೋನವನ್ನು ಹೊಂದಿದ್ದ ವಾಜಪೇಯಿ 1992ರ ಡಿಸೆಂಬರ್ 6ರಂದು ಸಂಘ ಪರಿವಾರದ ಕಾರ್ಯಕರ್ತರು ನಡೆಸಿದ ಬಾಬರಿ ಮಸೀದಿ ಧ್ವಂಸ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದರು. ಈ ಘಟನೆ ಬಿಜೆಪಿಯ ಅತ್ಯಂತ ಕೆಟ್ಟ ತಪ್ಪು ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಅವರು ಈ ವೇಳೆ ಹೇಳಿಕೆ ನೀಡಿದ್ದರು.

ಅಣ್ವಸ್ತ್ರ ಪರೀಕ್ಷೆ
ಪ್ರಧಾನಿಯಾಗಿ ವಾಜಪೇಯಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಪ್ರಮುಖವೆಂದರೆ 1998ರಲ್ಲಿ ನಡೆದ ಪೊಖ್ರಾನ್ ಅಣ್ವಸ್ತ್ರ ಪರೀಕ್ಷೆ. ರಾಜಸ್ಥಾನದ ಪೊಖ್ರಾನ್‌ನಲ್ಲಿ ಅಮೆರಿಕದ ಗುಪ್ತಚರ ಕಣ್ಗಾವಲಿಗೆ ಚಳ್ಳೆಹಣ್ಣು ತಿನ್ನಿಸಿ ದೇಶದ ಪ್ರಪ್ರಥಮ ಅಣ್ವಸ್ತ್ರ ಪರೀಕ್ಷೆ ನಡೆಸಲಾಗಿತ್ತು. ಜೊತೆಗೆ ವಾಜಪೇಯಿ ತಮ್ಮ ಅಧಿಕಾರಾವಧಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಸುಧಾರಿಸಲು ಸಾಕಷ್ಟು ಪ್ರಯತ್ನ ನಡೆಸಿದರು. ಈ ಪ್ರಯತ್ನದ ಭಾಗವಾಗಿ ಅವರು 1999ರ ಫೆಬ್ರವರಿಯಲ್ಲಿ ದಿಲ್ಲಿ-ಲಾಹೋರ್ ಬಸ್ ಸೇವೆಯನ್ನು ಆರಂಭಿಸಿದ್ದರು.

ವಾಜಪೇಯಿ ಬಗ್ಗೆ ನೀವು ಕೇಳಿರದ 15 ಸಂಗತಿಗಳು
1.ಅಟಲ್ ಬಿಹಾರಿ ವಾಜಪೇಯಿ ಅವರು 1924, ಡಿಸೆಂಬರ್ 25ರಂದು ಮಧ್ಯಪ್ರದೇಶದಲ್ಲಿ ಗ್ವಾಲಿಯರ್‌ನಲ್ಲಿ ಜನಿಸಿದರು.
2. ತಾರುಣ್ಯದಲ್ಲಿದ್ದಾಗಲೇ ಬ್ರಿಟಿಷರ ವಸಾಹತುಶಾಹಿ ಆಡಳಿತವನ್ನು ವಿರೋಧಿಸಿ ವಾಜಪೇಯಿ ಕೆಲಕಾಲ ಜೈಲುವಾಸ ಅನುಭವಿಸಿದರು. ಆರೆಸ್ಸೆಸ್ ಹಾಗೂ ಜನಸಂಘದ ಬೆಂಬಲಿಗರಾಗುವ ಪೂರ್ವದಲ್ಲಿ ಅವರು ಸಮತಾವಾದ(ಕಮ್ಯುನಿಸಂ)ದ ಕಡೆ ಆಕರ್ಷಿತರಾಗಿದ್ದರು.
3. 1942-45ರ ಅವಧಿಯಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸುವ ಮೂಲಕ ಸ್ವಾತಂತ್ರ ಹೋರಾಟಗಾರರಾಗಿ ರಾಜಕೀಯಕ್ಕೆ ಪಾದಾರ್ಪಣೆಗೈದರು. ಕಮ್ಮುನಿಸ್ಟ್ ಆಗಿ ರಾಜಕೀಯ ಆರಂಭಿಸಿದ ಅವರು, ನಂತರ ಹಿಂದೂ ರಾಷ್ಟ್ರೀಯವಾದ, ಹಿಂದುತ್ವವನ್ನು ಪ್ರತಿಪಾದಿಸುವ ಮತ್ತು ಭಾರತದ ರಾಜಕೀಯದಲ್ಲಿ ಬಲಪಂಥೀಯ ಎಂದು ಪರಿಗಣಿಸಲಾಗುವ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸದಸ್ಯರಾಗಿ ಕಮ್ಯುನಿಸಂಗೆ ವಿದಾಯ ಹೇಳಿದರು.
4. 1950ರ ದಶಕದ ಆರಂಭದಲ್ಲಿ ಆರೆಸ್ಸೆಸ್ ನಿಯತಕಾಲಿಕೆಯನ್ನು ಮುನ್ನಡೆಸುವ ಸಂಬಂಧ ಕಾನೂನು ಅಧ್ಯಯನಕ್ಕೆ ವಿದಾಯ ಹೇಳಿದ್ದ ಅವರು, ಬಳಿಕ ತಮ್ಮ ರಾಜಕೀಯದ ಬೇರುಗಳನ್ನು ಆರೆಸ್ಸೆಸ್‌ನಲ್ಲಿ ಗಟ್ಟಿಗೊಳಿಸಿಕೊಂಡು ಬಿಜೆಪಿಯ ಪ್ರಮುಖ ಧ್ವನಿಯಾದರು.
5. ಆ ಬಳಿಕ ವಾಜಪೇಯಿ ಅವರು, ಬಿಜೆಪಿಯ ಮೂಲ ಪಕ್ಷ ಭಾರತೀಯ ಜನಸಂಘ(ಬಿಜೆಎಸ್)ದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಕಟ್ಟಾ ಬೆಂಬಲಿಗ ಹಾಗೂ ಸಹಾಯಕರಾದರು.
6.ಮುಸ್ಲಿಂ ಬಾಹುಳ್ಯ ಹೊಂದಿತ್ತು ಎನ್ನುವ ಕಾರಣಕ್ಕಾಗಿ ಕಾಶ್ಮೀರಕ್ಕೆ ವಿಶೇಷ ಪ್ರಾಮುಖ್ಯ ನೀಡುವುದು, ಕಾಶ್ಮೀರವನ್ನು ಪ್ರವೇಶಿಸಬೇಕಾದರೆ ಅನುಮತಿ ಪಡೆಯುವುದು ಮತ್ತು ಆ ರಾಜ್ಯಕ್ಕೆ ಭೇಟಿ ನೀಡುವ ಭಾರತದ ನಾಗರಿಕರನ್ನು ಕೆಳದರ್ಜೆಯವರನ್ನಾಗಿ ನೋಡಲಾಗುವ ಪದ್ಧತಿಯ ವಿರುದ್ಧ ಶ್ಯಾಮ್ ಪ್ರಸಾದ್ ಮುಖರ್ಜಿ ಆಮರಣಾಂತ ಉಪವಾಸ ಕುಳಿತಾಗ ವಾಜಪೇಯಿ ಅವರ ಬೆನ್ನಿಗಿದ್ದರು. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಉಪವಾಸ ಸತ್ಯಾಗ್ರಹವು ಕಾಶ್ಮೀರಕ್ಕೆ ತೆರಳಬೇಕಾದರೆ ತೋರಿಸಬೇಕಾದ ‘ಗುರುತು ಪತ್ರದ ಆವಶ್ಯಕತೆ’ಯನ್ನು ಕೊನೆಗೊಳಿಸಿತು. ಅಲ್ಲದೆ ಕಾಶ್ಮೀರವು ಶೀಘ್ರವಾಗಿ ಭಾರತ ಒಕ್ಕೂಟ ಸೇರಲು ಕಾರಣವಾಯಿತು. ಆದರೆ ವಾರಗಳ ಅವಧಿಯ ಉಪವಾಸದಿಂದಾದ ಅಶಕ್ತತೆಯಿಂದ ಮುಖರ್ಜಿ ತೀರಿಕೊಂಡರು. ಈ ಘಟನೆಗಳು ತರುಣ ವಾಜಪೇಯಿ ಅವರ ಜೀವನದ ಮಹತ್ವದ ಕ್ಷಣವಾಗಿದ್ದವು.
7. ಮುಖರ್ಜಿಯವರಿಂದ ಪಕ್ಷದ ನೇತೃತ್ವ ವಹಿಸಿಕೊಂಡ ವಾಜಪೇಯಿ, 1957ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಜಯಶಾಲಿಯಾದರು.
8. 1957-2009ರ ಅವಧಿಯಲ್ಲಿ ಒಟ್ಟು 10 ಬಾರಿ ಅವರು ಸಂಸತ್ತಿನ ಕೆಳಮನೆಯಾದ ಲೋಕಸಭೆಗೆ ಚುನಾಯಿತರಾಗಿದ್ದರು.
9.ಭಾರತದ ಪ್ರಧಾನಿಯಾಗಿ 5 ವರ್ಷ ಸಂಪೂರ್ಣ ಅವಧಿ ಪೂರೈಸಿದ ಮೊದಲ ಕಾಂಗ್ರೆಸ್ಸೇತರ ವ್ಯಕ್ತಿಯಾಗಿದ್ದಾರೆ.


10. ನಾಲ್ಕು ದಶಕಗಳ ಕಾಲ ವಿರೋಧಪಕ್ಷದಲ್ಲಿದ್ದ ವಾಜಪೇಯಿ ಅವರು, 1996ರಲ್ಲಿ ಪ್ರಥಮ ಬಾರಿಗೆ ಪ್ರಧಾನಮಂತ್ರಿ ಸ್ಥಾನ ಅಲಂಕರಿಸಿದರು. ಆದರೆ ಸಂಖ್ಯಾಬಲದ ಕೊರತೆಯಿಂದ ಕೇವಲ 13 ದಿನಗಳಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು.
11. 1998ರಲ್ಲಿ ಸಂಖ್ಯಾಬಲದ ಕೊರತೆಯಿಂದಾಗಿಯೇ ವಾಜಪೇಯಿ ಅವರು ಮತ್ತೊಮ್ಮೆ ಅಧಿಕಾರ ಕಳೆದುಕೊಂಡರು. ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು ಸರಕಾರಕ್ಕೆ ನೀಡಿದ ಬೆಂಬಲ ಹಿಂದೆಗೆದುಕೊಂಡ ಕಾರಣ ಕೇವಲ 13 ತಿಂಗಳಲ್ಲೇ ವಾಜಪೇಯಿ ಅವರ ಸರಕಾರ ಪತನಗೊಂಡಿತ್ತು.
12. 1999ರಲ್ಲಿ ಪೂರ್ಣ ಬಹುಮತದೊಂದಿಗೆ ದೇಶದ ಚುಕ್ಕಾಣಿ ಹಿಡಿದ ವಾಜಪೇಯಿ, ಈ ಬಾರಿ ಸಂಪೂರ್ಣ 5 ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದರು.
13. ಅದ್ಭುತ ವಾಗ್ಮಿಯಾಗಿದ್ದ ವಾಜಪೇಯಿ, ಮೊರಾರ್ಜಿ ದೇಸಾಯಿ ಸರಕಾರದಲ್ಲಿ ವಿದೇಶಾಂಗ ಸಚಿವರಾದ ಸಂದರ್ಭದಲ್ಲಿ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಿಂದ ತುಂಬ ಪ್ರಸಿದ್ಧಿಯನ್ನು ಪಡೆದರು. ಈ ಭಾಷಣಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಯಿತು.
14. 1999ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡುವ ಅವರ ನಡೆಗೆ ಪಕ್ಷದಲ್ಲೇ ವಿರೋಧವಿತ್ತು. ಪಾಕಿಸ್ತಾನ ಭೇಟಿ ತಪ್ಪು ನಿರ್ಧಾರವೆಂಬ ಪಕ್ಷದ ಕೆಲವರ ಆರೋಪದ ಮಧ್ಯೆಯೂ ಎದೆಗುಂದದೆ ವಾಜಪೇಯಿ, ಬಸ್ ಮೂಲಕ ಲಾಹೋರ್‌ಗೆ ಸವಾರಿ ಬೆಳೆಸಿದರು. ಇದೇ ನಡೆಯನ್ನು ಅವರ ಉತ್ತರಾಧಿಕಾರಿ ಕಾಂಗ್ರೆಸ್‌ನ ಡಾ.ಮನಮೋಹನ್‌ಸಿಂಗ್ ಮುಂದುವರಿಸಿದರು.
15. ಬ್ರಹ್ಮಚಾರಿಯಾಗಿದ್ದ ವಾಜಪೇಯಿ, ಕವಿಯಾಗಿಯೂ ಖ್ಯಾತರು. ಈ ಕಾರಣಕ್ಕಾಗಿ ಪಕ್ಷದಲ್ಲಿ ಅವರನ್ನು ಆಗಾಗ ಉಲ್ಲೇಖಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ