ಶೋಷಿತ ಸಮುದಾಯ ಮತ್ತು ಆರ್ಥಿಕ ಅಧಿಕಾರದ ಮಹತ್ವ

Update: 2018-08-20 18:47 GMT

ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರಕ್ಕಿಂತಲೂ ಆರ್ಥಿಕ ಅಧಿಕಾರದ ಅಗತ್ಯ ಹಿಂದೆಂದಿಗಿಂತಲೂ ಈಗ ಮಂಚೂಣಿಗೆ ಬರುತ್ತಿದೆ. ಏಕೆಂದರೆ...

ಶೋಷಿತ ಸಮುದಾಯಗಳಿಗೆ ನಂಬಿಸಿರುವ ಒಂದು ಸಿದ್ಧಾಂತ ‘ರಾಜಕೀಯ ಶಕ್ತಿಯೇ ಸಮುದಾಯದ ಬೆಳವಣಿಗೆಗೆ ಪೂರಕ’ ಎಂಬುದು. ಪ್ರಶ್ನೆ ಏನೆಂದರೆ ರಾಜಕೀಯ ಶಕ್ತಿ ಇಂದು ಸಮುದಾಯದ ಬೆಳವಣಿಗೆಗೆ ಪೂರಕವಾಗಿ ಉಳಿದಿದೆಯೇ? ಖಂಡಿತ ಇಲ್ಲ. ಹಾಗಂತ ಸಿದ್ಧಾಂತವೇ ತಪ್ಪೇ? ಇಲ್ಲ. ಆದರೆ ಸಿದ್ಧಾಂತಕ್ಕಿಂತಲೂ ಮುಖ್ಯವಾಗಿ ಬದಲಾಗಿರುವ ಪರಿಸ್ಥಿತಿ.

ನೇರ ಹೇಳುವುದಾದರೆ, 1992ರ ಗ್ಯಾಟ್ ಒಪ್ಪಂದದ ನಂತರ ಜಾರಿಗೊಂಡ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣದ ಪರಿಣಾಮ ಆರ್ಥಿಕ ಅಧಿಕಾರ ಜಗತ್ತಿನೆಲ್ಲೆಡೆ ರಾಜಕೀಯ ಅಧಿಕಾರವನ್ನು ಮೀರಿಸಿ ಮಂಚೂಣಿಗೆ ಬಂದಿತು. ಪರಿಣಾಮ ಯಾವ ಸಮುದಾಯಗಳು ಆರ್ಥಿಕವಾಗಿ ಪ್ರಬಲವಾಗಿತ್ತೋ ಅಥವಾ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ಕೊಡುತ್ತಿತ್ತೋ ಅದು ಮತ್ತಷ್ಟು ಮಂಚೂಣಿಗೆ ಬರಲಾರಂಭಿಸಿದವು, ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳತೊಡಗಿದವು. ಇದಕ್ಕೊಂದು ನೇರ ಉದಾಹರಣೆ ಮುಸ್ಲಿಂ ಸಮುದಾಯ! ಹೌದು, ಮುಸ್ಲಿಂ ಸಮುದಾಯ ಇಂದು ಕೇಸರಿವಾದಿಗಳು ಒಡ್ಡುತ್ತಿರುವ ಭಾರೀ ಪ್ರತಿರೋಧದ ನಡುವೆಯೂ ಬಂಡೆಯಂತೆ ಪ್ರಬಲವಾಗಿ ಉಳಿದಿದೆ ಮತ್ತು ಉಳಿಯಲಿದೆ. ಇದಕ್ಕೆ ಕಾರಣ ಅದು ಜಾಗತೀಕರಣವನ್ನು ಬಳಸಿಕೊಂಡ ರೀತಿ. ಒಟ್ಟಾರೆ ಹೇಳುವುದಾದರೆ ಆರ್ಥಿಕ ಶಕ್ತಿ ಹಿಂದೆಂದಿಗಿಂತಲೂ ಈಗ ನಾಗಾಲೋಟದಿಂದ ಮುಂದೆ ಸಾಗುತ್ತಿದೆ. ಅದರ ಹಿಂದೆ ಹೋಗದವರ, ಅದರ ಮಹತ್ವ ಅರಿಯದವರನ್ನು ಅದು ಹಿಂದಕ್ಕೆ ತಳ್ಳುತ್ತದೆ.

ದುರಂತವೆಂದರೆ ಅಕ್ಷರಶಃ ಇದರ ಹೊಡೆತಕ್ಕೆ ಬೀಳುತ್ತಿರುವವರು ಶೋಷಿತ ಅಸ್ಪೃಶ್ಯ ಸಮುದಾಯಗಳು. ಯಾಕೆಂದರೆ ರಾಜ್ಯಾಧಿಕಾರ ಮಹತ್ವ ಎಂದು ಅದೇ ಹಳೇ ಸಿದ್ಧಾಂತ ಮಂಡಿಸಿದ ಕೆಲವು ಶೋಷಿತ ಸಮುದಾಯಗಳ ಸಂಘಟನೆಗಳು, ಪಕ್ಷಗಳು ಜಾಗತೀಕರಣದ ಇಂತಹ ನಾಡಿ ಮಿಡಿತ ಅರಿಯದೆ ಅಕ್ಷರಶಃ ತಮ್ಮ ಸಮುದಾಯಗಳನ್ನು ತೊಂದರೆಗೆ ಸಿಲುಕಿಸಿವೆ. ಬದಲಾದ ಕಾಲಘಟ್ಟದ ಇಂತಹ ಬದಲಾವಣೆ ಗುರುತಿಸಲು ವಿಫಲವಾಗಿ ಸಮುದಾಯಗಳನ್ನು, ಅಂತಹ ಸಮುದಾಯ ತರಬೇತಿ ನೀಡುವ ಶಕ್ತಿಗಳು ಹಳ್ಳಕ್ಕೆ ತಳ್ಳುತ್ತಿವೆ. ನಿಜ, ಇದು ಆರೋಪ. ಆದರೆ ಅಸ್ಪೃಶ್ಯತೆಯಂತಹ ಭೀಕರ ಸಮಸ್ಯೆಯ ಕಾರಣಕ್ಕೆ ಮೊದಲೇ ಸಮಾಜದಲ್ಲಿ ಯಾವುದೇ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ವಿಫಲವಾಗುತ್ತಿರುವ ಇಂತಹ ನತದೃಷ್ಟ ಸಮುದಾಯಕ್ಕೆ ಅದರ ಸಿದ್ಧಾಂತದಲ್ಲೇ ಇಂತಹ ಲೋಪ ದೋಷ ಎದುರಾದರೆ ಅದನ್ನು ಕಾಪಾಡುವವರಾದರೂ ಯಾರು? ಹಾಗೆಯೇ ಇದನ್ನು ಬರೀ ಅಂದಾಜಿಸಿ ಹೇಳುತ್ತಿಲ್ಲ. ಈಚೆಗೆ ರಾಜ್ಯಾಧಿಕಾರದ ಮಹತ್ವ ಹೇಳುತ್ತಿದ್ದ ಗುಂಪಿಗೆ ಅಲ್ಪ ಪ್ರಮಾಣದ ಅಧಿಕಾರವೂ ಸಿಕ್ಕಿದೆ. ಆ ಗುಂಪಿನ ಸ್ನೇಹಿತರನ್ನು ಸಮುದಾಯಕ್ಕೋಸ್ಕರ ಏನಾದರೂ ಮಾಡ್ರಪ್ಪ? ಎಂದಾಗ ಮಂಚೂಣಿಯ ನಾಯಕ ಒಬ್ಬ ಹೇಳಿದ್ದು ‘‘ಏನ್ ಗುರು ಹೀಗೆ ಹೇಳ್ತೀಯ? ಏನು ಎಲ್ಲರಿಗೂ ಎರಡೆರಡು ಲಕ್ಷ ಅಕೌಂಟ್‌ಗೆ ಹಾಕೋಕೆ ಆಗುತ್ತ? ಎಲ್ಲರಿಗೂ ಕೆಲಸ ಕೊಡೋಕೆ ಆಗುತ್ತ?!’’

ಆರ್ಥಿಕ ಸಿದ್ಧಾಂತದ ಚಿಂತನೆಯ ಬಗ್ಗೆ ಸಿಕ್ಕ ಸಾಕ್ಷಿ ಇದು. ರಾಜಕೀಯ ಅಧಿಕಾರಕ್ಕಿಂತ ಆರ್ಥಿಕ ಅಧಿಕಾರ ಮಹತ್ವದ್ದು. ಜಾಗತೀಕರಣ ಸೃಷ್ಟಿಸಿರುವ ಪರಿಣಾಮ ಇದು ಎಂದು. ಈ ನಿದರ್ಶನಗಳ ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳು ರಾಜಕೀಯ ಅಧಿಕಾರದ ಭ್ರಮೆಯಿಂದ ಹೊರಬಂದು ಆರ್ಥಿಕ ಶಕ್ತಿ ಗಳಿಸುವತ್ತ ಏನೆಲ್ಲ ಚಿಂತನೆ, ಹೋರಾಟ, ತಂತ್ರ, ಪ್ರಯತ್ನ ಮಾಡಬಹುದೋ ಅದೆಲ್ಲವನ್ನು ಮಾಡಬೇಕಿದೆ. ನಿಜ ಅಸ್ಪೃಶ್ಯತೆ ಕಪ್ಪುಉಕ್ಕಿನ ಕೋಳದಂತೆ ಶೋಷಿತರನ್ನು ಹಿಡಿದಿದೆ. ಆದರೆ ಬಾಬಾಸಾಹೇಬ್ ಅಂಬೇಡ್ಕರರು ನಮಗೆ ಅಷ್ಟು ಕಲಿಸಿದರು. ನಾವು ಇನ್ನಷ್ಟು ಕಲಿಯುವುದು, ಪ್ರಯತ್ನಿಸುವುದು ಕಷ್ಟವೇ? ಈ ನಿಟ್ಟಿನಲ್ಲಿ ಶೋಷಿತ ಸಮುದಾಯ ಯುದ್ಧೋಪಾದಿಯಲ್ಲಿ ವ್ಯಾಪಾರ, ವ್ಯವಹಾರ, ಉದ್ದಿಮೆ ಹೀಗೆ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಸಣ್ಣದು ದೊಡ್ಡದು ಎಲ್ಲಾ ಮಾರುಕಟ್ಟೆ ಕ್ಷೇತ್ರಗಳಲ್ಲೂ ಕಾರ್ಯಾಚರಣೆಗಿಳಿಯಬೇಕಾಗಿದೆ. ಆರ್ಥಿಕ ಅಧಿಕಾರ ಗಳಿಸಿ, ವಿಮೋಚನೆ ಕಾಣಬೇಕಾಗಿದೆ.

Writer - ರಘೋತ್ತಮ ಹೊ.ಬ.

contributor

Editor - ರಘೋತ್ತಮ ಹೊ.ಬ.

contributor

Similar News