ಆಶ್ರಮಗಳ ಹೆಸರಲ್ಲೇ ಅಕ್ರಮ

Update: 2018-08-23 18:52 GMT

ಆಶ್ರಮ ಎನ್ನುವ ಪದಕ್ಕೆ ಭಾರತೀಯ ಭಾಷೆಯಲ್ಲಿ ದೊಡ್ಡಅರ್ಥವಿದೆ. ಆಶ್ರಯ ನೀಡುವುದಷ್ಟೇ ಅಲ್ಲ, ಅದರಾಚೆಗಿನ ಆಧ್ಯಾತ್ಮಿಕ ಸಂಬಂಧವೂ ಜೊತೆಗೆ ಕೂಡಿಕೊಳ್ಳುತ್ತದೆ. ಋಷಿಮುನಿಗಳ ಗುಡಿಸಲಿಗೆ ಆಶ್ರಮ ಎಂದು ಕರೆಯುತ್ತಾರೆ. ಸನ್ಯಾಸಿಗರಿರುವ ಪ್ರದೇಶಗಳಿಗೂ ಆಶ್ರಮ ಎಂದು ಕರೆಯುವುದಿದೆ. ಇಂದಿನ ದಿನಗಳಲ್ಲಂತೂ ಭಾರತದಲ್ಲಿ ಶಾಲೆ, ಕಾಲೇಜುಗಳಿಗಿಂತಲೂ ದೊಡ್ಡ ಸಂಖ್ಯೆಯಲ್ಲಿ ಆಶ್ರಮಗಳು ಹರಡಿಕೊಂಡಿವೆ. ಸನ್ಯಾಸಿಗಳು, ಅನಾಥರು, ವೃದ್ಧರು, ಬಡವರು, ಮಹಿಳೆಯರು, ದಲಿತರು... ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಆಶ್ರಮಗಳು ಅಣಬೆಗಳಂತೆ ತೆರೆದುಕೊಂಡಿವೆ. ವಿಪರ್ಯಾಸವೆಂದರೆ, ಈ ಆಶ್ರಮಗಳು ತಮ್ಮ ಮೂಲ ಉದ್ದೇಶಗಳನ್ನು, ವೌಲ್ಯಗಳನ್ನು ಕಳೆದುಕೊಂಡಿವೆ.ತೆರಿಗೆಯಿಂದ ಪಾರಾಗುವುದಕ್ಕೆ, ಜನರನ್ನು ವಂಚಿಸುವುದಕ್ಕೆ ಆಶ್ರಮಗಳನ್ನು ತೆರೆಯಲಾಗುತ್ತದೆ. ಜೊತೆಗೆ ಅಕ್ರಮಗಳನ್ನು, ಅವ್ಯವಹಾರಗಳನ್ನು ಇದೇ ಆಶ್ರಮಗಳ ಮರೆಯಲ್ಲಿ ನಡೆಸಲಾಗುತ್ತಿದೆ. ಆದುದರಿಂದಲೇ, ಇಂದಿನ ಭಾರತದಲ್ಲಿ ಆಶ್ರಮ ತನ್ನ ಅರ್ಥವನ್ನು ಕಳೆದುಕೊಂಡಿದೆ. ಕೆಲವು ತಿಂಗಳುಗಳ ಹಿಂದೆ, ಕೆಲವು ಸ್ವಘೋಷಿತ ದೇವಮಾನವರು ಮತ್ತು ಸನ್ಯಾಸಿಗಳ ಆಶ್ರಮಗಳಿಗೆ ದಾಳಿ ನಡೆಸಿದಾಗ, ಅಸಂಖ್ಯಹೆಣ್ಣು ಮಕ್ಕಳು ಇವರ ಅನೈತಿಕ ಚಟುವಟಿಕೆಗಳಿಗೆ ಬಲಿಯಾಗಿರುವುದು ಬೆಳಕಿಗೆ ಬಂತು. ಒಬ್ಬ ಸ್ವಾಮೀಜಿಯ ಆಶ್ರಮದಲ್ಲಿ ನೂರಾರುಹೆಣ್ಣು ಮಕ್ಕಳು ವೇಶ್ಯಾವಾಟಿಕೆಗಳಿಗೆ ಬಳಕೆಯಾಗುತ್ತಿದ್ದರು. ಈ ಹಿಂದೆಯೂ ಸನ್ಯಾಸಿಗಳು, ಸ್ವಾಮೀಜಿಗಳು ನಡೆಸುತ್ತಿದ್ದ ಆಶ್ರಮಗಳಲ್ಲಿ ಇಂತಹ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದ್ದವು.ಆದರೂ ಸರಕಾರ ಈ ಆಶ್ರಮಗಳಿಗೆ ಒಂದು ವ್ಯವಸ್ಥಿತ ಮಾನದಂಡವನ್ನು, ಕಾನೂನನ್ನು ರೂಪಿಸಲು ಮನಮಾಡಲೇ ಇಲ್ಲ. ಯಾಕೆಂದರೆ, ಇಂತಹ ಕಾನೂನನ್ನು ರೂಪಿಸಿದರೆ, ಸರಕಾರ ಹತ್ತು ಹಲವು ದೇವಮಾನವರನ್ನು, ಸ್ವಾಮೀಜಿಗಳನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಬಹುತೇಕ ರಾಜಕೀಯ ನಾಯಕರೇ ಈ ಸ್ವಾಮೀಜಿಗಳ ಪಾದ ಬುಡದಲ್ಲಿ ತೆವಲಿಕೊಂಡಿರುವಾಗ, ಇಂತಹದೊಂದು ಕಾನೂನು ಅನುಮಾನವೇ ಸರಿ. ಬಿಹಾರದ ಮುಝಪರ್‌ನಗರದ ಮಕ್ಕಳ ಆರೈಕಾ ಸಂಸ್ಥೆ (ಸಿಸಿಐ)ಯಲ್ಲಿ ನಡೆಯುತ್ತಿದ್ದ ಲೈಂಗಿಕದೌರ್ಜನ್ಯಗಳನ್ನು ಆ ಸಂಸ್ಥೆಯ 2017ರ ಸೋಷಿಯಲ್ ಆಡಿಟ್ ನಡೆಸಿದ ಟಾಟಾ ಇನ್‌ಸ್ಟಿಟ್ಯೂಟ್ ಆ್ ಸೋಷಿಯಲ್ ಸೈನ್ಸಸ್‌ನ (ಟಿಐಎಸ್‌ಎಸ್-ಟಿಸ್) ತಂಡವು ಬಯಲು ಮಾಡಿತು. ಮುಝರ್‌ನಗರ್‌ನ ಸಿಸಿಐನಲ್ಲಿದ್ದ ಒಟ್ಟು 42 ಮಕ್ಕಳಲ್ಲಿ 7 ರಿಂದ 17 ವಯಸ್ಸಿನೊಳಗಿದ್ದ 34 ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳ ಮೇಲೆ ದೈಹಿಕಮತ್ತು ಲೈಂಗಿಕ ಕಿರುಕುಳಗಳು ನಡೆದಿತ್ತು. ಬಿಹಾರ ರಾಜ್ಯದಲ್ಲಿರುವ ಇನ್ನುಳಿದ 14 ಸಿಸಿಐ ಮತ್ತು ಶೆಲ್ಟರ್ ಹೋಮ್‌ಗಳಲ್ಲಿರುವ ಮಕ್ಕಳ ಮೇಲೂ ನಡೆದಿರುವ ದೈಹಿಕ, ಮಾನಸಿಕ ಮತ್ತು ಲೈಂಗಿಕ ದೌರ್ಜನ್ಯಗಳ ಬಗ್ಗೆ ಮತ್ತು ಅಲ್ಲಿ ವಾಸಿಸಲು ದುಸ್ಸಾಧ್ಯವಾಗಿರುವ ಸ್ಥಿತಿಗಳ ಬಗ್ಗೆ ಹಾಗೂ ಶೆಲ್ಟರ್ ಹೋಮ್‌ಗಳಲ್ಲಿ ಕನಿಷ್ಠ ಸ್ವಾತಂತ್ರ್ಯವೂ ಇಲ್ಲದಿರುವ ಬಗ್ಗೆ ಆ ಆಡಿಟ್ ವರದಿಯು ಬೆಳಕನ್ನು ಚೆಲ್ಲಿದೆ. ಆದರೆ ತಳಮಳ ಹುಟ್ಟಿಸುವ ಸಂಗತಿಯೇನೆಂದರೆ ಮುಝರ್ ನಗರದ ಪ್ರಕರಣದಲ್ಲಿ ಆರೋಪಿತರಾಗಿರುವವರಲ್ಲಿ ಏಳು ಜನ ಆರೈಕೆದಾರರು (ಕೇರ್ ಗೀವರ್ಸ್) ಮತ್ತು ಸಮಾಲೋಚಕರು (ಕೌನ್ಸಿಲ್ಲರ್ಸ್) ಮಹಿಳೆಯರೇ ಆಗಿದ್ದಾರೆ.

ಉತ್ತರಪ್ರದೇಶದ ದಿವೋದರದ ಸಿಸಿಐನಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ 10 ವರ್ಷದ ಹುಡುಗಿಯೊಬ್ಬಳು ಬಯಲುಗೊಳಿಸಿದ್ದರಿಂದ ಹೊರಜಗತ್ತಿಗೆ ಗೊತ್ತಾಯಿತು. ಆ ಹುಡುಗಿಯು ಅಲ್ಲಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ಸಲ್ಲಿಸಿದ್ದರಿಂದ ಆ ಸಂಸ್ಥೆಯು ಸರಕಾರದ ಪರವಾನಿಗೆ ಇಲ್ಲದೆ ನಡೆಯುತ್ತಿತ್ತೆಂಬುದೂ ಮತ್ತು ಅಲ್ಲಿದ್ದ 18 ಹುಡುಗಿಯರು ಇನ್ನೂ ನಾಪತ್ತೆಯಾಗಿದ್ದಾರೆಂಬುದೂ ತಿಳಿದುಬಂದಿತು. ಇಂತಹ ಅಪರಾಧಗಳನ್ನು ತಡೆಗಟ್ಟಲು ಕಾನೂನುಗಳ ಕೊರತೆಯೇನಿಲ್ಲ. ಬದಲಿಗೆ ಅದರ ಮೇಲುಸ್ತುವಾರಿ ಮತ್ತು ವಿಚಕ್ಷಣಾ ಸಮಿತಿಯು ರಚನೆಯಾಗದಿರುವುದರಿಂದ ಇಂತಹ ದುರ್ಗತಿ ಉಂಟಾಗಿದೆ. 2015ರ ಕಾಯ್ದೆಯ ಪ್ರಕಾರ ಎಲ್ಲಾ ಸಿಸಿಐಗಳು ಸರಕಾರದಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಪ್ರತಿ ಜಿಲ್ಲೆಗೊಬ್ಬ ಮಕ್ಕಳ ರಕ್ಷಣಾಕಾರಿ, ಒಂದು ಮಕ್ಕಳ ಕಲ್ಯಾಣ ಸಮಿತಿ ಮತ್ತು ಒಂದು ಮಕ್ಕಳ ನ್ಯಾಯಮಂಡಳಿಯು ರಚನೆ ಯಾಗಬೇಕು. ಆದರೆ ಇವೆಲ್ಲವೂ ಸಿಸಿಐ ಸಂಸ್ಥೆಗಳು ಎಸಗಿರುವ ಹಣದ ಮತ್ತು ಅಕಾರದ ದುರ್ಬಳಕೆಯನ್ನು ನಿಯಂತ್ರಿಸುವಲ್ಲಿ ಘೋರವಾಗಿ ವಿಲವಾಗಿವೆ. ಎನ್‌ಸಿಪಿಸಿಆರ್ ನಡೆಸಿದ ಇತ್ತೀಚಿನ ಸರ್ವೇ ಪ್ರಕಾರ ಶೇ.32 ರಷ್ಟು ಸಿಸಿಐಗಳು 2015ರ ಕಾಯ್ದೆಯಡಿ ನೋಂದಣಿಗೊಂಡಿಲ್ಲ ಮತ್ತು ಉಳಿದ ಶೇ.33ರಷ್ಟು ಸಿಸಿಐಗಳು ಯಾವುದೇ ಪ್ರಾಕಾರದಡಿ ನೋಂದಣಿೆಗೊಂಡಿಲ್ಲ. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಇಲಾಖೆಯು ಈ ಎಲ್ಲಾ ಸಿಸಿಐಗಳಿಗೆ ಅನುದಾನವನ್ನು ನೀಡುತ್ತಿದ್ದು ಕಾಲಕಾಲಕ್ಕೆ ಸಾಮಾಜಿಕ ಆಡಿಟ್ ನಡೆಸಿ ಯಾವುದೇ ದುರ್ಬಳಕೆಯನ್ನು ತಡೆಗಟ್ಟುವ ಜವಾಬ್ದಾರಿಯನ್ನು ಹೊಂದಿದೆ. ಆದ್ದರಿಂದ ಒಂದೋ ಈ ಎಲ್ಲಾ ಸಂಸ್ಥೆಗಳನ್ನು ಯಾವುದೇ ನಿಯಮಿತ ತಪಾಸಣೆ ನಡೆಸದೆ ನಡೆಯಲು ಬಿಟ್ಟಿರಬೇಕು ಅಥವಾ ಮುಝರ್‌ನಗರದ ಸಿಸಿಐನಲ್ಲಿ ಸಂಭವಿಸಿದಂತೆ ವಿಸ್ತೃತವಾದ ದೌರ್ಜನ್ಯಗಳು ಸಂಭವಿಸುತ್ತಿದ್ದರೂ ಅಲ್ಲಿ ತಪಾಸಣೆ ನಡೆಸಿದ ವಿವಿಧ ಸಂಸ್ಥೆಗಳಿಗೆ ಅಲ್ಲಿ ಯಾವುದೇ ದುರ್ಬಳಕೆ ಪತ್ತೆಯಾಗಿಲ್ಲದಿರಬೇಕು. ಇದೀಗ ಎಲ್ಲಾ ಸಿಸಿಐ ಗಳಲ್ಲೂ ಸೋಷಿಯಲ್ ಅಡಿಟ್ ನಡೆಸಬೇಕೆಂದು ಎನ್‌ಸಿಪಿಸಿಆರ್ ಆದೇಶಿಸಿದೆ ಮತ್ತು ರಾಜ್ಯ ಸರಕಾರಗಳು ತನಿಖೆಗೆ ಆದೇಶ ನೀಡಿವೆ. ಆದರೆ ಇವೆಲ್ಲ ತುಂಬಾ ತಡವಾಗಿ ನಡೆಯುತ್ತಿವೆ. ಸಾಕಷ್ಟು ಜೀವಗಳು ತಮ್ಮ ರಕ್ಷಕರಿಂದಲೇ ದೌರ್ಜನ್ಯಕ್ಕೆ ಗುರಿಯಾಗಿ ಆಘಾತಕ್ಕೊಳಗಾದ ಬಹು ಸಮಯದ ನಂತರ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ತನಿಖೆಗಳು ಇಂತಹದ್ದೇ ಹಲವಾರು ಪ್ರಕರಣಗಳನ್ನು ಬಯಲಿಗೆ ತಂದಿವೆ. ಪ್ರಾಯಶಃ ಇನ್ನೂ ಸಾಕಷ್ಟು ಪ್ರಕರಣಗಳು ಬಯಲಿಗೆ ಬರಲಿವೆ. ಖಾಸಗಿ ಆಶ್ರಮಗಳು ಮಾತ್ರವಲ್ಲ, ಸರಕಾರ ನಡೆಸುತ್ತಿರುವ ದಲಿತರು, ಅಲ್ಪಸಂಖ್ಯಾತರಿಗಾಗಿ ಇರುವ ಆಶ್ರಮಗಳಲ್ಲೂ ವ್ಯಾಪಕ ಅಕ್ರಮಗಳು ನಡೆಯುತ್ತಿವೆ.ಅಲ್ಲಿನ ವಿದ್ಯಾರ್ಥಿಗಳನ್ನು ಅನೈತಿಕ ಚಟುವಟಿಕೆಗಳಿಗೆ ದೂಡುತ್ತಿರುವ ಕುರಿತಂತೆಯೂ ಆರೋಪಗಳಿವೆ. ವಿದ್ಯಾರ್ಥಿಗಳು ತೀರಾಬಡ, ಕೆಳಜಾತಿಗೆ ಸೇರಿದವರಾಗಿರುವುದರಿಂದ ಅವುಗಳ ವಿರುದ್ಧ ಧ್ವನಿಯೆತ್ತಲು ಅವರಿಗೆ ಸಾಧ್ಯವಾಗುತ್ತಿಲ್ಲ. ಧ್ವನಿಯೆತ್ತಿದರೂ ಅದನ್ನು ಅಡಗಿಸುವ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿವೆ. ಅತ್ಯಾಚಾರದಂತಹ ಪ್ರಕರಣಗಳಲ್ಲಿ ರಾಜಕಾರಣಿಗಳು, ಅಕಾರಿಗಳ ಹೆಸರುಗಳೂ ತಳುಕು ಹಾಕಿಕೊಂಡಿರುವುದರಿಂದಲೇ ಇವುಗಳು ಬೆಳಕಿಗೆ ಬರಲು ಕಷ್ಟಸಾಧ್ಯವಾಗಿವೆ.

ಮುಝರ್‌ನಗರ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಸುಪ್ರೀಂ ಕೋರ್ಟು, ಶೆಲ್ಟರ್ ಹೋಮ್‌ಗಳಲ್ಲಿರುವ ಮಕ್ಕಳ ಸುರಕ್ಷತೆ ಮತ್ತು ಕಲ್ಯಾಣಗಳ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ. ಎನ್‌ಸಿಪಿಸಿಆರ್‌ನ ಸರ್ವೇಯ ಪ್ರಕಾರ ಭಾರತದಲ್ಲಿರುವ ಎಲ್ಲಾ ಸಿಸಿಐಗಳಲ್ಲಿ ಲೈಂಗಿಕ ದೌರ್ಜನ್ಯಗಳಿಗೆ ಗುರಿಯಾಗಿರುವ 1,575 ಮಕ್ಕಳಿದ್ದಾರೆ. ಈ ಮಕ್ಕಳು ಒಮ್ಮೆ ಲೈಂಗಿಕ ದೌರ್ಜನ್ಯಗಳಿಂದ ಬಚಾವಾದರೂ ಶೆಲ್ಟರ್ ಹೋಮ್‌ನಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುವುದು ಅತ್ಯವಶ್ಯಕ. ಆದರೆ ಸರಕಾರದ ಜವಾಬ್ದಾರಿ ಅಲ್ಲಿಗೆ ಮುಕ್ತಾಯವಾಗಬಾರದು. ಸರಕಾರವು ಅಲ್ಲಿ ವಾಸಿಸುತ್ತಿರುವ ಮಕ್ಕಳು ಮತ್ತು ಮಹಿಳೆಯರ ಸ್ಥಿತಿಗತಿಗಳನ್ನು ಉತ್ತಮ ಪಡಿಸುವ ಮತ್ತು ಈ ಸಂಸ್ಥೆಗಳ ನಿರ್ವಹಣೆಯ ಮೇಲೆ ನಿಗಾ ಇಡುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ಬಹಳಷ್ಟು ಬಾರಿ ಅತ್ಯಂತ ಹಿಂಸಾತ್ಮಕ ಮತ್ತು ಅಸಹಾಯಕ ಪರಿಸ್ಥಿತಿಗಳಲ್ಲಿ ದೌರ್ಜನ್ಯಗಳಿಗೆ ಬಲಿಯಾಗುವ ಮಕ್ಕಳು ಮತ್ತು ಮಹಿಳೆಯರಿಗೆ ತಮ್ಮ ಅಭಿವೃದ್ಧಿಗಾಗಿ ರೂಪಿಸಲಾಗುವ ಯೋಜನೆಗಳ ಬಗ್ಗೆ ಅಭಿಪ್ರಾಯಗಳನ್ನು ದಾಖಲಿಸುವ ಅವಕಾಶವಿರುವುದಿಲ್ಲ ಹಾಗೂ ಅವರ ಭವಿಷ್ಯವು ಸರಕಾರದ ಮತ್ತು ಅದರ ಅಕಾರಿಗಳ, ರಾಜಕಾರಣಿಗಳ ಅಥವಾ ಒಟ್ಟಾರೆ ಸಮಾಜದ ಮರ್ಜಿಗೆ ಒಳಪಟ್ಟಿರುತ್ತದೆ. ಸರಕಾರದ ರಕ್ಷಣೆಯಲ್ಲಿರುವ ಈ ಅತಂತ್ರ ಜೀವಿಗಳ ಪರಿಸ್ಥಿತಿಗಳಲ್ಲಿ ಪರಿವರ್ತನೆ ತರಬೇಕೆಂದರೆ ತಮ್ಮ ಸಹಜೀವಿಗಳ ಬದುಕು ಗೌರವ ಮತ್ತು ಘನತೆಗಳಿಗೆ ಅನರ್ಹವೆಂದು ಭಾವಿಸುತ್ತಾ ಅವರ ಮೇಲೆ ಹಿಂಸಾಚಾರವನ್ನು ಮುಂದುವರಿಸುವ ಮನಸ್ಥಿತಿ ಬದಲಾಗಬೇಕು..ಎಲ್ಲಕ್ಕಿಂತ ಹೆಚ್ಚಾಗಿ ಅವರೆಲ್ಲರನ್ನೂ ಸಕಲ ಹಕ್ಕುಗಳನ್ನುಳ್ಳ ನಾಗರಿಕರನ್ನಾಗಿ ಪರಿಗಣಿಸಬೇಕು ಮತ್ತು ಅವರು ತಮ್ಮ ಹಾಗೂ ತಮ್ಮ ಕಲ್ಯಾಣದ ಬಗೆಗಿನ ಸಂಗತಿಗಳಲ್ಲಿ ಸಕ್ರಿಯ ಪಾತ್ರವಹಿಸುವಂತಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News