1984ರ ಹತ್ಯಾಕಾಂಡದ ಬಗ್ಗೆ ಪ್ರಶ್ನಿಸಿದರೆ ರಾಹುಲ್ ಗಾಂಧಿ ಈ ರೀತಿ ಉತ್ತರಿಸಬಲ್ಲರೇ?

Update: 2018-08-30 18:41 GMT

ರಾಹುಲ್ ಗಾಂಧಿ ಯಾವತ್ತಾದರೂ ಈ ರೀತಿ ಭಾಷಣ ಮಾಡಬಹುದೇ ಎಂಬ ಬಗ್ಗೆ ನನಗೆ ಅನುಮಾನವಿದೆ. ಆದರೆ ಅದು ಅವರ ರಾಜಕೀಯ ಹಿತಾಸಕ್ತಿಯನ್ನು ಹೊಂದಿದೆ. ಅವರು ಅನುವಂಶೀಯವಾಗಿ ಪಡೆದುಕೊಂಡು ಬಂದಿರುವ ನೈತಿಕ ದಿಕ್ಸೂಚಿ ಅವರನ್ನು ಆ ದಿಕ್ಕಿನಲ್ಲಿ ಸಾಗದಂತೆ ತಡೆಯಬಹುದು. ಕನಿಷ್ಠ ಪಕ್ಷ, ಅನುವಂಶೀಯವಾಗಿ ಅಲ್ಲದಿದ್ದರೂ ತನ್ನ ಸ್ವಂತ ಪ್ರಯತ್ನದಿಂದ ಮೋದಿ ಕೂಡಾ ಇದೇ ದಿಕ್ಸೂಚಿಯನ್ನು ಪಡೆದುಕೊಂಡಿದ್ದಾರೆ.

1984ರ ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವನ್ನು ನಿರಾಕರಿಸಲು ರಾಹುಲ್ ಗಾಂಧಿ ಮಾಡಿರುವ ಪ್ರಯತ್ನಗಳಿಗಿಂತಲೂ ಹೆಚ್ಚು ಆಘಾತಕಾರಿ ವಿಷಯವೆಂದರೆ ಸ್ವ್ವತಂತ್ರ ಭಾರತದಲ್ಲಿ ನಡೆದ ಈ ಹೀನಾಯ ಅಪರಾಧದ ಬಗ್ಗೆ ಸಿನಿಕನದಿಂದ ನಾವು ಮಾತನಾಡುವ ರೀತಿ.
ಪ್ರಜೆಗಳ ಸಾಮೂಹಿಕ ಹತ್ಯೆಯಲ್ಲಿ ಕಾಂಗ್ರೆಸ್ ನಾಯಕರು ಶಾಮೀಲಾಗಿದ್ದರು ಎಂಬ ಸತ್ಯದ ನಂತರವೂ ಘಟನೆ ನಡೆದು ಕೇವಲ ನಾಲ್ಕು ವಾರಗಳ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಪಡೆದುಕೊಂಡಿತ್ತು ಎಂಬುದನ್ನು ಪರಿಗಣಿಸಲೇ ಬೇಕಾಗುತ್ತದೆ. ಇಂದಿರಾ ಗಾಂಧಿಯ ಹತ್ಯೆಯಿಂದ ಮಾನವೀಯತೆಯ ಉಳಿದೆಲ್ಲಾ ಅಂಶಗಳು ಗೌಣವಾದವು ಎಂದು ನಾವು ಯೋಚಿಸಿದರೂ ನ್ಯಾಯದ ಅಗತ್ಯವನ್ನು ಗುರುತಿಸುವ ಸಾಂಘಿಕ ವೈಫಲ್ಯ ನಾವು ಒಪ್ಪಿಕೊಳ್ಳುವುಕ್ಕಿಂತಲೂ ದೀರ್ಘ ಮತ್ತು ಆಳವಾಗಿದೆ.
1985ರಿಂದ 1989ರವರೆಗೆ ಮಾಧ್ಯಮ ಮತ್ತು ಮಧ್ಯಮ ವರ್ಗ ರಾಜೀವ್ ಗಾಂಧಿ ಬಗ್ಗೆ ಅಪರಿಮಿತ ಪ್ರೀತಿಯನ್ನು ತೋರಿಸಿತು. ಒಂದು ಬೃಹದಾಕಾರದ ಮರ ಬೀಳುವಾಗ ಭೂಮಿ ಕಂಪಿಸುವುದು ಸಹಜ ಎಂದು ಹತ್ಯಾಕಾಂಡದ ಬಗ್ಗೆ ಹೇಳಿಕೆ ನೀಡಿದ್ದು ಮತ್ತು ಸಾವಿರಾರು ಜನರ ರಕ್ತವನ್ನು ಕೈಗೆ ಮೆತ್ತಿಕೊಂಡಿದ್ದ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಬೀದಿ ಗೂಂಡಾಗಳಿಗೆ ಈ ಪ್ರಕರಣದಲ್ಲಿ ಗುರುತರ ಶಿಕ್ಷೆಯಾಗದಂತೆ ಎಲ್ಲ ರೀತಿಯ ಆಡಳಿತಾತ್ಮಕ ಮತ್ತು ಕಾನೂನಾತ್ಮಕ ತಂತ್ರಗಳನ್ನು ಬಳಸಿಕೊಂಡದ್ದು ಕೂಡಾ ಇದೇ ರಾಜೀವ್ ಗಾಂಧಿ ಎನ್ನುವುದನ್ನು ಮರೆಯಬಾರದು.
ರಾಜೀವ್ ಗಾಂಧಿಯ ಜನಪ್ರಿಯತೆ ಕಡಿಮೆಯಾಗಲು 1984ರ ಹತ್ಯಾಕಾಂಡ ಅಥವಾ ನ್ಯಾಯ ಒದಗಿಸುವಲ್ಲಿ ಅವರ ವೈಫಲ್ಯ ಕಾರಣವಾಗಿರಲಿಲ್ಲ. ಬದಲಿಗೆ ಬೊಫೋರ್ ಹಗರಣ ಅದಕ್ಕೆ ಕಾರಣವಾಗಿತ್ತು.
ಅವರ ನಂತರ ಅಧಿಕಾರ ಸ್ವೀಕರಿಸಿದ ವಿ.ಪಿ.ಸಿಂಗ್‌ಗೆ ಭಾರತೀಯ ಜನತಾ ಪಕ್ಷ ಮತ್ತು ಎಡಪಕ್ಷಗಳ ಬೆಂಬಲವಿತ್ತು, ನಂತರ ಚಂದ್ರಶೇಖರ್ ಅಧಿಕಾರಕ್ಕೇರಿದರು. ಈ ಎರಡು ವರ್ಷಗಳಲ್ಲಿ ಹತ್ಯಾಕಾಂಡಕ್ಕೆ ಕಾರಣಕರ್ತರಾದವರನ್ನು ಶಿಕ್ಷಿಸಲು ಯಾವುದೇ ಗಮನಾರ್ಹ ಕ್ರಮಗಳನ್ನು ಕೈಗೊಳ್ಳಲಾಗಲಿಲ್ಲ ಎಂಬುದು ಬೇರೆ ಮಾತು. ಬಿಜೆಪಿಯಂತೂ 16ನೇ ಶತಮಾನದಲ್ಲಿ ಬಾಬರ್ ನಡೆಸಿದ್ದ ಹತ್ಯಾಕಾಂಡಗಳ ಬಗ್ಗೆ ಜಗಳವಾಡುವುದರಲ್ಲೇ ಆಸಕ್ತಿ ಹೊಂದಿತ್ತೇ ಹೊರತು ತೀರಾ ಇತ್ತೀಚೆಗೆ ನಡೆದ ಹತ್ಯಾಕಾಂಡದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ.
ಗೃಹ ಸಚಿವರಾಗಿ 1984ರ ಹತ್ಯಾಕಾಂಡದ ನೇತೃತ್ವ ವಹಿಸಿದ್ದ ಮತ್ತು ನಂತರ ಅದನ್ನು ಮರೆಮಾಚಲು ಯತ್ನಿಸಿದ್ದ ಪಿ.ವಿ. ನರಸಿಂಹ ರಾವ್ 1991ರಲ್ಲಿ ಪ್ರಧಾನ ಮಂತ್ರಿಯಾಗಿ ನೇಮಕಗೊಂಡರು. ಅವರ ನಂತರ ಎಚ್.ಡಿ. ದೇವೇಗೌಡ, ಇಂದ್ರ ಕುಮಾರ್ ಗುಜ್ರಾಲ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿ ಸ್ಥಾನ ಅಲಂಕರಿಸಿದರು. ಮನಮೋಹನ್ ಸಿಂಗ್ 2004ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದರೆ ನರೇಂದ್ರ ಮೋದಿ 2014ರಿಂದ ೇಶವನ್ನು ಮುನ್ನಡೆಸುತ್ತಿದ್ದಾರೆ.
ವಿವಿಧ ಕಾಲಘಟ್ಟಗಳಲ್ಲಿ, ಕಾಂಗ್ರೆಸೇತರ ಪ್ರಧಾನ ಮಂತ್ರಿಗಳು, ಮುಖ್ಯವಾಗಿ ವಾಜಪೇಯಿ ಮತ್ತು ಮೋದಿ 1984ರ ಹತ್ಯಾಕಾಂಡಕ್ಕೆ ನ್ಯಾಯ ಒದಗಿಸುವ ಬಗ್ಗೆ ಮಾತುಗಳನ್ನಾಡುತ್ತಾರೆ. ಆದರೆ ಅವರ ಪ್ರಯತ್ನ ಕೇವಲ ಹಲ್ಲಿಲ್ಲದ ಮತ್ತು ಪರಿಣಾಮಕಾರಿಯಲ್ಲದ ಆಯೋಗಗಳನ್ನು ಮತ್ತು ಸಮಿತಿಗಳನ್ನು ರಚಿಸುವುದಕ್ಕಷ್ಟೇ ಸೀಮಿತವಾಗಿದೆ.

ಕೆಲವೊಂದು ಹತ್ಯಾಕಾಂಡದ ಸಂತ್ರಸ್ತರಿಗೆಂದೇ ರೂಪಿಸಲಾಗಿರುವ ಪರಿಹಾರ ಪ್ಯಾಕೇಜ್‌ಗಳು ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದವರಿಗೆ ನೀಡುವ ಶಿಕ್ಷೆಗೆ ಪರ್ಯಾಯವಾಗಲು ಸಾಧ್ಯವಿಲ್ಲ. ರಾಜಕೀಯವಾಗಿ ಪ್ರಯೋಜನ ಪಡೆಯಬಹುದಾಗಿದ್ದರೂ ಕಾಂಗ್ರೆಸೇತರ ಸರಕಾರಗಳು 1984ರ ಹತ್ಯಾಕಾಂಡಕ್ಕೆ ನ್ಯಾಯವನ್ನು ಒದಗಿಸಲು ಯಾಕೆ ವಿಫಲವಾಗಿವೆ ಎಂಬ ಪ್ರಶ್ನೆಯನ್ನು ಕೇಳಲೇಬೇಕು. ಇದಕ್ಕೆ ಉತ್ತರ ಸರಳ. ಈ ಕೆಲಸ ಮಾಡಲು ಜನರ ವಿರುದ್ಧ ಯಾವುದೇ ಭಯ ಅಥವಾ ಕಾನೂನು ಕ್ರಮದ ಭಯವಿಲ್ಲದೆ ಅಪರಾಧಿ ಕೃತ್ಯಗಳನ್ನು ನಡೆಸಲು ಪೊಲೀಸರು ಮತ್ತು ಆಡಳಿತವರ್ಗದ ಬೆಂಬಲಿಗರಿಗೆ ನೀಡಿರುವ ರಿಯಾಯಿತಿಯ ಮೇಲೆ ದಾಳಿ ಮಾಡುವ ಮತ್ತು ಅದನ್ನು ಸಂಪೂರ್ಣವಾಗಿ ತೆಗೆದುಹಾಕುವ ಅಗತ್ಯವಿದೆ. ಅಂತರ್‌ರಾಷ್ಟ್ರೀಯ ಅಪರಾಧ ಕಾನೂನಿನಲ್ಲಿ ಅಳವಡಿಸಿಕೊಳ್ಳಲಾಗಿರುವ ಜವಾಬ್ದಾರಿಗಳನ್ನು ಆದೇಶಿಸುವ ಸಿದ್ಧಾಂತವನ್ನು ಪಾಲಿಸುವ ಅಗತ್ಯ ಭಾರತಕ್ಕಿದೆ. ಆದರೆ ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ಕಾನೂನು ಪುಸ್ತಕದಲ್ಲಿ ಈ ನಿಬಂಧನೆಯನ್ನು ಸೇರಿಸು ಸವಾಲನ್ನು ಸ್ವೀಕರಿಸಲು ಸಿದ್ಧವಿಲ್ಲ.

1984ರ ನಂತರ ಭಾರತದಲ್ಲಿ ಅನೇಕ ಹತ್ಯಾಕಾಂಡಗಳು ನಡೆದಿವೆ. ಮೀರತ್ (1987), ಬಗಲ್ಪುರ (1989), ಮುಂಬೈ (1992-93), ಗುಜರಾತ್ (2002), ಕೊಕ್ರಜಾರ್ (2012) ಮತ್ತು ಮುಝಫ್ಫರ್‌ನಗರ (2013). ಈ ಎಲ್ಲಾ ಘಟನೆಗಳಲ್ಲೂ ರಾಜ್ಯ ಸರಕಾಗಳು ಹಿಂಸಾಚಾರವನ್ನು ನಿಯಂತ್ರಿಸಲು ಮತ್ತು ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಲು ವಿಫಲವಾಗಿವೆ ಎಂಬುದು ಸುಸ್ಪಷ್ಟ. ಇವೆಲ್ಲವುಗಳಲ್ಲಿ ದಿಲ್ಲಿ ಹತ್ಯಾಕಾಂಡ ಜೊತೆ ನೇರ ಸಾಮ್ಯತೆಯನ್ನು ಹೊಂದಿರುವ ಇನ್ನೊಂದು ಹತ್ಯಾಕಾಂಡ ನಡೆದಿರುವುದು ಗುಜರಾತ್‌ನಲ್ಲಿ. 1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಹತ್ಯೆಯ ನಂತರ ಕಾಂಗ್ರೆಸ್ ಅಳವಡಿಸಿಕೊಂಡ ಆಡಳಿತಾತ್ಮಕ ಮತ್ತು ರಾಜಕೀಯ ತಂತ್ರಗಳು 2002ರ ಫೆಬ್ರವರಿ 27ರಂದು 58 ಪ್ರಯಾಣಿಕರು ಸಜೀವ ದಹನಗೊಂಡ ಘಟನೆಯ ನಂತರ ಬಿಜೆಪಿ ಅಳವಡಿಸಿಕೊಂಡ ತಂತ್ರಕ್ಕೆ ನೇರವಾಗಿ ಸ್ಫೂರ್ತಿಯಾಗಿರುವಂತೆ ಕಾಣುತ್ತದೆ. ಗುಜರಾತ್‌ನಲ್ಲಿ ನರೇಂದ್ರ ಮೋದಿ ಸರಕಾರ ಯಾವ ರೀತಿ ಉದ್ದೇಶಪೂರ್ವಕವಾಗಿ ಈ ಪ್ರಕರಣಗಳನ್ನು ದುರ್ಬಲಗೊಳಿಸಿತ್ತೋ ಅದು ರಾಜೀವ್ ಗಾಂಧಿ ಮತ್ತು ನರಸಿಂಹ ರಾವ್ ಸಮಯದಲ್ಲಿ ದಿಲ್ಲಿ ಪೊಲೀಸರು ಹೂಡಿದ ತಂತ್ರದ ಕಾರ್ಬನ್ ಪ್ರತಿಯಂತಿದೆ.


ಈ ಎರಡು ಪ್ರಕರಣಗಳಲ್ಲಿ ಇರುವ ಒಂದೇ ವ್ಯತ್ಯಾಸವೆಂದರೆ ಸರ್ವೋಚ್ಚ ನ್ಯಾಯಾಲಯ ನಿರ್ವಹಿಸಿದ ಪಾತ್ರ. 1984 ಘಟನೆಯ ನಂತರ ದೇಶದ ಶ್ರೇಷ್ಠ ನ್ಯಾಯಾಲಯ ಇಡೀ ಹತ್ಯಾಕಾಂಡದ ಮೂಕ ಪ್ರೇಕ್ಷಕನಾಗಿ ಉಳಿದಿತ್ತು. ಆದರೆ 2002ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಫಲವಾಗಿ ಸರ್ವೋಚ್ಚ ನ್ಯಾಯಾಲಯ ಕೇವಲ ಈ ಪ್ರಕರಣಗಳ ಬಗ್ಗೆ ಮುತುವರ್ಜಿ ವಹಿಸಿದ್ದು ಮಾತ್ರವಲ್ಲ ಕನಿಷ್ಠ ಕೆಲವೊಂದು ಹತ್ಯಾಕಾಂಡ ಪ್ರಕರಣಗಳಲ್ಲಾದರೂ ನ್ಯಾಯ ದೊರಕುವಂತೆ ಕ್ರಮಗಳನ್ನು ತೆಗೆದುಕೊಂಡಿತು. ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಮೇಲೆ ನಂಬಿಕೆಯಿರದ ನ್ಯಾಯಾಲಯ ಕೆಲವೊಂದು ಪ್ರಕರಣಗಳನ್ನು ಹೊರರಾಜ್ಯಗಳಿಗೆ ವರ್ಗಾಯಿಸುವ ಮೂಲಕ ಮತ್ತು ಕೆಲವೊಂದರ ಬಗ್ಗೆ ಖುದ್ದಾಗಿ ನೇರ ನಿಗಾಯಿಡು ಮೂಲಕ ನ್ಯಾಯವನ್ನು ಒದಗಿಸಿತು.
1984ರ ಸಂತ್ರಸ್ತರಿಗೆ ಅಂಥ ಸಹಾಯ ದೊರಕಿರಲಿಲ್ಲ. ಬಿಜೆಪಿ ಮತ್ತು ಇತರ ಪಕ್ಷಗಳು ಸಿಖ್ ಹತ್ಯಾಕಾಂಡದ ಬಗ್ಗೆ ಮಾತನಾಡುತ್ತವೆ. ಆದರೆ ಅದು ಕೇವಲ ಕಾಂಗ್ರೆಸ್‌ಗಿಂತ ಮುನ್ನಡೆ ಸಾಧಿಸುವ ಪ್ರಯತ್ನವಲ್ಲದೆ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಬದ್ಧತೆಯಿಂದಲ್ಲ. ಬಿಜೆಪಿಯ ಸಿನಿಕತನ ಎಷ್ಟರ ಮಟ್ಟಿಗಿದೆಯೆಂದರೆ, ಅದರ ಹಿರಿಯ ನಾಯಕರು ಈ ಸಾಮೂಹಿಕ ಹತ್ಯೆಯನ್ನು ಸಿಖ್ ನರಮೇಧ ಎಂದು ಕರೆದು ದಿಲ್ಲಿಯ ಬಂಗ್ಲ ಸಾಹೀಬ್ ಗುರುದ್ವಾರದಲ್ಲಿ ಫಲಕ ಅನಾವರಣಗೊಳಿಸಿದರೆ ಈಗ ಬಿಜೆಪಿ ನೇತೃತ್ವದ ಸರಕಾರ ಅದರಲ್ಲಿ ನರಮೇಧ ಎಂಬ ಪದ ಅನ್ವಯವಾಗುವುದಿಲ್ಲ ಎಂದು ಹೇಳುತ್ತಿದೆ.
ರಾಹುಲ್ ಗಾಂಧಿ ರಾಜಕೀಯ ಮತ್ತು ಗುಣಾತ್ಮಕ ಬದಲಾವಣೆಗಳನ್ನು ತರಲು ನಿಜವಾಗಿಯೂ ಗಂಭೀರವಾಗಿ ಚಿಂತಿಸುತ್ತಿರುವುದಾದರೆ ಮೊದಲು ಅವರು ಇಡೀ ಭಾರತಕ್ಕೆ ತಿಳಿದಿರುವ ಸತ್ಯವನ್ನು ಅಲ್ಲಗಳೆಯುವ ಅದೇ ಹಳೆಯ ಚಾಳಿಯನ್ನು ಮುಂದುವರಿಸುವುದನ್ನು ಬಿಡಬೇಕು. ಅದರ ಬದಲು ಅವರು ಈ ಕೆಳಗಿನ ಸಾಲುಗಳನ್ನು ಹೇಳುವ ಧೈರ್ಯವನ್ನು ಬೆಳೆಸಬೇಕು:
‘‘ಹೌದು, ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ಮುಗ್ಧರ ಹತ್ಯೆ ನಡೆದಿತ್ತು. ಹೌದು, ಅದು ನನ್ನ ತಂದೆ ಪ್ರಧಾನಿ ಯಾಗಿದ್ದ ಸಮಯದಲ್ಲಿ ನಡೆದಿತ್ತು, ಹೌದು, ಕಾಂಗ್ರೆಸ್ ಮತ್ತು ಅದರ ಹಲವು ನಾಯಕರು ಈ ಹತ್ಯಾಕಾಂಡದಲ್ಲಿ ಶಾಮೀಲಾಗಿದ್ದಾರೆ ಮತ್ತು ಈ ಆರೋಪದಿಂದ ಅವರು ತಪ್ಪಿಸಿಕೊಳ್ಳುವಂತಿಲ್ಲ. ಅಪರಾಧವನ್ನು ಕೇವಲ ಕಾನೂನು, ನ್ಯಾಯಾಲಯದಲ್ಲಿ ಸಾಬೀತಾಗುವ ತಪ್ಪಿಗಷ್ಟೇ ಸೀಮಿತಗೊಳಿಸಲು ಸಾಧ್ಯವಿಲ್ಲ. ನೀವು ನಾಯಕರಾಗಿದ್ದು ನಿಮ್ಮ ನಿಗಾವಣೆಯಲ್ಲಿ ಜನರ ಹತ್ಯೆ ನಡೆದರೆ, ಅವರನ್ನು ರಕ್ಷಿಸಲು ನೀವು ವಿಫಲವಾದಾಗ ಆ ಜವಾಬ್ದಾರಿಯಿಂದ ನೀವು ನುಣುಚಿಕೊಳ್ಳಲು ಸಾಧ್ಯವಿಲ್ಲ. ಈ ವೈಫಲ್ಯದಿಂದಲೇ ಮುಗ್ಧ ಜನರು ಕೋಮು ಹಿಂಸಾಚಾರಕೆ್ಕ ಬಲಿಯಾಗುವುದು ಮುಂದುವರಿದಿದೆ.
ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿ ದೇಶದ ಕ್ಷಮೆ ಕೇಳಿದರೂ ಸಂತ್ರಸ್ತರನ್ನು ಅಥವಾ ದೇಶವನ್ನು ತೃಪ್ತಿಪಡಿಸಲು ಅದರಿಂದ ಸಾಧ್ಯವಾಗಲಿಲ್ಲ ಮತ್ತು ಅದು ಆಗುವುದೂ ಇಲ್ಲ. ಕೇವಲ ನ್ಯಾಯ ಒದಗಿಸಿದ ನಂತರ, ತಪ್ಪಿತಸ್ಥರಿಗೆ ಶಿಕ್ಷೆಯಾದ ನಂತರ ಮತ್ತು ಇಂಥ ಹೀನಾಯ ಕೃತ್ಯಗಳು ದೇಶದಲ್ಲಿ ಇನ್ನು ಮುಂದೆ ನಡೆಯುವುದಿಲ್ಲ ಎಂಬ ಭರವಸೆ ಪಡೆದ ನಂತರವಷ್ಟೇ ಕ್ಷಮಾಪಣೆಯ ಸಮಯ ಬರುತ್ತದೆ. 1984ರಲ್ಲಿ ಏನು ನಡೆಯಿತೋ ಅದರ ಬಗ್ಗೆ ಮಾಧ್ಯಮಗಳಾದರೂ ನನ್ನ ತಂದೆಯನ್ನು ಪ್ರಶ್ನಿಸಿದ್ದರೆ ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತು. ಪತ್ರಕರ್ತರು ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿದಾಗ ಮತ್ತು ನಿರ್ಭಯವಾಗಿ ತಮ್ಮ ಹಕ್ಕನ್ನು ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ ಮತ್ತು ಪ್ರಬಲಗೊಳ್ಳುತ್ತದೆ. ಮಾಧ್ಯಮಗಳು ತಮ್ಮ ಕೆಲಸವನ್ನು ಮಾಡಲು ವಿಫಲವಾದರೆ ರಾಜಕಾರಣಿಗಳು ತ್ಮು ಕೆಲಸದಲ್ಲಿ ವಿಫಲರಾಗುತ್ತಾರೆ.’’
ರಾಹುಲ್ ಗಾಂಧಿ ಯಾವತ್ತಾದರೂ ಈ ರೀತಿ ಭಾಷಣ ಮಾಡಬಹುದೇ ಎಂಬ ಬಗ್ಗೆ ನನಗೆ ಅನುಮಾನವಿದೆ. ಆದರೆ ಅದು ಅವರ ರಾಜಕೀಯ ಹಿತಾಸಕ್ತಿಯನ್ನು ಹೊಂದಿದೆ. ಅವರು ಅನುವಂಶೀಯವಾಗಿ ಪಡೆದುಕೊಂಡು ಬಂದಿರುವ ನೈತಿಕ ದಿಕ್ಸೂಚಿ ಅವರನ್ನು ಆ ದಿಕ್ಕಿನಲ್ಲಿ ಸಾಗದಂತೆ ತಡೆಯಬಹುದು. ಕನಿಷ್ಠ ಪಕ್ಷ, ಅನುವಂಶೀಯವಾಗಿ ಅಲ್ಲದಿದ್ದರೂ ತನ್ನ ಸ್ವಂತ ಪ್ರಯತ್ನದಿಂದ ಮೋದಿ ಕೂಡಾ ಇದೇ ದಿಕ್ಸೂಚಿಯನ್ನು ಪಡೆದುಕೊಂಡಿದ್ದಾರೆ.
ಕೃಪೆ: thewire.in

Writer - ಸಿದ್ಧಾರ್ಥ್ ವರದರಾಜನ್

contributor

Editor - ಸಿದ್ಧಾರ್ಥ್ ವರದರಾಜನ್

contributor

Similar News

ಜಗದಗಲ
ಜಗ ದಗಲ