ಸಣ್ಣ ಉದ್ಯಮಿಗಳನ್ನು ಪ್ರಧಾನಿ ನರೇಂದ್ರ ಮೋದಿ ತುಳಿದಿದ್ದಾರೆ : ರಾಹುಲ್ ಗಾಂಧಿ
ಹೊಸದಿಲ್ಲಿ, ಸೆ.10: ಸಣ್ಣ ಉದ್ಯಮಿಗಳನ್ನು ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣವಾಗಿ ತುಳಿದಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಧರಣಿಯ ನೇತೃತ್ವ ವಹಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು ಕಳೆದ 4 ವರ್ಷಗಳಲ್ಲಿ ಎನ್ ಡಿಎ ನೇತೃತ್ವದ ಕೇಂದ್ರ ಸರಕಾರ ಏನನ್ನು ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಸಣ್ಣ ಉದ್ಯಮಿಗಳನ್ನು ಸಂಪೂರ್ಣ ತುಳಿದಿದ್ದಾರೆ. ರೈತರು, ಯುವಕರಿಗೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ಅಭಿಪ್ರಾಯಪಟ್ಟರು.
ನೋಟ್ ಬ್ಯಾನ್ ನಿಂದ ಕಳ್ಳರ ಕಪ್ಪು ಹಣ ಬಿಳಿಯಾಗಿದೆ. ತೈಲ ಬೆಲೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಪೆಟ್ರೋಲ್ , ಡೀಸೆಲ್ ಬೆಲೆ 80 ರೂ. ದಾಟಿದೆ. ರಫೇಲ್ ಒಪ್ಪಂದದಿಂದ ಉದ್ಯಮಿಗಳಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ “ ಕೇಂದ್ರ ಸರಕಾರದ ಜನವಿರೋಧಿ ಧೋರಣೆ ಅತಿಯಾಗಿದೆ. ಇದನ್ನು ಜನಸಾಮಾನ್ಯರಿಗೆ ಇನ್ನು ಸಹಿಸಲು ಸಾಧ್ಯವಿಲ್ಲ "ಎಂದರು.