ಜಾರ್ಖಂಡ್: ಕಾರ್ಯಕರ್ತನಿಂದ ಪಾದತೊಳೆಸಿಕೊಂಡ ಸಂಸದ!

Update: 2018-09-17 08:30 GMT

ರಾಂಚಿ, ಸೆ.17: ಸಂಸತ್ ಕ್ಷೇತ್ರಕ್ಕೆ ಭೇಟಿ ನೀಡಿದ ಸಂಸದನೊಬ್ಬ ತನ್ನ ಪಕ್ಷದ ಕಾರ್ಯಕರ್ತನಿಂದ ಪಾದ ತೊಳೆಸಿಕೊಂಡಿದ್ದಲ್ಲದೆ, ಪಾದ ತೊಳೆದ ನೀರನ್ನು ಕುಡಿಯುವುದನ್ನು ನೋಡುತ್ತಾ ನಿಂತ ವಿಲಕ್ಷಣ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

 ನಿಶಿಕಾಂತ್ ದುಬೆ ಕಾರ್ಯಕರ್ತನಿಂದ ಪಾದಪೂಜೆ ಮಾಡಿಸಿಕೊಂಡ ಬಿಜೆಪಿ ಸಂಸದನಾಗಿದ್ದಾರೆ. ದುಬೆ ತಾನು ಆಯ್ಕೆಯಾದ ಲೋಕಸಭಾ ಕ್ಷೇತ್ರವಾದ ಗೊಡ್ಡಾಕ್ಕೆ ರವಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವೇದಿಕೆಯಿಂದ ಕೆಳಗಿಳಿದು ಬಂದ ದುಬೆ ಕಾರ್ಯಕರ್ತನ ಬಳಿ ಹೋಗುತ್ತಾರೆ. ತನ್ನ ಪಾದವನ್ನು ಪ್ಲೇಟ್ ಮೇಲೆ ಇರಿಸುತ್ತಾರೆ. ಪಕ್ಷದ ಕಾರ್ಯಕರ್ತನೊಬ್ಬ ದುಬೈಯ ಪಾದ ತೊಳೆದು ನೀರು ಕುಡಿಯುತ್ತಾನೆ. ಆಗ ಅಲ್ಲಿದ್ದ ಜನರು ಚಪ್ಪಾಳೆ ತಟ್ಟಿ ಖುಷಿಪಡುತ್ತಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆಯ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ‘‘ಇದು ಸಂಸದ ದುಬೆ ಅವರ ಅಹಂಕಾರಕ್ಕೆ ಸಾಕ್ಷಿಯಾಗಿದೆ. ಇತರರನ್ನು ಅವಮಾನಿಸುವುದು, ಸಂಪ್ರದಾಯವನ್ನು ಮೀರುವುದು,ತನಗೆ ತಾನೇ ದೇವಮಾನವನೆಂದು ಭಾವಿಸುವ ದುಬೆ ಅವರ ನಿಜಬಣ್ಣ ಈಗ ಬಯಲಾಗಿದೆ’’ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News