ಸ್ನೇಹದ ಕೊಡುಗೆಯನ್ನು ದೌರ್ಬಲ್ಯ ನಮ್ಮ ಎಂದು ಪರಿಗಣಿಸಬಾರದು: ಇಮ್ರಾನ್
ಇಸ್ಲಾಮಾಬಾದ್, ಸೆ. 24: ಪಾಕಿಸ್ತಾನವು ಭಾರತಕ್ಕೆ ಸ್ನೇಹದ ಕೊಡುಗೆಯನ್ನು ನೀಡಿರುವುದನ್ನು ಅದರ ದೌರ್ಬಲ್ಯ ಎಂದು ಪರಿಗಣಿಸಬಾರದು ಹಾಗೂ ಭಾರತೀಯ ನಾಯಕತ್ವವು ‘ಅಹಂಕಾರ’ವನ್ನು ತೊರೆಯಬೇಕು ಹಾಗೂ ಶಾಂತಿ ಮಾತುಕತೆಗೆ ಮುಂದಾಗಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
‘‘ಭಾರತೀಯ ನಾಯಕತ್ವವು ಅಹಂಕಾರವನ್ನು ತೊರೆಯುತ್ತದೆ ಹಾಗೂ ಶಾಂತಿ ಮಾತುಕತೆಗೆ ಮುಂದಾಗುತ್ತದೆ ಎಂದು ನಾನು ಆಶಿಸುತ್ತೇನೆ’’ ಎಂದು ರವಿವಾರ ಪಂಜಾಬ್ನ ಸರಕಾರಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಹೇಳಿದರು. ‘‘ಸ್ನೇಹಕ್ಕೆ ನಾವು ನೀಡುವ ಆಹ್ವಾನವನ್ನು ನಮ್ಮ ದೌರ್ಬಲ್ಯ ಎಂಬುದಾಗಿ ಪರಿಗಣಿಸಬಾರದು. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸ್ನೇಹವು ಬಡತನವನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ’’ ಎಂದರು.
ಪಾಕಿಸ್ತಾನವನ್ನು ಹೆದರಿಸಬಾರದು, ಯಾಕೆಂದರೆ ಅದು ಯಾವುದೇ ರೀತಿಯ ವೈರತ್ವವನ್ನು ಸಹಿಸುವುದಿಲ್ಲ ಎಂದು ಹೇಳಿದ ಅವರು, ‘‘ನಾವು ಯಾವುದೇ ಜಾಗತಿಕ ಶಕ್ತಿಯ ಒತ್ತಡಕ್ಕೆ ಒಳಗಾಗುವುದಿಲ್ಲ’’ ಎಂದರು.