ಇಂಧನ ಬೆಲೆ ಏರಿಕೆಗೆ ಜನಸಾಮಾನ್ಯನೇಕೆ ಬಾಧ್ಯಸ್ಥನಾಗಬೇಕು?

Update: 2018-09-25 18:38 GMT

 ಭಾರತೀಯ ತೈಲ ತಯಾರಿಕಾ ಮತ್ತು ಸಂಸ್ಕರಣಾ ಕಂಪೆನಿಗಳು ಸಹ ತಮ್ಮ ಲಾಭ ನಷ್ಟಗಳ ಲೆಕ್ಕಾಚಾರವನ್ನು ತಾವು ಉತ್ಪಾದಿಸುವ ಇಂಧನಗಳ ವೆಚ್ಚವನ್ನು ಆಮದು ಇಂಧನಕ್ಕೆ ತಗಲುವ ವೆಚ್ಚಕ್ಕೆ ಸರಿಸಮನಾಗಿ ಲೆಕ್ಕ ಹಾಕುತ್ತವೆ. ಇದರಿಂದಾಗಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಏರಿದಾಗಲೆಲ್ಲಾ ತೈಲ ತಯಾರಿಕಾ ಕಂಪೆನಿಗಳು ಅಪಾರ ಲಾಭವನ್ನು ಮಾಡಿಕೊಳ್ಳುತ್ತವೆ. ಈ ಲೆಕ್ಕಾಚಾರದಿಂದಾಗಿ ಕಚ್ಚಾ ತೈಲದ ಬದಲು ಸಿದ್ಧ ಇಂಧನವನ್ನೇ ಆಮದು ಮಾಡಿಕೊಂಡಿದ್ದರೆ ಎಷ್ಟು ಬೆಲೆ ತೆರಬೇಕಾಗಿತ್ತೋ ಅಷ್ಟು ಬೆಲೆಯನ್ನು ಪ್ರತಿಬಾರಿ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯಾದಾಗಲೆಲ್ಲಾ ಗ್ರಾಹಕರು ತೆರುತ್ತಲೇ ಇದ್ದಾರೆ. ಹೀಗಾಗಿ ಸಂಭಾವ್ಯ ಲಾಭ ಅಥವಾ ನಷ್ಟಗಳು ವಾಸ್ತವ ಲಾಭ ಅಥವಾ ನಷ್ಟಗಳಿಗಿಂತ ಹೆಚ್ಚಾಗಿಯೇ ಅಂದಾಜಾಗುತ್ತವೆ ಹಾಗೂ ಬಹಳಷ್ಟು ಬಾರಿ ಸಂಭಾವ್ಯತೆಯನ್ನೇ ವಾಸ್ತವವೆಂದು ಪರಿಗಣಿಸಲಾಗುತ್ತದೆ.

ಇಂಧನದ ಬೆಲೆಗಳು ದೇಶದಲ್ಲಿ ಒಂದೇ ಸಮನೆ ಏರುತ್ತಿರುವುದು ಏನನ್ನು ಸೂಚಿಸುತ್ತದೆ? ಅದು ಬೆಲೆಏರಿಕೆಯಿಂದಾಗಿ ಬವಣೆ ಬೀಳುತ್ತಿರುವ ಜನಸಾಮಾನ್ಯರ ಪರಿಸ್ಥಿತಿಯ ಬಗ್ಗೆ ಆಳುವ ಸರಕಾರಕ್ಕಿರುವ ನಿರ್ಲಕ್ಷ್ಯವನ್ನೇ ಎತ್ತಿತೋರಿಸುತ್ತದೆ. ಇಂಧನದ ಬೆಲೆ ಏರಿಕೆಯ ವಿರುದ್ಧ ವಿರೋಧ ಪಕ್ಷಗಳು ದೇಶವ್ಯಾಪಿ ಮುಷ್ಕರವನ್ನು ನಡೆಸಿದ ನಂತರದಲ್ಲಿ ಕೇಂದ್ರ ಸರಕಾರವು ಇಂಧನದ ಬೆಲೆಯನ್ನು ಇಳಿಸುವ ಜವಾಬ್ದಾರಿಯನ್ನು ರಾಜ್ಯ ಸರಕಾರಗಳ ಹೆಗಲಿಗೆ ವರ್ಗಾಯಿಸಿದೆ. ಇದಾದ ನಂತರ ಇಂಧನದ ಬೆಲೆಗಳನ್ನು ರಾಜಸ್ಥಾನದ ಸರಕಾರವು ಲೀಟರಿಗೆ ರೂ. 2.50ರಷ್ಟು ಮತ್ತು ಆಂಧ್ರಪ್ರದೇಶ ಸರಕಾರವು ರೂ.2ರಷ್ಟು ಇಳಿಸಿರುವುದನ್ನು ಬಿಟ್ಟರೆ ಈವರೆಗೆ ಉಳಿದ ಯಾವ ರಾಜ್ಯ ಸರಕಾರಗಳೂ ಬೆಲೆಗಳಲ್ಲಿ ಕಡಿತ ಮಾಡಿಲ್ಲ. ಇಷ್ಟಾದರೂ ಇಂಧನದ ಬೆಲೆಗಳು ರೂ.81-83 ಮತ್ತು ರೂ. 85-87ರ ಆಸುಪಾಸಿನಲ್ಲೇ ತೂಗಾಡುತ್ತಿವೆ. ಇಡೀ ದೇಶದಲ್ಲೇ ಇಂಧನದ ಮೇಲೆ ಅತಿ ಹೆಚ್ಚು ವ್ಯಾಟ್ ತೆರಿಗೆಯನ್ನು ವಿಧಿಸುವ ಮುಂಬೈನಲ್ಲಿ ಇಂನದ ಬೆಲೆ ರೂ.90ನ್ನು ಮುಟ್ಟಿದೆ.

 2010 ಮತ್ತು 2014ರಲ್ಲಿ ಇಂಧನದ ಬೆಲೆಗಳನ್ನು ಸರಕಾರಿ ನಿಯಂತ್ರಣದಿಂದ ಮುಕ್ತಗೊಳಿಸಲಾಯಿತು. ಆದರೆ ಈ ಕ್ರಮದಿಂದಾಗಿ ಜಾಗತಿಕವಾಗಿ ತೈಲ ಬೆಲೆಗಳು ಇಳಿದಾಗ ಅದರ ಲಾಭವು ಗ್ರಾಹಕರಿಗೆ ಸಿಗುವಂತಾಗಿದ್ದರೆ ಈಗಿನಂತೆ ಜಾಗತಿಕ ಬೆಲೆಗಳು ಏರಿದಾಗ ಅದರ ಹೊರೆಯನ್ನು ಹೊರುವುದರಲ್ಲಿ ಅರ್ಥವಿರುತ್ತಿತ್ತು. ಆದರೆ ವಾಸ್ತವವು ಅದಕ್ಕೆ ತದ್ವಿರುದ್ಧವಾಗಿದೆ. ಒಂದು ಅಂದಾಜು ಲೆಕ್ಕಾಚಾರದಂತೆ ಇಂಧನದ ಮಾರಾಟ ಬೆಲೆಯ ಶೇ.50ರಷ್ಟಾಗುವ ಕೇಂದ್ರದ ಎಕ್ಸೈಸ್ ತೆರಿಗೆ ಮತ್ತು ರಾಜ್ಯಗಳ ವ್ಯಾಟ್ ತೆರಿಗೆಗಳು ಮತ್ತು ಶೇ. 9ರಷ್ಟು ಡೀಲರ್‌ಗಳ ಕಮಿಷನ್‌ನ್ನು ಸೇರಿಸಿದ ನಂತರದಲ್ಲಿ ಗ್ರಾಹಕರು ಇಂಧನದ ಅಸಲಿ ಬೆಲೆಯ (ಇಂಧನದ ಬಿಡಿ ಮಾರಾಟಗಾರರು ಡೀಲರಿಗೆ ಕೊಡುವ ಬೆಲೆಗಿಂತ) ಎರಡು ಪಟ್ಟು ಬೆಲೆಯನ್ನು ತೆರುತ್ತಾರೆ ಎಂಬುದು ಗೊತ್ತಾಗುತ್ತದೆ. ಗ್ರಾಹಕರ ಮೇಲೆ ಬೀಳುವ ಈ ತೆರಿಗೆ ಮತ್ತು ಸುಂಕಗಳ ಹೊರೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿದಾಗ (2014ರ ಸೆಪ್ಟಂಬರ್ ನಂತರದಲ್ಲಿ ಪ್ರಥಮ ಬಾರಿಗೆ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 80 ಡಾಲರಷ್ಟಾಗಿದೆ) ಗ್ರಾಹಕರು ದುಬಾರಿ ಬೆಲೆ ತೆರಬೇಕಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಅದೇ ವ್ಯವಸ್ಥೆಯೇ ಜಾಗತಿಕ ಕಚ್ಚಾ ತೈಲದ ಬೆಲೆ ಇಳಿದಾಗ ಅದರ ಲಾಭವು ಗ್ರಾಹಕರಿಗೆ ಸಿಗದಂತೆ ತಡೆಗಟ್ಟುತ್ತದೆ. 2014ರ ಸೆಪ್ಟಂಬರ್ ಮತ್ತು 2016ರ ಜನವರಿ ನಡುವೆ ಜಾಗತಿಕ ಕಚ್ಚಾ ತೈಲದ ಬೆಲೆ ಎಂದಿಗೂ ಬ್ಯಾರೆಲ್‌ಗೆ 60 ಡಾಲರ್‌ನ ಗಡಿ ದಾಟಿರಲಿಲ್ಲ. ಆದರೂ ಆ ಅವಧಿಯಲ್ಲೇ ಕೇಂದ್ರ ಸರಕಾರವು ಎಕ್ಸೈಸ್ ಸುಂಕವನ್ನು ಒಂಬತ್ತು ಬಾರಿ ಹೆಚ್ಚಿಸಿತ್ತು. ಇದರಿಂದಾಗಿ ಸಾಧಾರಣ ಪೆಟ್ರೋಲಿನ ಮೇಲಿನ ಸುಂಕ ಶೇ.150ರಷ್ಟು ಅಂದರೆ ಲೀಟರೊಂದಕ್ಕೆ ರೂ.19.48ರಷ್ಟು ಹೆಚ್ಚಾಯಿತು ಮತ್ತು ಡೀಸೆಲ್‌ನ ಮೇಲೆ ಶೇ.330ರಷ್ಟು ಅಂದರೆ ರೂ. 15.53ರಷ್ಟು ಸುಂಕವು ಹೆಚ್ಚಾಯಿತು. ಇಂಧನ ಸುಂಕದ ಬಾಬತ್ತಿನಲ್ಲಿ 2014-15ರಲ್ಲಿ ಕೇಂದ್ರ ಸರಕಾರವು ಕೇವಲ 99,000 ಕೋಟಿ ರೂ.ಗಳನ್ನು ಮಾತ್ರ ಸಂಗ್ರಹಿಸಿತ್ತು. ಆದರೆ 2016-17ರಲ್ಲಿ ಈ ರೀತಿ ಸುಂಕವನ್ನು ಹೆಚ್ಚಿಸಿದ ಕಾರಣದಿಂದ ಕೇಂದ್ರವು 2,42,000 ಕೋಟಿ ರೂ.ಗಳನ್ನು ಬಾಚಿಕೊಂಡಿತ್ತು. ಹೀಗಾಗಿ ಇಂಧನದ ಬೆಲೆಯನ್ನು ಹೆಚ್ಚಿಸಿದ್ದರಿಂದ ಜನರ ಜೇಬು ಖಾಲಿಯಾದರೂ ಸರಕಾರಿ ಖಜಾನೆ ಮಾತ್ರ ಖಂಡಿತಾ ಭರ್ತಿಯಾಗಿದೆ.
2019ಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸುಲಭವಾಗಿ ಆದಾಯ ತರುತ್ತಿರುವ ಈ ಮಾರ್ಗವನ್ನು ಸರಕಾರವು ಬಿಟ್ಟುಕೊಡಲಾರದು. ಒಂದು ಕಡೆ ರೂಪಾಯಿಯ ಬೆಲೆಯು ಕುಸಿಯುತ್ತಿರುವುದರಿಂದ ತೈಲ ಆಮದಿನ ವೆಚ್ಚ ಗಗನ ಮುಟ್ಟುತ್ತಿದೆ. ಮತ್ತೊಂದು ಕಡೆ ಹೊಸದಾಗಿ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಇನ್ನೂ ಹಲವಾರು ಲೋಪದೋಷಗಳಿರುವುದರಿಂದ ತೆರಿಗೆ ಸಂಗ್ರಹವು ಹೆಚ್ಚುವುದರ ಬಗ್ಗೆಯೂ ಖಾತರಿಯಿಲ್ಲ. ಇಂತಹ ಸಂದರ್ಭದಲ್ಲಿ ಇಂಧನದ ಮೇಲಿನ ಸುಂಕ/ತೆರಿಗೆಗಳನ್ನು ಕಡಿಮೆ ಮಾಡಿದರೆ ಅದು ಸರಕಾರದ ವಿತ್ತೀಯ ಆದಾಯದ ಮೇಲೆ ಪರಿಣಾಮ ಬೀರಿ ಜನಪ್ರಿಯ ಜನಕಲ್ಯಾಣ ಯೋಜನೆಗಳಿಗೆ ಕತ್ತರಿ ಹಾಕಬೇಕಾಗುತ್ತದೆ. ಹಲವಾರು ಬಿಜೆಪಿ ಶಾಸಿತ ರಾಜ್ಯಗಳು ಜನರ ಒಲವನ್ನು ಪಡೆದುಕೊಳ್ಳುವ ಸಲುವಾಗಿ ಘೋಷಿಸಿರುವ ಜನಪ್ರಿಯ ಸಾಲ ಮನ್ನಾ ಯೋಜನೆಗಳಿಂದಾಗಿ ತಮ್ಮ ಬೊಕ್ಕಸವನ್ನು ಇತರ ಮೂಲಗಳಿಂದ ತುಂಬಿಕೊಳ್ಳಲೇ ಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿವೆ. ಹೀಗಾಗಿ ಅವು ಇಂಧನದ ಮೇಲಿನ ವ್ಯಾಟ್ ತೆರಿಗೆಯ ಭಾರವನ್ನು ಇಳಿಸುವ ಸಂಭವವಿಲ್ಲ.


ಆದರೂ ಏರುತ್ತಿರುವ ಇಂಧನದ ಬೆಲೆಗಳಿಂದಾಗಿ ಮತದಾರರು ತಮ್ಮ ಬಗ್ಗೆ ಅಸಮಾಧಾನಗೊಳ್ಳುವ ಬಗ್ಗೆ ಸರಕಾರಗಳಿಗೆ ದಿಗಿಲಿದೆ. ಆದರೆ ಕರ್ನಾಟಕದ ಚುನಾವಣಾ ಸಂದರ್ಭದಲ್ಲಿ (ಎಪ್ರಿಲ್-ಮೇ) ಮಾಡಿದಂತೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಇಂಧನದ ಬೆಲೆಯನ್ನು ಪ್ರತಿದಿನವೂ ಪರಿಷ್ಕರಿಸುವುದನ್ನು ಕೈಬಿಡುವುದು ಹಳೆಯ ತಂತ್ರವಾಗಿದ್ದು, ಚುನಾವಣೆ ಮುಗಿದ ಕೂಡಲೇ ಇಂಧನದ ಬೆಲೆಯು ತೀವ್ರ ಏರಿಕೆಯಾಗುವುದರಿಂದ ಭವಿಷ್ಯದಲ್ಲಿ ಈ ತಂತ್ರ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ. ಬದಲಿಗೆ ಅಂಥಾ ತಂತ್ರಗಳು ಸರಕಾರದ ಅಸಲಿ ಗುಟ್ಟುಗಳನ್ನು ಬಯಲಿಗೆಳೆಯುವ ಸಾಧ್ಯತೆಯೇ ಹೆಚ್ಚು. ಈ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳ ಪ್ರತಿದಿನದ ಬೆಲೆಯನ್ನು ಹೇಗೆ ನಿಗದಿ ಮಾಡಲಾಗುತ್ತದೆ? ಇಂಧನದ ಬೆಲೆಯನ್ನು ತೈಲ ಕಂಪೆನಿಗಳು ಹೇಗೆ ನಿಗದಿ ಮಾಡುತ್ತವೆಂಬ ಬಗ್ಗೆ ದಾಖಲೆಗಳನ್ನು ಒದಗಿಸಲು ಕೋರಿ ಹಾಕಿದ್ದ ಮನವಿಯೊಂದನ್ನು ಈ ವಾರ ದಿಲ್ಲಿಯ ಹೈಕೋರ್ಟು ವಜಾ ಮಾಡಿದೆ. ಇಂಧನದ ಬೆಲೆ ನಿಗದಿಯ ಸುತ್ತ ಇಷ್ಟು ನಿಗೂಢತೆಯಿರುವಾಗ ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಅನುದಿನದ ಬೆಲೆ ಪರಿಷ್ಕರಣೆಯನ್ನು ನಿಲ್ಲಿಸಿದ ಕಾರಣಕ್ಕೆ ತೈಲ ಕಂಪೆನಿಗಳಿಗೆ ಆದ ನಷ್ಟ 500 ಕೋಟಿ ರೂ. ಎಂಬುದಾಗಲೀ, ತದನಂತರದಲ್ಲಿ ಅದನ್ನು ತುಂಬಿಕೊಳ್ಳಲು ಇಂಧನದ ಬೆಲೆಯನ್ನು ಎಷ್ಟು ಹೆಚ್ಚಿಸಬೇಕೆಂಬ ಲೆಕ್ಕಾಚಾರವನ್ನಾಗಲೀ ಮಾಡಿದ್ದು ಹೇಗೆ ಎಂಬುದು ಕೂಡಾ ನಿಗೂಢ ಸೋಜಿಗವಾಗಿದೆ.
 ಭಾರತದಲ್ಲಿ ಕಚ್ಚಾ ತೈಲವನ್ನಲ್ಲದೇ ಇಂಧನವನ್ನೇ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ರೀತಿಯಲ್ಲಿ ಇಂಧನದ ಬೆಲೆಯನ್ನು ನಿಗದಿ ಮಾಡಲಾಗುತ್ತದೆ. ಹಾಗೆ ನೋಡಿದರೆ 2017-18ರಲ್ಲಿ ಭಾರತವು 2,385.8 ಕೋಟಿ ರೂ.ಗಳಷ್ಟು ಇಂಧನವನ್ನು ರಫ್ತು ಮಾಡಿ 74.4 ಕೋಟಿ ರೂ.ಗಳಷ್ಟು ಇಂಧನವನ್ನು ಮಾತ್ರ ಆಮದು ಮಾಡಿಕೊಂಡಿತ್ತು. ಅಂದರೆ ಇಂಧನದ ರಫ್ತು ಪ್ರಮಾಣವು ಆಮದಿನ ಪ್ರಮಾಣಕ್ಕಿಂತ 32 ಪಟ್ಟು ಹೆಚ್ಚಾಗಿತ್ತು. ಇದಕ್ಕೆ ಪ್ರಮುಖ ಕಾರಣ ನಮ್ಮ ತೈಲ ಪರಿಷ್ಕರಣ ಸಾಮರ್ಥ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿರುವುದು. ಆದರೆ ಇಂಧನ ಬೆಲೆಯ ಲೆಕ್ಕಾಚಾರಗಳು ತಪ್ಪುಗ್ರಹಿಕೆಯಿಂದ ಕೂಡಿವೆ. ಅದರ ಲೆಕ್ಕಾಚಾರವನ್ನು ತೈಲ ಸಂಸ್ಕರಣಾ ಬಾಗಿಲಲ್ಲಿ (ರಿಫೈನರಿ ಗೇಟ್ ಪ್ರೈಸ್) ತಗಲುವ ವೆಚ್ಚಗಳನ್ನು ಆಧರಿಸಿ ಮಾಡಲಾಗುತ್ತದೆ. ಅಂದರೆ ಭಾರತೀಯ ತೈಲ ತಯಾರಿಕಾ ಮತ್ತು ಸಂಸ್ಕರಣಾ ಕಂಪೆನಿಗಳು ಸಹ ತಮ್ಮ ಲಾಭ ನಷ್ಟಗಳ ಲೆಕ್ಕಾಚಾರವನ್ನು ತಾವು ಉತ್ಪಾದಿಸುವ ಇಂಧನಗಳ ವೆಚ್ಚವನ್ನು ಆಮದು ಇಂಧನಕ್ಕೆ ತಗಲುವ ವೆಚ್ಚಕ್ಕೆ ಸರಿಸಮನಾಗಿ ಲೆಕ್ಕ ಹಾಕುತ್ತವೆ. ಇದರಿಂದಾಗಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಏರಿದಾಗಲೆಲ್ಲಾ ತೈಲ ತಯಾರಿಕಾ ಕಂಪೆನಿಗಳು ಅಪಾರ ಲಾಭವನ್ನು ಮಾಡಿಕೊಳ್ಳುತ್ತವೆ. ಈ ಲೆಕ್ಕಾಚಾರದಿಂದಾಗಿ ಕಚ್ಚಾ ತೈಲದ ಬದಲು ಸಿದ್ಧ ಇಂಧನವನ್ನೇ ಆಮದು ಮಾಡಿಕೊಂಡಿದ್ದರೆ ಎಷ್ಟು ಬೆಲೆ ತೆರಬೇಕಾಗಿತ್ತೋ ಅಷ್ಟು ಬೆಲೆಯನ್ನು ಪ್ರತಿಬಾರಿ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯಾದಾಗಲೆಲ್ಲಾ ಗ್ರಾಹಕರು ತೆರುತ್ತಲೇ ಇದ್ದಾರೆ. ಹೀಗಾಗಿ ಸಂಭಾವ್ಯ ಲಾಭ ಅಥವಾ ನಷ್ಟಗಳು ವಾಸ್ತವ ಲಾಭ ಅಥವಾ ನಷ್ಟಗಳಿಗಿಂತ ಹೆಚ್ಚಾಗಿಯೇ ಅಂದಾಜಾಗುತ್ತವೆ ಹಾಗೂ ಬಹಳಷ್ಟು ಬಾರಿ ಸಂಭಾವ್ಯತೆಯನ್ನೇ ವಾಸ್ತವವೆಂದು ಪರಿಗಣಿಸಲಾುತ್ತದೆ.
ಭಾರತದಲ್ಲಿ ಇಂಧನ ಬೆಲೆಯ ನಿಗದಿಯೆಂಬುದು ಆರ್ಥಿಕ ಕಸರತ್ತಿಗಿಂತ ಒಂದು ರಾಜಕೀಯ ಹೇಳಿಕೆಯಾಗಿದೆ. 2014ರಲ್ಲಿ ಉದ್ಯಮಿ ಸ್ನೇಹಿ ಧೋರಣೆಯನ್ನು ಅಳವಡಿಸಿಕೊಂಡು ಡೀಸೆಲ್ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿದ ಅಧಿಕಾರರೂಢ ಎನ್‌ಡಿಎ ಸರಕಾರವು ಈಗ ಚುನಾವಣೆಗೆ ಮುನ್ನ ತನ್ನ ವಿತ್ತೀಯ ಲೆಕ್ಕಾಚಾರವನ್ನು ಸರಿ ಇಟ್ಟುಕೊಳ್ಳಲು ತೈಲ ತಯಾರಿಕಾ ಕಂಪೆನಿಗಳ ಲಾಭದ ಮೇಲೆ ದೊಡ್ದ ಮಟ್ಟದ ತೆರಿಗೆಯನ್ನು ವಿಧಿಸುತ್ತಿವೆ. ಒಂದು ಬ್ಯಾರೆಲ್ ತೈಲಕ್ಕೆ 70 ಡಾಲರ್‌ಗಿಂತ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವುದರ ಮೇಲೆ ಈಗ ತೆರಿಗೆ ವಿಧಿಸಲಾಗಿದೆ; ಆದರೆ ಈ ತೆರಿಗೆ ವಿಧಿಸಲು ಸರಕಾರವು ಈ ಪ್ರಮಾಣವನ್ನು ಹೇಗೆ ನಿಗದಿ ಮಾಡಿತೆಂಬುದು ಸ್ಪಷ್ಟವಾಗಿಲ್ಲ. ಆದರೆ ಸರಕಾರ ಮತ್ತು ಕಂಪೆನಿಗಳ ನಡುವೆ ಲಾಭ ಹಂಚಿಕಾ ಸೂತ್ರವಿದ್ದರೂ ಅದರ ಜೊತೆಜೊತೆಗೆ ಈ ಅಧಿಕ ತೆರಿಗೆಗಳನ್ನು ಹೇರಲಾಗುತ್ತಿದೆ. ಇದರಿಂದಾಗಿ ತೈಲ ಉದ್ದಿಮೆಗೆ ಅತ್ಯಗತ್ಯವಾಗಿರುವ ದೇಶಿ ಮತ್ತು ವಿದೇಶಿ ತೈಲ ಸಂಶೋಧನಾ ಚಟುವಟಿಕೆಗಳಿಗೆ ಬೇಕಾದ ಸಂಪನ್ಮೂಲವನ್ನು ಒದಗಿಸಲು ಕಷ್ಟವಾಗುತ್ತದೆಂಬ ಕಾರಣವನ್ನು ಮುಂದೊಡ್ಡಿರುವ ಸರಕಾರದ ಈ ನೀತಿಗಳ ಬಗ್ಗೆ ತೈಲ ಕಂಪೆನಿಗಳಲ್ಲಿ ಅಸಮಾಧಾನ ಏರ್ಪಟ್ಟಿದೆ. ಹೀಗೆ ಭಾರತದ ಇಂಧನ ಕ್ಷೇತ್ರ ಸಿಕ್ಕುಸಿಕ್ಕಾದ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಂತಾಗಿದೆ.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ