ಲಿಂಗಛೇದನ ಪ್ರಕರಣ: ಗುರ್ಮೀತ್ ಸಿಂಗ್ ಗೆ ಜಾಮೀನು
Update: 2018-10-05 14:03 GMT
ಪಂಚಕುಲ (ಹರ್ಯಾಣ), ಅ.5: ಲಿಂಗಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ಗೆ ಹರ್ಯಾಣದ ಪಂಚಕುಲ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಆದರೆ, ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಿಂಗ್ ಸದ್ಯ ಜೈಲಿನಲ್ಲೇ ಉಳಿಯಲಿದ್ದಾನೆ. ತನ್ನ ಪುರುಷ ಭಕ್ತರ ಲಿಂಗಛೇದನ ನಡೆಸಿದ ಆರೋಪದಲ್ಲಿ ಸಿಬಿಐ ಗುರ್ಮೀತ್ ಹಾಗೂ ಇಬ್ಬರು ವೈದ್ಯರಾದ ಪಂಕಜ್ ಗರ್ಗ್ ಮತ್ತು ಎಂ.ಪಿ.ಸಿಂಗ್ ಭಾರತೀಯ ದಂಡಸಂಹಿತೆಯಡಿ ವಿವಿಧ ವಿಧಿಗಳಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.
ಪ್ರಕರಣದ ಸಿಬಿಐ ತನಿಖೆ ನಡೆಸುವಂತೆ ಮತ್ತು 2000ದಲ್ಲಿ ನಡೆದ ತನ್ನ ಲಿಂಗಛೇದನಕ್ಕೆ ಪರಿಹಾರ ಒದಗಿಸುವಂತೆ ಕೋರಿ ಡೇರಾ ಸಚ್ಚಾ ಸೌದಾದ ಅನುಯಾಯಿಯೊಬ್ಬರು 2012ರಲ್ಲಿ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.